ರಾಷ್ಟ್ರೀಯ ಹಬ್ಬಗಳ ಆಚರಣೆಯಿಂದ ನಮ್ಮ ಭಾವನೆಗಳು ವಿಸ್ತರಿಸುತ್ತವೆ : ಸಂಸದ ಡಾ.ಕೆ.ಸುಧಾಕರ್ ಅಭಿಮತ
ಓಣಂ ಆಚರಣೆಯು ನಮ್ಮ ಸಂತಸ ಹೆಚ್ಚಿಸಿ ಸಂಬಂಧಗಳನ್ನು ವಿಶಾಲಗೊಳಿಸಲಿ, ಹೃದಯ ಸ್ಪಂದನೆ ಯೊಂದಿಗೆ ಮಾನವೀಯತೆ ಮತ್ತು ಕಾರುಣ್ಯ ಟಿಸಿಲೊಡೆಯಲಿ. ಇಂತಹ ಹಬ್ಬಗಳನ್ನು ಎಲ್ಲ ಧರ್ಮ, ಜಾತಿ ಮತ್ತು ವರ್ಗಗಳ ಜನರು ಒಗ್ಗೂಡಿ ಆಚರಿಸಬೇಕು ಆಗ ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ಕಡಿಮೆಯಾಗಿ ನಾವೆಲ್ಲರೂ ಭಾರತೀಯರು ಹಾಗೂ ವಿಶ್ವಮಾನವರೆಂಬ ಭಾವನೆ ಮೂಡಲು ಪ್ರೇರಣೆಯಾಗುತ್ತದೆ

-

ಚಿಕ್ಕಬಳ್ಳಾಪುರ : ರಾಷ್ಟ್ರೀಯ ಹಬ್ಬಗಳ ಆಚರಣೆಯು ನಮ್ಮ ಸಂಸ್ಕೃತಿಯನ್ನು ಉನ್ನತಿ ಗೊಳಿಸುವುದರ ಜೊತೆಗೆ ನಮ್ಮ ಬಾಂಧವ್ಯಗಳನ್ನು ಬೆಸೆಯುತ್ತವೆ, ನಮ್ಮ ನಡುವಿನ ಗೋಡೆಗಳನ್ನು ಮುರಿದು ಸಾಂಸ್ಕೃತಿಕ ಸಮನ್ವಯ ಸಾಧಿಸುತ್ತವೆ ಎಂದು ಲೋಕಸಭಾ ಸದಸ್ಯ ಹಾಗೂ ಶಾಂತಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ|| ಕೆ. ಸುಧಾಕರ್(MP Dr. K. Sudhakar) ಅಭಿಪ್ರಾಯಪಟ್ಟರು.
ಪೆರೇಸಂದ್ರದ ಶಾಂತಾ ಶಿಕ್ಷಣ ಸಂಸ್ಥೆಗಳ ಸಮುಚ್ಚಯದಲ್ಲಿ ಓಣಂ ಹಬ್ಬದ ಅಂಗವಾಗಿ ಆಯೋಜಿಸಿದ್ದ ಕೇರಳ ಉತ್ಸವ ಉದ್ಘಾಟಿಸಿ ಮಾತನಾಡುತ್ತಾ ಓಣಂ ಆಚರಣೆಯು ನಮ್ಮ ಸಂತಸ ಹೆಚ್ಚಿಸಿ ಸಂಬಂಧಗಳನ್ನು ವಿಶಾಲಗೊಳಿಸಲಿ, ಹೃದಯ ಸ್ಪಂದನೆಯೊಂದಿಗೆ ಮಾನವೀಯತೆ ಮತ್ತು ಕಾರುಣ್ಯ ಟಿಸಿಲೊಡೆಯಲಿ. ಇಂತಹ ಹಬ್ಬಗಳನ್ನು ಎಲ್ಲ ಧರ್ಮ, ಜಾತಿ ಮತ್ತು ವರ್ಗಗಳ ಜನರು ಒಗ್ಗೂಡಿ ಆಚರಿಸಬೇಕು ಆಗ ನಮ್ಮ ನಡುವಿನ ಭಿನ್ನಾಭಿಪ್ರಾಯಗಳು ಕಡಿಮೆಯಾಗಿ ನಾವೆಲ್ಲರೂ ಭಾರತೀಯರು ಹಾಗೂ ವಿಶ್ವಮಾನವರೆಂಬ ಭಾವನೆ ಮೂಡಲು ಪ್ರೇರಣೆಯಾಗುತ್ತದೆ.
ಶುಶ್ರೂಷಕ ಮತ್ತು ವಿವಿಧ ಅರೆ ವೈದ್ಯಕೀಯ ವೃತ್ತಿಗೆ ತರಭೇತಿ ಮತ್ತು ಸಿದ್ಧತೆಯಾಗುತ್ತಿರುವ ನಿಮ್ಮ ವೃತ್ತಿ ಜಾತಿ, ಧರ್ಮ, ಭಾಷೆ ಮತ್ತು ಸಂಸ್ಕೃತಿಗೆ ಸೀಮಿತಗೊಳ್ಳದಿರಲಿ. ನಿಮ್ಮ ಸೇವೆಯು ಜಾತಿ-ಧರ್ಮಗಳನ್ನು ಮೀರಿ ಆನಂದದಿಂದ ರೋಗಿಗಳಿಗೆ ಶುಶ್ರೂಷೆ ಮಾಡುವ ಸೇವಾ ಯೋಧರು ನೀವಾಗಬೇಕು. ವೈದ್ಯರು ರೋಗಿಗಳಿಗೆ ಚಿಕಿತ್ಸೆ ಮತ್ತು ಔಷಧಿ ನೀಡುತ್ತಾರೆ. ಶುಶ್ರೂಷಕರಾದ ನೀವು ಚಿಕಿತ್ಸೆ ಫಲಕಾರಿಯಾಗಲು ಆತ್ಮವಿಶ್ವಾಸ ನೀಡಿ ರೋಗಿಗಳ ಆತ್ಮಬಲವನ್ನು ಬಲಪಡಿಸುವ ನಿಮ್ಮ ಸೇವೆ ನಿಜಕ್ಕೂ ಸ್ಮರಣೀಯ. ಕೇರಳ ಮತ್ತು ಕರ್ನಾಟಕ, ನಿರ್ದಿಷ್ಟವಾಗಿ ಬೆಂಗಳೂರಿನೊAದಿಗೆ ವಿಶೇಷ ಬಾಂಧವ್ಯವಿದೆ. ಕನ್ನಡ ನೆಲದಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಕೇರಳ ಸೋದರ-ಸೋದರಿ ಯರು ಬೆರೆತು ಹೋಗಿದ್ದಾರೆ. ಈ ಬಾಂಧವ್ಯವು ಬೌದ್ಧಿಕ ಮತ್ತು ಸೇವಾ ವಲಯಗಳ ನೈತಿಕ ಪಾಲ್ಗೊಳ್ಳುವಿಕೆಯನ್ನು ಗಟ್ಟಿಗೊಳಿಸಿದರೆ ಸಮಾಜಕ್ಕೆ ಹೆಚ್ಚು ಲಾಭವಾಗುತ್ತದೆ.
ದೇವರ ನಾಡು ಎಂದು ಹೆಸರಾಗಿರುವ ಕೇರಳ, ಕೆಲ ದಶಕಗಳ ಹಿಂದೆ ಅನಕ್ಷರತೆ, ಅಜ್ಞಾನ, ಬಡತನದಿಂದ ಕೂಡಿದ್ದು, ಆ ಭಾಗದ ಸುಧಾರಕರ ಪ್ರೇರಣೆಯಿಂದ ಇಡೀ ದೇಶದಲ್ಲಿಯೇ ಮಾದರಿ ರಾಜ್ಯ ಎನಿಸಿದೆ. ಮಾನವಾಭಿವೃದ್ಧಿ ಹಾಗೂ ಲಿಂಗಾಭಿವೃದ್ಧಿಯ ಎಲ್ಲಾ ಸೂಚ್ಯಂಕಗಳೂ ಉತ್ತುಂಗದಲ್ಲಿದ್ದು, ಅವರು ಪಡೆದ ಶಿಕ್ಷಣದಿಂದ ಜಗತ್ತಿನ ಎಲ್ಲ ಭಾಗಗಳಲ್ಲಿ ಕೇರಳೀಯರನ್ನು ಕಾಣಬಹುದೆಂದು ಸಂತಸ ವ್ಯಕ್ತಪಡಿಸಿದರು. ಶಾಂತಾ ಸಂಸ್ಥೆಯ ಮೂಲಕ ಸೋದರ ರಾಜ್ಯಗಳ ಬಡ ಮಧ್ಯಮ ವರ್ಗಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ವೃತ್ತಿ ತರಭೇತಿ ಹಾಗೂ ಉದ್ಯೋಗದ ಅವಕಾಶಗಳಿಗೆ ಸೂಕ್ತ ಸಹಾಯ ನೀಡಲಾಗುವುದು. ಉನ್ನತ ಶಿಕ್ಷಣ ಮತ್ತು ಸಂಶೋಧನೆಗಳಿಗೆ ಶಾಂತಾ ಸಂಸ್ಥೆ ಸದಾ ನಿಮ್ಮೊಂದಿಗಿರುತ್ತದೆ ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇರಳ ರಾಜ್ಯದ ಮಳಯಾಳಂ ಚಿತ್ರ ತಾರೆಯರ ಸಂಘದ ಅಧ್ಯಕ್ಷೆ ಶ್ವೇತಾ ಮೆನನ್ ಮಾತನಾಡಿ ಇಷ್ಟು ಬೃಹತ್ ಪ್ರಮಾಣದ ಹೆಣ್ಣು ಮಕ್ಕಳ ಶಿಕ್ಷಣ, ಸಬಲತೆ ಮತ್ತು ಉದ್ಯೋಗ ತರಭೇತಿ ಅವಕಾಶ ಕಲ್ಪಿಸಿರುವ ಈ ಸಂದರ್ಭ ನನ್ನ ಹೃದಯ ತುಂಬಿಸಿದೆ. ಇದಕ್ಕಾಗಿ ಡಾ. ಸುಧಾಕರ ಅವರನ್ನು ಅಭಿನಂದಿಸುತ್ತೇನೆ.
ಯಾವುದೇ ಭಾಷೆ ಹಾಗೂ ಸಂಸ್ಥೆಗಳು ತಮ್ಮ ಮಣ್ಣಿನ ಗುಣವನ್ನು ಉಳಿಸಿಕೊಂಡು ನಿರಂತರ ಸೋದರ ಸಂಸ್ಕೃತಿಗಳ ಆಶಯಗಳನ್ನು ತುಂಬಿಕೊಳ್ಳುವ, ಸಮನ್ವಯಗೊಳಿಸಿಕೊಳ್ಳುವ ಮೂಲ ಗುಣಗಳು ಅಪೇಕ್ಷಣೀಯ ಇದನ್ನು ನಾನು ಕನ್ನಡ ಸಂಸ್ಕೃತಿ ಮತ್ತು ಜನರಲ್ಲಿ ಕಂಡಿದ್ದೇನೆ. ಇಂತಹ ಸಂಸ್ಥೆಗಳು ದೇಶದಲ್ಲಿ ಸೋದರತೆ ಬೆಳಸಿ, ಭಾವೈಕ್ಯತೆ ಬಲಗೊಳಿಸಲು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಇಲ್ಲಿ ಕಲಿಯುತ್ತಿರುವ ಯುವ ಸೋದರ ಸೋದರಿಯರ ಶಕ್ತಿಯನ್ನು ನಾನು ಪ್ರೀತಿಸುತ್ತೇನೆ, ಸೋದರ ಭಾವವನ್ನು ಗೌರವಿಸುತ್ತೇನೆ. ಇಂತಹ ಸಾಂಸ್ಕೃತಿ ಆಚರಣೆಗಳು ನಮ್ಮ ನಂಬಿಕೆಗಳನ್ನು ಮತ್ತು ಬಾಂಧವ್ಯವನ್ನು ಚಿರಕಾಲ ಉಳಿಸಲಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳ ಪ್ರಸ್ತುತಪಡಿಸಿದ ಕೇರಳ ಸಂಸ್ಕೃತಿ ಬಿಂಬಿಸುವ ಸಮೂಹ ನೃತ್ಯಗಳು ಮನಸೂರೆ ಗೊಂಡರು.
ಕಾರ್ಯಕ್ರಮದಲ್ಲಿ ನಿರ್ದೇಶಕ ಡಾ. ಕೋಡಿರಂಗಪ್ಪ, ಡೀನ್ ಡಾ|| ನವೀನ್ ಸೈಮನ್, ಪ್ರಾಂಶುಪಾಲ ಡಾ ಗೋಪಿನಾಥ್, ಡಾ. ಪ್ರಸಾದ್, ಡಾ. ಸುರೇಶ್, ಪ್ರೊ. ನರೇಶ್, ಡಾ. ಶಿಲ್ಪರಾಣಿ, ಪ್ರೊ.ವಿಜಯ ಲಕ್ಷ್ಮೀ, ಬಸವರಾಜ್, ಆಡಳಿತಾಧಿಕಾರಿ ಕೆನೆತ್ ಹಾಲಿಡೇ, ವಿತ್ತಾಧಿಕಾರಿ ಶರವಣ, ರಂಗರಾಜನ್, ಕಲ್ಯಾಣಿ, ರೇವತಿ, ಆಕಾಂಕ್ಷ, ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜೇಶ್ ಮತ್ತು ಸಂದೇಶ್, ಹಾಗೂ ಶಾಂತಾ ಆರೋಗ್ಯ ಶಿಕ್ಷಣ ಸಂಸ್ಥೆಗಳ ಬೋಧಕವರ್ಗ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.