ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣ ಹಾಗೂ ಸಮಾಜದ ಅಂಕು ಡೊಂಕುಗಳನ್ನು ವಿಮರ್ಶಿಸುವ ಕೆಲಸ ಲಂಕೇಶ್ ಪತ್ರಿಕೆ ಮಾಡಿತು. ಭೂಗತ ಪಾತಕರನ್ನು ಸಹ ನಿರ್ಭೀತಿ ಯಿಂದ ಬಯಲಿಗೆಳೆದ ಪತ್ರಕರ್ತರಾಗಿ ಯಾವುದೇ ಹಮ್ಮುಬಿಮ್ಮು ಇಲ್ಲದೆ ಸಮಾಜದ ಪರವಾಗಿ ದನಿ ಎತ್ತಿದ ವ್ಯಕ್ತಿ ಪಿ.ಲಂಕೇಶ್ ಆಗಿದ್ದರು ಎಂದು ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಉದಯವಾಣಿ ಜಿಲ್ಲಾ ವರದಿಗಾರ ಕಾಗತಿ ನಾಗರಾಜಪ್ಪ(Udayavani District Correspondent Kagathi Nagarajappa is a Media Academy awardee)ತಿಳಿಸಿದರು.
ನಗರದ ಕೃಷ್ಣ ರುಕ್ಮಿಣಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ "ಚಕೋರ' ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ನಡೆದ ಪಿ.ಲಂಕೇಶ್ ರವರ ಸಾಹಿತ್ಯ ಮತ್ತು ಸಾಮಾಜಿಕ ಕಳಕಳಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ದರು.
ವಿದ್ಯಾರ್ಥಿಗಳಾದ ನೀವು ಸಮಾಜದಲ್ಲಿ ನಡೆಯುವ ಅನ್ಯಾಯ ಮತ್ತು ಅಕ್ರಮಗಳನ್ನು ಖಂಡಿಸುವಂತಹ ಧೈರ್ಯ ತೋರಬೇಕಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು ಪಿ.ಲಂಕೇಶ್ ಅವರು ನೇರ ನಿಷ್ಟುರ ಬರಹಗಾರರಾದ್ದರು. ಇವರ ಸಾಹಿತ್ಯ ಬರಹಗಳಲ್ಲಿ ವೈಚಾರಿಕತೆ, ಮಾನವೀಯತೆ ಹಾಗೂ ಸಾಮಾಜಿಕ ಕಳಕಳಿ ತುಂಬಿರುತ್ತಿತ್ತು. ಅವರ ಕಾಲ ಘಟ್ಟದಲ್ಲಿ ಲಂಕೇಶ್ ಪತ್ರಿಕೆಗೆ ಯಾವುದೇ ಜಾಹಿರಾತಿನ ಹಂಗಿಲ್ಲದೆ ಪತ್ರಿಕೋದ್ಯಮ ನಡೆಸಿದ ಧೀಮಂತ ವ್ಯಕ್ತಿಯಾಗಿದ್ದರು. ಪಿ.ಲಂಕೇಶ್ ಅವರು ನಾಟಕ, ಕಥೆ, ಕಾವ್ಯ, ಕವನ, ವಿಮರ್ಶೆ, ರಂಗಭೂಮಿ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾದ ಕೊಡುಗೆ ಕನ್ನಡ ನಾಡಿಗೆ ನೀಡಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಙಾನವನ್ನು ಬೆಳಸಿಕೊಳ್ಳಬೇಕು. ಅಷ್ಟೇ ಅಲ್ಲದೆ ತಮ್ಮಲ್ಲಿರುವ ಪ್ರತಿಭೆಯ ಮುಖಾಂತರ ವಿವಿಧ ಕೌಶಲ್ಯಗಳನ್ನು ಕಲಿತು ಸಮಾಜಲ್ಲಿ ಮುನ್ನಡೆಯಬೇಕು. ಆ ಮುಖಾಂತರ ನಾಡಿನ ಪ್ರಗತಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾಗಬೇಕೆಂದು ವಿದ್ಯಾರ್ಥಿಗಳಿಗೆ ಜ್ಯೋತಿ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಎನ್ ಅಮೃತ್ ಕುಮಾರ್ ತಿಳಿಸಿದರು.
ಗಾಯಕರು ಹಾಗೂ ರಂಗಕರ್ಮಿ ಗ.ನ ಅಶ್ವಥ್ ಮಾತನಾಡಿ ಪಿ.ಲಂಕೇಶ್ ಅವರ ನಾಟಕ ಗಳಲ್ಲಿ ಮೇಲ್ಜಾತಿಯವರು ತಳಸಮುದಾಯದವರ ಮೇಲೆ ನಡೆಸುತ್ತಿದ್ದ ಶೋಷಣೆ ಹಾಗೂ ದಬ್ಬಾಳಿಕೆಯನ್ನು ಖಂಡಿಸಿ ಅದರ ವಿರುದ್ದ ಸಿಡಿದೇಳುವ ಸನ್ನಿವೇಶಗಳನ್ನು ರಂಗಭೂಮಿ ಯಿಂದ ಜಾಗೃತಿಯನ್ನು ಮೂಡಿಸಿ,ಹುಟ್ಟಿನಿಂದ ಕನಿಷ್ಟರು ಯಾರು ಇಲ್ಲ, ಎಲ್ಲರೂ ಶ್ರೇಷ್ಠರೇ ಎಂಬುದನ್ನು ಸಮಾಜಕ್ಕೆ ತೋರಿಸಿ ಕೊಟ್ಟಿದ್ದಾರೆ ಎಂದರು.
ಇದೇ ವೇಳೆ, ನಾಡು ನುಡಿಯ ಬಗ್ಗೆ ಕೇಳಿದ ರಸಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷ್ಣ ರುಕ್ಮಿಣಿ ಕಾಲೇಜು ಪ್ರಾಂಶುಪಾಲ ಪ್ರವೀಣ್ ಎನ್, ಕವಿ ಸರ್ದಾರ್ ಚಾಂದ್ ಪಾಷಾ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಜಿಲ್ಲಾ ಸಂಚಾಲಕರಾದ ಪಾತಮುತ್ತಕಹಳ್ಳಿ ಮು. ಚಲಪತಿಗೌಡ, ಈ ಧರೆ ಪ್ರಕಾಶ್, ಕಸಾಪ ಮಹಿಳಾ ಪ್ರತಿನಿಧಿ ಶ್ರೀಮತಿ ಪ್ರೇಮಲೀಲ ವೆಂಕಟೇಶ್, ಕವಿ ಶಿವಕುಮಾರ್ ಕಾಲೇಜು ಸಿಬ್ಬಂದಿ ಜಗದೀಶ್, ನಾಗರಾಜ್, ಸಹನಾ ಇನ್ನಿತರರು ಭಾಗವಹಿಸಿ ದ್ದರು.