Sadguru Sri Madhusudan Sai: ಕಡಿಮೆ ವೆಚ್ಚದಲ್ಲಿ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಬೇಕು: ಶ್ರೀ ಮಧುಸೂದನ ಸಾಯಿ
Sathya sai grama: ಆರೋಗ್ಯ ಕ್ಷೇತ್ರವು ಇಂದು ವ್ಯವಹಾರವಾಗಿದೆ. ಇದು ತಪ್ಪು. ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರದಂಥ ಪ್ರಮುಖ ಸೇವೆಗಳ ಮೂಲಕ ಎಲ್ಲರಿಗೂ ನಾವು ಸಮಾನ ಅವಕಾಶಗಳನ್ನು ಕಲ್ಪಿಸುತ್ತಿದ್ದೇವೆ. ಹಣಕಾಸು, ಶಿಕ್ಷಣ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಹೀಗೆ ಯಾವುದೇ ಕ್ಷೇತ್ರವಿರಲಿ. ಹುಡುಗರಾಗಲಿ, ಹುಡುಗಿಯರಾಗಿರಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದ್ದಾರೆ.
-
ಚಿಕ್ಕಬಳ್ಳಾಪುರ, ಅ.27: ಎಲ್ಲರಿಗೂ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗಬೇಕು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಹೇಳಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ 73ನೇ ದಿನವಾದ ಸೋಮವಾರ ಆಶೀರ್ವಚನ ನೀಡಿದ ಸದ್ಗುರು ಅವರು, ಈ ಆಶಯವು ಭಾರತೀಯ ಚಿಂತನೆಗೆ ಅನುಗುಣವಾಗಿದೆ ಎಂದು ತಿಳಿಸಿದರು.
ಆರೋಗ್ಯ ಕ್ಷೇತ್ರವು ಇಂದು ವ್ಯವಹಾರವಾಗಿದೆ. ಇದು ತಪ್ಪು. ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರದಂಥ ಪ್ರಮುಖ ಸೇವೆಗಳ ಮೂಲಕ ಎಲ್ಲರಿಗೂ ನಾವು ಸಮಾನ ಅವಕಾಶಗಳನ್ನು ಕಲ್ಪಿಸುತ್ತಿದ್ದೇವೆ. ಹಣಕಾಸು, ಶಿಕ್ಷಣ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಹೀಗೆ ಯಾವುದೇ ಕ್ಷೇತ್ರವಿರಲಿ. ಹುಡುಗರಾಗಲಿ, ಹುಡುಗಿಯರಾಗಿರಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು ಎಂದು ಕಿವಿಮಾತು ಹೇಳಿದರು.
ಎಲ್ಲರಿಗೂ ಉತ್ತಮ ಜಗತ್ತನ್ನು ಸೃಷ್ಟಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಜಗತ್ತು ಸುಧಾರಿಸಿದಾಗ ನಾವು ಈ ಪ್ರಕ್ರಿಯೆಯ ಪ್ರಯೋಜನ ಪಡೆಯುತ್ತೇವೆ. ಆದ್ದರಿಂದ ಈ ಸೇವಾ ಕಾರ್ಯಗಳ ಮೂಲಕ ಉತ್ತಮ ಜಗತ್ತು ರೂಪಿಸುವ ಪ್ರಯತ್ನವನ್ನು ಮುಂದುವರಿಸುತ್ತಿದ್ದೇವೆ. ಇದಕ್ಕಾಗಿ ಸಮಾನ ಮನಸ್ಕ ಸಂಸ್ಥೆಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದು, ಸಹಕರಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | ʼʼಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಿದರೆ ಜಗತ್ತಿನ ಪರಿವರ್ತನೆ ಸಾಧ್ಯʼʼ: ಸದ್ಗುರು ಶ್ರೀ ಮಧುಸೂದನ ಸಾಯಿ
ಅತಿಥಿ ದೇಶ ನಮೀಬಿಯಾ ಬಗ್ಗೆ ಮಾತನಾಡಿದ ಸದ್ಗುರು ಅವರು, ನಾವು ನೋಡಿರುವ ಅತ್ಯಂತ ಆಸಕ್ತಿದಾಯಕ ದೇಶ ನಮೀಬಿಯಾ. ಆಫ್ರಿಕಾದ ಅತಿ ದೊಡ್ಡ ದೇಶಗಳಲ್ಲಿ ಒಂದಾದ ನಮೀಬಿಯಾ, ಮರುಭೂಮಿ, ಅನಾವೃಷ್ಟಿ ಮತ್ತು ಕೃಷಿಯಲ್ಲಿ ಇಳುವರಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಲ್ಲಿನ ಜನರು ತುಂಬಾ ಕಠಿಣವಾದ ಪರಿಸ್ಥಿತಿಗಳಲ್ಲಿ ಬದುಕುತ್ತಾರೆ. ಆದರೆ ತಮ್ಮ ಜೀವನವನ್ನು ಹೇಗಿದೆಯೋ ಹಾಗೆ ಸಂಭ್ರಮಿಸುತ್ತಾರೆ. ಇದು ನಿಜವಾದ ಮಾನವ ಚೈತನ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಚೌಧರಿ ಮಾತನಾಡಿ, ಹಣಕಾಸಿನಲ್ಲಿ ನಾಯಕತ್ವ ಎಂದರೆ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸೇವೆಗಳನ್ನು ರೂಪಿಸುವುದು. ಸ್ಥಿತಿಸ್ಥಾಪಕತ್ವ ಮತ್ತು ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದು ಮತ್ತು ನೈತಿಕ ಆಡಳಿತದಲ್ಲಿ ನಂಬಿಕೆ ಹೆಚ್ಚಿಸಬೇಕಾಗಿದೆ. 23 ಸಾವಿರ ಹಳ್ಳಿಗಳಲ್ಲಿ ಸಣ್ಣ ರೈತರನ್ನು ಬೆಂಬಲಿಸುವ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. 2031 ರ ವೇಳೆಗೆ 40 ಲಕ್ಷ ಕುಟುಂಬಗಳಿಗೆ ಕಾರ್ಯಕ್ರಮವನ್ನು ತಲುಪಿಸಿ ರೈತರ ಅಭ್ಯುದಯ ಕಾಣುವುದು ನಮ್ಮ ಬದ್ಧತೆಯಾಗಿದೆ. ಈ ಕಾರ್ಯಕ್ರಮವನ್ನು ವಿಸ್ತರಿಸಲಾಗುತ್ತದೆ ಎಂದು ಹೇಳಿದರು.
ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಚೌಧರಿ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಗೌರವಿಸಲಾಯಿತು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬೆಂಬಲ ನೀಡುತ್ತಿರುವ ಲೆಗ್ರ್ಯಾಂಡ್ ಇಂಡಿಯಾ ಕಂಪನಿಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಪ್ರತಿನಿಧಿ ಅಬಿದಾ ಅನೀಜ್ ಅವರು ಪ್ರಶಸ್ತಿ ಸ್ವೀಕರಿಸಿದರು.
ನಮೀಬಿಯಾದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ವೆರೊನಾ ಡು ಪ್ರೀಜ್ (Verona Du Preez) ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು. ನಮೀಬಿಯಾ ಪ್ರತಿನಿಧಿ ಹೆಲೆನಾ ಮಧೀನಾ (Helena Mwadhina) ಅವರು ತಮ್ಮ ದೇಶದ ಕಲೆ, ಸಂಸ್ಕೃತಿ, ಸಂಗೀತ, ಪ್ರಸಿದ್ಧ ತಾಣಗಳು, ಖ್ಯಾತ ಖಾದ್ಯಗಳು, ಸಾಂಪ್ರದಾಯಿಕ ಉಡುಪು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಧನ್ವಂತರಿ ಪ್ರತಿಮೆಗೆ ಪೂಜೆ
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ 600 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆಯ ಮೇಲೆ ಸ್ಥಾಪಿಸಲಾಗುವ ಧನ್ವಂತರಿ ದೇವರ ಪ್ರತಿಮೆಗೆ ಸೋಮವಾರ ಸದ್ಗುರು ಶ್ರೀ ಮಧುಸೂದನ ಸಾಯಿ ಪೂಜಿಸಿದರು. ಪಂಚಲೋಹಗಳಿಂದ ನಿರ್ಮಿಸಲಾಗಿರುವ 21 ಅಡಿ ಎತ್ತರದ ಈ ಪ್ರತಿಮೆಯನ್ನು ಕೇವಲ 40 ದಿನಗಳಲ್ಲಿ ಪಾರಂಪರಿಕ ತಂಜಾವೂರು ಉಲಾವ ಸಿರ್ಪಮ್ ವಿಧಾನದಲ್ಲಿ ರೂಪಿಸಲಾಗಿದೆ. ಲೋಹ ಶಿಲ್ಪಗಳನ್ನು ನಿರ್ಮಿಸುವಲ್ಲಿ ಇದೊಂದು ವಿಶೇಷ ತಂತ್ರ ಎನಿಸಿದೆ.
ಔಷಧಿಗಳ ದೇವರು ಎಂದು ಭಾರತೀಯರು ಆರಾಧಿಸುವ ಧನ್ವಂತರಿಯು ಎಲ್ಲರಿಗೂ ಆರೋಗ್ಯ ದಯಪಾಲಿಸುತ್ತಾನೆ ಎನ್ನುವ ನಂಬಿಕೆಯಿದೆ. ಆಸ್ಪತ್ರೆಯ ಮೇಲೆ ಈ ಪ್ರತಿಮೆ ಸ್ಥಾಪಿಸುವುದರಿಂದ ಆರೋಗ್ಯ ಸೇವೆ ಒದಗಿಸುವ ಎಲ್ಲ ವೃತ್ತಿಪರರ ಬದ್ಧತೆಯನ್ನು ಗೌರವಿಸಿದಂತೆ ಆಗುತ್ತದೆ. ಆರೋಗ್ಯ ಸೇವೆಯು ಅತ್ಯುನ್ನತ ಪೂಜೆಯೇ ಆಗಿದೆ.
ಶ್ರೀ ಉಮಾಮಹೇಶ್ವರ ದೇಗುಲದಲ್ಲಿ 16 ಸೋಮವಾರದ ವ್ರತ ಸಂಪನ್ನ
ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಇಂದು 16ನೇ ಸೋಮವಾರದ ವ್ರತವು 'ರುದ್ರಾಭಿಷೇಕ' ಪೂಜೆಯೊಂದಿಗೆ ಸಂಪನ್ನವಾಯಿತು. ಅತಿರುದ್ರ ಮಹಾಯಾಗ ಮತ್ತು ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ವಿಗ್ರಹಗಳ ಪ್ರಾಣಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಪ್ರೇರಣೆ ಮೇರೆಗೆ 16 ಸೋಮವಾರ ವ್ರತದ ಸಂಕಲ್ಪ ಮಾಡಲಾಗಿತ್ತು.
ವೇದ ಗುರುಕುಲದ ವಿದ್ಯಾರ್ಥಿಗಳ ಹಾಗೂ ಋತ್ವಿಜರು ನಮಕ-ಚಮಕಗಳನ್ನು ಸ್ವರಬದ್ಧವಾಗಿ ಪಾರಾಯಣ ಮಾಡಿದರು. ಇಡೀ ವಾತಾವರಣದಲ್ಲಿ ಜಗತ್ತಿನ ತಂದೆ-ತಾಯಿಯರಾದ ಶಿವ-ಪಾರ್ವತಿಯರ ಕಾರುಣ್ಯವು ಮಾರ್ದನಿಸಿದ ಅನುಭವ ಭಕ್ತರಿಗೆ ಆಗುತ್ತಿತ್ತು.
ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ಜಗತ್ತಿನಲ್ಲಿ ಅತ್ಯಂತ ದುರ್ಬಲ ಸಮುದಾಯಗಳ ಮೇಲೆತ್ತುವುದೇ ನಮ್ಮ ಗುರಿ: ಸದ್ಗುರು ಶ್ರೀ ಮಧುಸೂದನ ಸಾಯಿ
ಅಭಿಷೇಕದ ನಂತರ ಕೆಲ ಧಾರ್ಮಿಕ ವಿಧಿಗಳನ್ನು ಸ್ವತಃ ಸದ್ಗುರುಗಳೇ ನೆರವೇರಿಸಿದರು. ಶಿವಲಿಂಗವನ್ನು ಭಕ್ತಿಯಿಂದ ಪೂಜಿಸಿದರು. 'ನಮ್ಮ ಸುತ್ತಮುತ್ತ ಏನು ಬೇಕಾದರೂ ನಡೆಯಲಿ. ನಾವು ಎಂದಿಗೂ ವಿಚಲಿತರಾಗಬಾರದು. ಸದಾ ವಿನಯಿಗಳಾಗಿರಬೇಕು, ಕೃತಜ್ಞರಾಗಿರಬೇಕು ಮತ್ತು ದೇವರ ಕೃಪೆಯನ್ನು ಸ್ಮರಿಸಬೇಕು. ದೇವರ ಕರುಣೆಯನ್ನು ನೆನೆಯುತ್ತಾ ಅವನಿಗೆ ಸಂಪೂರ್ಣವಾಗಿ ಶರಣಾಗತರಾಗಬೇಕು. ಅವನ ಕೆಲಸಕ್ಕಿಂತಲೂ ದೊಡ್ಡದು ಯಾವುದೂ ಇಲ್ಲ' ಎಂದು ತಮ್ಮ ಆಶೀರ್ವಚನದಲ್ಲಿ ಕಿವಿಮಾತು ಹೇಳಿದರು.