Sadguru Sri Madhusudan Sai: ಜಗತ್ತಿನಲ್ಲಿ ಅತ್ಯಂತ ದುರ್ಬಲ ಸಮುದಾಯಗಳ ಮೇಲೆತ್ತುವುದೇ ನಮ್ಮ ಗುರಿ: ಸದ್ಗುರು ಶ್ರೀ ಮಧುಸೂದನ ಸಾಯಿ
ಸಂಘರ್ಷಗಳಿಂದ ಸಂತ್ರಸ್ತರಾದವರನ್ನು ಮೇಲೆತ್ತಿ, ಅವರ ಬದುಕು ಸುಧಾರಿಸುವಂತೆ ಮಾಡುವುದು ಮಹತ್ವದ ಕೆಲಸ. ಇದು ಬಹಳ ಮುಖ್ಯವಾದ ಸೇವೆ. ಪ್ರಪಂಚದಲ್ಲಿ ಸಂಘರ್ಷವಿಲ್ಲದ ದೇಶವೇ ಇಲ್ಲ. ಅಧಿಕಾರವನ್ನು ನಿಯಂತ್ರಿಸುವ ದೊಡ್ಡ ಜನರ ಸಂಘರ್ಷಗಳ ಪರಿಣಾಮವಾಗಿ ಸಾಮಾನ್ಯ ಜನರು ಬಳಲುತ್ತಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ದುರ್ಬಲ ಸ್ಥಿತಿಗೆ ತಲುಪುವಂತಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ವಿಷಾದಿಸಿದರು.
-
ಚಿಕ್ಕಬಳ್ಳಾಪುರ: ಜಗತ್ತಿನಲ್ಲಿ ಅಂತರ್ಯುದ್ಧ ಮತ್ತು ಸಮುದಾಯಗಳ ಘರ್ಷಣೆಗಳಿಂದ ದುರ್ಬಲ ಸಮುದಾಯಗಳು ಯಾವಾಗಲೂ ಹಿಂದೆ ಉಳಿಯುತ್ತಲೇ ಇವೆ. ಈ ಸಮುದಾಯಗಳನ್ನು ಮೇಲೆತ್ತುವುದೇ ನಮ್ಮ ಗುರಿಯಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ (Sadguru Sri Madhusudan Sai) ಹೇಳಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ (Sathya Sai Grama) ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ 70 ನೇ ದಿನವಾದ ಶುಕ್ರವಾರ ಸದ್ಗುರು ಅವರು ಆಶೀರ್ವಚನ ನೀಡಿದರು.
ಸಂಘರ್ಷಗಳಿಂದ ಸಂತ್ರಸ್ತರಾದವರನ್ನು ಮೇಲೆತ್ತಿ, ಅವರ ಬದುಕು ಸುಧಾರಿಸುವಂತೆ ಮಾಡುವುದು ಮಹತ್ವದ ಕೆಲಸ. ಇದು ಬಹಳ ಮುಖ್ಯವಾದ ಸೇವೆ. ಪ್ರಪಂಚದಲ್ಲಿ ಸಂಘರ್ಷವಿಲ್ಲದ ದೇಶವೇ ಇಲ್ಲ. ಅಧಿಕಾರವನ್ನು ನಿಯಂತ್ರಿಸುವ ದೊಡ್ಡ ಜನರ ಸಂಘರ್ಷಗಳ ಪರಿಣಾಮವಾಗಿ ಸಾಮಾನ್ಯ ಜನರು ಬಳಲುತ್ತಾರೆ. ಇದರಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ದುರ್ಬಲ ಸ್ಥಿತಿಗೆ ತಲುಪುವಂತಾಗಿದೆ ಎಂದು ವಿಷಾದಿಸಿದರು.
ಇಂಥವರಿಗೆ ಶಿಕ್ಷಣ, ಆರೋಗ್ಯ, ಆಹಾರ ಸೇರಿದಂತೆ ಉತ್ತಮ ಸೌಲಭ್ಯಗಳನ್ನು ನೀಡಬೇಕಿದೆ. ಸಕಾರಾತ್ಮಕ ಮತ್ತು ಪರಸ್ಪರ ತ್ಯಾಗದ ಮನೋಭಾವ ಇದ್ದಾಗ ಇಂತಹ ಸೇವೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಒಂದು ಸಂಸ್ಥೆಯಾಗಿ ನಾವು ಯಾವಾಗಲೂ ಅಗತ್ಯ ಇರುವವರಿಗೆ ಸಹಾಯ ಮಾಡಲು ಅವಕಾಶಗಳನ್ನು ಹುಡುಕುತ್ತೇವೆ. ಯಾರೂ ಹೋಗಲು ಬಯಸದ ಸ್ಥಳಗಳಿಗೆ ಹೋಗಿ ಅಲ್ಲಿನ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇವೆ. ಈ ಸೇವೆಯು ವಿಸ್ತರಿಸುತ್ತಲೇ ಇದೆ ಎಂದರು.
ಉತ್ಸವದ ಸಂದರ್ಭದಲ್ಲಿ ಇತರರಿಗಾಗಿ ತ್ಯಾಗ ಮಾಡಿದ ಜನರನ್ನು ನಾವು ಭೇಟಿಯಾಗುತ್ತಿದ್ದೇವೆ. ತಮ್ಮನ್ನು ಮೀರಿ ಇತರ ಜನರ ಅಗತ್ಯಗಳನ್ನು ಅರಿತು ಅವಕಾಶಗಳನ್ನು ಸೃಷ್ಟಿಸುತ್ತಿರುವ ಜನರ ಕೆಲಸಗಳು ಸದಾ ನೆನಪುಗಳಲ್ಲಿ ಅಮರವಾಗಿರುತ್ತವೆ. ಇದು ಉತ್ಸವದ ಅತ್ಯಂತ ಸ್ಫೂರ್ತಿದಾಯಕ ಭಾಗವಾಗಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಶ್ರಮಕ್ಕೆ ಬಸವರಾಜ ಹೊರಟ್ಟಿ ಶ್ಲಾಘನೆ
'ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ'ಗೆ ಬೆಂಬಲ ನೀಡುತ್ತಿರುವ ಪ್ಯೂರ್ ಸ್ಟೋರೇಜ್ ಕಂಪನಿಗೆ 'ಸಿಎಸ್ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜೇಯ ಮೊಟಗಾನಹಳ್ಳಿ, ಇಂಜಿನಿಯರಿಂಗ್ ಮ್ಯಾನೇಜರ್ ಪ್ರಮೋದ್ ಅನ್ವೇಕರ್ ಪ್ರಶಸ್ತಿ ಸ್ವೀಕರಿಸಿದರು. ಕೊಲಂಬಿಯಾ ದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಒಲ್ಗಾ ಇನೆಸ್ ಮೊಂಟೊಯಾ ಅರಿಯಾಸ್ (Olga Ines Montoya Arias) ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕೊಲಂಬಿಯಾ ಪ್ರತಿನಿಧಿ ದೇಬಿ ಜೂಲಿಯನ್ ಅಫನಾಡರ್ (Deybi Julian Afanadr) ಅವರು ತಮ್ಮ ದೇಶದ ಸಂಸ್ಕೃತಿ, ಭಾಷೆ, ಕಲೆ, ಸಂಗೀತ, ಸಾಂಪ್ರದಾಯಿಕ ಉಡುಪು, ಪ್ರವಾಸಿ ತಾಣಗಳು, ಪ್ರಸಿದ್ಧ ಖಾದ್ಯಗಳು ಹಾಗೂ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.