ಚಿಕ್ಕಬಳ್ಳಾಪುರ: ಫೆ.23ರಂದು ನಗರ ಹೊರವಲಯದಲ್ಲಿ ನಡೆಯುತ್ತಿರುವ ಬೃಹತ್ ಕಾರ್ಯಕ್ರಮದಲ್ಲಿ ನರೇಗಾ ಬಚಾವ್ ಸಂಗ್ರಾಮ್ ಆಂದೋಲನ(NREGA Bachao Sangram Movement)ಕ್ಕೆ ಚಿಕ್ಕಬಳ್ಳಾಪುರದಿಂದ ಚಾಲನೆ ನೀಡಲಾಗುತ್ತಿದ್ದು ಸಿದ್ಧತೆಗಳು ಭರದಿಂದ ಸಾಗಿವೆ.
ನಗರ ಹೊರವಲಯ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯು ತ್ತಿರುವ ಕಾರ್ಯಕ್ರಮಕ್ಕೆ 10-15 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಿದ್ದು 1 ಲಕ್ಷಕ್ಕೂ ಹೆಚ್ಚುಮಂದಿ ಕೂಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಕಳೆದ ಒಂದು ವಾರದಿಂದ ಇಲ್ಲಿ ಸಿದ್ಧತೆಗಳು ನಡೆಯುತ್ತಿದ್ದು ನಿತ್ಯವೂ ಶಾಸಕ ಪ್ರದೀಪ್ ಈಶ್ವರ್ ಮತ್ತು ಉಸ್ತುವಾರಿ ಸಚಿವ ಡಾ.ಎಂ..ಸಿ ಸುಧಾಕರ್ ಭೇಟಿ ನೀಡಿ ಕಾರ್ಯಕ್ರಮದ ಸಿದ್ದತೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಈ ವೇಳೆ ಮಾತನಾಡಿರುವ ಶಾಸಕ ಪ್ರದೀಪ್ ಈಶ್ವರ್ ನರೇಗಾ ಬಚಾವ್ ಸಂಗ್ರಾಮ್ ಆಂದೋಲನದ ಈ ಕಾರ್ಯಕ್ರಮ ಪ್ರದೇಶ ಕಾಂಗ್ರೆಸ್ ಪಕ್ಷ ಮತ್ತು ಶಾಸಕನಾಗಿ ನನಗೆ ಸಚಿವರಾಗಿ ಡಾ.ಎಂ.ಸಿ.ಸುಧಾಕರ್ ಅವರಿಗೆ ಪ್ರತಿಷ್ಟೆಯ ಕಾರ್ಯಕ್ರಮವಾಗಿದೆ ಎಂದರು.
ಇದನ್ನೂ ಓದಿ: MNREGA Row: ಸಂಸತ್ತಿನಲ್ಲಿ ಮನರೇಗಾ ಗದ್ದಲ; ಹೊಸ ಯೋಜನೆಗಳಿಗೆ ಹಿಂದಿ ಹೆಸರು: ಉತ್ತರ-ದಕ್ಷಿಣ ಜಟಾಪಟಿ
ಕಾರಣ ನಮ್ಮ ಜಿಲ್ಲೆಯಲ್ಲಿಯೇ ಇಂತಹ ಕಾರ್ಯಕ್ರಮ ನಡೆಸುವ ಅವಕಾಶವನ್ನು ಪಕ್ಷವು ನಮಗೆ ನೀಡಿದೆ.ಮುಖ್ಯವಾಗಿ ಜಿಲ್ಲೆಯಲ್ಲಿರುವ ವಿಶ್ವವಿಖ್ಯಾತ ನಂದಿಬೆಟ್ಟಕ್ಕೆ ಸಾಕಷ್ಟು ಬಾರಿ ಭೇಟಿ ನೀಡಿದ್ದಾರೆ. ಮಹಾತ್ಮಾ ಗಾಂಧಿಗೆ ಗೌರವ ಸಲ್ಲಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕರ್ನಾಟಕ ಉಸ್ತುವಾರಿ ಸುರ್ಜೆವಾಲಾ, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂತಹ ದೊಡ್ಡ ನಾಯಕರು ಆಗಮಿಸಿ ದೇಶಕ್ಕೆ ನರೇಗಾ ಯೋಜನೆ ಬದಲಾವಣೆಯಿಂದ ಹೊಸ ರೂಪದಲ್ಲಿ ಬಂದಿರುವ ವಿಬಿಜಿರಾಮ್ಜಿ ಕಾರ್ಯಕ್ರಮದ ಹುನ್ನಾರಗತಳನ್ನು ಜನತೆಗೆ ತಿಳಿಸಲು ಅವಕಾಶವಾಗು ತ್ತಿದೆ ಎಂದರು.
ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಜನಪರ ಯೋಜನೆಗಳಿಗೆ ನಮ್ಮ ಸರಕಾರ ಇಟ್ಟಿದ್ದ ಹೆಸರು ಗಳನ್ನು ಮೋದಿ ಸರಕಾರ ಬದಲಾವಣೆ ಮಾಡಿದೆ. ಯುಪಿಎ ಸರಕಾರದ ಮೊದಲ ಅವಧಿ 2005ರಲ್ಲಿ ರಾಷ್ಟ್ರದಲ್ಲಿದ್ದ ನಿರುದ್ಯೋಗ ಸಮಸ್ಯೆ ನಿವಾರಿಸಲು ದೂರ ದೃಷ್ಟಿ ಯಿಂದ ನರೇಗಾ ಯೋಜನೆ ಜಾರಿಗೆ ತಂದಿತ್ತು.ಈ ಕಾನೂನಿನಡಿ ವರ್ಷಕ್ಕೆ 100 ದಿನಗಳ ಉದ್ಯೋಗಕ್ಕೆ ಅವಕಾಶವಿದ್ದು ಉದ್ಯೋಗ ನೀಡದಿದ್ದಲ್ಲಿ ನಿರುದ್ಯೋಗ ಭತ್ಯೆ ನೀಡುವ ವ್ಯವಸ್ಥೆಯಿತ್ತು.ಯೋಜನೆಗೆ ಶೇ.90 ಕೇಂದ್ರ ನೀಡುತ್ತಿತ್ತು. ಆದರೆ ಈಗ 100 ದಿನಗಳ ಬದಲಿಗೆ 125 ದಿನ ಎಂದು ಹೇಳಲಾಗುತ್ತಿರುವುದು ಕೇವಲ ಕಣ್ಣೊರೆಸುವ ತಂತ್ರ.ಉದ್ಯೋಗ ನೀಡುವ ವ್ಯವಸ್ಥೆಯಿಂದ ಕೇಂದ್ರ ತಪ್ಪಿಸಿಕೊಳ್ಳುತ್ತಿದೆ, ಈ ಸತ್ಯವನ್ನು ಜನತೆಗೆ ತಿಳಿಸಬೇಕಿದೆ. ಅದಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ನರೇಗಾ ಬಚಾವ್ ಸಂಗ್ರಾಮ್ ಆಂದೋಲನದ ಈ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ನರೇಗಾ ಜಾಬ್ಕಾರ್ಡ್ ಹೊಂದಿರುವ 50 ರಿಂದ 1 ಲಕ್ಷ ಫಲಾನುಭವಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಈ ಯೋಜನೆಯನ್ನು ಕೇಂದ್ರಸರಕಾರ ವಾಪಸ್ಸು ಪಡೆದು ಹೊಸದಾಗಿ ವಿಬಿಜಿರಾಮ್ಜಿ ಯೋಜನೆ ಮೂಲಕ ಸೃಷ್ಟಿಸಿರುವ ಅಭದ್ರತೆಯನ್ನು ತಿಳಿಸಲಾಗುವುದು. ಕೇಂದ್ರ ಸರಕಾರ ಗ್ರಾಮ ಭಾರತದ ಸ್ವಾವಲಂಬನೆಗೆ ಆಸರೆಯಾಗಿದ್ದ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸ್ಥಗಿತಗೊಳಿಸಿ ಹೊಸದಾಗಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಮಹಾತ್ಮಾಗಾಂಧೀಜಿಗೆ ಹೆಸರಿಗೆ ಹೇಗೆ ದ್ರೋಹವೆಸಗಿದೆ ಎಂಬುದನ್ನು ಜನತೆಗೆ ತಿಳಿಸ ಲಾಗುವುದು ಎಂದರು.
ಚಿಕ್ಕಬಳ್ಳಾಪುರ,ಕೋಲಾರ, ಬೆಂಗಳೂರು ಗ್ರಾಮಾಂತರ ಮೂರು ಜಿಲ್ಲೆಗಳನ್ನು ಒಳಗೊಂಡ ಬೃಹತ್ ಸಾರ್ವಜನಿಕ ಸಭೆಯಾಗಿದೆ.ಮೂರು ಜಿಲ್ಲೆಗಳ ಎಲ್ಲ ತಾಲ್ಲೂಕುಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸುತ್ತಾರೆ. ಕೇಂದ್ರ ಸರ್ಕಾರವು ಇಡೀ ದೇಶದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸು ತ್ತಿದೆ. 2002 ರಲ್ಲಿದ್ದ ಮತದಾರರ ಪಟ್ಟಿಯ ಮ್ಯಾಪಿಂಗ್ ಮಾಡಲಿದ್ದು ಹೊಸದಾಗಿ ಸೇರ್ಪಡೆ ಯಾಗಿದ್ದವರನ್ನು ತೆಗೆದುಹಾಕಲಾಗುತ್ತಿದೆ. ಹಿಂದಿನ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದ ಬೂತ್ ಹಂತದ ಏಜೆಂಟರು ಎಚ್ಚೆತ್ತುಕೊಳ್ಳಬೇಕು. ಅರ್ಹ ಮತದಾರರನ್ನು ಕೈಬಿಡದಂತೆ ಜಿಲ್ಲೆಯಲ್ಲಿ ಜಾಗೃತಿ ವಹಿಸಬೇಕು ಎಂದು ಸೂಚಿಸಿದರು.
ಕೇಂದ್ರವು ಬಡವರ ಮೇಲಿನ ದ್ವೇಷದಿಂದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯನ್ನು ರದ್ದುಗೊಳಿಸಿ ಸ್ಪಷ್ಟತೆ ಇಲ್ಲದ ವಿಬಿ ರಾಮ್ ಜಿ ಯೋಜನೆಯನ್ನು ಜಾರಿಗೆ ತರುತ್ತಿದೆ. ಇದರ ಜನವಿರೋಧಿ ನೀತಿಗಳ ಕುರಿತು ಜನಜಾಗೃತಿ ಮೂಡಿಸಬೇಕಾಗಿದೆ. ಅನುದಾನವನ್ನು ಕಡಿತಗೊಳಿಸಲಾಗಿದೆ. ವಿವಿಧ ನಿರ್ಭಂಧಗಳನ್ನು ಹೇರಲಾಗಿದೆ. ರಾಜ್ಯ ಸರ್ಕಾರಗಳ ಮೇಲೆ ಹೊರೆ ಹಾಕುತ್ತಿದ್ದಾರೆ. ಮನ್ರೇಗಾ ದಲ್ಲಿ ರಾಜ್ಯ ಸರ್ಕಾರದ ಪಾಲಿ ಶೇ.10, ಕೇಂದ್ರದ್ದು ಶೇ.90 ರಷ್ಟಿತ್ತು. ರಾಜ್ಯಗಳೊಂದಿಗೆ ಸಮಾಲೋಚಿಸದೆ ಏಕಾಏಕಿ ರಾಜ್ಯಗಳ ಪಾಲು ಶೇ.40 ಕ್ಕೆ ಎರಿಕೆ ಮಾಡಲಾಗಿದೆ. ರಾಜ್ಯ ಸರ್ಕಾರಗಳು ಆರ್ಥಿಕ ಹೊರೆ ಎದುರಿಸ ಬೇಕಾಗುತ್ತದೆ. ಈ ಸತ್ಯಗಳನ್ನು ಜಿಲ್ಲೆಯಿಂದ ನೇರವಾಗಿ ದೇಶವಾಸಿಗಳಿಗೆ ತಿಳಿಸಬೇಕಿದೆ. ಅದಕ್ಕಾಗಿ ಇಂತಹ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
*
ಪ್ರದೇಶ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾದ ಚಂದ್ರಶೇಖರ್ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಚಿಕ್ಕಬಳ್ಳಾಪುರದ ಕಾರ್ಯಕ್ರಮ ಅಖಿಲಭಾರತ ಕಾರ್ಯಕ್ರಮವಾಗಲಿದೆ.ಕೇಂದ್ರ ಸರಕಾರದ ಧ್ವೇಷರಾಜಕಾರಣದ ಬಗ್ಗೆ ದೇಶವಾಸಿಗಳಿಗೆ ಎಳೆಎಳೆಯಾಗಿ ತಿಳಿಸಿ ಹೇಳಬೇಕಿದೆ.ಮೂರು ಜಿಲ್ಲೆಗಳ ಪಕ್ಷದ ಮುಖಂಡರು ಕಾರ್ಯಕರ್ತರು ಶಾಸಕ ಸಚಿವರು ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗಿ ಯಾಗುವಂತೆ ನೋಡಿಕೊಳ್ಳುವ ಮೂಲಕ ಪಕ್ಷದ ಬಲಪ್ರದರ್ಶನ ಮಾಡಬೇಕು. ಕೇವಲ ಪದಾಧಿಕಾರಿಗಳಾದರೆ ಸಾಲದು ಪಕ್ಷಕ್ಕಾಗಿ ಶ್ರಮಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು,ಶಾಸಕ ಪ್ರದೀಪ್ ಈಶ್ವರ್, ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಮಾಜಿ ವಿಧಾನಪರಿಷತ್ ಸದಸ್ಯ ವಿ.ಆರ್ ಸುದರ್ಶನ್ ಇದ್ದರು.