ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kumki Elephants: ಆಂಧ್ರಕ್ಕೆ ರಾಜ್ಯದ 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ಸಿಎಂ

CM Siddaramaiah: ದೇಶದಲ್ಲೇ ಆನೆ ಸಂಪತ್ತು ಹೆಚ್ಚಾಗಿರುವ ರಾಜ್ಯ ನಮ್ಮದು. 3695 ಆನೆಗಳು ನಮ್ಮಲ್ಲಿವೆ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಾನವ- ಆನೆ ಸಂಘರ್ಷ ತಡೆಯುವುದರಿಂದ ಜೀವ ಹಾನಿ, ಬೆಳೆ ಹಾನಿ ತಪ್ಪುತ್ತದೆ. ಈ ಮಹತ್ವದ ಉದ್ದೇಶದಿಂದಲೇ ರಾಜ್ಯದಿಂದ ಆರು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಆಂಧ್ರಕ್ಕೆ ರಾಜ್ಯದ 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ಸಿಎಂ

Profile Siddalinga Swamy May 21, 2025 6:16 PM

ಬೆಂಗಳೂರು: ನೆರೆಯ ಆಂಧ್ರಪ್ರದೇಶಕ್ಕೆ ರಾಜ್ಯದಿಂದ ನಾಲ್ಕು ಕುಮ್ಕಿ ಆನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹಸ್ತಾಂತರಿಸಿದರು. ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರಿಗೆ ಆನೆಗಳನ್ನು ಹಸ್ತಾಂತರ ಮಾಡಿದರು.

ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ. ದೇಶದಲ್ಲೇ ಆನೆ ಸಂಪತ್ತು ಹೆಚ್ಚಾಗಿರುವ ರಾಜ್ಯ ನಮ್ಮದು. 3695 ಆನೆಗಳು ನಮ್ಮಲ್ಲಿವೆ. ಮಾನವ, ಆನೆ ಸಂಘರ್ಷ ತಡೆಯುವುದರಿಂದ ಜೀವ ಹಾನಿ, ಬೆಳೆ ಹಾನಿ ತಪ್ಪುತ್ತದೆ. ಈ ಮಹತ್ವದ ಉದ್ದೇಶದಿಂದಲೇ ರಾಜ್ಯದಿಂದ ಆರು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರಿಸಲಾಗುತ್ತಿದೆ ಎಂದರು.

Kumki Elephants (1)

ಕಾರ್ಯಕ್ರಮದಲ್ಲಿ ತಮ್ಮ ಭಾಷಣವನ್ನು ಕನ್ನಡದಲ್ಲೇ ಆರಂಭಿಸಿದ ಪವನ್ ಕಲ್ಯಾಣ್ ಅವರು, ಕುವೆಂಪು ಅವರ 'ಅಮೃತವಾಣಿ' ಕವಿತೆಯ 'ಅರಣ್ಯ ಹಾಡು ಹಾಡುವ ಮುನ್ನ..' ಸಾಲುಗಳನ್ನು ವಾಚಿಸಿ ಸಭಿಕರ ಮನ ಗೆದ್ದರು. 'ನಾವು ಬೇರೆ ರಾಜಕೀಯ ಪಕ್ಷಗಳ ಗುಂಪುಗಳಿಗೆ ಸೇರಿದ್ದರೂ, ನಾವು ಮೊದಲು ಭಾರತೀಯರು ಎಂಬ ಚಿಂತನೆ ಹೊಂದಿರುವವರು. ನಮ್ಮ ಅರಣ್ಯ ಮತ್ತು ಪರಿಸರದ ಸಂರಕ್ಷಣೆಯಲ್ಲಿ ಸಹೋದರ ರಾಜ್ಯಗಳಾದ ನಾವು ಪಣ ತೊಟ್ಟಿದ್ದೇವೆ. ಎರಡೂ ರಾಜ್ಯಗಳ ಅರಣ್ಯ ಸುರಕ್ಷಿತವಾಗಿರಬೇಕು ಎಂದು ಪವನ್ ಕಲ್ಯಾಣ್‌ ತಿಳಿಸಿದರು.

'ಪ್ರಕೃತಿ - ಕನ್ನಡಿ, ಎರಡೂ ಒಂದೇ. ಕನ್ನಡಿ ಇರುವ ರೂಪವನ್ನೇ ನಿಮಗೆ ತೋರಿಸುತ್ತದೆ. ನೀವು ಪ್ರಕೃತಿ ರಕ್ಷಿಸಿದರೆ, ಪ್ರಕೃತಿ ನಿಮ್ಮನ್ನು ರಕ್ಷಿಸುತ್ತದೆ'. ಸಂಸ್ಕೃತದಲ್ಲಿ ವೃಕೋ ರಕ್ಷತಿ ರಕ್ಷಿತಃ ಎಂದು ಹೇಳುತ್ತಾರೆ. ನಾವು ಮರ ರಕ್ಷಿಸಿದರೆ ಮರ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ನಾವೆಲ್ಲರೂ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡೋಣ' ಎಂದರು.



ಈ ಸುದ್ದಿಯನ್ನೂ ಓದಿ | Booker Prize 2025: ಬಾನು ಮುಷ್ತಾಕ್‌ಗೆ ಬೂಕರ್‌ ಪ್ರಶಸ್ತಿ; ಸಿಎಂ ಸಿದ್ದರಾಮಯ್ಯ ಅಭಿನಂದನೆ

ಆಂಧ್ರದ ಜತೆ ಆಗಿರುವ ಒಪ್ಪಂದದ ಪ್ರಕಾರ ಆರು ಆನೆಗಳ ಪೈಕಿ ನಾಲ್ಕು ಆನೆಗಳನ್ನು ಹಸ್ತಾಂತರಿಸಲಾಗಿದ್ದು, ಅವುಗಳನ್ನು ಚಿತ್ತೂರು ಕಾಡಿಗೆ ಒಯ್ಯಲಾಗುವುದು. ಈ ಆನೆಗಳು ತರಬೇತಿ ಪಡೆದಿದ್ದು, ಕಮಾಂಡ್ ಕೊಡಲಾಗಿದೆ. ಕಾಡಾನೆಗಳನ್ನು ಓಡಿಸುವುದು, ನಿರ್ದಿಷ್ಟ ಪ್ರದೇಶಕ್ಕೆ ತಳ್ಳುವುದು ಮತ್ತು ಪುಂಡಾನೆಗಳನ್ನು ಹಿಡಿಯುವ ತರಬೇತಿ ಪಡೆದಿವೆ. ಆಂಧ್ರದ ಸುಮಾರು 25 ಮಾವುತರು/ಕಾವಡಿಗಳಿಗೆ ಈ ಕುರಿತ ಜ್ಞಾನ ನೀಡುವ ಸಂಬಂಧ ಒಂದು ತಿಂಗಳ ತರಬೇತಿಯನ್ನೂ ನೀಡಲಾಗಿದೆ. ಅಲ್ಲದೇ, ಆನೆ ಹಿಡಿಯುವುದು, ಮಾನವ ಆನೆ ಸಂಘರ್ಷಣೆ ನಿಭಾಯಿಸುವುದು ಮುಂತಾದವುಗಳ ವಿಡಿಯೋಗಳನ್ನೂ ಆಂಧ್ರ ಪ್ರದೇಶದ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.

ಹಸ್ತಾಂತರಗೊಂಡ ಆನೆಗಳು

  • ಕೃಷ್ಣ(15 ವರ್ಷ), 2022 ರಲ್ಲಿ ಚಿಕ್ಕಮಗಳೂರಿನಲ್ಲಿ ಸೆರೆ ಹಿಡಿಯಲಾಗಿತ್ತು.
  • ಅಭಿಮನ್ಯು(14 ವರ್ಷ), 2023 ರಲ್ಲಿ ಹೊನ್ನಾಳಿಯಲ್ಲಿ ಸೆರೆ ಹಿಡಿಯಲಾಗಿತ್ತು.
  • ದೇವ(39 ವರ್ಷ), ಕುಶಾಲನಗರದಲ್ಲಿ 2019 ರಲ್ಲಿ ಸೆರೆ ಹಿಡಿಯಲಾಗಿತ್ತು.
  • ರಂಜನ್ (26 ವರ್ಷ), ದುಬಾರೆಯಲ್ಲೇ ಜನಿಸಿತ್ತು.

ಈ ಸುದ್ದಿಯನ್ನೂ ಓದಿ | CM's city rounds: ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ; ಮುಲಾಜಿಲ್ಲದೆ ಒತ್ತುವರಿ ತೆರವಿಗೆ ಸೂಚನೆ