ಹುಬ್ಬಳ್ಳಿಯಲ್ಲಿ 'ಮೊಬೈಲ್ ಡಯಾಗ್ನೋಸ್ಟಿಕ್ ವ್ಯಾನ್ʼ ಸೇವೆಗೆ ಸಚಿವ ಜೋಶಿ ಚಾಲನೆ
Mobile Diagnostic Van: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವಿದ್ಯಾನಗರ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಹಾಗೂ ಎನ್ಎಂಆರ್ ಫೌಂಡೇಶನ್ ಸಹಯೋಗದಲ್ಲಿ ಒದಗಿಸಿದ ʼಮೊಬೈಲ್ ಡಯಾಗ್ನೋಸ್ಟಿಕ್ ವಾಹನʼ ಸೇವೆಗೆ ಕೇಂದ್ರ ಸಚಿವ ಸಚಿವ ಪ್ರಲ್ಹಾದ್ ಜೋಶಿ ಅವರು ಚಾಲನೆ ನೀಡಿದ್ದಾರೆ.
-
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಜನರ ಆರೋಗ್ಯ ರಕ್ಷಣೆಗಾಗಿ ʼಸಂಚಾರಿ ಆರೋಗ್ಯ ಸೇವೆʼ ಮಹತ್ವದ ಕೊಡುಗೆ ನೀಡುತ್ತಿದ್ದು, ಇದೀಗ ʼಮೊಬೈಲ್ ಡಯಾಗ್ನೋಸ್ಟಿಕ್ ವ್ಯಾನ್ʼ ಸೇವೆ ಲಭ್ಯವಾಗುತ್ತಿದೆ. ನಗರದಲ್ಲಿ ಭಾನುವಾರ ಬೆಳಗ್ಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು "Health on Wheels–ಸಂಚಾರಿ ಆರೋಗ್ಯ ಸೇವೆ" ಮೊಬೈಲ್ ಡಯಾಗ್ನೋಸ್ಟಿಕ್ ವಾಹನಕ್ಕೆ ಚಾಲನೆ ನೀಡಿದರು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವಿದ್ಯಾನಗರ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಹಾಗೂ ಎನ್ಎಂಆರ್ ಫೌಂಡೇಶನ್ ಸಹಯೋಗದಲ್ಲಿ ಒದಗಿಸಿದ ʼಮೊಬೈಲ್ ಡಯಾಗ್ನೋಸ್ಟಿಕ್ ವಾಹನʼ ಸೇವೆ ಹುಬ್ಬಳ್ಳಿಗರಿಗೆ ಅತ್ಯಗತ್ಯವಾಗಿದ್ದು, ಜನರ ಆರೋಗ್ಯ ರಕ್ಷಣೆಯಲ್ಲಿ ಅಮೂಲ್ಯ ಪಾತ್ರ ವಹಿಸಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ʼಆರೋಗ್ಯ ಸೇವೆ ಈಗ ನಿಮ್ಮ ಮನೆ ಬಾಗಿಲಿಗೆ' ಎಂಬ ಆಶಯದೊಂದಿಗೆ ಈ ಅತ್ಯಾಧುನಿಕ ಸಂಚಾರಿ ಆರೋಗ್ಯ ಸೇವೆಯು ಜನಸಾಮಾನ್ಯರಿಗೆ ಲಭ್ಯವಾಗುತ್ತಿದೆ. ಗ್ರಾಮೀಣ ಹಾಗೂ ದೂರ ಪ್ರದೇಶಗಳ ಜನರಿಗೆ ಅಗತ್ಯ ವೈದ್ಯಕೀಯ ತಪಾಸಣೆ ಮತ್ತು ಆರೋಗ್ಯ ಸೇವೆಯನ್ನು ಮನೆಬಾಗಿಲಿಗೇ ಒಯ್ಯುವ ಅನನ್ಯ ಕಾರ್ಯ ನಿರ್ವಹಿಸಲಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಭಾಗದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ದಿಸೆಯಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆಯಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಶ್ಲಾಘಿಸಿದರು.
ದೇಶದ ಪ್ರಗತಿಯ ಯಶೋಗಾಥೆ ಮನ್ ಕೀ ಬಾತ್:
ಇದೇ ವೇಳೆ ಹುಬ್ಬಳ್ಳಿ ದೇಶಪಾಂಡೆ ನಗರದ ಜಿಮಖಾನ್ ಮೈದಾನದಲ್ಲಿ ರೋಟರಿ ಕ್ಲಬ್ ಮತ್ತು ಎನ್ಎಂಆರ್ ಫೌಂಡೇಶನ್ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ 135ನೇ 'ಮನ್ ಕೀ ಬಾತ್' ಆವೃತ್ತಿ ವೀಕ್ಷಣೆಯಲ್ಲಿ ಭಾಗಿಯಾಗಿ, ಪ್ರಧಾನಿ ಅವರ ಈ ವಿಶಿಷ್ಠ ಕಾರ್ಯಕ್ರಮ ದೇಶದ ಪ್ರಗತಿಯ ಯಶೋಗಾಥೆಯನ್ನು ಬಿಂಬಿಸುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ʼಮನ್ ಕೀ ಬಾತ್ʼ ಕಾರ್ಯಕ್ರಮ ದೇಶದ ಮೂಲೆ ಮೂಲೆಗಳಲ್ಲಿ ನಡೆಯುತ್ತಿರುವ ಸಕಾರಾತ್ಮಕ ಬದಲಾವಣೆಗಳು ಮತ್ತು ನಾಗರಿಕರ ಅಪ್ರತಿಮ ಸಾಧನೆಗಳನ್ನು ಅನಾವರಣಗೊಳಿಸುತ್ತ ಸಾಗಿದೆ. ದೇಶವಾಸಿಗಳೊಂದಿಗೆ ನೇರ ಸಂಪರ್ಕ ಸಾಧಿಸುವ ಇದು ದೇಶದ ಪ್ರಗತಿಯ ಯಶೋಗಾಥೆಯಾಗಿದೆ ಎಂದು ಪ್ರತಿಪಾದಿಸಿದರು.
ಈ ಆವೃತ್ತಿಯಲ್ಲಿ ಪ್ರಧಾನಿ ಅವರು ಪ್ರಸ್ತಾಪಿಸಿದ ಸ್ಥಳೀಯ ಆವಿಷ್ಕಾರಗಳು, ಪರಿಸರ ಸಂರಕ್ಷಣೆ, ಕೃಷಿ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಯುವಶಕ್ತಿ, ಕೌಶಲ್ಯಾಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ಸ್ಟಾರ್ಟ್ಪ್ಗಳು, ಜಲ ಸಂರಕ್ಷಣೆ, ಸ್ವಚ್ಛತೆ, ಪ್ರವಾಸೋದ್ಯಮ, ಕ್ರೀಡೆ, ಡಿಜಿಟಲ್ ಇಂಡಿಯಾ, ವಿಕಸಿತ ಭಾರತ ನಿರ್ಮಾಣದಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಹಾಗೂ ಸಾಮಾನ್ಯ ಜನರ ಅಸಾಮಾನ್ಯ ಪ್ರತಿಭೆ ಗುರುತಿಸಿ ದೇಶಕ್ಕೇ ಪರಿಚಯಿಸುವ ಪ್ರಧಾನಿಯವರ ಕಾರ್ಯಶೈಲಿ ಸ್ಫೂರ್ತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಲಿಂಗರಾಜ್ ಪಾಟೀಲ್, ರೋಟರಿ ಜಿಲ್ಲಾ ಗವರ್ನರ್ ಅರುಣ್ ಭಂಡಾರೆ, ರೋಟರಿ ಸಂಸ್ಥೆ ಪ್ರಮುಖರಾದ ಪಿ.ಡಿ.ಜಿ.ಗಣೇಶ್ ಭಟ್, ಕೌಸ್ತುಭಾ ಸೌಶಿಖರ್, ಮಡಿವಾಳಪ್ಪ ಜುಂಜುನವರ್, ಡಾ.ಮಹಿಮ ದಾಂಡ್, ಡೌಗ್ಲಾಸ್ ಬ್ರೌನ್, ಡಾ.ಎನ್.ಎ.ಚರಂತಿಮಠ, ದೀಪ್ ದೇಸಾಯಿ ಹಾಗೂ ಗಣ್ಯರು ಹಾಗೂ ರೋಟರಿ ಸಂಸ್ಥೆ ಮುಖಂಡರು ಉಪಸ್ಥಿತರಿದ್ದರು.