ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Suresh: ಆರ್‌ಸಿಬಿ ಮೆರವಣಿಗೆಗೆ ಅವಕಾಶ ನೀಡಲು ಒತ್ತಾಯಿಸಿದ್ದ ಬಿಜೆಪಿ-ದಳ ಈಗ ಯೂ ಟರ್ನ್: ಡಿ.ಕೆ.ಸುರೇಶ್ ಆರೋಪ

DK Suresh: ಬಿಜೆಪಿ ಹಾಗೂ ದಳದ ನಾಯಕರು ಆರ್‌ಸಿಬಿ ಗೆದ್ದ ನಂತರ ತಂಡದ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಎಕ್ಸ್ (ಟ್ವೀಟ್) ಮಾಡಿದ್ದರು. ಆದರೆ ಇಂದು ವರಸೆ ಬದಲಾಯಿಸಿದ್ದಾರೆ. ಬಿಜೆಪಿ ಯೂ ಟರ್ನ್ ಮಾಡುವುದು ಹೊಸದೇನಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ.

ಆರ್‌ಸಿಬಿ ಮೆರವಣಿಗೆಗೆ ಒತ್ತಾಯಿಸಿದ್ದ ಬಿಜೆಪಿ- ದಳ: ಡಿ.ಕೆ.ಸುರೇಶ್ ಆರೋಪ

Profile Siddalinga Swamy Jun 9, 2025 4:10 PM

ಬೆಂಗಳೂರು: ಆರ್‌ಸಿಬಿ ಗೆದ್ದ ನಂತರ ಬಿಜೆಪಿ ಹಾಗೂ ದಳದ ನಾಯಕರು ತಂಡದ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಎಕ್ಸ್ (ಟ್ವೀಟ್) ಮಾಡಿದ್ದರು. ಆದರೆ ಇಂದು ವರಸೆ ಬದಲಾಯಿಸಿದ್ದಾರೆ. ಬಿಜೆಪಿ ಯೂ ಟರ್ನ್ ಮಾಡುವುದು ಹೊಸದೇನಲ್ಲ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ಹೇಳಿದರು. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಜತೆ ಸೋಮವಾರ ಅವರು ಮಾತನಾಡಿದರು.

ಬಿಜೆಪಿಯವರು ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯ ಮಾಡುತ್ತಿರುವ ಬಗ್ಗೆ ಕೇಳಿದಾಗ, ʼಎರಡೂ ಪಕ್ಷಗಳು ಮೆರವಣಿಗೆಗೆ ಒತ್ತಾಯ ಮಾಡಿದ್ದರು. ಕ್ರೀಡಾ ಅಭಿಮಾನಿಗಳಿಗೆ ಅವಮಾನ ಮಾಡುತ್ತಿದ್ದೀರಿ, ನಿಮಗೆ ಮೆರವಣಿಗೆ ನಡೆಸಲು ಆಗುವುದಿಲ್ಲವೇ ಎಂದು ಕೇಳಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯವರು ಇದೇ ಪ್ರವೃತ್ತಿ ಹೊಂದಿದ್ದಾರೆ. ಜನ ಅವರಿಗೆ ಬಹುಮತ ನೀಡಿಲ್ಲ. ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳಲ್ಲಿ ಆಗಿರುವ ಘೋರ ದುರಂತಗಳ ಪಟ್ಟಿ ನೀಡುತ್ತೇವೆ ಎಂದು ಆರೋಪಿಸಿದ ಅವರು, ಬಿಜೆಪಿ ನಾಯಕರಿಗೆ ನೈತಿಕತೆ ಇದ್ದರೆ ಅವರು ಮೊದಲು ರಾಜೀನಾಮೆ ನೀಡಲಿ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ಮೊದಲು ಆರೋಗ್ಯದ ಬಗ್ಗೆ ಗಮನವಿಡಲಿ

ಮುಂಬೈ ದಾಳಿಯಾದಾಗ ಮನಮೋಹನ್ ಸಿಂಗ್ ಅವರು ರಾಜೀನಾಮೆ ನೀಡಿದ್ದರೆ ಎನ್ನುವ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ʼಈ ಘಟನೆ ನಂತರ ವಿಲಾಸ್ ರಾವ್ ದೇಶ್‌ಮುಖ್ ಅವರು ರಾಜೀನಾಮೆ ನೀಡಿದ್ದರು. ಇದನ್ನು ಕುಮಾರಸ್ವಾಮಿ ಅವರು ಮರೆತು ಹೋಗಿದ್ದಾರೆ. ಇವರಿಗೆ ಡಿ.ಕೆ. ಶಿವಕುಮಾರ್ ಅವರನ್ನು ನೆನಪಿಸಿಕೊಳ್ಳದೆ ಊಟ, ನಿದ್ದೆ ಏನೂ ಆಗುವುದಿಲ್ಲ. ಅವರು ಮೊದಲು ಆರೋಗ್ಯದ ಬಗ್ಗೆ ಗಮನವಿಡಲಿ, ಈ ರಾಷ್ಟ್ರದ ಜನರ ಸೇವೆ ಮಾಡಲಿ ಎಂದು ಮನವಿ ಮಾಡುತ್ತೇನೆʼ ಎಂದರು.

ನನ್ನ ಆರೋಗ್ಯವನ್ನು ದೇವರು ನೋಡಿಕೊಳ್ಳುತ್ತಾನೆ ಎನ್ನುವ ಕುಮಾರಸ್ವಾಮಿ ಅವರ ಪ್ರತ್ಯುತ್ತರದ ಬಗ್ಗೆ ಕೇಳಿದಾಗ, ʼಎಲ್ಲರ ಆರೋಗ್ಯವನ್ನು ದೇವರೇ ನೋಡಿಕೊಳ್ಳುವುದು. ಮಂಡ್ಯದ ಜನರ ಆಶೀರ್ವಾದ ಇರಬಹುದು ಕರ್ನಾಟಕದ ಜನರ ಹಾರೈಕೆ ಅಲ್ಲವಲ್ಲ. ಅವರು ಖುಷಿಯಾಗಿದ್ದರೆ ನಮಗೆ ಸಂತೋಷʼ ಎಂದು ಹೇಳಿದರು.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್‌ಐಎ ಗೆ ವಹಿಸಿರುವ ಬಗ್ಗೆ ಕೇಳಿದಾಗ, ʼನಮ್ಮ ಪೊಲೀಸರು ಸಮರ್ಥರಿದ್ದಾರೆ. ಬಿಜೆಪಿಯವರು ಉನ್ನತ ತನಿಖೆಗೆ ಒತ್ತಾಯಿಸಿದ ಅನೇಕ ಪ್ರಕರಣಗಳನ್ನು ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಸಿಬಿಐಗೆ ನೀಡಿದೆ. ಇದರ ಫಲಿತಾಂಶ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಕರಾವಳಿ ಭಾಗದಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದು ಸರಿಯಲ್ಲ ಎಂದು ಆರೋಪಿಸಿದ ಅವರು, ಯಾರೇ ತಪ್ಪು ಮಾಡಿದರೂ ಅವರಿಗೆ ಶಿಕ್ಷೆಯಾಗಬೇಕು. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆʼ ಎಂದರು.

ಹೈಕಮಾಂಡ್ ಕರೆ ಮೇರೆಗೆ ಡಿ.ಕೆ. ಶಿವಕುಮಾರ್ ಅವರು ದೆಹಲಿ ಭೇಟಿ ನೀಡಿದ್ದಾರೆ ಎನ್ನುವ ಬಗ್ಗೆ ಕೇಳಿದಾಗ, ʼಸತ್ಯಕ್ಕೆ ದೂರವಾದ ಮಾತನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಇದರಲ್ಲಿ ಯಾವುದೇ ಸತ್ಯವಿಲ್ಲ. ಬೆಂಗಳೂರಿನ ಕಸ ವಿಲೇವಾರಿಗೆ ವಿಚಾರವಾಗಿ ಟೆಂಡರ್ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಅವರು ದೆಹಲಿಯಲ್ಲಿ ಇರುವ ಕಸ ವಿಲೇವಾರಿ ಬಗ್ಗೆ ಇರುವ ಹೊಸ ತಂತ್ರಜ್ಞಾನ ವೀಕ್ಷಿಸಲು ಬಿಬಿಎಂಪಿಯ 15 ಜನ ಅಧಿಕಾರಿಗಳ ತಂಡದ ಜತೆ ತೆರಳಿದ್ದಾರೆ. ಹೊಸ ರಸ್ತೆ ನಿರ್ಮಾಣದ ಬಗ್ಗೆಯೂ ಚಿಂತನೆ ನಡೆಸಲು ದೆಹಲಿಯ ನಗರಾಭಿವೃದ್ದಿ ಇಲಾಖೆಯ ಜತೆ ಸಭೆ ನಡೆಸಲು ತೆರಳಿದ್ದಾರೆʼ ಎಂದು ಹೇಳಿದರು.

ಹೈಕಮಾಂಡ್ ಭೇಟಿ ಮಾಡಬೇಕು ಎಂದು ಹೇಳಿಲ್ಲ. ಶಿವಕುಮಾರ್ ಅವರು ದೆಹಲಿಗೆ ಹೋದಂತಹ ಸಂದರ್ಭದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸುವುದು ಸರ್ವೇ ಸಾಮಾನ್ಯ. ತಿಂಗಳಿಗೆ ಎರಡು ಬಾರಿಯಾದರೂ ದೆಹಲಿಗೆ ಭೇಟಿ ನೀಡುತ್ತಾರೆ. ಪಕ್ಷದ ಅಧ್ಯಕ್ಷರಾಗಿ ಅವರಿಗೂ ಬೇರೆ, ಬೇರೆ ಕೆಲಸಗಳು ಇರುತ್ತವೆ. ನನಗೆ ಇರುವ ಮಾಹಿತಿ ಪ್ರಕಾರ ಮಾಧ್ಯಮಗಳಲ್ಲಿ ಬರುತ್ತಿರುವ ಮಾತು ಸುಳ್ಳು ಎಂದು ಅವರು ತಿಳಿಸಿದರು.

ತುಮಕೂರನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರಿಸಬೇಕು ಎನ್ನುವ ಗೃಹಸಚಿವ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ʼಅದು ಸರ್ಕಾರದ ತೀರ್ಮಾನ. ಅವರು ಸರ್ಕಾರದ ಹಿರಿಯ ಸಚಿವರು, ಸಚಿವ ಸಂಪುಟದಲ್ಲಿ, ಮುಖ್ಯಮಂತ್ರಿಗಳ ಬಳಿ ಮಾತನಾಡಿ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾವು ಸ್ವಾಗತ ಮಾಡುತ್ತೇವೆʼ ಎಂದರು.

ಈ ಸುದ್ದಿಯನ್ನೂ ಓದಿ | DK Shivakumar: ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಜಲಶಕ್ತಿ ಸಚಿವಾಲಯದಿಂದ ರಾಜ್ಯ ಸಚಿವರ ಸಭೆ: ಡಿಕೆ ಶಿವಕುಮಾರ್

ನಾಮನಿರ್ದೇಶಿತ ವಿಧಾನಪರಿಷತ್ ಸದಸ್ಯರ ಪಟ್ಟಿಯನ್ನು ಎಐಸಿಸಿ ತಡೆ ಹಿಡಿದಿದೆ ಎನ್ನುವ ಬಗ್ಗೆ ಕೇಳಿದಾಗ, ʼನನಗೆ ಇದರ ಬಗ್ಗೆ ಮಾಹಿತಿಯಿಲ್ಲ. ಎಐಸಿಸಿ ವಿಚಾರ ನನಗೆ ಗೊತ್ತಿಲ್ಲ. ಪಕ್ಷದ ಹಿರಿಯ ಮುಖಂಡರು ಇದನ್ನು ಗಮನಿಸುತ್ತಾರೆʼ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್‌ ತಿಳಿಸಿದರು.