Laxmi Hebbalkar: ಭಾರತದ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿ- ಲಕ್ಷ್ಮೀ ಹೆಬ್ಬಾಳ್ಕರ್
Laxmi Hebbalkar: ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಸರ್ಕಾರ ಅಂಬೇಡ್ಕರ್, ಬುದ್ದ, ಬಸವಣ್ಣನವರ ತತ್ವಗಳನ್ನು ಆದರ್ಶವಾಗಿಟ್ಟುಕೊಂಡು, ಮಹಾತ್ಮರು ಹಾಕಿಕೊಟ್ಟ ಮಾರ್ಗದಲ್ಲಿ ಆಡಳಿತ ನಡೆಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.


ಗದಗ: ಭಾರತ ಪುಣ್ಯ ಭೂಮಿ, ಈ ನಾಡಿನಲ್ಲಿ ಅದೆಷ್ಟೋ ಸಾಧು ಸಂತರು, ಪುಣ್ಯ ಪುರುಷರು, ಮಠಾಧೀಶರು ಬದುಕಿ ಈ ಭೂಮಿಯನ್ನು ಪಾವನವಾಗಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಹೇಳಿದ್ದಾರೆ. ಇತಿಹಾಸ ಪ್ರಸಿದ್ಧ ಮುಳಗುಂದದ ಶ್ರೀ ಗ್ರಾಮದೇವತೆಯ ಟೋಪ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಸಂಜೆ ಪಾಲ್ಗೊಂಡು ಮಾತನಾಡಿದ ಸಚಿವರು, ಭಾರತದ ಸಂಸ್ಕೃತಿ ಶ್ರೀಮಂತವಾದದ್ದು, ಇಂತಹ ಭೂಮಿಯಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ಇಂತಹ ಜಾತ್ರೆಗಳನ್ನು ಆಚರಿಸಲಾಗುತ್ತಿದೆ ಎಂದರು.

ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಸರ್ಕಾರ ಅಂಬೇಡ್ಕರ್, ಬುದ್ದ, ಬಸವಣ್ಣನವರ ತತ್ವಗಳನ್ನು ಆದರ್ಶವಾಗಿಟ್ಟುಕೊಂಡು, ಮಹಾತ್ಮರು ಹಾಕಿಕೊಟ್ಟ ಮಾರ್ಗದಲ್ಲಿ ಆಡಳಿತ ನಡೆಸುತ್ತಿದೆ. ದಯೆಯೇ ಧರ್ಮದ ಮೂಲವಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ, ಅದರಂತೆ ಜಾತಿ- ಧರ್ಮ ಭೇದ ಮಾಡದೆ ಸಾಗುತ್ತಿದ್ದೇವೆ ಎಂದು ಅವರು ಹೇಳಿದರು.
ಈ ಭಾಗದ ಶಾಸಕರಾಗಿರುವ ಎಚ್.ಕೆ. ಪಾಟೀಲರು ನಮ್ಮ ಸರ್ಕಾರದ ಅತ್ಯಂತ ಬುದ್ದಿವಂತ ಮತ್ತು ಪ್ರಜ್ಞಾವಂತ ಸಚಿವರು. ಅವರನ್ನು ಪಡೆದಿರುವ ಈ ಭಾಗದ ಜನರೇ ಭಾಗ್ಯವಂತರು. ಈ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅಲ್ಲದೆ ಸವದತ್ತಿ ಯಲ್ಲಮ್ಮ ಪ್ರಾಧಿಕಾರ ರಚನೆ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯ ಅಭಿದ್ಧಿಗೂ ಕಾಳಜಿ ತೋರುತ್ತಿದ್ದಾರೆ. ಜತೆಗೆ, ದೇವಸ್ಥಾನದ ಅಭಿವೃದ್ಧಿಗೆ ಸತತ ಪ್ರಯತ್ನ ಮಾಡಿ ಕೇಂದ್ರ ಸರ್ಕಾರದಿಂದ 110 ಕೋಟಿ ರೂಪಾಯಿ ಅನುದಾನ ತಂದಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಬಳಗಾನೂರ ಶ್ರೀ ಶಿವಶಾಂತವೀರ ಶರಣರು, ನೀಲಗುಂದದ ಶ್ರೀ ಪ್ರಭುಲಿಂಗ ದೇವರು, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ್, ಮಾಜಿ ಶಾಸಕ ಡಿ.ಆರ್. ಪಾಟೀಲ, ಜಾತ್ರಾ ಕಮೀಟಿಯ ಅಧ್ಯಕ್ಷ ಎಂ.ಡಿ.ಬಟ್ಟೂರ್, ಉಪಾಧ್ಯಕ್ಷರಾದ ಅನಸೂಯಾ ಸೋಮಗಿರಿ, ರಾಮಣ್ಣ ಕಮೊಜಿ, ನಾಗರಾಜ ದೇಶಪಾಂಡೆ ಸೇರಿದಂತೆ ಅನೇಕ ಗಣ್ಯರು, ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | KAS Transfer: ಆಡಳಿತ ಯಂತ್ರಕ್ಕೆ ಸರ್ಜರಿ, 6 ಕೆಎಎಸ್ ಅಧಿಕಾರಿಗಳ ವರ್ಗ
ಇದಕ್ಕೂ ಮೊದಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಾತ್ರೆ ಗದ್ದುಗೆಗೆ ತೆರಳಿ ದೇವಿಯ ದರ್ಶನ ಪಡೆದರು. ಜಾತ್ರಾ ಸಮಿತಿ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು.