Bengaluru stampede: ಇಂಥ ಪರಿಸ್ಥಿತಿ ಯಾರಿಗೂ ಬೇಡ; ಭೂಮಿಕ್ ಸಮಾಧಿ ಮೇಲೆ ಬಿದ್ದು ತಂದೆ ಗೋಳಾಟ
Bengaluru stampede: ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಮೃತಪಟ್ಟಿದ್ದ ಯುವಕ ಭೂಮಿಕ್ ಮೃತದೇಹದ ಶವಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಲಾಗಿತ್ತು. ಅದೇ ದಿನ, ಬೇಲೂರಿನ ಕುಪ್ಪಗೋಡಿನಲ್ಲಿರುವ ಲಕ್ಷ್ಮಣ್ ಅವರು ಖರೀದಿಸಿದ್ದ ಜಮೀನಿನಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. ಸಮಾಧಿ ಪೂಜೆಗೆ ತೆರಳಿದಾಗ ತಂದೆ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.


ಹಾಸನ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದಲ್ಲಿ (Bengaluru stampede) ಮೃತಪಟ್ಟ 11 ಮಂದಿಯ ಮನೆಗಳಲ್ಲಿ ನೀರವ ಮೌನ, ದುಃಖ ಮಡುಗಟ್ಟಿದೆ. ಅದೇ ರೀತಿ ಜಿಲ್ಲೆಯ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದ ಯುವಕ ಭೂಮಿಕ್ ಸಮಾಧಿ ಮೇಲೆ ತಂದೆ ಲಕ್ಷ್ಮಣ್ ಬಿದ್ದು ಗೋಳಾಡಿದ್ದಾರೆ. ಸಮಾಧಿ ಪೂಜೆಗೆ ತೆರಳಿದ್ದಾಗ ತಂದೆಯ ದುಃಖದ ಕಟ್ಟೆ ಒಡೆದಿದ್ದು, ಆ ದೃಶ್ಯ ಮನಕಲಕುವಂತಿತ್ತು.
ಮಗನಿಗಾಗಿ ಖರೀದಿಸಿದ್ದ ಭೂಮಿಯಲ್ಲೇ ಆತನ ಅಂತ್ಯಸಂಸ್ಕಾರ ನೆರವೇರಿಸುವಂತಹ ಪರಿಸ್ಥಿತಿ ಯಾವ ತಂದೆ- ತಾಯಿಗೂ ಬರಬಾರದು ತಂದೆ ಲಕ್ಷ್ಮಣ್ ಕಣ್ಣೀರಿಟ್ಟಿದ್ದಾರೆ. ಇದನ್ನು ನೋಡಿದ ಜನರ ಕಣ್ಣುಗಳೂ ತೇವವಾಗಿವೆ. ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ಮಾಡಿಕೊಂಡು ಸಂಪಾದನೆ ಮಾಡಿರುವ ಲಕ್ಷ್ಮಣ್ ಮಗನಿಗಾಗಿ ಸಾಕಷ್ಟು ಕನಸು ಕಂಡಿದ್ದರು. ಮಗನೂ ಕೂಡ ತಂದೆಯ ಮಾರ್ಗದರ್ಶನದಂತೆ ನಡೆಯುತ್ತಿದ್ದ. ಆದರೆ, ಮಗ ಇಲ್ಲದೇ ಇರುವುದನ್ನು ನೆನೆದು ಭೂಮಿಕ್ ತಂದೆ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಶನಿವಾರ ಮಗನ ಸಮಾಧಿಯ ಮೇಲೆ ಬಿದ್ದು ಹೊರಳಾಡುತ್ತಿದ್ದ ಲಕ್ಷ್ಮಣ ಅವರನ್ನು ಸಮಾಧಾನ ಪಡಿಸುವ ಧೈರ್ಯ ಯಾರಿಗೂ ಇಲ್ಲದಂತಾಗಿತ್ತು. ಆಟಗಾರರೊಂದಿಗೆ ತಮ್ಮ ಮಕ್ಕಳು, ಮೊಮ್ಮಕ್ಕಳ ಫೋಟೊ ತೆಗೆಸಿಕೊಳ್ಳುವುದಕ್ಕಾಗಿ ಮಂತ್ರಿಗಳು ನಮ್ಮ ಮಕ್ಕಳನ್ನು ಬಲಿಕೊಟ್ಟರು. ಅವರ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹಸಚಿವ ಡಾ.ಪರಮೇಶ್ವರ್ ಮೊದಲಾದವರು ಕಾರಣವೇ ಹೊರತು ಪೊಲೀಸರಲ್ಲ ಎಂದು ಲಕ್ಷ್ಮಣ ಆಕ್ರೋಶ ಹೊರಹಾಕಿದ್ದಾರೆ.
ಡಿ.ಟಿ.ಲಕ್ಷ್ಮಣ ಹಾಗೂ ಅಶ್ವಿನಿ ದಂಪತಿಗೆ ಒಬ್ಬನೇ ಮಗ. ಡಿ.ಟಿ.ಲಕ್ಷ್ಮಣ ಬೆಂಗಳೂರಿನಲ್ಲಿ ಸಣ್ಣ ಕೈಗಾರಿಕೆ ನಡೆಸುತ್ತಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ಡಿ.ಟಿ.ಲಕ್ಷ್ಮಣ ಕುಟುಂಬಸ್ಥರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಭೂಮಿಕ್ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ. ಜೂ. 4ರ ಬುಧವಾರ ಎಂದಿನಂತೆ ಕಾಲೇಜಿಗೆ ಹೋಗಿದ್ದ ಆತ, ಅಲ್ಲಿಂದ ತನ್ನ ಸ್ನೇಹಿತರ ಜತೆಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದ. ಅಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವಿಗೀಡಾಗಿದ್ದ.
ಈ ಸುದ್ದಿಯನ್ನೂ ಓದಿ | Bengaluru stampede: ಕಾಲ್ತುಳಿತ ದುರಂತ; 11 ಮೃತರ ಕುಟುಂಬಕ್ಕೆ ಪರಿಹಾರ ತಲಾ 25 ಲಕ್ಷಕ್ಕೆ ಹೆಚ್ಚಿಸಲು ಸಿಎಂ ಆದೇಶ
ಮರುದಿನ (ಜೂ. 5) ಆತನ ಶವಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆಸಿ ಆತನ ಕುಟುಂಬಸ್ಥರಿಗೆ ಶವವನ್ನು ಹಸ್ತಾಂತರಿಲಾಗಿತ್ತು. ಅದೇ ದಿನ, ಬೇಲೂರಿನ ಕುಪ್ಪಗೋಡಿನಲ್ಲಿರುವ ಲಕ್ಷ್ಮಣ್ ಅವರು ಖರೀದಿಸಿದ್ದ ಜಮೀನಿನಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು.