ಸಂಕ್ರಾಂತಿ ಸಂಭ್ರಮ: ನದಿ ತೀರದ ದೇವಸ್ಥಾನಗಳಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವ
Haveri News: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಗುರುವಾರ ಹಾವೇರಿ ಜಿಲ್ಲಾದ್ಯಂತ ದೇವಸ್ಥಾನಗಳಲ್ಲಿ ಅದ್ಧೂರಿ ಜಾತ್ರಾ ಮಹೋತ್ಸವಗಳು ಜರುಗಿದವು. ಜತೆಗೆ ಮಕರ ಸಂಕ್ರಾಂತಿಯನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಹಾವೇರಿ ಜಿಲ್ಲಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ -
ಹಾವೇರಿ, ಜ. 15: ಮಕರ ಸಂಕ್ರಾಂತಿ ಹಬ್ಬದ (Makara Sankranti) ಅಂಗವಾಗಿ ಗುರುವಾರ ಹಾವೇರಿ ಜಿಲ್ಲಾದ್ಯಂತ ದೇವಸ್ಥಾನಗಳಲ್ಲಿ ಅದ್ದೂರಿ ಜಾತ್ರಾ ಮಹೋತ್ಸವಗಳು ಜರುಗಿದವು. ಮಕರ ಸಂಕ್ರಾಂತಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ (Haveri News) ವಿಜೃಂಭಣೆಯಿಂದ ಆಚರಿಸಲಾಯಿತು. ಹಾವೇರಿ ಜಿಲ್ಲೆಯಲ್ಲಿ ಗುರುವಾರ ಹಲವಡೆ ಸಾಲು- ಸಾಲು ಜಾತ್ರೆಗಳು ನೆರವೇರಿದವು.
ವರದಾ ನದಿ ದಡದ ಹೊಂಕಣ, ಕೂಡಲ, ತುಂಗಭದ್ರಾ ನದಿ ತೀರದ ನಿಜಶರಣ ಅಂಬಿಗರ ಚೌಡಯ್ಯ ರಥೋತ್ಸವ, ಧರ್ಮ ನದಿ ತೀರದ ಮಂತಗಿ, ಕಂಚಿನೆಗಳೂರ, ಹಾನಗಲ್ಲ ಸೇರಿದಂತೆ ಅನೇಕ ದೇವಸ್ಥಾನಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ ಜರುಗಿದವು.
ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ಕೊಂಡಾಡುವ ಸುಗ್ಗಿ ಹಬ್ಬವನ್ನು ಜಿಲ್ಲೆಯ ಜನರು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿದರು. ಜನವರಿ 14 ಮತ್ತು 15ರಂದು ಪವಿತ್ರ ನದಿ ಸ್ನಾನ, ಎಳ್ಳು-ಬೆಲ್ಲ ವಿತರಣೆ, ಗಾಳಿಪಟ ಹಾರಿಸುವುದು, ದಾನ-ಧರ್ಮ ಹಾಗೂ ಸ್ಥಳೀಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಉತ್ತರಾಯಣದ ಆರಂಭ, ಹೊಸ ಆರಂಭದ ಸಂಕೇತ ಮತ್ತು ಭಾರತದಾದ್ಯಂತ ವಿವಿಧ ಹೆಸರುಗಳಲ್ಲಿ ಆಚರಿಸಲ್ಪಡುವ ಸಂಕ್ರಾಂತಿ ಹಬ್ಬದ ಸಡಗರ ಜಿಲ್ಲಾದ್ಯಂತ ಕಂಡು ಬಂತು.
ಹಾವೇರಿ ಜಿಲ್ಲೆಯಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ; ಹಲವು ಕಡೆ ಜಾತ್ರಾ ಮಹೋತ್ಸವ
ಪವಿತ್ರ ಸ್ನಾನ
ಜಿಲ್ಲೆಯ ಹರಿಯುವ ತುಂಗಭದ್ರಾ, ವರದಾ, ಧರ್ಮಾ, ಕುಮದ್ವತಿ ನದಿಗಳಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು ಸಕಲ ಸಂಪ್ರದಾಯದ ಪದ್ದತಿಗಳನ್ನು ಅಚ್ಚುಕಟ್ಟಾಗಿ ಆಚರಿಸಿ ಭಕ್ತಿ ಪೂರ್ವಕ ಭಗವಂತನಲ್ಲಿ ಪ್ರಾರ್ಥನೆ ಮಾಡಿದರು. ಎಳ್ಳು-ಬೆಲ್ಲವನ್ನು ಪರಸ್ಪರ ಹಂಚಿ, ಮಕರ ಸಂಕ್ರಾಂತಿ ಹಬ್ಬವನ್ನುಸಂಭ್ರಮದಿಂದ ಕೊಂಡಾಡಿದರು.