ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಸಲ್ಲಿಸಿದ 18 ಬೇಡಿಕೆಗಳ ಮನವಿ ಪತ್ರದಲ್ಲಿ ಏನೇನಿದೆ? ಇಲ್ಲಿದೆ ವಿವರ
PM Modi Karnataka Visit: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠದಲ್ಲಿ ನಿರ್ಮಾಣವಾಗಿರುವ ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲು ಕರ್ನಾಟಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 18 ಬೇಡಿಕೆಗಳನ್ನು ಹೊಂದಿರುವ ಮನವಿ ಪತ್ರವನ್ನು ಪ್ರಧಾನಿಗೆ ನೀಡಿದರು. ಈ ಮನವಿ ಪತ್ರದಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ -
ಬೆಂಗಳೂರು, ಏ. 15: ಸುಮಾರು 80 ಕೋಟಿ ರುಪಾಯಿ ವೆಚ್ಚದಲ್ಲಿ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠದಲ್ಲಿ ನಿರ್ಮಾಣವಾಗಿರುವ ಭೈರವೈಕ್ಯ ಮಂದಿರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಿದರು. ಈ ಕಾರ್ಯಕ್ರಮಕ್ಕೆ ತೆರಳಲು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆತ್ಮೀಯವಾಗಿ ಸ್ವಾಗತಿಸಿದರು. ಇದೇ ವೇಳೆ ಅವರು 18 ಬೇಡಿಕೆಗಳನ್ನು ಹೊಂದಿರುವ ಮನವಿ ಪತ್ರವನ್ನು ಪ್ರಧಾನಿಗೆ ನೀಡಿದರು.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ. ಜತೆಗೆ ತಾವು ಸಲ್ಲಿಸಿರುವ 18 ಬೇಡಿಕೆಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಏನೇನಿದೆ ಎನ್ನುವ ವಿವರ ಇಲ್ಲಿದೆ:
ಸಿಎಂ ಸಿದ್ದರಾಮಯ್ಯ ಅವರ ಪೋಸ್ಟ್:
- ಕೋಲಾರ ರೈಲ್ವೆ ಕೋಚ್ ಫ್ಯಾಕ್ಟರಿ: ರಾಜ್ಯದ ಪ್ರಮುಖ ಬೇಡಿಕೆಯಾದ ಕೋಲಾರ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕೆ 1,123 ಎಕರೆ ಭೂಮಿ ನೀಡಿದ್ದರೂ ಅನುಷ್ಠಾನಗೊಳ್ಳದ ಈ ಯೋಜನೆಯ ಪುನರುಜ್ಜೀವನಗೊಳಿಸಬೇಕು.
- ಹೈ-ಸ್ಪೀಡ್ ರೈಲು ಮೈಸೂರಿಗೆ ವಿಸ್ತರಣೆ: ಬೆಂಗಳೂರು-ಮೈಸೂರು ವಿಭಾಗವನ್ನು ಪ್ರಸ್ತಾವಿತ ಹೈ-ಸ್ಪೀಡ್ ರೈಲು ಕಾರಿಡಾರ್ನಲ್ಲಿ ಸೇರಿಸಬೇಕು.
- ಬೆಂಗಳೂರು ಸಬ್ಅರ್ಬನ್ ರೈಲಿಗೆ ಅನುದಾನ ಮತ್ತು ಬೆಂಗಳೂರು-ಮುಂಬೈ ಮಾರ್ಗದಲ್ಲಿ ಹೈಸ್ಪೀಡ್ ರೈಲು ಕಾರಿಡಾರ್: ಬೆಂಗಳೂರು ಉಪನಗರ ರೈಲು ಯೋಜನೆಗೆ ಹಣ ಬಿಡುಗಡೆ ಹಾಗೂ ಕಿತ್ತೂರು-ಕಲ್ಯಾಣ ಕರ್ನಾಟಕ ಸಂಪರ್ಕಿಸುವ ಬೆಂಗಳೂರು-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್ ಆರಂಭಿಸಬೇಕು.
- ಜಲ ಜೀವನ್ ಮಿಷನ್: ಕೇಂದ್ರದಿಂದ ಬರಬೇಕಾದ 17,554 ಕೋಟಿ ರುಪಾಯಿ ಬಾಕಿ ಹಣ ಬಿಡುಗಡೆಗೆ ಮಾಡಬೇಕು.
- ಗ್ರಾಮ ಪಂಚಾಯತ್ಗಳಿಗೆ 15ನೇ ಹಣಕಾಸು ಆಯೋಗದ ಅನುದಾನ: ಗ್ರಾಮ ಪಂಚಾಯತ್ಗಳಿಗೆ ಬರಬೇಕಾದ 2,860 ಕೋಟಿ ರುಪಾಯಿ ಅನುದಾನ ಬಿಡುಗಡೆಗೊಳಿಸಬೇಕು.
- ರಾಷ್ಟ್ರೀಯ ಹೆದ್ದಾರಿ ಯೋಜನೆ: 12 ವರ್ಷಗಳಿಂದ ಬಾಕಿ ಇರುವ ಹೊಸ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪುನರುಜ್ಜೀಚನ ಮತ್ತು ಹೊಸ ಯೋಜನೆ ಘೋಷಿಸಬೇಕು
- ಕಂದಾಯ ಕೊರತೆ ಅನುದಾನ: 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವ 5,495 ಕೋಟಿ ರುಪಾಯಿ ಬಿಡುಗಡೆ ಮಾಡಬೇಕು.
- ಬೆಂಗಳೂರಿಗೆ ವಿಶೇಷ ಪ್ಯಾಕೇಜ್: ದೇಶದ ಆರ್ಥಿಕತೆಗೆ ಗನನೀಯ ಕೊಡುಗೆ ನೀಡುವ ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗಾಗಿ 6,000 ಕೋಟಿ ರುಪಾಯಿ ವಿಶೇಷ ಅನುದಾನ ನೀಡಬೇಕು.
- ಮೇಕೆದಾಟು ಯೋಜನೆಗೆ ಅನುಮೋದನೆ: ಕುಡಿಯುವ ನೀರಿನ ಉದ್ದೇಶ ಹೊಂದಿರುವ ಬಹುನಿರೀಕ್ಷಿತ ಈ ಮೇಕೆದಾಟು ಯೋಜನೆಗೆ ಶೀಘ್ರವಾಗಿ ಕೇಂದ್ರದ ಅನುಮೋದನೆ ನೀಡಬೇಕು.
- ಭದ್ರಾ ಮೇಲ್ದಂಡೆ ಯೋಜನೆಗೆ ಸಹಾಯಧನ: ಮಧ್ಯ ಕರ್ನಾಟಕ್ಕೆ ನೆರವಾಗುವ ಭದ್ರಾ ಮೇಲ್ದಂಡೆ ಯೋಜನೆಗೆ ‘ರಾಷ್ಟ್ರೀಯ ಮಾನ್ಯತೆ’ ನೀಡಿ, ಘೋಷಿತ 5,300 ಕೋಟಿ ರುಪಾಯಿ ಸಹಾಯಧನ ಬಿಡುಗಡೆಗೆ ಮಾಡಬೇಕು.
- ಕೃಷ್ಣಾ ಮೇಲ್ದಂಡೆ ಯೋಜನೆಗೆ ನೆರವು: ಕೃಷ್ಣಾ ನ್ಯಾಯಾಧೀಕರಣ-2ರ ತೀರ್ಪನ್ನು ಗೆಜೆಟ್ನಲ್ಲಿ ಪ್ರಕಟಿಸಲು ಮತ್ತು ಯೋಜನೆಗೆ ರಾಷ್ಟ್ರೀಯ ಮಾನ್ಯತೆ ನೀಡಬೇಕು.
- ಮಹದಾಯಿ ಯೋಜನೆಗೆ ಅನುಮತಿ: ಕುಡಿಯುವ ನೀರಿನ ಯೋಜನೆಯಾದ ಕಲಸ ನಾಲಾ ಡೈವೆರ್ಷನ್ ಯೋಜನೆಗೆ ವನ್ಯಜೀವಿ ವಿಭಾಗದಿಂದ ಶೀಘ್ರ ಅನುಮತಿ ಕೊಡಿಸಬೇಕು.
- ನದಿಗಳ ಜೋಡಣೆ: ಗೋದಾವರಿ-ಕಾವೇರಿ ಮತ್ತು ಬೆಡ್ತಿ-ವರದಾ ನದಿ ಜೋಡನೆ ಯೋಜನೆಗಳ ಮೂಲಕ ಕರ್ನಾಟಕಕ್ಕೆ 40-45 ಟಿಎಂಸಿ ನೀರು ಹಂಚಿಕೆ ಮಾಡಬೇಕು.
- ಮೀಸಲಾತಿ ರಕ್ಷಣೆ: ರಾಜ್ಯದ ಶೇಕಡಾ 56 ಮೀಸಲಾತಿ ನೀತಿಯನ್ನು ಸಂವಿಧಾನದ 9ನೇ ವೇಳಾಪಟ್ಟಿಗೆ ಸೇರಿಸಬೇಕು.
- ಎಸ್ಟಿ ಪಟ್ಟಿಗೆ ಸೇರ್ಪಡೆ: ರಾಜ್ಯ ಶಿಫಾರಸು ಮಾಡಿರುವ ಕೆಲವು ಹಿಂದುಳಿದ ಜಾತಿಗಳನ್ನು ಕೇಂದ್ರದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು.
- ಕಲ್ಯಾಣ ಕರ್ನಾಟಕ ಅಭಿವೃದ್ಧಿ: ಕಲ್ಯಾಣ ಕರ್ನಾಟಕಕ್ಕೆ ವಾರ್ಷಿಕ 5,000 ಕೋಟಿ ರುಪಾಯಿ ಅನುದಾನ ನೀಡಬೇಕು ಮತ್ತು ಪ್ರತಿ ಜಿಲ್ಲೆಯಲ್ಲೂ ಸಾರ್ವಜನಿಕ ವಲಯದ ಉದ್ಯಮ (PSU) ಸ್ಥಾಪಿಸಬೇಕು.
- ಶರಾವತಿ ಪಂಪ್ಡ್ ಸ್ಟೋರೇಜ್: ಉತ್ತರ ಕನ್ನಡ ಜಿಲ್ಲೆಯಲ್ಲಿ ಅನುಷ್ಟಾನಕ್ಕೆ ತರಲು ಉದ್ದೇಶಿಸಿರುವ 2,000 ಮೆಗಾವ್ಯಾಟ್ ಸಾಮರ್ಥ್ಯದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಶೀಘ್ರ ಅನುಮತಿ ನೀಡಬೇಕು.
- ರಾಯಚೂರಿನಲ್ಲಿ ಏಮ್ಸ್: ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸುಧಾರಣೆಗಾಗಿ ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸಬೇಕು.
ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಪ್ರಧಾನಿ ಮೋದಿಯವರಿಂದ ಉದ್ಘಾಟನೆ
ಸಿದ್ದರಾಮಯ್ಯ ಸಲ್ಲಿಸಿರುವ ಬೇಡಿಕೆಗಳ ಪಟ್ಟಿಯಲ್ಲಿ ಈ 18 ಅಂಶಗಳಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.