ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kolar News: ಹಾಸ್ಟೆಲ್‌ನಲ್ಲಿ ದೆವ್ವ ಇದೆ ಎಂದಿದ್ದಕ್ಕೆ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ವಾರ್ಡನ್‌!

Kolar News: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಾಳಸಂದ್ರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ಮೂರಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದ ಸೋಮವಾರ ಪೋಷಕರ ಸಭೆ ವೇಳೆ ಬೆಳಕಿಗೆ ಬಂದಿದೆ. ವಾರ್ಡನ್‌ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಯ ತಾಯಿ ಆಗ್ರಹಿಸಿದ್ದಾರೆ.

ದೆವ್ವ ಇದೆ ಎಂದಿದ್ದಕ್ಕೆ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ವಾರ್ಡನ್‌

Prabhakara R Prabhakara R Jul 22, 2025 1:59 PM

ಕೋಲಾರ: ಹಾಸ್ಟೆಲ್‌ನಲ್ಲಿ ದೆವ್ವ ಇದೆ ಎಂದು ಬೆದರಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬನಿಗೆ ಬಾಸುಂಡೆ ಬರುವಂತೆ ವಾರ್ಡನ್‌ ಹೊಡೆದಿರುವ ಘಟನೆ ಜಿಲ್ಲೆಯ (Kolar News) ಮುಳಬಾಗಿಲು ತಾಲೂಕಿನ ಬಾಳಸಂದ್ರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿಯನ್ನು ವಾರ್ಡನ್ ಬೆಲ್ಟ್‌ನಿಂದ ಹಿಗ್ಗಾಮುಗ್ಗಾ ಥಳಿಸಿದ್ದು, ಈ ಕುರಿತು ವಾರ್ಡನ್ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಮೂರಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದ ಸೋಮವಾರ ಪೋಷಕರ ಸಭೆ ವೇಳೆ ಬೆಳಕಿಗೆ ಬಂದಿದೆ.

ವಿಷಯ ತಿಳಿದು ನೂರಾರು ಮಂದಿ ವಸತಿ ಶಾಲೆ ಬಳಿ ಜಮಾಯಿಸಿದ್ದರು. ಸ್ಥಳಕ್ಕೆ ಬಂದ ನಂಗಲಿ ಪೊಲೀಸರು ಜನರನ್ನು ಚದುರಿಸಿದರು. ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ನಿರ್ದೇಶಕ ಶ್ರೀನಿವಾಸ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

6ನೇ ತರಗತಿ ವಿದ್ಯಾರ್ಥಿ ಎಸ್.ಅನಂತಪುರ ಗ್ರಾಮದ ಅಂಜನ್ ಕುಮಾರ್ ಮೇಲೆ ವಾರ್ಡನ್ ಮಹೇಶ್ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ತಾಯಿ ಅಶ್ವಿನಿ ಆರೋಪ ಮಾಡಿದ್ದಾರೆ. ಮೂಲತಃ ಕೋಲಾರ ತಾಲೂಕಿನ ಸೂಲೂರು ಗ್ರಾಮದ ಈ ವಿದ್ಯಾರ್ಥಿಯ ತಂದೆ ಇತ್ತೀಚೆಗೆ ಮೃತಪಟ್ಟಿದ್ದರು. ನಂತರ ಆತ ತಾಯಿಯ ತವರೂರು ಎಸ್.ಅನಂತಪುರಕ್ಕೆ ತೆರಳಿದ್ದ. ಅಲ್ಲಿನ ಮೊರಾರ್ಜಿ ಶಾಲೆಯಲ್ಲಿ ಓದುತ್ತಿದ್ದ.

ವಸತಿ ನಿಲಯದಲ್ಲಿ ದೆವ್ವ ಇದೆ ಎಂದು ಸಹಪಾಠಿಗಳನ್ನು ಅಂಜನ್ ಕುಮಾರ್ ಹೆದರಿಸುತ್ತಿದ್ದ. ಹಾಸ್ಟೆಲ್ ವಿದ್ಯಾರ್ಥಿಗಳು ಈ ವಿಷಯವನ್ನು ತನ್ನ ಗಮನಕ್ಕೆ ತಂದಿದ್ದರು. ಹೀಗಾಗಿ ಹೊಡೆದಿರುವುದಾಗಿ ವಾರ್ಡನ್ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

'ಮಕ್ಕಳು ತುಂಟಾಟ ಮಾಡುವುದು ಸಹಜ. ಬುದ್ಧಿವಾದ ಹೇಳಬೇಕಾದ ವಾರ್ಡನ್ ತಮ್ಮ ಸೊಂಟದ ಬೆಲ್ಟ್ ತೆಗೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಜರ್ಜರಿತಗೊಂಡ ಮಗ ಸ್ಥಳದಲ್ಲೇ ಕುಸಿದು ಬಿದ್ದ ನಂತರವೂ ವಾರ್ಡನ್ ಒದ್ದಿದ್ದಾರೆ ಎಂದು ವಿದ್ಯಾರ್ಥಿ ತಾಯಿ ಆರೋಪಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Self Harming: ಮಂಡ್ಯದ ಮಿಮ್ಸ್‌ ಹಾಸ್ಟೆಲ್‌ನಲ್ಲಿ ಎಂಬಿಬಿಎಸ್‌ ವಿದ್ಯಾರ್ಥಿ ಆತ್ಮಹತ್ಯೆ

ಅಂಜನ್ ಕುಮಾ‌ರ್ ಮೇಲೆ ತಾನು ನಡೆಸಿದ ಹಲ್ಲೆ ವಿಷಯವನ್ನು ಯಾರಿಗೂ ತಿಳಿಸಬಾರದು ಎಂದು ವಾರ್ಡನ್ ಇತರ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದರು. ಹೀಗಾಗಿ, ಈ ಘಟನೆ ನಡೆದು ಮೂರ್ನಾಲ್ಕು ದಿನಗಳಾದರೂ ಯಾರಿಗೂ ಗೊತ್ತಿರಲಿಲ್ಲ ಎಂದು ಅಂಜನ್ ಕುಮಾರ್ ತಾಯಿ ಹೇಳಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ವಾರ್ಡನ್‌ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.