Anakru Award: ಅನಕೃ ಪ್ರಶಸ್ತಿಗೆ ಪ್ರೊ.ಎಲ್.ವಿ. ಶಾಂತಕುಮಾರಿ, ಶತಾವಧಾನಿ ಡಾ.ಆರ್. ಗಣೇಶ್ ಆಯ್ಕೆ
ಅನಕೃ ಪ್ರತಿಷ್ಠಾನವು ಪ್ರತಿವರ್ಷ ನೀಡುತ್ತ ಬಂದಿರುವ ಅನಕೃ ಪ್ರಶಸ್ತಿಗೆ 2024ನೇ ಸಾಲಿನಲ್ಲಿ ಪ್ರೊ.ಎಲ್.ವಿ. ಶಾಂತಕುಮಾರಿ ಮತ್ತು 2025ನೇ ಸಾಲಿನಲ್ಲಿ ಶತಾವಧಾನಿ ಡಾ. ಆರ್. ಗಣೇಶ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ನವೆಂಬರ್ 9ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

-

ಬೆಂಗಳೂರು: ಸ್ವತಂತ್ರ ರಚನೆ, ವಿಮರ್ಶೆ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ಅನಕೃ ಪ್ರತಿಷ್ಠಾನವು ಪ್ರತಿವರ್ಷ ನೀಡುತ್ತ ಬಂದಿರುವ ಅನಕೃ ಪ್ರಶಸ್ತಿಗೆ (Anakru Award) 2024ನೇ ಸಾಲಿನಲ್ಲಿ ಪ್ರೊ.ಎಲ್.ವಿ. ಶಾಂತಕುಮಾರಿ (LV Shanthakumari), 2025ನೇ ಸಾಲಿನಲ್ಲಿ ಶತಾವಧಾನಿ ಡಾ. ಆರ್. ಗಣೇಶ್ (Shatavadhani R Ganesh) ಆಯ್ಕೆಯಾಗಿದ್ದಾರೆ.
ಪ್ರೊ.ಎಲ್. ವಿ. ಶಾಂತಕುಮಾರಿ ಇದುವರೆಗೂ 35ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಇವುಗಳಲ್ಲಿ ಸ್ವತಂತ್ರ ಬರಹಗಳು, ಅನುವಾದ, ವಿಮರ್ಶೆ, ಕಥಾಸಂಕಲನಗಳು, ಕವನ ಸಂಕಲನಗಳು, ಸಂಪಾದಿತ ಕೃತಿಗಳು ಸೇರಿವೆ. ‘ವಿಶ್ವಸಾಹಿತಿʼ ಡಾ. ಎಸ್.ಎಲ್. ಭೈರಪ್ಪ ಅವರ ಎಲ್ಲ ಕಾದಂಬರಿಗಳನ್ನು ಕುರಿತೂ ಮೌಲಿಕ ವಿಮರ್ಶೆ ಮಾಡಿರುವ ಶಾಂತಕುಮಾರಿ ಅವರ ‘ಯುಗಸಾಕ್ಷಿʼ ಮತ್ತು ‘ಪ್ರತಿಭಾನʼ ಕೃತಿಗಳು ವಿಮರ್ಶನ ಕ್ಷೇತ್ರಕ್ಕೆ ಮಾದರಿಯೆನಿಸಿವೆ. ಭೈರಪ್ಪ ಅವರ ಹಲವು ಕಾದಂಬರಿಗಳನ್ನು ಇಂಗ್ಲಿಷ್ಗೆ ಅನುವಾದಿಸಿರುವ ಇವರು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಂದ ಅನೇಕ ಮೌಲಿಕ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಮಾಸ್ತಿ, ಶಿವರಾಮ ಕಾರಂತ, ಡಿ.ವಿ.ಜಿ. ಮೊದಲಾದವರ ಕೃತಿಗಳನ್ನು ಕುರಿತ ವಿಮರ್ಶೆಗಳೂ ಪ್ರಕಟವಾಗಿವೆ. ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಮುಖಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೊ.ಎಲ್. ವಿ. ಶಾಂತಕುಮಾರಿ ಅವರಿಗೆ 2024ನೇ ಸಾಲಿನ ‘ಅನಕೃ ಪ್ರಶಸ್ತಿʼ ನೀಡಲು ನಿರ್ಧರಿಸಲಾಗಿದೆ.
ನಾಡಿನ ಏಕೈಕ ಶತಾವಧಾನಿ ಎನಿಸಿರುವ ಡಾ. ಆರ್. ಗಣೇಶ ಕಥೆ, ಕಾದಂಬರಿ, ಕಾವ್ಯ, ವಿಮರ್ಶೆ, ಸಂಸೃತಿ ಕಥನ, ಇತಿಹಾಸ, ಅಂಕಣಬರಹಗಳು — ಮೊದಲಾಗಿ ಹತ್ತು ಹಲವು ಮುಖಗಳಲ್ಲಿ ಕ್ರಿಯಾಶೀಲರು. ಸಂಗೀತ, ನೃತ್ಯ, ಯಕ್ಷಗಾನ, ನಾಟಕ ಸೇರಿದಂತೆ ಪ್ರದರ್ಶನ ಕಲಾಕ್ಷೇತ್ರದಲ್ಲಿ ಶಾಸ್ತ್ರ ಮತ್ತು ಪ್ರಯೋಗಗಳೆರಡರಲ್ಲೂ ಅಭ್ಯಾಸಿಗಳಿಗೆ ಒದಗಿಬರುವ ಮಾರ್ಗದರ್ಶಕರು. ವಿಶೇಷತಃ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದ ಮಾರ್ಗದರ್ಶಕರಾಗಿ, ಪೋಷಕರಾಗಿ ಶತಾವಧಾನಿ ಡಾ. ಆರ್. ಗಣೇಶ್ ನಿರ್ವಹಿಸುತ್ತಿರುವ ಪಾತ್ರ ಬಹು ಮೌಲಿಕವಾದದ್ದು. ಹೀಗಾಗಿ 2025ನೇ ಸಾಲಿನ ಅನಕೃ ಪ್ರಶಸ್ತಿಯನ್ನು ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ನೀಡಲಾಗುತ್ತದೆ.
ಈ ಸುದ್ದಿಯನ್ನೂ ಓದಿ | CDAC Recruitment 2025: ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ನಲ್ಲಿದೆ 687 ಹುದ್ದೆ; ಡಿಪ್ಲೊಮಾ ಪಾಸಾದವರು ಅಪ್ಲೈ ಮಾಡಿ
ಪ್ರಶಸ್ತಿಯು ತಲಾ 50 ಸಾವಿರ ರೂಪಾಯಿ ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿದೆ. ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ನವೆಂಬರ್ 9ರಂದು ಪ್ರತಿಷ್ಠಾನದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಡೋಜ ಎಸ್. ಆರ್. ರಾಮಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅನಕೃ ಪ್ರತಿಷ್ಠಾನದ ಗೌ.ಕಾರ್ಯದರ್ಶಿ ಗೌತಮ್ ಎ.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.