ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೆಆರ್‌ಎಸ್ ವರ್ಷದಲ್ಲಿ 3ನೇ ಬಾರಿ ಭರ್ತಿ; ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ

Krishna Raja Sagara Dam: ಈ ಬಾರಿ ಉತ್ತಮ ಮಳೆ ಸುರಿದಿದ್ದು, ಒಂದೇ ವರ್ಷದಲ್ಲಿ 3ನೇ ಬಾರಿ ಕೃಷ್ಣ ರಾಜ ಸಾಗರ ಜಲಾಶಯ ಭರ್ತಿಯಾಗಿದೆ. ಇದರಿಂದ ಬೆಂಗಳೂರಿಗೆ ಬೇಸಗೆಯ ನೀರಿನ ಕೊರತೆ ಕೂಡ ನೀಗಲಿದೆ. ಜತೆಗೆ ತಮಿಳುನಾಡಿಗೆ ಈ ವರ್ಷ ಕರ್ನಾಟಕದಿಂದ ಹರಿಸಬೇಕಿದ್ದ ನೀರಿನ ಹಂಚಿಕೆಯ ಸಮಸ್ಯೆ ಕೂಡ ಬಗೆಹರಿದಂತಾಗಿದೆ.

ಕೃಷ್ಣ ರಾಜ ಸಾಗರ ಜಲಾಶಯ

ಮಂಡ್ಯ, ಅ. 26: ಕಾವೇರಿ ನದಿ (Kaveri River) ಈಗ ಸಂತೃಪ್ತಿಯಾಗಿ ಮೈದುಂಬಿ ಹರಿಯುತ್ತಿದ್ದಾಳೆ. ಒಂದೇ ವರ್ಷದಲ್ಲಿ 3ನೇ ಬಾರಿ ಕೃಷ್ಣ ರಾಜ ಸಾಗರ ಜಲಾಶಯ (Krishna Raja Sagara Dam) ಭರ್ತಿಯಾಗಿ ಇತಿಹಾಸ ನಿರ್ಮಾಣವಾಗಿರುವುದು ಮಾತ್ರವಲ್ಲದೆ ಬೆಂಗಳೂರಿಗೆ ಬೇಸಗೆಯ ನೀರಿನ ಕೊರತೆ ಕೂಡ ಕಣ್ಮರೆಯಾಗಲಿದೆ. ಜತೆಗೆ ತಮಿಳುನಾಡಿಗೆ ಈ ವರ್ಷ ಕರ್ನಾಟಕದಿಂದ ಹರಿಸಬೇಕಿದ್ದ ನೀರಿನ ಹಂಚಿಕೆಯ ಸಮಸ್ಯೆ ಕೂಡ ಬಗೆಹರಿದಂತಾಗಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ (16/6/2018ರಂತೆ) ತಮಿಳುನಾಡಿಗೆ ವರ್ಷಕ್ಕೆ 177.25 ಟಿಎಂಸಿ ನೀರನ್ನು ಹರಿಸಬೇಕಿತ್ತು.‌ ಜೂನ್‌ನಿಂದ ಜೂನ್‌ವರೆಗಿನ ಜಲವರ್ಷ ಪ್ರಕಾರ ಜೂನ್ 2025ರಿಂದ ಇಲ್ಲಿಯವರೆಗೆ 138.014 ಟಿಎಂಸಿ ನೀರು ಬಿಳಿಗೊಂಡ್ಲು ಜಲ ಮಾಪನ ಕೇಂದ್ರದಿಂದ ತಮಿಳುನಾಡಿಗೆ ಬಿಡಬೇಕಿತ್ತು. ಈ ವರ್ಷ ಉತ್ತಮ ಮಳೆ ಹಿನ್ನೆಲೆಯಲ್ಲಿ 273.426 ಟಿಎಂಸಿ ನೀರು ಹರಿದು ಹೋಗಿದೆ. ಅಂದರೆ ಹೆಚ್ಚುವರಿಯಾಗಿ 135.412 ಟಿಎಂಸಿ ನೀರು ಬಿಟ್ಟಂತಾಗಿದೆ. ಹೀಗಾಗಿ ಈ ವರ್ಷ ತಮಿಳುನಾಡು ಹಾಗೂ ಕರ್ನಾಟಕದ ಕಾವೇರಿ ನದಿ ನೀರು ಹಂಚಿಕೆ ವಿಚಾರದ ಸಮಸ್ಯೆ ಪ್ರಕೃತಿದತ್ತವಾಗಿಯೇ ಬಗೆಹರಿದಿದೆ.

ಈ ಸುದ್ದಿಯನ್ನೂ ಓದಿ: Mysuru News: ಕೆಆರ್‌ಎಸ್‌ ಹಿನ್ನೀರಿನಲ್ಲಿ ಮೂವರು ನರ್ಸಿಂಗ್‌ ವಿದ್ಯಾರ್ಥಿಗಳು ನೀರುಪಾಲು

ಈ ವರ್ಷ ಬೆಂಗಳೂರಿನ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಕಾವೇರಿ ಜಲಾನಯನ ಪ್ರದೇಶದ ಹಾರಂಗಿ, ಕೆಆರ್‌ಎಸ್, ಕಬಿನಿ, ಹೇಮಾವತಿ ಜಲಾಶಯಗಳು ಅಕ್ಟೋಬರ್‌ನಲ್ಲಿ ಮತ್ತೆ ಭರ್ತಿಯಾಗಿ, 115 ಟಿಎಂಸಿ ನೀರು ಸಂಗ್ರಹವಿದೆ. ಇದರ ಜತೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಾವೇರಿ ನೀರಾವರಿ ನಿಗಮದ 6,576 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಇದರೊಂದಿಗೆ ಸಣ್ಣ ನೀರಾವರಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯ ಕೆರೆಗಳು ಸಂಪೂರ್ಣ ತುಂಬಿವೆ. ಹೀಗಾಗಿ ಬೆಂಗಳೂರಿಗೆ ನೀರಿನ ಸಮಸ್ಯೆ ತಲೆದೋರಲಾರದು.

ಬೆಂಗಳೂರಿಗೆ ವರ್ಷಕ್ಕೆ 31 ಟಿಎಂಸಿ ನೀರು ಕುಡಿಯುವ ನೀರು ಬೇಕಿದೆ. ಅಂದರೆ ಪ್ರತಿ ತಿಂಗಳು ಬೆಂಗಳೂರಿಗರಿಗೆ 2.60 ಟಿಎಂಸಿ ನೀರಿನ ಅವಶ್ಯಕತೆ ಇದೆ. ಕೆಆರ್‌ಎಸ್ ಜತೆಗೆ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳು, ಕೆರೆಗಳು ಭರ್ತಿಯಾಗಿದ್ದರಿಂದ ನೀರಿಗೆ ಕೊರತೆಯಾಗುವುದಿಲ್ಲ.

ಬಿಳಿಗೊಂಡ್ಲು ಜಲಮಾಪನ ಕೇಂದ್ರದಿಂದ ತಮಿಳುನಾಡಿಗೆ ನೀರು

ಕೆಆರ್‌ಎಸ್ ಭರ್ತಿ ಹಿನ್ನೆಲೆ ತಮಿಳುನಾಡಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚುವರಿ ನೀರು ಹರಿದುಹೋಗುತ್ತಿದೆ. ಬಿಳಿಗೊಂಡ್ಲು ಮಾಪನ ಕೇಂದ್ರದಿಂದ ಜೂನ್‌ ನಲ್ಲಿ 9.19 ಟಿಎಂಸಿಗೆ ಬದಲಿಗೆ 42.256 ಟಿಎಂಸಿ, ಜುಲೈಯಲ್ಲಿ 31.24 ಟಿಎಂಸಿ ಬದಲಿಗೆ 103.514 ಟಿಎಂಸಿ, ಆಗಸ್ಟ್‌ನಲ್ಲಿ 45.95 ಟಿಎಂಸಿ ಬದಲಿಗೆ 51.943 ಟಿಎಂಸಿ, ಸೆಪ್ಟೆಂಬರ್‌ನಲ್ಲಿ 36.76 ಟಿಎಂಸಿ ಬದಲಿಗೆ 40.790 ಟಿಎಂಸಿ, ಅಕ್ಟೋಬರ್‌ನಲ್ಲಿ 14.35 ಟಿಎಂಸಿ ಬದಲಿಗೆ 31.344 ಟಿಎಂಸಿಯಂತೆ ಈ ವರ್ಷ ತಮಿಳುನಾಡಿಗೆ ಇದುವರೆಗೆ 138.014 ಟಿಎಂಸಿ ನೀರಿನ ಬದಲಿಗೆ 273.426 ಟಿಎಂಸಿ ನೀರು ಹರಿದುಹೋಗಿದೆ.

ವಿಶೇಷ ಎಂದರೆ ಸುಪ್ರೀಂ ಕೋರ್ಟ್ ಆದೇಶದಂತೆ ಜೂನ್ 2025ರಿಂದ ಮೇ 2026ರವರೆಗೆ ಬಿಳಿಗೊಂಡ್ಲು ಜಲಾಶಯ ಮಾಪನ ಕೇಂದ್ರದಿಂದ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಬೀಡಬೇಕಿತ್ತು. ಆದರೆ ಕೇವಲ ಐದೇ ತಿಂಗಳಲ್ಲಿ 273.426 ಟಿಎಂಸಿ ನೀರನ್ನು ತಮಿಳುನಾಡಿಗೆ ಕೊಟ್ಟಂತಾಗಿದೆ.

ಅಕ್ಟೋಬರ್ 3ನೇ ವಾರ ಕೆಆರ್‌ಎಸ್‌ನಲ್ಲಿ ಗರಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದ್ದು ಹೊರಹರಿವಿನ ಪ್ರಮಾಣವನ್ನು ಕೂಡ ಹೆಚ್ಚಿಸಲಾಗಿದೆ. ಕೆಆರ್‌ಎಸ್‌ನಿಂದ ಹೊರಹರಿವು 20,540 ಕ್ಯೂಸೆಕ್ಸ್ ಇದೆ. ಬಿಳಿಗೊಂಡ್ಲು ಮಾಪನ ಕೇಂದ್ರದಲ್ಲಿ ಹೊರಹರಿವು 41,424 ಕ್ಯೂಸೆಕ್ಸ್‌ನಷ್ಟಿದೆ.

93 ವರ್ಷದ ಬಳಿಕ 3ನೇ ಬಾರಿ ಕೆಆರ್‌ಎಸ್ ಭರ್ತಿ

2024ರಲ್ಲಿ ಕಾಡಿದ ಬರ 2025ರಲ್ಲಿ ಕಣ್ಮರೆಯಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದೆ. ಪರಿಣಾಮ 93 ವರ್ಷದ ಬಳಿಕ ಕೆಆರ್‌ಎಸ್ ಜೂನ್‌ನಲ್ಲೇ ಭರ್ತಿಯಾಗಿ ಇತಿಹಾಸ ಸೃಷ್ಟಿಸಿತು. ನಂತರ ಅಕ್ಟೋಬರ್ 2ನೇ ವಾರದಲ್ಲಿ ಜಲಾಶಯ 2ನೇ ಬಾರಿ ಭರ್ತಿಯಾಗಿತ್ತು. ಅಕ್ಟೋಬರ್‌ 18-23ರವರೆಗೆ ಅಣೆಕಟ್ಟೆಯ ಗರಿಷ್ಠ ಸಾಮರ್ಥ್ಯ 124.80 ಅಡಿಗಳಷ್ಟು ನೀರು ಸಂಗ್ರಹ ಕಾಯ್ದುಕೊಳ್ಳುವ ಮೂಲಕ ವರ್ಷದಲ್ಲಿ 3ನೇ ಬಾರಿ ಜಲಾಶಯ ಭರ್ತಿಯಾಗಿ ದಾಖಲೆ ನಿರ್ಮಿಸಿದೆ. 93 ವರ್ಷದಲ್ಲಿ 16 ಬಾರಿ ಮಾತ್ರ ಕೆಆರ್‌ಎಸ್ ಭರ್ತಿಯಾಗಿಲ್ಲ.

image

ಬೀದರ್ ನಿಂದ ಚಾಮರಾಜನಗರದವರೆಗೆ, ಬಳ್ಳಾರಿಯಿಂದ ಕೋಲಾರದವರೆಗೆ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ. ಜಲಾಶಯಗಳು, ಕೆರೆಕಟ್ಟೆಗಳು ಭರ್ತಿಯಾಗಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ಯಾವುದೇ ತೊಂದರೆ ಇಲ್ಲ. ನಮ್ಮ ಸರ್ಕಾರ ವರುಣನ ಕೃಪೆಗೆ ಪಾತ್ರವಾಗಿದೆ.

-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು, ಕರ್ನಾಟಕ ಸರ್ಕಾರ