ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಲತಾಯಿ ಧೋರಣೆಯ ಬಜೆಟ್‌ ತಕ್ಷಣ ಸರಿಪಡಿಸಿ: ಕೇಂದ್ರಕ್ಕೆ ಆರ್.ವಿ. ದೇಶಪಾಂಡೆ ಆಗ್ರಹ

R.V. Deshpande: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಫೆಬ್ರವರಿ 1ರಂದು ಮಂಡಿಸಿದ ಬಜೆಟ್‌ಗೆ ಕಾಂಗ್ರೆಸ್‌ ನಾಯಕ ಆರ್.ವಿ. ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼʼಕೇಂದ್ರ ಸರ್ಕಾರ ವಾಸ್ತವದಲ್ಲಿ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಿಗೆ ಕಡಿಮೆ ಪ್ರತಿಫಲ ನೀಡುವ ಭೇದಭಾವದ ನೀತಿಯನ್ನು ಅನುಸರಿಸುತ್ತಿರುವುದು ಈ ಬಜೆಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆʼʼ ಎಂದಿದ್ದಾರೆ.

ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಅನ್ಯಾಯ ಎಂದ ಆರ್.ವಿ. ದೇಶಪಾಂಡೆ

ಆರ್.ವಿ. ದೇಶಪಾಂಡೆ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Feb 2, 2026 5:16 PM

ಬೆಂಗಳೂರು, ಫೆ. 2: ''ಕೇಂದ್ರ ಬಜೆಟ್‌ 2026–27 (Union Budget) ಕರ್ನಾಟಕದ ಪಾಲಿಗೆ ತೀವ್ರ ನಿರಾಶೆ ಮೂಡಿಸುವ ಹಾಗೂ ಅಸಮಂಜಸ ಬಜೆಟ್ ಆಗಿದೆ. ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಒಂದಾದ ಕರ್ನಾಟಕವನ್ನು ಈ ಬಜೆಟ್‌ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಅರ್ಥಪೂರ್ಣ ಅಥವಾ ನಿರ್ದಿಷ್ಟ ಘೋಷಣೆಗಳಿಲ್ಲದಿರುವುದು ಅತ್ಯಂತ ಬೇಸರದ ಸಂಗತಿʼʼ ಎಂದು ಕಾಂಗ್ರೆಸ್‌ ನಾಯಕ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ (R.V. Deshpande) ತಿಳಿದರು.

ಬೆಂಗಳೂರಿನಲ್ಲಿ ಬಜೆಟ್‌ ಬಗ್ಗೆ ಮಾತನಾಡಿದ ಅವರು, ʼʼಕೇಂದ್ರ ಸರ್ಕಾರ ವಾಸ್ತವದಲ್ಲಿ ಹೆಚ್ಚು ಕೊಡುಗೆ ನೀಡುವ ರಾಜ್ಯಗಳಿಗೆ ಕಡಿಮೆ ಪ್ರತಿಫಲ ನೀಡುವ ಭೇದಭಾವದ ನೀತಿಯನ್ನು ಅನುಸರಿಸುತ್ತಿರುವುದು ಈ ಬಜೆಟ್‌ನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ತೆರಿಗೆ ಹಂಚಿಕೆಯ ಅಚಲ ಚೌಕಟ್ಟು ಹಾಗೂ ಅಗತ್ಯ ತಿದ್ದುಪಡಿ ಕ್ರಮಗಳ ಕೊರತೆ ಕರ್ನಾಟಕದ ಮೇಲಿನ ಕೇಂದ್ರದ ಮಲತಾಯಿ ಧೋರಣೆಯನ್ನು ಬಹಿರಂಗಪಡಿಸುತ್ತದೆ'' ಎಂದರು.

ʼʼಈ ಬಜೆಟ್ ಪಕ್ಷಪಾತಪೂರ್ಣ ಹಾಗೂ ರಾಜಕೀಯ ಪ್ರೇರಿತವಾಗಿದ್ದು, ಕರ್ನಾಟಕದ ಜನರ ಹಿತಾಸಕ್ತಿಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಆದ್ದರಿಂದ ಕೇಂದ್ರದ ಈ ಬಜೆಟ್ ಅನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕರ್ನಾಟಕದ ಜನರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಅಸಮತೋಲನವನ್ನು ತಕ್ಷಣವೇ ಸರಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇನೆʼʼ ಎಂದರು ತಿಳಿಸಿದರು.

ಬಜೆಟ್‌ನಲ್ಲಿ ಬೆಂಗಳೂರು-ಪುಣೆ ಹೈ ಸ್ಪೀಡ್ ರೈಲಿಗೆ ಆದ್ಯತೆ ಕೊಡಬೇಕಿತ್ತು: ಎಂ.ಬಿ. ಪಾಟೀಲ್‌

ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬಜೆಟ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ʼʼಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026–27ನೇ ಸಾಲಿನ 13ನೇ ಕೇಂದ್ರ ಬಜೆಟ್ ನಿರಾಶಾದಾಯಕ, ದೂರದೃಷ್ಟಿಯಿಲ್ಲದ ಹಾಗೂ ಹೇಳಿಕೆಗಳಷ್ಟೇ ಇರುವ ಆಯವ್ಯಯವಾಗಿದೆ. ಬಜೆಟ್‌ನಲ್ಲಿ ಕರ್ನಾಟಕಕ್ಕೂ, ದಕ್ಷಿಣ ಭಾರತಕ್ಕೂ ಏನೂ ಸಿಕ್ಕಿಲ್ಲ. ರಾಜ್ಯಕ್ಕೆ ಚೊಂಬು ಕೊಟ್ಟಂತಾಗಿದೆʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼʼಕಳೆದ ವರ್ಷ 2025–26ರಲ್ಲಿ ಬಜೆಟ್ ಗಾತ್ರ 50.65 ಲಕ್ಷ ಕೋಟಿ ರುಪಾಯಿ ಇದ್ದು, ಪರಿಷ್ಕೃತ ಅಂದಾಜಿನಲ್ಲಿ ಅದು 49.64 ಲಕ್ಷ ಕೋಟಿ ರುಪಾಯಿಗೆ ಇಳಿಕೆಯಾಗಿತ್ತು. ಅಂದರೆ ಸುಮಾರು 1 ಲಕ್ಷ ಕೋಟಿ ರುಪಾಯಿ ಕಡಿತವಾಗಿತ್ತು. ಇದೀಗ 2026–27ರಲ್ಲಿ ಬಜೆಟ್ ಗಾತ್ರ 53.47 ಲಕ್ಷ ಕೋಟಿ ರುಪಾಯಿಗೆ ಏರಿಕೆಯಾಗಿದೆ. ಇದು ಕೇವಲ ಶೇ. 5.56 ವೃದ್ಧಿ ಮಾತ್ರ. ದೇಶದ ಅಭಿವೃದ್ಧಿಗೆ ಕನಿಷ್ಠ ಶೇ. 7–8 ವೃದ್ಧಿ ಅಗತ್ಯವಿರುವಾಗ, ಈ ಪ್ರಮಾಣ ಸಾಲದುʼʼ ಎಂದರು.