ಇನ್ನುಮುಂದೆ ಆಸ್ತಿ ದಾಖಲೆಗಳು ನೇರ ಮೊಬೈಲ್ಗೆ ಬರಲಿವೆ: ಸಚಿವ ಕೃಷ್ಣ ಬೈರೇಗೌಡ
ಆಸ್ತಿಯ ಮೂಲ ದಾಖಲೆ ಶಿಥಿಲಾವಸ್ಥೆಗೆ ತಲುಪುವುದು, ನಕಲು, ಫೋರ್ಜರಿ, ತಿದ್ದುವಿಕೆ ಹಾಗೂ ಕಳೆದು ಹೋಗುವುದನ್ನು ತಪ್ಪಿಸಲು ರಾಜ್ಯದಲ್ಲಿ ಭೂ ಸುರಕ್ಷಾ ಯೋಜನೆ ಜಾರಿಗೊಳಿಸಲಾಗಿದೆ. ಅದೇ ರೀತಿ ಮುಂದಿನ ವರ್ಷ ಸರ್ವೆ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿನ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸಚಿವ ಕೃಷ್ಣಬೈರೇಗೌಡ. -
ಶಿವಮೊಗ್ಗ: ಆಸ್ತಿಗೆ ಸಂಬಂಧಿಸಿದ ಮೂಲ ದಾಖಲೆಗಳ (Property records) ಪ್ರಮಾಣೀಕೃತ ಕಾಪಿ ಬೇಕಿದ್ದರೆ ಭೂ ಸುರಕ್ಷಾ ಯೋಜನೆಯಡಿ ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದಲ್ಲಿ ನೇರವಾಗಿ ಸಂಬಂಧಿಸಿದವರ ಮೊಬೈಲ್ ಫೋನ್ಗೆ ದಾಖಲೆ ಕಳುಹಿಸಲಾಗುತ್ತದೆ. ಇನ್ನು ಕಚೇರಿಗೆ ಅಲೆಯುವುದು ಬೇಡ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Krishna ByreGowda) ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ಆಸ್ತಿಯ ಮೂಲ ದಾಖಲೆ ಶಿಥಿಲಾವಸ್ಥೆಗೆ ತಲುಪುವುದು, ನಕಲು, ಫೋರ್ಜರಿ, ತಿದ್ದುವಿಕೆ ಹಾಗೂ ಕಳೆದು ಹೋಗುವುದನ್ನು ತಪ್ಪಿಸಲು ರಾಜ್ಯದಲ್ಲಿ ಭೂ ಸುರಕ್ಷಾ ಯೋಜನೆ ಜಾರಿಗೊಳಿಸಲಾಗಿದೆ. ಯೋಜನೆಯಡಿ ತಾಲೂಕು ಕಚೇರಿ, ಎ.ಸಿ, ಡಿ.ಸಿ ಕಚೇರಿಗಳಲ್ಲಿನ ಎಲ್ಲ ಮೂಲ ಕಡತಗಳ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಪ್ರಕ್ರಿಯೆ ಈಗಾಗಲೇ ರಾಜ್ಯದ 100 ತಾಲೂಕುಗಳಲ್ಲಿ ಏಪ್ರಿಲ್ 30ಕ್ಕೆ ಪೂರ್ಣಗೊಂಡಿದೆ. ಅಂದಾಜು 67 ಕೋಟಿ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ವರ್ಷದೊಳಗೆ ಉಳಿದ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
Job Recruitment: ಮಂಜೂರಾತಿ ನೀಡಿರುವ ಹುದ್ದೆಗಳ ಭರ್ತಿಗೆ ತಕ್ಷಣ ಕ್ರಮ ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ಸೂಚನೆ
ಸ್ಕ್ಯಾನ್ ಮಾಡುವುದರಿಂದ ಹಾಳಾಗುವ ಸ್ಥಿತಿಯಲ್ಲಿರುವ ದಾಖಲೆಗಳನ್ನು ಶಾಶ್ವತವಾಗಿ ಉಳಿಸಿದಂತಾಗುತ್ತದೆ. ಮುಂದೆ ದಾಖಲೆಯನ್ನು ತಿದ್ದುವ, ಫೋರ್ಜರಿ, ನಕಲು ಮಾಡುವ ಅವಕಾಶ ತಪ್ಪಲಿದೆ. ದಾಖಲೆಯ ಕಡತ ವನ್ನು ಉದ್ದೇಶಪೂರ್ವಕವಾಗಿ ಎತ್ತಿಡಲು, ಬಚ್ಚಿಡಲು ಆಗುವುದಿಲ್ಲ. ಕಳೆದು ಹೋಗಲು ಸಾಧ್ಯವಿಲ್ಲ. ಮುಂದಿನ ವರ್ಷ ಸರ್ವೆ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿನ ಎಲ್ಲಾ ಮೂಲ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುವ ಉದ್ದೇಶ ಹೊಂದಿದ್ದೇವೆ. ಇದರಿಂದ ಬೆರಳ ತುದಿಯಲ್ಲೇ ಜನರಿಗೆ ದಾಖಲೆ ಸಿಗಲಿದೆ ಎಂದು ಹೇಳಿದ್ದಾರೆ.