Hulikal Ghat road: ಗುಡ್ಡ ಕುಸಿತ ಹಿನ್ನೆಲೆ ಹುಲಿಕಲ್ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ; ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ
ರಾಜ್ಯ ಹೆದ್ದಾರಿ-52 ರ ಹುಲಿಕಲ್ ಘಾಟ್ ವ್ಯಾಪ್ತಿಯ ಹೇರ್ಪಿನ್ ತಿರುವುಗಳಲ್ಲಿ ಈ ಹಿಂದೆ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ರಸ್ತೆಯ ಸುರಕ್ಷತೆಯ ದೃಷ್ಟಿಯಿಂದ ಹಾಗೂ ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹುಲಿಕಲ್ ಘಾಟ್ನಲ್ಲಿ ರಸ್ತೆ ಕುಸಿದಿರುವುದು. -
ಶಿವಮೊಗ್ಗ: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ರಸ್ತೆಯಲ್ಲಿ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಅಭಿಷೇಕ್ ವಿ. ಆದೇಶ ಹೊರಡಿಸಿದ್ದಾರೆ. ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ಮಾರ್ಗ ಬದಲಾವಣೆ ಜಾರಿಯಲ್ಲಿರಲಿದ್ದು, ಸಾರ್ವಜನಿಕರು ಹಾಗೂ ವಾಹನ ಚಾಲಕರು ಸಹಕರಿಸಬೇಕೆಂದು ಕೋರಿದ್ದಾರೆ.
ರಾಜ್ಯ ಹೆದ್ದಾರಿ-52 ರ ಹುಲಿಕಲ್ ಘಾಟ್ ವ್ಯಾಪ್ತಿಯ ಹೇರ್ಪಿನ್ ತಿರುವುಗಳಲ್ಲಿ ಈ ಹಿಂದೆ ಮಳೆಯಿಂದಾಗಿ ಭೂಕುಸಿತ ಉಂಟಾಗಿತ್ತು. ಪ್ರಸ್ತುತ ಅಲ್ಲಿ ರಕ್ಷಣಾತ್ಮಕ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಏಪ್ರಿಲ್ 9ರಂದು ಕಾಮಗಾರಿ ನಡೆಯುತ್ತಿದ್ದ ಸ್ಥಳದ ಕೆಳಭಾಗದಲ್ಲಿ ಸುಮಾರು 12 ಮೀಟರ್ ಎತ್ತರದಲ್ಲಿ ಭೂಕುಸಿತ ಉಂಟಾಗಿದ್ದು, ಕಾಂಕ್ರೀಟ್ ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ರಸ್ತೆಯ ಸುರಕ್ಷತೆಯ ದೃಷ್ಟಿಯಿಂದ ಹಾಗೂ ರಕ್ಷಣಾತ್ಮಕ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಂಚಾರವನ್ನು ನಿರ್ಬಂಧಿಸುವುದು ಅನಿವಾರ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Landslide: ಹುಲಿಕಲ್ ಘಾಟಿಯಲ್ಲಿ ಗುಡ್ಡ ಕುಸಿತ, ಮೂವರು ಕಾರ್ಮಿಕರು ಸಾವು
ಪರ್ಯಾಯ ಮಾರ್ಗ ಯಾವುವು?
ಭಾರಿ ವಾಹನಗಳು ಹಾಗೂ ಸಾಮಾನ್ಯ ವಾಹನಗಳ ಸುಗಮ ಸಂಚಾರಕ್ಕಾಗಿ ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ:
| ಹಾಲಿ ಸಂಚಾರ ಮಾರ್ಗ | ಪರ್ಯಾಯ ಮಾರ್ಗ |
|---|---|
| ತೀರ್ಥಹಳ್ಳಿಯಿಂದ ಕುಂದಾಪುರ ಕಡೆಗೆ: (ರಾಜ್ಯ ಹೆದ್ದಾರಿ-52 ಮಾಸ್ತಿಕಟ್ಟೆ-ಹುಲಿಕಲ್ ಘಾಟ್ ಮೂಲಕ) | ತೀರ್ಥಹಳ್ಳಿ – ರಾವೆ – ಕಾನುಗೋಡು – ನಗರ – ಕೊಲ್ಲೂರು – ಕುಂದಾಪುರ ರಸ್ತೆ. |
| ನಗರ/ಸಿದ್ಧಾಪುರ ಮಾರ್ಗವಾಗಿ ಕುಂದಾಪುರಕ್ಕೆ: (ರಾಜ್ಯ ಹೆದ್ದಾರಿ-278 ರ ಮೂಲಕ) | ತೀರ್ಥಹಳ್ಳಿ – ಯಡೂರು – ಮಾಸ್ತಿಕಟ್ಟೆ – ಕಾನುಗೋಡು – ನಗರ – ಕೊಲ್ಲೂರು – ಕುಂದಾಪುರ ರಸ್ತೆ. |
| ಶಿವಮೊಗ್ಗ/ಸಾಗರ ಕಡೆಯಿಂದ ಹೊಸನಗರ ಮೂಲಕ: (ಕುಂದಾಪುರ ಕಡೆಗೆ ಹೋಗುವ ಭಾರೀ ವಾಹನಗಳು) | ಶಿವಮೊಗ್ಗ – ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ – ಭಟ್ಕಳ – ಬೈಂದೂರು – ಕುಂದಾಪುರ ರಸ್ತೆ. |