ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kuladalli Keelyavudo Movie: ವಿನೂತನವಾಗಿ ಬಿಡುಗಡೆಯಾಯ್ತು ಮಡೆನೂರ್ ಮನು ಅಭಿನಯದ ʼಕುಲದಲ್ಲಿ ಕೀಳ್ಯಾವುದೊʼ ಚಿತ್ರದ ಮೊದಲ ಹಾಡು

Kuladalli Keelyavudo Movie: ಖ್ಯಾತ ಗೀತರಚನೆಕಾರ ಯೋಗರಾಜ್ ಭಟ್ ಅವರು ʼಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ ʼಕುಲದಲ್ಲಿ ಕೀಳ್ಯಾವುದೊʼ ಚಿತ್ರಕ್ಕೆ ʼನಮ್ ಪೈಕಿ ಒಬ್ಬ ಹೋಗ್ಬುಟʼ ಎಂಬ ಹಾಡನ್ನು ಬರೆದಿದ್ದಾರೆ.

ಮಡೆನೂರ್ ಮನು ಅಭಿನಯದ ʼಕುಲದಲ್ಲಿ ಕೀಳ್ಯಾವುದೊʼ ಚಿತ್ರದ ಮೊದಲ ಹಾಡು ಬಿಡುಗಡೆ

Profile Prabhakara R Feb 9, 2025 3:33 PM

ಬೆಂಗಳೂರು: ಈಗಿನ ಜನತೆಗೆ ಬೇಕಾದಂತಹ ಹಾಡುಗಳನ್ನು ಬರೆಯುವ ಗೀತರಚನೆಕಾರರಲ್ಲಿ ಯೋಗರಾಜ್ ಭಟ್ ಮೊದಲಿಗರು ಎನ್ನಬಹುದು. ದಿನ ನಾವು ಆಡುವ ಮಾತುಗಳನ್ನೇ ಯೋಗರಾಜ್ ಭಟ್ ಅವರು ಹಾಡುಗಳ ರೂಪಕ್ಕೆ ತಂದು ಎಲ್ಲರೂ ಗುನುಗುವ ಹಾಗೆ ಮಾಡುತ್ತಾರೆ. ಪ್ರಸ್ತುತ ಯೋಗರಾಜ್ ಭಟ್ ಅವರು ʼಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ ʼಕುಲದಲ್ಲಿ ಕೀಳ್ಯಾವುದೊʼ ಚಿತ್ರಕ್ಕೆ (Kuladalli Keelyavudo Movie) ʼನಮ್ ಪೈಕಿ ಒಬ್ಬ ಹೋಗ್ಬುಟʼ ಎಂಬ ಹಾಡನ್ನು ಬರೆದಿದ್ದಾರೆ. ಇದಕ್ಕೆ ಮನೋಮೂರ್ತಿ ಅವರು ಸಂಗೀತ ನೀಡಿದ್ದಾರೆ. ಖ್ಯಾತ ಗಾಯಕ ಆಂಥೋನಿ ದಾಸ್ ಅವರ ಕಂಠಸಿರಿಯಲ್ಲಿ‌ ಈ ಹಾಡು ಮೂಡಿಬಂದಿದೆ. ಇತ್ತೀಚೆಗೆ ಈ ಹಾಡು ಬಿಡುಗಡೆ ಸಮಾರಂಭ ನಡೆಯಿತು. ನಾಯಕ ನಟ ಮನು ಬ್ಯಾಂಡ್ ಬಾರಿಸಿಕೊಂಡು ಬ್ಯಾಂಡ್ ಸೆಟ್ ಅವರ ಹಾಗೂ ಆರ್ಕೆಸ್ಟ್ರಾ ಕಲಾವಿದರ ಜತೆಗೆ ವೇದಿಕೆಗೆ ಬಂದು ಈ‌ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಯೋಗರಾಜ್ ಭಟ್ ಅವರು ಮಾತನಾಡಿ, ನನಗೆ ʼಕಾಮಿಡಿ ಕಿಲಾಡಿಗಳುʼ ಸಮಯದಲ್ಲಿ ಮನು ನಟನೆ ನೋಡಿ ನೀನು ಇಲ್ಲಿ ಮಾತ್ರ ಅಲ್ಲ. ಸಿನಿಮಾಗೂ ಸಲ್ಲುವವನು ಅಂತ ಹೇಳಿದ್ದೆ. ಈ ಚಿತ್ರದ ಕಥೆ ನಾನು ಹಾಗೂ ಇಸ್ಲಾಮುದ್ದೀನ್ ಸೇರಿ ಬರೆದಿದ್ದೇವೆ‌. ಈ ಕಥೆಗೆ ಮನು ಸೂಕ್ತ ನಾಯಕ. ಯೋಗರಾಜ್ ಸಿನಿಮಾಸ್ ಅರ್ಪಿಸುತ್ತಿರುವ ಈ ಚಿತ್ರವನ್ನು ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಹಾಗೂ ವಿದ್ಯಾ ದಂಪತಿ ನಿರ್ಮಾಣ ಮಾಡುತ್ತಿದ್ದಾರೆ. ರಾಮ್ ನಾರಾಯಣ್ ನಿರ್ದೇಶಿಸುತ್ತಿದ್ದಾರೆ. ಮನೋಮೂರ್ತಿ ಸಂಗೀತ ನೀಡಿದ್ದಾರೆ. ಇನ್ನು ಇಂದು ಬಿಡುಗಡೆಯಾಗಿರುವ ಈ ಹಾಡನ್ನು ನಾನು ಬರೆಯಲು ಮನೋಮೂರ್ತಿ ಅವರ ಕಾರು ಚಾಲಕ ಸ್ಫೂರ್ತಿ‌. ಆತ ಇಂದು ನಮ್ಮೊಂದಿಗಿಲ್ಲ. ಆತನ ಸಾವು ಹಾಗೂ ಆನಂತರ ನಡೆದ ಸನ್ನಿವೇಶಗಳೆ ನಾನು ಹಾಡು ಬರೆಯಲು ಕಾರಣ ಎಂದರು.

ಸಂಗೀತ ನಿರ್ದೇಶಕ ಮನೋಮೂರ್ತಿ ಮಾತನಾಡಿ, ನಾನು ನನ್ನ ಜಾನರ್ ಹೊರತುಪಡಿಸಿ ಸಂಗೀತ ನೀಡಿರುವ ಎರಡನೇ ಚಿತ್ರ ಇದು. ಇಂದು ಬಿಡುಗಡೆಯಾಗಿರುವ ಈ ಹಾಡನ್ನು ಯೋಗರಾಜ್ ಭಟ್ ಮನಮುಟ್ಟುವ ಹಾಗೆ ಬರೆದಿದ್ದಾರೆ ಎಂದು ಹೇಳಿದರು.

ನಿರ್ದೇಶಕ ರಾಮ್ ನಾರಾಯಣ್ ಮಾತನಾಡಿ, ಬಾಬು ಎಂಬ ನನ್ನ ಸ್ನೇಹಿತನಿಂದ ನನಗೆ ಈ ಚಿತ್ರತಂಡದ ಪರಿಚಯವಾಯಿತು. ತಾವೇ ಒಬ್ಬ‌ ನಿರ್ದೇಶಕನಾಗಿದರೂ ನನಗೆ ಸಿನಿಮಾ ನಿರ್ದೇಶನಕ್ಕೆ ಅವಕಾಶ ಕೊಟ್ಟಿದ್ದು ಅವರ ದೊಡ್ಡ ಗುಣ. ಇನ್ನು ಮನೋಮೂರ್ತಿ ಅವರ ಸಂಗೀತ ನಿರ್ದೇಶನದಲ್ಲಿ ಈ ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿ ಬಂದಿದೆ. ಇಂದು ಮೊದಲ ಹಾಡು ಬಿಡುಗಡೆಯಾಗಿದೆ ಎಂದರು.

Kuladalli Keelyavudo (1)

ನಿರ್ಮಾಪಕ ಸಂತೋಷ್ ಮಾತನಾಡಿ, ನಾನು ಈ ಸಿನಿಮಾ ಆರಂಭಿಸಿದ್ದು ಮನುಗೋಸ್ಕರ. ಆದರೆ, ಟೇಕ್ ಆಫ್ ಆಗಿದ್ದು ಯೋಗರಾಜ್ ಭಟ್ ಅವರಿಂದ ಇಡೀ ತಂಡದ ಶ್ರಮದಿಂದ ಒಂದೊಳ್ಳೆ ಸಿನಿಮಾ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.

ನಾಯಕ ಮಡೆನೂರ್ ಮನು ಮಾತನಾಡಿ, ನನಗೆ ಒಂದು ದೊಡ್ದ ಬ್ಯಾನರ್‌ನಲ್ಲಿ ನಟಿಸುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ ಎಂದು ಮಾತು ಆರಂಭಿಸಿದ, ಈ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಯೋಗರಾಜ್ ಭಟ್ ಅವರಿಗೆ ಧನ್ಯವಾದ. ನಾನು ಮೂಲತಃ ಆರ್ಕೇಸ್ಟ್ರಾ ಕಲಾವಿದ. ಈ ಚಿತ್ರದಲ್ಲೂ ನನ್ನದು ಅದೇ ಪಾತ್ರ. ಸಾವಿನ ಬಗ್ಗೆ ಎಲ್ಲರಿಗೂ ಅರ್ಥವಾಗುವ ಹಾಗೆ ಅರ್ಥಗರ್ಭಿತ ಹಾಡೊಂದನ್ನು ಯೋಗರಾಜ್ ಭಟ್ ಅವರು ಬರೆದಿದ್ದಾರೆ. ಮನೋಮೂರ್ತಿ ಸಂಗೀತ ನೀಡಿದ್ದಾರೆ ಹಾಗೂ ಅವರದೆ ಆಡಿಯೋ ಕಂಪನಿ ಮೂಲಕ ಬಿಡುಗಡೆ ಮಾಡಿದ್ದಾರೆ ಎಂದರು.

Kuladalli Keelyavudo (2)

ತಬಲಾ ನಾಣಿ ಮಾತನಾಡಿ, ನಾನು ಕೂಡ ಆರ್ಕೆಸ್ಟ್ರಾ ಕಲಾವಿದ. ಇಂದು ಬಿಡುಗಡೆಯಾಗಿರುವ ಈ ಹಾಡು ಈ ಬಾರಿಯ ರಾಜ್ಯೋತ್ಸವಕ್ಕೆ ಎಲ್ಲಾ ಕಡೆ ರಾರಾಜಿಸಲಿದೆ. ಈ ಚಿತ್ರದಲ್ಲಿ ನನ್ನ ಪಾತ್ರದ ‌ಹೆಸರು ತಮಟೆ. ಸದಾ ನಾಯಕನ ಜೊತೆಗಿರುತ್ತೇನೆ‌ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Srivathsa Joshi Column: ಚಕ್ಕಡಿಯ ಚಕ್ರಗಳು ಚೌಕಾಕಾರವಿದ್ದರೂ ಚಲಿಸಬಲ್ಲವು !

ಮಡೆನೂರ್ ಮನು, ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ತಬಲನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.