Kabini Dam: ಕಬಿನಿ ಡ್ಯಾಂ ಸುರಕ್ಷತೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ: ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ
Kabini Dam: ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡ ಆತಂಕಿತ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ. ಇದರಿಂದ ಕಬಿನಿ ಜಲಾಶಯದ ಸುರಕ್ಷತೆಗೆ ಯಾವುದೇ ರೀತಿಯ ಆತಂಕವಿಲ್ಲ. ಡ್ಯಾಂ ಪುನಶ್ಚೇತನ ಕಾಮಗಾರಿಯನ್ನು ಕೈಗೊಳ್ಳಲು ಸರ್ಕಾರದಿಂದ ಎಲ್ಲಾ ರೀತಿಯ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ ನೀಡಿದೆ.


ಬೆಂಗಳೂರು: ಕಬಿನಿ ಜಲಾಶಯದಲ್ಲಿ (Kabini Dam) ದೊಡ್ಡ ಮಟ್ಟದಲ್ಲಿ ಬಿರುಕು ಕಾಣಿಸಿಕೊಂಡು, ಡ್ಯಾಂ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅಲ್ಲದೇ ಕೆಲ ಸುದ್ದಿ ವಾಹಿನಿಗಳಲ್ಲಿ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡುವ ರೀತಿಯಲ್ಲಿ ಮಾಹಿತಿ ಪ್ರಸಾರ ಆಗುತ್ತಿದ್ದ ಹಿನ್ನೆಲೆಯಲ್ಲಿ ಇದೀಗ ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ ನೀಡಿದ್ದು, ಜಲಾಶಯದ ಸುರಕ್ಷತೆಗೆ ಯಾವುದೇ ರೀತಿಯ ಆತಂಕವಿರುವುದಿಲ್ಲ ಎಂದು ತಿಳಿಸಿದೆ.
ಜೂನ್ 21ರಂದು ಕೆಲವು ದೃಶ್ಯ ಮಾಧ್ಯಮಗಳಲ್ಲಿ ಕಬಿನಿ ಜಲಾಶಯದ ಸುರಕ್ಷತೆ ಬಗ್ಗೆ ಸುದ್ದಿಗಳು ಪ್ರಸಾರಗೊಂಡಿವೆ. ಹೀಗಾಗಿ ಕಾವೇರಿ ನೀರಾವರಿ ನಿಗಮ ನಿಯಮಿತ ವ್ಯಾಪ್ತಿಗೆ ಒಳಪಡುವ ಎಚ್.ಡಿ ಕೋಟೆಯ ಕಬಿನಿ ಅಣೆಕಟ್ಟೆಯ ಸುರಕ್ಷತೆ ಬಗ್ಗೆ ಪರಿಶೀಲಿಸಿ ವರದಿ ನೀಡಲು ಅಧೀಕ್ಷಕ ಎಂಜಿನಿಯರ್ಗೆ ಸೂಚಿಸಲಾಗಿತ್ತು. ಅದರಂತೆ ಜೂನ್ 21ರಂದು ಸಂಜೆ ಸ್ಥಳವನ್ನು ವರುಣಾ ವೃತ್ತದ ಅಧೀಕ್ಷಕ ಎಂಜಿನಿಯರ್ ಪರಿಶೀಲನೆ ನಡೆಸಿದ್ದಾರೆ.
ಪ್ರಸ್ತುತ ಜಲಾಶಯದ ಮಟ್ಟವು 2278.00 ಅಡಿಗಳಾಗಿದ್ದು. ಜಲಾಶಯದಲ್ಲಿ 15.80 ಟಿಎಂಸಿ ಅಷ್ಟು ನೀರು ಸಂಗ್ರಹಣೆಯಾಗಿದೆ. ಪ್ರಸ್ತುತ ಭಾಗದಲ್ಲಿ ಹನಿಹನಿಯಾಗಿ ನೀರು ತೊಟ್ಟಿಕ್ಕುತ್ತಿದೆ. ಆದರೆ, ಪ್ರಸ್ತುತ ಬಿತ್ತರಗೊಂಡ ವಿಡಿಯೋ ಹಲವಾರು ವರ್ಷಗಳ ಹಿಂದಿನದು. ಆ ಭಾಗವನ್ನು 2022ರ ಮೇ 20ರಂದು ರಂದು ಡಿ.ಎಸ್.ಆರ್.ಟಿ (Dam Safety Review Team) ಪರಿಶೀಲನೆ ನಡೆಸಿತ್ತು ಮತ್ತು 2024ರ ಆ.26ರಂದು ಡಿ.ಎಸ್.ಆರ್.ಪಿ (Dam Safety Review Panel) ಪರಿಶೀಲನೆ ನಡೆಸಿತ್ತು. ಎರಡೂ ತಂಡಗಳ ಪರಿಣಿತರ ಸಲಹೆಯಂತೆ ಸರಿಪಡಿಸಲು ಕಾಮಗಾರಿಯನ್ನು ಕೈಗೊಂಡು, ಈ ಹಿಂದೆಯೇ ಸರಿಪಡಿಸಲಾಗಿತ್ತು. ಆದರೆ ಈಗ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಲು ಕೆಲವು ಕಿಡಿಗೇಡಿಗಳು ಪ್ರಯತ್ನಮಾಡಿದ್ದಾರೆ ಹಾಗೂ ಯಾವುದೇ ಆತಂಕಗೊಳ್ಳವ ಪ್ರಮೆಯ ಉದ್ಭವಿಸಿಲ್ಲ ಎಂದು ನಿಗಮ ತಿಳಿಸಿದೆ.
ಪ್ರಸ್ತುತ ಜಲಾಶಯಕ್ಕೆ ಹೊಸ ನೀರಿನ ಒಳಹರಿವು ಬರುತ್ತಿದ್ದು, Turbidity ಇರುವುದರಿಂದ ಸದರಿ ಕಾಮಗಾರಿಯನ್ನು ಅಕ್ಟೋಬರ್, ನವೆಂಬರ್ ಮಾಹೆಯಲ್ಲಿ ಪ್ರಾರಂಭಿಸಲಾಗುವುದು. ವಾಹಿನಿಗಳಲ್ಲಿ ಬಿತ್ತರವಾದಂತೆ ನೀರು ಚಿಮ್ಮುತ್ತಿಲ್ಲ. ಹನಿಹನಿಯಾಗಿ ತೊಟ್ಟಿಕ್ಕುತ್ತಿರುವುದನ್ನು ಗಮನಿಸಲಾಗಿದೆ. ಜಾಲತಾಣದಲ್ಲಿ ಬಿತ್ತರಗೊಂಡ ಆತಂಕಿತ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ. ಇದರಿಂದ ಜಲಾಶಯದ ಸುರಕ್ಷತೆಗೆ ಯಾವುದೇ ರೀತಿಯ ಆತಂಕವಿಲ್ಲ. ಜಲಾಶಯದ ಪುನಶ್ಚೇತನ ಕಾಮಗಾರಿಯನ್ನು ಕೈಗೊಳ್ಳಲು ಸರ್ಕಾರದಿಂದ ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ ನೀಡಿದೆ.
ಈ ಸುದ್ದಿಯನ್ನೂ ಓದಿ | Yettinahole Project: ರೈತರ ಹಿತ ಕಾಪಾಡಿ ಎತ್ತಿನಹೊಳೆ ನೀರನ್ನು ತೆಗೆದುಕೊಂಡು ಹೋಗುತ್ತೇವೆ: ಡಿ.ಕೆ.ಶಿವಕುಮಾರ್