ಗುಬ್ಬಿ: ತಾಲ್ಲೂಕಿನಲ್ಲಿ ವಿದ್ಯುತ್ ಪರಿವರ್ತಕಗಳು ಕಳಪೆ ವೈಂಡಿಂಗ್ ನಿಂದ ಕೂಡಿದೆ. 25, 60 ಹಾಗೂ 100 ಕೆವಿ ಸಾಮರ್ಥ್ಯದ ಟಿಸಿಗಳು ಸರಬರಾಜು ಮಾಡಿರುವ ಏಜೆನ್ಸಿಗಳ ಲೈಸೆನ್ಸ್ ರದ್ದು ಪಡಿಸಬೇಕು. ಕಳಪೆ ಗುಣಮಟ್ಟದ ಟಿಸಿ ಯಿಂದಾಗಿ ರೈತರ ಪಂಪ್ ಮೋಟಾರ್ ಸುಟ್ಟು ಹೋಗಿವೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಹಿಡಿಯದಿದ್ದಲ್ಲಿ ಬೆಸ್ಕಾಂ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುವುದಾಗಿ ರೈತ ಸಂಘ ಎಚ್ಚರಿಕೆ ನೀಡಿದೆ.
ಬೇಸಿಗೆ ಕಾಲದಲ್ಲಿ ನೀರಿನ ಅಭಾವಕ್ಕೆ ಕರೆಂಟ್ ನಂಬಿಕೊಂಡ ರೈತರಿಗೆ ವಿದ್ಯುತ್ ಕಡಿತ ಎಂಬುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳಪೆ ವೈಂಡಿಂಗ್ ನಿಂದಾಗಿ ಕಡಿಮೆ ವೋಲ್ಟೇಜ್ ಸರಬರಾಜು ಆಗುತ್ತಿದೆ. ಇಂತಹ ಪರಿವರ್ತಕಗಳು ರೈತರ ಮೋಟಾರ್ ಸುಟ್ಟು ಹಾಕಿವೆ. ಬೆಳಿಗ್ಗೆ ಅಳವಡಿಸಿದ್ದ ಟಿಸಿ ಸಂಜೆ ವೇಳೆಗೆ ಸುಟ್ಟು ಹೋಗುತ್ತಿದೆ ಎಂದು ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ದೂರಿದರು.
ಇದನ್ನೂ ಓದಿ: Gubbi News: ಸಂವಿಧಾನದ ಮೂಲಕ ನ್ಯಾಯ ಒದಗಿಸಿಕೊಟ್ಟ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್*
ಕರೆಂಟ್ ಸಮಸ್ಯೆ ಇರುವಾಗ್ಗೆ ಬೆಸ್ಕಾಂ ಪರಿವರ್ತಕ ಸಮಯಕ್ಕೆ ಸರಿಯಾಗಿ ವಿತರಣೆ ಮಾಡು ತ್ತಿಲ್ಲ. ಟಿಸಿ ಬದಲಾವಣೆಗೆ ಹತ್ತು ಹಲವು ದಾಖಲೆ ಕೇಳುವ ಅಧಿಕಾರಿಗಳು ವಾರಗಟ್ಟಲೆ ಅಲೆದಾಡಿಸುತ್ತಾರೆ ಎಂದು ಕಿಡಿಕಾರಿದ ಅವರು ತಾಲ್ಲೂಕಿನಲ್ಲಿ ಎಲ್ಲಾ ಹೋಬಳಿಯಲ್ಲಿ ವಿದ್ಯುತ್ ಸರಬರಾಜು ಉಪ ಕೇಂದ್ರ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ. ರೈತರಿಗೆ ಏಳು ಗಂಟೆ ತ್ರೀ ಫೇಸ್ ಕರೆಂಟ್ ನೀಡುವಂತೆ ಆದೇಶವಿದ್ದರೂ ಎಂದಿಗೂ ಈ ಆದೇಶ ಪಾಲನೆ ಯಾಗಿಲ್ಲ.
ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ಪೋನ್ ಕರೆಗೆ ಸಿಗುತ್ತಿಲ್ಲ. ಸಿಕ್ಕಿದರೂ ಹಾರಿಕೆ ಉತ್ತರ ನೀಡುತ್ತಾರೆ. ಬೇಸಿಗೆಯಲ್ಲಿ ಬೆಂದು ಹೋದ ರೈತರು ಸಿಡಿದು ಬೆಸ್ಕಾಂ ಕಚೇರಿ ಮುತ್ತಿಗೆ ಹಾಕುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಿ ಎಂದು ಎಚ್ಚರಿಕೆ ನೀಡಿದರು.