ಪಾವಗಡ ತಾಲ್ಲೂಕು ಸಾವಿತ್ರಿಬಾಯಿ ಫುಲೆ ಸಂಘದಿಂದ ವೃದ್ಧಾಶ್ರಮದಲ್ಲಿ ಸೇವಾ ಕಾರ್ಯಕ್ರಮ
ಪಾವಗಡ: ಅಕ್ಷರದವ್ವ ಎಂದೇ ಖ್ಯಾತರಾದ ಮಾತೆ ಸಾವಿತ್ರಿಬಾಯಿ ಫುಲೆ ಅವರ 195ನೇ ಜಯಂತಿಯನ್ನು ಪಾವಗಡ ತಾಲ್ಲೂಕು ಸಾವಿತ್ರಿಬಾಯಿ ಫುಲೆ ಸಂಘದ ವತಿಯಿಂದ ಈ ವರ್ಷ ವಿಶೇಷವಾಗಿ ಪಾವಗಡ ತಾಲ್ಲೂಕಿನ ಹತ್ತಿರದ ಆಮಿದಾಲ ಗೊಂದಿಯಲ್ಲಿರುವ ಶ್ರೀ ವೃದ್ಧಾಶ್ರಮದಲ್ಲಿ ಅರ್ಥಪೂರ್ಣವಾಗಿ ಭಾನುವಾರ ಆಚರಿಸಲಾಯಿತು.
ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ವೃದ್ಧಾಶ್ರಮದಲ್ಲಿರುವ ಎಲ್ಲಾ ವೃದ್ಧರಿಗೆ ಒಟ್ಟಾಗಿ ಸಿಹಿ ಊಟದ ಭೋಜನವನ್ನು ಏರ್ಪಡಿಸಲಾಗಿದ್ದು, ಜೊತೆಗೆ ಸೀರೆ, ಪಂಚೆ, ಟವಲ್, ಹಣ್ಣುಹಂಪಲು, ಬ್ರೆಡ್ ಹಾಗೂ ಬಿಸ್ಕೆಟ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾವಗಡ ತಾಲ್ಲೂಕು ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು, ಖಜಾಂಚಿ, ಉಪಾಧ್ಯಕ್ಷರು, ರಾಜ್ಯ ಆಪ್ತಕಾರ್ಯದರ್ಶಿ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.
ಇದಲ್ಲದೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಗಳಾದ ಮಾರುತೇ ಶ್ವರ ಅವರು ಹಾಗೂ ಉಪಾಧ್ಯಕ್ಷರಾದ ಗಂಗಾಧರ್ ಸರ್ ಅವರು ಉಪಸ್ಥಿತರಿದ್ದು ಕಾರ್ಯ ಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ವಿಶೇಷವಾಗಿ ಎಂಪಿ ಶಾಂತಕುಮಾರಿ ಅವರಿಂದ ವಸ್ತ್ರ ವಿತರಣೆ ನೆರವೇರಿಸಲಾಯಿತು. ಸಂಘದ ಸದಸ್ಯರು ದೇಣಿಗೆ ರೂಪದಲ್ಲಿ ಸಹಾಯಧನವನ್ನು ನೀಡುವ ಮೂಲಕ ಸೇವಾ ಮನೋಭಾವವನ್ನು ಪ್ರದರ್ಶಿಸಿದರು.
ವೃದ್ಧಾಶ್ರಮದ ಮುಖ್ಯಸ್ಥರಾದ ಶ್ರೀ ತಿಮ್ಮಾರೆಡ್ಡಿ ಸರ್ ಅವರು ಸಂಘದ ಈ ಸೇವಾ ಕಾರ್ಯ ವನ್ನು ಶ್ಲಾಘಿಸಿ, ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ಎಲ್ಲ ಗಣ್ಯರು ಹಾಗೂ ಸಹಕಾರ ನೀಡಿದವರಿಗೆ ಸಂಘದ ಪರವಾಗಿ ಧನ್ಯವಾದಗಳು ಅರ್ಪಿಸಿದರು.