ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Pravasi Prapancha: ರಾಜ್ಯದ ಮಾದರಿ ಶಿಕ್ಷಣ ಸಂಸ್ಥೆ; ವಿ.ಆರ್. ದೇಶಪಾಂಡೆ ಟ್ರಸ್ಟ್‌ನ ಸಾರ್ಥಕ ಶೈಕ್ಷಣಿಕ ಸೇವೆ

Shri V. R. Deshpande Memorial Trust: ಬೆಳಗಾವಿಯ ಹಳಿಯಾಳದಲ್ಲಿರುವ ವಿ.ಆರ್. ದೇಶಪಾಂಡೆ ಸ್ಮಾರಕ ಶಿಕ್ಷಣ ಸಂಸ್ಥೆ ಇಂದು ರಾಜ್ಯವಷ್ಟೇ ಅಲ್ಲ ರಾಷ್ಟ್ರಮಟ್ಟದಲ್ಲೂ ಹೆಸರುವಾಸಿಯಾಗಿದೆ. ಶಿಕ್ಷಣ, ತರಬೇತಿ ಎಂದರೆ ವಸೂಲಿ ಮತ್ತು ದಂಧೆ ಎಂಬಂತಾಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ಅತ್ಯಂತ ಶಿಸ್ತು ಮತ್ತು ಪ್ರಾಮಾಣಿಕವಾಗಿ ಶೈಕ್ಷಣಿಕ ಕ್ರಾಂತಿಗೆ ವಿಆರ್ಡಿಎಂ ಸಂಸ್ಥೆಯು ಮುನ್ನುಡಿ ಬರೆದಿದೆ. ರಾಜ್ಯದ ಹಿರಿಯ ರಾಜಕಾರಣಿಗಳಾದ ಆರ್ ವಿ ದೇಶಪಾಂಡೆ ಅವರು ತಮ್ಮ ತಂದೆಯ ಸ್ಮರಣಾರ್ಥವಾಗಿ ಈ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಶಿಕ್ಷಣದ ಮೂಲಕವೇ ಹೊಸತನದ ಬೀಜ ಬಿತ್ತಲು ಮುಂದಾಗಿದ್ದಾರೆ.

ವಿ.ಆರ್. ದೇಶಪಾಂಡೆ ಟ್ರಸ್ಟ್‌ನ ಸಾರ್ಥಕ ಶೈಕ್ಷಣಿಕ ಸೇವೆ

ವಿ.ಆರ್. ದೇಶಪಾಂಡೆ ಸ್ಮಾರಕ ಶಿಕ್ಷಣ ಸಂಸ್ಥೆ ಮತ್ತು ಆರ್‌.ವಿ. ದೇಶಪಾಂಡೆ (ಸಂಗ್ರಹ ಚಿತ್ರ) -

Ramesh B
Ramesh B Feb 2, 2026 4:21 PM

ʻಇಲ್ಲಿ ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗ ಗ್ಯಾರಂಟಿʼ ಹೀಗೆ ಮಾತು ಆರಂಭಿಸಿದ್ದು ಹಳಿಯಾಳದಲ್ಲಿನ ವಿ.ಆರ್‌. ದೇಶಪಾಂಡೆ ಟ್ರಸ್ಟ್‌ನ (Shri V. R. Deshpande Memorial Trust) ಆಡಳಿತಾಧಿಕಾರಿ ಪ್ರಕಾಶ್‌ ಪ್ರಭು. ನಮ್ಮಲ್ಲಿ ಸಾಕಷ್ಟು ಅವಕಾಶಗಳಿವೆ, ಎಷ್ಟು ವಿದ್ಯಾರ್ಥಿಗಳು ಬಂದರೂ ನಾವು ಅವರನ್ನು ನಿಭಾಯಿಸಬಲ್ಲೆವು ಎಂದು ಹೇಳುವ ನೂರಾರು ಶಿಕ್ಷಣ ಸಂಸ್ಥೆಗಳ ಪೈಕಿ ದೇಶಪಾಂಡೆ ಖಾಸಗಿ ಐಟಿಐ ಕಾಲೇಜು ವಿಶೇಷವಾಗಿ ಕಾಣಿಸುತ್ತದೆ. ನಮ್ಮಲ್ಲಿ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಆದರೆ ಊಹೆಗೂ ಮೀರಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಎಲ್ಲದಕ್ಕೂ ನಮ್ಮ ಸಂಸ್ಥೆಯಲ್ಲಿನ ಬೋಧನಾ ವಿಷಯಗಳು, 100 ಪ್ರತಿಶತ ಉದ್ಯೋಗ, ದೇಶ-ವಿದೇಶಗಳಲ್ಲೂ ಹೆಸರು ಮಾಡುತ್ತಿರುವ ನಮ್ಮ ವಿದ್ಯಾರ್ಥಿಗಳೇ ಕಾರಣ ಎನ್ನುತ್ತಾರೆ ಪ್ರಕಾಶ್‌ ಪ್ರಭು. ಅದು ಹೇಗೆ ಸಾಧ್ಯ? ಎನ್ನುವವರು ಇಲ್ಲಿನ ವಿಶೇಷಗಳನ್ನೊಮ್ಮೆ ಓದಿಕೊಳ್ಳಿ.

ವೈವಿಧ್ಯ ಕೋರ್ಸ್‌ಗಳು

ಐಟಿಐ ಕೋರ್ಸ್‌ಗಳು ಎಂದಾಗ ಎರಡು ವರ್ಷಗಳ ಕೋರ್ಸ್‌, ಅದೂ ಇಂಗ್ಲಿಷ್‌ನಲ್ಲಿ ಎಲ್ಲಾ ಸಿಲಬಸ್‌ಗಳು ಇರುತ್ತವೆ ಎಂಬುದು ಹಲವರ ಅನಿಸಿಕೆ. ಆದರೆ ಇವುಗಳಿಗೆ ಹೊಸ ಸ್ಪರ್ಶ ನೀಡಿ ಸಂಸ್ಥೆಯಲ್ಲಿ ಕೋರ್ಸ್‌ಗಳು ಆರಂಭವಾದಾಗಿನಿಂದ ಅಂದರೆ ಸತತ ಎರಡು ದಶಕಗಳಿಂದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆ, ಹಳಿಯಾಳ ಸಾಕಷ್ಟು ಹೆಸರು ಮಾಡಿದೆ. ಇಲ್ಲಿ ಒಂದು ಮತ್ತು ಎರಡು ವರ್ಷಗಳ ವೈವಿಧ್ಯಮಯ ಕೋರ್ಸ್‌ಗಳಿವೆ.

Shri V. R. Deshpande Memorial Trust

ಎರಡು ವರ್ಷದ ಕೋರ್ಸ್‌ಗಳು

ಎಲೆಕ್ಟ್ರಿಕಲ್, ಫಿಟ್ಟರ್‌, ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್, ಟೆಕ್ನಿಷಿಯನ್‌, ಮೆಕ್ಯಾನಿಕ್‌ ಮೋಟಾರ್‌ ವೆಹಿಕಲ್‌.

ಲಂಬಾಣಿ ಮಹಿಳೆಯರ ಬದುಕಿನ ʻಆಶಾʼಕಿರಣ; ಜಾಗತಿಕ ಮಾರುಕಟ್ಟೆಯಲ್ಲಿ ಬಂಜಾರ ಕಸೂತಿ

ಒಂದು ವರ್ಷದ ಕೋರ್ಸ್‌ಗಳು

ವೆಲ್ಡರ್‌, ಸೋಲಾರ್‌ ಟೆಕ್ನಿಷಿಯನ್‌, ಮೆಕ್ಯಾನಿಕ್‌ ಆಟೋ ಬಾಡಿ ರಿಪೇರ್‌, ಮೆಕ್ಯಾನಿಕ್‌ ಆಟೋ ಬಾಡಿ ಪೇಂಟಿಂಗ್‌, ವಿದ್ಯಾರ್ಥಿನಿಯರಿಗಾಗಿ ಸೀಮಿತವಾಗಿರಿಸಲಾದ ಡ್ರೆಸ್‌ ಮೇಕಿಂಗ್‌ ಕೋರ್ಸ್‌ ಸಹ ಸಾಕಷ್ಟು ಬೇಡಿಕೆಯನ್ನು ಗಳಿಸಿವೆ.

ಮೆಕ್ಯಾನಿಕ್‌ ಆಟೋ ಬಾಡಿ ರಿಪೇರ್‌, ಮೆಕ್ಯಾನಿಕ್‌ ಆಟೋ ಬಾಡಿ ಪೇಂಟಿಂಗ್‌, ಎಮ್‌ಎಮ್‌ವಿ ಹಾಗೂ ಫಿಟ್ಟರ್‌ ವೃತ್ತಿಶಿಕ್ಷಣಗಳು ಪ್ರತಿಷ್ಠಿತ ಟೊಯೋಟಾ ಕಂಪನಿಯ ಜತೆಗೆ ಟೈ ಅಪ್ ಆಗಿ ಆನ್‌ ಜಾಬ್‌ ಟ್ರೈನಿಂಗ್‌ ನೀಡಲಾಗುತ್ತಿದೆ. ವಿಶೇಷವೆಂದರೆ ಈ ಎಲ್ಲಾ ಕೋರ್ಸ್‌ಗಳ ಪ್ರಾಯೋಗಿಕ ಕಲಿಕೆಗಾಗಿ ನೂತನ ಮತ್ತು ಸದ್ಯ ಹೆಸರಾಂತ ಕಂಪನಿಗಳಲ್ಲಿ ಬಳಸಲಾಗುತ್ತಿರುವ ಉಪಕರಣಗಳನ್ನು ಬಳಸಿಯೇ ತರಬೇತಿ ನೀಡಲಾಗುತ್ತಿದೆ.

Shri V. R. Deshpande Memorial Trust training

ನುರಿತ ಸಿಬ್ಬಂದಿ ಮತ್ತು ಕಾಳಜಿ

ಈ ಶಿಕ್ಷಣ ಸಂಸ್ಥೆಯನ್ನು ನೋಡಿದ ಮೇಲೆ ನೀವು ಯಥಾ ಗುರು ತಥಾ ಶಿಷ್ಯ ಎನ್ನುತ್ತೀರಿ. ಯಾಕೆಂದರೆ ಇಲ್ಲಿನ ಪ್ರತಿ ಉಪನ್ಯಾಸಕರೂ ದಶಕಗಳ ಕಾಲ ಆಯಾ ಕೋರ್ಸಿನ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು. ಇವರನ್ನು ಹಾಗೇ ಮಾತಿಗೆಳೆದು ʼಸರ್‌ ಇಲ್ಲಿ ತರಬೇತಿ ಪಡೆಯಲು ಬರುವ ವಿದ್ಯಾರ್ಥಿಗಳಿಗೆ ಭಾಷೆಯ ತೊಡಕುಗಳಿದ್ದರೆ ಅವರಿಗೆ ಅರ್ಥವಾಗುವಂತೆ ಮಾಡಲು ಏನು ಮಾಡುತ್ತೀರಿ?ʼ ಎಂದು ಕೇಳಿದರೆ ಅದಕ್ಕೆ ಪ್ರತಿ ತರಬೇತುದಾರರಿಂದಲೂ ಸಿಗುವ ಉತ್ತರ ʼಅವರವರ ಭಾಷೆಯಲ್ಲಿ ತಿಳಿಸಿ ಹೇಳುತ್ತೇವೆ. ಸಂವಹನಕ್ಕೆ ಎಷ್ಟುಬೇಕೋ ಅಷ್ಟು ಇಂಗ್ಲಿಷ್‌ ಅನ್ನು ನಾವೆ ಹೇಳಿಕೊಡುತ್ತೇವೆʼ. ಇದು ಈ ಸಂಸ್ಥೆಯ ತರಬೇತುದಾರರಿಗಿರುವ ಭಾಷಾ ಜ್ಞಾನ. ಇಲ್ಲಿಗೆ ಬರುವ ಸಾಕಷ್ಟು ಮಕ್ಕಳು ಕಲಿಯುವ ಹಸಿವಿನಿಂದ ಸಂಸ್ಥೆಗೆ ಬರುತ್ತಾರೆ. ಹಾಗಾಗಿ 100 ಪ್ರತಿಶತ ಪ್ರಾಯೋಗಿಕ ಕಲಿಕೆ ಮತ್ತು ಅಗತ್ಯ ಸಂವಹನ ಕಲೆಯನ್ನು ನಾವು ಕಲಿಸುತ್ತೇವೆ ಎಂಬುದು ಇಲ್ಲಿನ ತರಬೇತುದಾರರ ಆತ್ಮವಿಶ್ವಾಸದ ಮಾತು.

ಐಟಿಐ ರುಡ್‌ಸೆಟ್‌

ಇದು ಒಂದು ತಿಂಗಳ ಕೋರ್ಸ್‌. ಈಗ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಏನೇನೋ ಪ್ರಯತ್ನಗಳನ್ನು ಮಾಡಲಾಗುತ್ತದೆ. ಆದರೆ, ಪ್ರತಿ ತಿಂಗಳೂ ಒಂದು ಹೊಸ ಬ್ಯಾಚ್‌ನ ವಿದ್ಯಾರ್ಥಿಗಳನ್ನು ನೋಡುವ ಈ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಎಂದಿಗೂ ಕಮ್ಮಿಯಾಗಿಲ್ಲ. ಬದಲಿಗೆ ಇರುವ ಸೀಟ್‌ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾತಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಪ್ರತಿ ಬಾರಿಯೂ ಸೀಟ್‌ ಸಿಗದೆ ನಿರಾಶೆಗೊಳ್ಳುವ ಅರ್ಜಿದಾರರನ್ನು ಸಂಬಾಳಿಸುವುದೇ ಕಷ್ಟವಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈಗಿರುವ ಸೀಟುಗಳ ಸಂಖ್ಯೆ ಹೆಚ್ಚಿಸುವ ಅಗತ್ಯವಿದೆ ಎನ್ನುತ್ತಾರೆ ಆಡಳಿತಾಧಿಕಾರಿ ಪ್ರಕಾಶ್‌ ಪ್ರಭು.

Shri V. R. Deshpande Memorial Trust Haliyala

ಉಚಿತ ಊಟ-ವಸತಿ

ರುಡ್ಸೆಟ್ ಅಡಿಯಲ್ಲಿ ಹತ್ತಾರು ಕೋರ್ಸ್‌ಗಳಿದ್ದು, ರಾಜ್ಯದ ಹಲವು ಭಾಗಗಳಿಂದ ಸಂಸ್ಥೆಯಲ್ಲಿ ತರಬೇತಿ ಪಡೆಯಲು ವಿದ್ಯಾರ್ಥಿಗಳು ಬರುತ್ತಾರೆ. ಇವರಿಗೆ ಕ್ಯಾಂಪಸ್‌ನಲ್ಲಿ ಉಳಿಯಲು ಉಚಿತ ಮತ್ತು ಸುಸಜ್ಜಿತ ಲೇಡಿಸ್‌ ಮತ್ತು ಬಾಯ್ಸ್‌ ವಸತಿ ನಿಲಯವಿದೆ. ಮನೆಯನ್ನೇ ನೆನಪಿಸುವ ಅಡುಗೆಯನ್ನು ಮಾಡಿ ಬಡಿಸಲು ನುರಿತ ಸಿಬ್ಬಂದಿ ಇದ್ದಾರೆ. ಒಂದೇ ಕ್ಯಾಂಪಸ್‌ನಲ್ಲಿ ಉಳಿದು ಒಂದು ತಿಂಗಳು ತರಬೇತಿ ಪಡೆದರೆ ಉದ್ಯೋಗ ಖಚಿತ ಎಂಬುದು ಸಂಸ್ಥೆಯತ್ತ ಆಕರ್ಷಣೆಗೆ ಕಾರಣವಾಗಿದೆ.

ಸಿಬ್ಬಂದಿ ಮಕ್ಕಳಿಗೂ ಉಚಿತ ಶಿಕ್ಷಣ

ಮನೆಯ ಚಿಂತೆ ಸಿಬ್ಬಂದಿಗೆ ತಾಕ ಕೂಡದು. ಅವರ ಮಕ್ಕಳ ಶಿಕ್ಷಣವೂ ಸುಗಮವಾಗಬೇಕು. ಅವರಿಗೆ ನಮ್ಮದೇ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡೋಣ. ಇದರಿಂದ ತಮ್ಮ ಮಕ್ಕಳೂ ಸಂಸ್ಥೆಯಲ್ಲಿ ಓದುತ್ತಿದ್ದಾರೆ ಎನ್ನುವ ಮನೋಭಾವ ಅವರಲ್ಲಿ ಸದಾ ಇರುತ್ತದೆ. ಮತ್ತಷ್ಟು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಾರೆ. ಉಳಿದ ಮಕ್ಕಳಿಗೂ ಇದರಿಂದ ಉತ್ತಮ ಶಿಕ್ಷಣ ದೊರೆಯುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ವಿ ದೇಶಪಾಂಡೆ ನಿರ್ಧರಿಸಿದ್ದರು. ಇದನ್ನು ಜಾರಿಗೂ ತಂದಿದ್ದಾರೆ. ಇದು ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಿದ್ದು, ಊಹೆಗೂ ನಿಲುಕದ ಯಶಸ್ಸನ್ನು ತಂದಿದೆ. ಸದ್ಯ ಸಂಸ್ಥೆಯ ಸಿಬ್ಬಂದಿ ಮಕ್ಕಳೂ ಇದೇ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.

CBD

ಪ್ರತಿಷ್ಠಿತ ಕಂಪನಿಗಳಲ್ಲಿ ಅಲುಮ್ನಿಗಳು

ಅಲುಮ್ನಿಗಳೇ ಈ ಸಂಸ್ಥೆಯ ಪ್ರಚಾರಕೊಂಡಿಗಳು. ಹೌದು, ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಹಲವು ಹಳೆಯ ವಿದ್ಯಾರ್ಥಿಗಳು CCS, INDO-MIM, ABS, ALTIGREEN, BOSCH, ORIONE, HONDA, TOYOTA, ADVAITH HYUNDAI ಸೇರಿ ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ದೇಶ-ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ವಂತ ಉದ್ಯೋಗ ಕಂಡುಕೊಂಡು ತಿಂಗಳಿಗೆ ಲಕ್ಷಗಟ್ಟಲೆ ದುಡಿಯುತ್ತಿರುವವರೂ ಇದ್ದಾರೆ. ಇಂಡಿಯಾ ಸ್ಕಿಲ್ಸ್‌ ಸ್ಪರ್ಧೆಯಲ್ಲಿ ಈ ಸಂಸ್ಥೆಯ ಸಾಕಷ್ಟು ದಾಖಲೆಗಳಿವೆ. ಅವರ ಈ ಸಾಧನೆಯಿಂದ ಸಂಸ್ಥೆ ಸದ್ದು ಮಾಡುತ್ತಿದೆ. ದೇಶಪಾಂಡೆ ಖಾಸಗಿ ಐಟಿಐ ಸಂಸ್ಥೆಯ ವಿದ್ಯಾರ್ಥಿಗಳು ಎಂದರೆ ಇವರಿಗೆ ಕೆಲಸದ ಪರಿಪೂರ್ಣ ಅರಿವು ಇರುತ್ತದೆ ಎಂಬುದು ಹಲವು ಕಂಪನಿ ಅಧಿಕಾರಿಗಳ ಮಾತು.

ಮಹಿಳೆ-ಪುರುಷ ಸಮಾನರು ಎಂಬುದು ಭಾಷಣಕ್ಕಷ್ಟೇ ಸೀಮಿತವಾಗಬಾರದು: ಆಶಾ ಪಾಟೀಲ್‌

ಹಳಿಯಾಳದಲ್ಲಿ ಏಕೈಕ ಸಿಬಿಎಸ್‌ಸಿ ಸ್ಕೂಲ್‌

ಹಳಿಯಾಳದ ಸುತ್ತಲಿನ ಸುಮಾರು 700 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ನರ್ಸರಿಯಿಂದ ಹತ್ತನೆಯ ತರಗತಿಯವರೆಗೂ ಕಲಿಯಲು ಇಲ್ಲಿ ಅವಕಾಶವಿದೆ. ಸುಸಜ್ಜಿತ ಕೊಠಡಿಗಳು, ಅನುಭವಿ ಶಿಕ್ಷಕರು, ಉತ್ತಮ ವಾತಾವರಣ, ಎನ್‌ಎಸ್‌ಎಸ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌, ಕಬ್ಸ್‌ ಮತ್ತು ಬುಲ್‌ಬುಲ್ಸ್‌ ಕ್ಯಾಂಪ್‌ಗಳು ಜತೆಗೆ ದೇಶ ಸುತ್ತು ಕೋಶ ಓದು ಎನ್ನುವುದನ್ನು ಅಳವಡಿಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಲು ನಿಯಮಿತವಾಗಿ ಪ್ರವಾಸವನ್ನೂ ಮಕ್ಕಳಿಗೆ ಮಾಡಿಸುತ್ತಾರೆ. ಉತ್ತಮ ಶಿಕ್ಷಣ, ವಾತಾವರಣ ಮತ್ತು ಸಿಬ್ಬಂದಿಯಿಂದಾಗಿ ಶಾಲೆಯಲ್ಲಿ ಪ್ರತಿವರ್ಷ ನೂರಕ್ಕೆ ನೂರು ಪ್ರತಿಶತ ಸೀಟುಗಳು ತುಂಬಿರುತ್ತವೆ. ಹಾಗಾಗಿ ಸಂಸ್ಥೆಯನ್ನು ಮತ್ತಷ್ಟು ವಿಶಾಲವಾಗಿಸಲು ಯೋಚನೆಗಳು ನಡೆದಿದ್ದು, ಸದ್ಯ ಸಿಬಿಎಸ್‌ಸಿ ಶಾಲೆಗೆ ನೂತನ ಬೃಹತ್‌ ಕಟ್ಟಡ ನಿರ್ಮಾಣ ಹಂತದಲ್ಲಿದೆ.

image

ಆರ್‌.ವಿ. ದೇಶಪಾಂಡೆ ರಾಷ್ಟ್ರೀಯ ಮಿಲಿಟರಿ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದವರು. ಹಾಗಾಗಿ ಅವರಲ್ಲಿ ಪ್ರತಿಕ್ಷಣವೂ ಶಿಸ್ತು ಎದ್ದು ಕಾಣುತ್ತದೆ. ಅದರಲ್ಲೂ ವಿಶೇಷವಾಗಿ ಶಿಕ್ಷಣದ ಬಗ್ಗೆ ಅವರಿಗೆ ತುಂಬಾ ಒಲವು. ಹೊಸತನದ ಅನ್ವೇಷಣೆಯಲ್ಲೇ ಇರುತ್ತಾರೆ. ಅವರು ಸಂಸ್ಥೆಯ ಸಾರಥ್ಯವನ್ನು ನನಗೆ ನೀಡಿದರು. ಹಿಡಿದ ಕೆಲಸವನ್ನು ಬಿಡದ ವ್ಯಕ್ತಿತ್ವ ಅವರದು. ಎಂಥ ಬ್ಯುಸಿ ಸ್ಕೆಡ್ಯೂಲ್‌ಗಳಲ್ಲೂ ಅವರ ಪ್ರಥಮ ಆದ್ಯತೆ ಸಂಸ್ಥೆಯ ಕುರಿತಾಗಿಯೇ ಇರುತ್ತದೆ. ಯಾವುದೇ ಸಮಯದಲ್ಲೂ ಸಹಕಾರ ನೀಡುತ್ತಾರೆ. ಅವರ ಮಕ್ಕಳೂ ಕೈಗಾರಿಕೋದ್ಯಮಿಗಳು. ಪ್ರತಿಷ್ಠಿತ ಕಂಪನಿಗಳ ಜತೆಗೆ ಸಂಪರ್ಕ ಕಲ್ಪಿಸಿಕೊಡುತ್ತಾರೆ. ಹೊಸ ಕಂಪನಿಗಳು ಭಾರತಕ್ಕೆ ಬಂದರೂ ಅವರೊಂದಿಗೆ ಟೈಅಪ್ ಮಾಡಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ.

- ಪ್ರಕಾಶ್‌ ಪ್ರಭು, ವಿ.ಆರ್‌. ದೇಶಪಾಂಡೆ ಟ್ರಸ್ಟ್‌ನ ಆಡಳಿತಾಧಿಕಾರಿ
image

ದೇಶಪಾಂಡೆ ಅವರದ್ದು ದೂರದೃಷ್ಟಿಯ ವ್ಯಕ್ತಿತ್ವ. ಅವರಲ್ಲಿನ ಸಾಮಾಜಿಕ ಕಳಕಳಿ ಶ್ಲಾಘನಾರ್ಹ. ಸಾಮಾನ್ಯ ಜನರು ಸಂಪರ್ಕಿಸಲು ಸುಲಭವಾಗಿ ಸಿಗುವ ವ್ಯಕ್ತಿ. ಜನರಲ್ಲಿ ಇರುವ ಸಮಸ್ಯೆಗಳು, ಅವರಿಗೆ ಈಗ ಏನನ್ನು ನೀಡಬೇಕು, ಯಾವುದರಿಂದ ಅವರ ಜೀವನ ಮಟ್ಟ ಸುಧಾರಿಸಬಹುದು ಎನ್ನುವುದು ಅವರಿಗೆ ತುಂಬಾ ಚೆನ್ನಾಗಿ ಗೊತ್ತಿದೆ. ಹಾಗಾಗಿ ಉದ್ಯೋಗ ವಿದ್ಯಾನಗರದ ಈ ಕ್ಯಾಂಪಸ್‌ನಲ್ಲಿ ಹೆಚ್ಚಿನ ವೃತ್ತಿಪರ ಕೋರ್ಸ್‌ಗಳನ್ನು ಆರಂಭಿಸಿದ್ದಾರೆ. ದೇಶಪಾಂಡೆ ಖಾಸಗಿ ಐಟಿಐ ಕಾಲೇಜು, ದೇಶಪಾಂಡೆ ಕೆನರ ರೂರಲ್‌ ಸೆಲ್ಫ್‌ ಎಂಪ್ಲಾಯ್‌ಮೆಂಟ್‌, ವಿಶ್ವನಾಥ ಇನ್ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಕಾಲೇಜುಗಳು ಜೀವಂತ ಉದಾಹರಣೆಯಂತಿವೆ. ಇವು ಇಲ್ಲಿನ ಅಗತ್ಯಗಳಾಗಿದ್ದವು. ನಗರದಲ್ಲಿನ ಜನರಂತೆ ಉನ್ನತ ಹುದ್ದೆಗಳಲ್ಲಿ ಹಳಿಯಾಳದಂಥ ಹಳ್ಳಿಯ ಜನರೂ ಇರಬೇಕು ಎನ್ನುವುದು ಅವರ ಆಸೆ.

- ದಿನೇಶ್‌ ಆರ್‌. ನಾಯ್ಕ್‌, ಪ್ರಾಂಶುಪಾಲರು ದೇಶಪಾಂಡೆ ಖಾಸಗಿ ಐಟಿಐ ಕಾಲೇಜು