Murder Case: 3ನೇ ಹೆಂಡ್ತಿಯನ್ನು ಕೊಂದು ಶವವನ್ನು ಲಗೇಜ್ ಎಂದು ಬಸ್ನಲ್ಲಿ ಹಾಕಿದ್ದ ಭೂಪ; 23 ವರ್ಷಗಳ ಬಳಿಕ ಅರೆಸ್ಟ್!
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಹಾಲದಾಳ ಗ್ರಾಮದ ವ್ಯಕ್ತಿ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ. 2002 ರಲ್ಲಿ ವೈಯಕ್ತಿಕ ಜಗಳಕ್ಕೆ ಪತ್ನಿಯನ್ನು ಕೊಚ್ಚಿ ಕೊಂದಿದ್ದ. ಬಳಿಕ ಗೋಣಿ ಚೀಲದಲ್ಲಿ ಶವ ತುಂಬಿ, ಲಗೇಜ್ ಎಂದು ನಂಬಿಸಿ, ಸರ್ಕಾರಿ ಬಸ್ನಲ್ಲಿ ಕಳುಹಿಸಿದ್ದ. ತಲೆಮರೆಸಿಕೊಂಡಿದ್ದ ಆರೋಪಿ ಈಗ ಸಿಕ್ಕಿಬಿದ್ದಿದ್ದಾನೆ.


ಕೊಪ್ಪಳ: ಮೂರನೇ ಹೆಂಡತಿಯನ್ನು ಕೊಂದು (Murder Case) ತಲೆಮರೆಸಿಕೊಂಡಿದ್ದ ಗಂಡನನ್ನು ಬರೋಬ್ಬರಿ 23 ವರ್ಷಗಳ ಬಳಿಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪತ್ನಿಯನ್ನು ಕೊಂದ ಬಳಿಕ ಮೃತದೇಹವನ್ನು ಗೋಣಿಚೀಲದಲ್ಲಿ ಹಾಕಿ ಸಾರಿಗೆ ಬಸ್ನಲ್ಲಿ ಲಗೇಜ್ ಎಂದು ಆರೋಪಿ ಕಳುಹಿಸಿದ್ದ. ಇದೀಗ ಹಂತಕ ಪತಿಯನ್ನು ಗಂಗಾವತಿ ನಗರ ಠಾಣೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಹಾಲದಾಳ ಗ್ರಾಮದ ಹನುಮಂತ (75) ಬಂಧಿತ ಆರೋಪಿ. ಈತ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಮದುವೆಯಾದ ಮೊದಲ ಪತ್ನಿ ಮೃತಪಟ್ಟ ನಂತರ ಎರಡನೇ ಮದುವೆಯಾಗಿದ್ದ. ಆಕೆ ಸಹ ಜಗಳವಾಡಿ ಈತನನ್ನು ಬಿಟ್ಟು ಹೋಗಿದ್ದರು.
ಬಳಿಕ ಸರ್ಕಾರಿ ನೌಕರ ಎಂದು ಪರಿಚಯಿಸಿಕೊಂಡು ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಮಹಿಳೆಯೊಬ್ಬರನ್ನು ಮೂರನೇ ಮದುವೆಯಾಗಿ ಗಂಗಾವತಿ ನಗರದ ಲಕ್ಷ್ಮಿಕ್ಯಾಂಪ್ನಲ್ಲಿ ವಾಸವಾಗಿದ್ದ. 2002 ರಲ್ಲಿ ವೈಯಕ್ತಿಕ ಜಗಳಕ್ಕೆ ಆಕೆಯನ್ನು ಕೊಚ್ಚಿ ಕೊಂದಿದ್ದ. ಗೋಣಿ ಚೀಲದಲ್ಲಿ ಶವವನ್ನು ತುಂಬಿ ಲಗೇಜ್ ಎಂದು ನಂಬಿಸಿ, ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸರ್ಕಾರ ಬಸ್ನಲ್ಲಿ ಕಳುಹಿಸಿದ್ದ. ಈ ಚೀಲದ ಬಗ್ಗೆ ಅನುಮಾನಗೊಂಡ ಚಾಲಕ ಹಾಗೂ ನಿರ್ವಾಹಕರು ನೇರವಾಗಿ ಬಸ್ ಅನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ದೂರು ನೀಡಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಊರುಬಿಟ್ಟು ಪರಾರಿಯಾಗಿದ್ದ. ಅಂದಿನಿಂದ ಅಲೆಮಾರಿ ಜೀವನ ನಡೆಸುತ್ತಿದ್ದ. ಕಳೆದ 7 - 8 ತಿಂಗಳಿಂದ ತನ್ನ ಸ್ವಂತ ಊರು ಹಾಲದಾಳಕ್ಕೆ ಬಂದಿದ್ದ. ಖಚಿತ ಮಾಹಿತಿ ಪಡೆದ ಗಂಗಾವತಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಹಾಗೂ ನಗರ ಠಾಣೆ ಪಿಐ ಪ್ರಕಾಶ್ ಮಾಳಿ ನೇತೃತ್ವದ ತಂಡ, ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಎಎಸ್ಐ ಅತಿಕ್ ಅಹ್ಮದ್, ಸಿಎಚ್ಸಿ ಸುಭಾಷಚಂದ್ರಗೌಡ ಪಾಟೀಲ್, ಪಿಸಿ ಯಮನೂರಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಸುದ್ದಿಯನ್ನೂ ಓದಿ | Triple Murder Case: ಕೊಲೆಯಾದ ರೌಡಿಶೀಟರ್ ಪತ್ನಿಯ ಶಪಥ ಈಡೇರಿಸಲು ತ್ರಿವಳಿ ಕೊಲೆ! 10 ಆರೋಪಿಗಳ ಸೆರೆ
ಬೆಂಗಳೂರಿನಲ್ಲಿ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ 2 ಕೋಟಿ ರೂ. ದರೋಡೆ
ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಗಲೇ ವ್ಯಕ್ತಿಯ ಕುತ್ತಿಗೆಗೆ ಚಾಕುವಿನಿಂದ ಇರಿಯುವ ಭಯ ಹುಟ್ಟಿಸಿ ಎರಡು ಕೋಟಿ ರೂಪಾಯಿ ದರೋಡೆ (Bengaluru Crime news) ಮಾಡಿರುವ ಘಟನೆ ಜೂನ್ 25ರಂದು ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರಂನ ಎಂಎಸ್ ಪಾಳ್ಯದಲ್ಲಿ ಈ ಘಟನೆ ನಡೆದಿದೆ. USDTಗೆ ಹಣ ಕನ್ವರ್ಟ್ ಮಾಡಿಸಿಕೊಳ್ಳಲು ಬಂದಾಗ ಖದೀಮರು ಎರಡು ಕೋಟಿ ರೂಪಾಯಿ (Robbery case) ದೋಚಿದ್ದಾರೆ. ಕೆಂಗೇರಿ ನಿವಾಸಿ ಶ್ರೀಹರ್ಷ ಎಂಬವರು ಎರಡು ಕೋಟಿ ರೂಪಾಯಿ ಹಣ ಕಳೆದುಕೊಂಡ ವ್ಯಕ್ತಿ.
ಶ್ರೀಹರ್ಷ ಅವರ ಹೊಸ ಕಂಪನಿಗೆ ಜಪಾನ್ನಿಂದ ಒಂದು ಯಂತ್ರ ತರಿಸಿಕೊಳ್ಳಲು ಇತ್ತು. ಹೀಗಾಗಿ ಯುಎಸ್ಡಿಟಿಗೆ ಹಣ ಕನ್ವರ್ಟ್ ಮಾಡಿಸಲು ಶ್ರೀ ಹರ್ಷ ಮುಂದಾಗಿದ್ದರು. ಈ ವೇಳೆ ಸ್ನೇಹಿತರ ಮೂಲಕ ಬೆಂಜಮಿನ್ ಎಂಬಾತ ಪರಿಚಯ ಆಗಿದ್ದಾನೆ. ಜೂನ್ 25ರ ಮಧ್ಯಾಹ್ನ 3 ಗಂಟೆಗೆ ಶ್ರೀಹರ್ಷನನ್ನು ಬೆಂಜಮಿನ್ ಭೇಟಿ ಆಗಿದ್ದ. ಎ.ಕೆ ಎಂಟರ್ಪ್ರೈಸಸ್ ಶಾಪ್ನಲ್ಲಿ ಶ್ರೀಹರ್ಷ ಮತ್ತು ಬೆಂಜಮಿನ್ ಭೇಟಿಯಾಗಿದ್ದರು. ಬಳಿಕ ಬೆಂಜಮಿನ್ ಮತ್ತು ಇಬ್ಬರು ಸ್ನೇಹಿತರು ಹಣ ಎಣಿಕೆ ಮಾಡುತ್ತಿದ್ದರು.
ಈ ವೇಳೆ 6-7 ಅಪರಿಚಿತರ ಗುಂಪು ಏಕಾಏಕಿ ಶಾಪ್ಗೆ ನುಗ್ಗಿದೆ. ಚಾಕುವಿನಿಂದ ಶ್ರೀಹರ್ಷ ಮೇಲೆ ಹಲ್ಲೆ ನಡೆಸಿದ್ದಾರೆ. ಶ್ರೀಹರ್ಷ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ಎರಡು ಕೋಟಿ ಹಣ ದರೋಡೆ ಮಾಡಿದ್ದಾರೆ. ಎರಡು ಕೋಟಿ ರೂ. ನಗದು ಹಣವನ್ನು ಚೀಲದಲ್ಲಿ ತುಂಬಿಕೊಂಡು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಶಾಪ್ನಲ್ಲಿದ್ದ ಶ್ರೀಹರ್ಷ ಮತ್ತು ಬೆಂಜಮಿನ್ ಹಾಗೂ ಅವರ ಸ್ನೇಹಿತರನ್ನು ಕೂಡಿಹಾಕಿ ಪರಾರಿಯಾಗಿದ್ದಾರೆ. ಶಾಪ್ನಿಂದ ಹೊರಬಂದ ಬಳಿಕ ಬೆಂಜಮೀನ್ ಮತ್ತು ಸ್ನೇಹಿತರು ಕೂಡ ನಾಪತ್ತೆಯಾಗಿದ್ದಾರೆ.
ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಶ್ರೀಹರ್ಷ ದೂರು ನೀಡಿದ್ದಾರೆ. ದರೋಡೆ ಕುರಿತಂತೆ ಬೆಂಜಮಿನ್ ಮತ್ತು ಸ್ನೇಹಿತರ ಕೈವಾಡವನ್ನು ಶಂಕಿಸಲಾಗಿದೆ. ಇವರ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Police Firing: ದಿವ್ಯಾಂಗ ಮಹಿಳೆಗೆ ಲೈಂಗಿಕ ದೌರ್ಜನ್ಯ, ದರೋಡೆ: ಆರೋಪಿಯ ಕಾಲಿಗೆ ಗುಂಡು