ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rakshak Bullet: ವಿನಯ್‌ ಗೌಡ, ರಜತ್‌ ನಂತರ ಇನ್ನೊಬ್ಬ ಬಿಗ್‌ ಬಾಸ್‌ ಸ್ಪರ್ಧಿಗೂ ಕಾನೂನು ಸಂಕಷ್ಟ, ನಾಡದೇವಿಗೆ ಅವಹೇಳನ ದೂರು

ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ರಕ್ಷಕ್‌ ಹುಡುಗಿಯನ್ನು ಹೊಗಳುವ ಭರದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ರಕ್ಷಕ್ ಬುಲೆಟ್ ವಿರುದ್ಧ ಇಂದು ಹಿಂದೂ ಕಾರ್ಯಕರ್ತ ಮಹೇಶ್ ಎಂಬವರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ದೂರು ಸಲ್ಲಿಸಿದ್ದಾರೆ.

ಇನ್ನೊಬ್ಬ ಬಿಗ್‌ ಬಾಸ್‌ ಸ್ಪರ್ಧಿಗೂ ಸಂಕಷ್ಟ, ನಾಡದೇವಿಗೆ ಅವಹೇಳನ ದೂರು

ರಕ್ಷಕ್‌ ಬುಲೆಟ್

ಹರೀಶ್‌ ಕೇರ ಹರೀಶ್‌ ಕೇರ Mar 26, 2025 1:19 PM

ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ (Rakshak Bullet) ಅವರು ನಾಡದೇವಿ ಚಾಮುಂಡೇಶ್ವರಿಗೆ (Chamundeshwari) ಅವಹೇಳನ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ರಕ್ಷಕ್ ಬುಲೆಟ್ ವಿರುದ್ಧ ದೂರು ದಾಖಲಾಗಿದೆ. ಬಿಗ್‌ ಬಾಸ್‌ (bigg boss) ಸ್ಪರ್ಧಿಗಳಾಗಿದ್ದ ವಿನಯ್‌ ಗೌಡ ಹಾಗೂ ರಜತ್‌ ಈಗಾಗಲೇ ಲಾಂಗ್‌ ಹಿಡಿದು ರೀಲ್ಸ್‌ ಮಾಡಿದ ಕಾರಣದಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ರಕ್ಷಕ್‌ ಬುಲೆಟ್‌ಗೂ ಕಾನೂನು ಕುಣಿಕೆ ಬಿಗಿಯಲು ಸಜ್ಜಾಗಿದೆ.

ಹಿಂದೂ ಸಂಘಟನೆಗಳು ಇಂದು ರಕ್ಷಕ್ ಬುಲೆಟ್‌ ವಿರುದ್ಧ ದೂರು ನೀಡಿವೆ. ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ರಕ್ಷಕ್‌ ಹುಡುಗಿಯನ್ನು ಹೊಗಳುವ ಭರದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ರಕ್ಷಕ್ ಬುಲೆಟ್ ವಿರುದ್ಧ ಇಂದು ಹಿಂದೂ ಕಾರ್ಯಕರ್ತ ಮಹೇಶ್ ಎಂಬವರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ದೂರು ಸಲ್ಲಿಸಿದ್ದಾರೆ.

ಇತ್ತೀಚೆಗೆ ಖಾಸಗಿ ವಾಹಿನಿ ರಿಯಾಲಿಟಿ ಶೋನಲ್ಲಿ ರಕ್ಷಕ್‌ ಬುಲೆಟ್ ಅವರು ಸಹಸ್ಪರ್ಧಿ, ಪಕ್ಕದಲ್ಲಿದ್ದ ಹುಡುಗಿಯನ್ನು ಹೊಗಳುವ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ರಕ್ಷಕ್ ಬುಲೆಟ್ ಅವರ ಅವಹೇಳನ ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ. ವೇದಿಕೆಯಲ್ಲಿ ರಕ್ಷಕ್ ಬುಲೆಟ್‌ ಅವರು ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಬುಲ್ ಬುಲ್ ಸಿನಿಮಾದ ದೃಶ್ಯವನ್ನು ಕಾಪಿ ಮಾಡಲು ಹೋಗಿದ್ದಾರೆ. ಈ ವೇಳೆ ಪಕ್ಕದಲ್ಲಿದ್ದ ಹುಡುಗಿಯನ್ನು ಹೊಗಳುವ ಭರದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ ಎನ್ನಲಾಗಿದೆ.

ದೂರಿನಲ್ಲಿ ಏನಿದೆ?

"ರಕ್ಷಕ್ ಬುಲೆಟ್ ಎಂಬ ಹೊಸ ಕಲಾವಿದ ಎಂದು ಗುರುತಿಸಲ್ಪಡುವ ವ್ಯಕ್ತಿಯು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಅವಹೇಳನ ಮತ್ತು ಹಿಂದೂ ಧರ್ಮದ ಅತ್ಯುನ್ನತ ಮಾತೃಸ್ವರೂಪಿ ದೇವರಾದ ತಾಯಿ ಚಾಮುಂಡೇಶ್ವರಿಯ ಅವಹೇಳನವನ್ನು ಕಾರ್ಯಕ್ರಮ ಒಂದರಲ್ಲಿ ಸಾರ್ವಜನಿಕವಾಗಿ ಮಾಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುತ್ತದೆ. ಕಾನೂನಿನ ಮುಂದೆ ಎಲ್ಲರು ಸಾರ್ವಜನಿಕವಾಗಿ ಸಮಾನರು ಎಂಬ ವಿಷಯ ಇದೀಗ ತಾನೆ ಎಂದುಕೊಂಡಿರುವ ಯುವಕನಿಗೆ ಅರಿವು ಮೂಡಿಸುವಂತಾಗಬೇಕು. ಸಮಸ್ತ ಹಿಂದೂ ಸಮಾಜದ ಪರವಾಗಿ ನಾವಿದನ್ನು ಖಂಡಿಸುತ್ತಾ, ರಕ್ಷಕ್ ಬುಲೆಟ್, ಕಾರ್ಯಕ್ರಮದ ರೂವಾರಿಗಳು, ನಿರ್ದೇಶಕರು, ಬರಹಗಾರರು ಎಲ್ಲರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಕಳಕಳಿಯ ಮನವಿಯನ್ನು ಮಾಡುತ್ತೇವೆ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Reels Case: ಲಾಂಗ್‌ ಹಿಡಿದು ರೀಲ್ಸ್‌ ಮಾಡಿದ ರಜತ್‌, ವಿನಯ್‌ಗೆ ನ್ಯಾಯಾಂಗ ಬಂಧನ