ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಾರಾಮತಿಯಲ್ಲಿ ತರಬೇತಿ ವಿಮಾನ ಅಪಘಾತ: ಅಜಿತ್ ಪವಾರ್ ದುರ್ಮರಣಕ್ಕೀಡಾದ ಸ್ಥಳದಲ್ಲೇ ಮತ್ತೊಂದು ದುರಂತ

Training Aircraft Accident in Baramati: ಮಹಾರಾಷ್ಟ್ರದ ಬಾರಾಮತಿಯಲ್ಲಿ ತರಬೇತಿ ವಿಮಾನ ಅಪಘಾತಕ್ಕೀಡಾಗಿದೆ. ಖಾಸಗಿ ಕಂಪನಿಯೊಂದು ನಿರ್ವಹಿಸುತ್ತಿದ್ದ ತರಬೇತಿ ವಿಮಾನವು ಭಾನುವಾರ (ಆಗಸ್ಟ್‌ 9) ಮಧ್ಯಾಹ್ನ ಮಹಾರಾಷ್ಟ್ರದ ಪುಣೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಯಿತು. ಮಧ್ಯಾಹ್ನ 12:35ರ ಸುಮಾರಿಗೆ ರನ್‌ವೇಯಿಂದ ಸ್ವಲ್ಪ ದೂರದಲ್ಲಿ ಈ ಅಪಘಾತ ಸಂಭವಿಸಿದೆ.

ಬಾರಾಮತಿಯಲ್ಲಿ ತರಬೇತಿ ವಿಮಾನ ಅಪಘಾತ

ಬಾರಾಮತಿಯಲ್ಲಿ ಅಪಘಾತಕ್ಕೀಡಾದ ತರಬೇತಿ ವಿಮಾನ -

Priyanka P
Priyanka P Aug 9, 2026 7:22 PM

ಮುಂಬೈ, ಆ. 9: ಮಹಾರಾಷ್ಟ್ರದ ಬಾರಾಮತಿಯಲ್ಲಿ ತರಬೇತಿ ವಿಮಾನ ಅಪಘಾತಕ್ಕೀಡಾಗಿದೆ (Aircraft Accident). ಸುಮಾರು ಏಳು ತಿಂಗಳ ಹಿಂದೆ ಆಗಿನ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ (Ajit Pawar) ಅವರಿದ್ದ ವಿಮಾನ ಅಪಘಾತಕ್ಕೀಡಾಗಿ ಅಸುನೀಗಿದ ಅದೇ ಸ್ಥಳದಲ್ಲಿ ಈ ದುರ್ಘಟನೆ ಸಂಭವಿಸಿದೆ. ಖಾಸಗಿ ಕಂಪನಿಯೊಂದು ನಿರ್ವಹಿಸುತ್ತಿದ್ದ ತರಬೇತಿ ವಿಮಾನವು ಭಾನುವಾರ (ಆಗಸ್ಟ್‌ 9) ಮಧ್ಯಾಹ್ನ ಪುಣೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಯಿತು.

ವಿಮಾನ ನಿಲ್ದಾಣ ಸಂಕೀರ್ಣದೊಳಗೆ ಮಧ್ಯಾಹ್ನ 12:35ರ ಸುಮಾರಿಗೆ ರನ್‌ವೇಯಿಂದ ಸ್ವಲ್ಪ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳಿಗೆ ಯಾವುದೇ ಗಾಯಗಳಾಗಿಲ್ಲ. ವಿಮಾನಕ್ಕೆ ಸಣ್ಣಪುಟ್ಟ ಹಾನಿಯಾಗಿದೆ.

ತರಬೇತಿ ಕಾರ್ಯಾಚರಣೆ ವೇಳೆ ಬಾರಾಮತಿ ಏರ್‌ಫೀಲ್ಡ್‌ನಲ್ಲಿ VT-SEX ವಿಮಾನ ರನ್‌ವೇಯಿಂದ ಜಾರಿದ್ದು, ಅದೃಷ್ಟವಶಾತ್‌ ಭಾರಿ ದುರಂತ ತಪ್ಪಿದೆ. ವಿಮಾನದಲ್ಲಿ ಕ್ಯಾಪ್ಟನ್ ಚಿರಾಗ್ ಶಶಿಕಾಂತ್ ದೋಯಿಫೋಡೆ ಹಾಗೂ ಕೆಡೆಟ್ ಅಭಿಜೀತ್ ಜುಂದ್ರೆ ಇದ್ದರು. ʼʼಯಾರಿಗೂ ಗಾಯಗಳಾಗಿಲ್ಲʼʼ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.

ಇಲ್ಲಿದೆ ವಿಡಿಯೊ:



ವಿಮಾನವು ಆರಂಭದಲ್ಲಿ ಲಿಂಕ್ ಬ್ರಾವೋ ಮೂಲಕ ರನ್‌ವೇ ಪ್ರವೇಶಿಸಿತು. ಅಪಘಾತವಾದ ಬಳಿಕ ವಿಮಾನವನ್ನು ರನ್‌ವೇ 11ರ ಆರಂಭಿಕ ಭಾಗದಲ್ಲಿ ನಿಲ್ಲಿಸಿ, ಮತ್ತೊಮ್ಮೆ ಟೇಕ್‌ಆಫ್ ರದ್ದುಗೊಳಿಸುವ ಪ್ರಕ್ರಿಯೆ ನಡೆಸಲಾಯಿತು.

ಈ ತರಬೇತಿ ಕಾರ್ಯಾಚರಣೆಯ ವೇಳೆ ವಿಮಾನವನ್ನು ರನ್‌ವೇಯಲ್ಲೇ ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗದೆ, ರನ್‌ವೇ 29ರ ಆರಂಭಿಕ ಗಡಿಯನ್ನೂ ದಾಟಿ ಮುಂದಕ್ಕೆ ಸಾಗಿತು. ಬಳಿಕ ರನ್‌ವೇ 29ರ ಗಡಿಯಾಚೆಗಿನ ವಿಸ್ತರಿತ ಪೇವ್ಡ್ ಪ್ರದೇಶದಿಂದ ಬಲಭಾಗಕ್ಕೆ ವಿಮಾನ ಜಾರಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿಯಲ್ಲಿ ಬಾರಾಮತಿ ವಿಮಾನ ನಿಲ್ದಾಣದ ಬಳಿ ಲಿಯರ್‌ಜೆಟ್ 45 ವಿಮಾನ ಅಪಘಾತಕ್ಕೀಡಾಗಿ ಅಜಿತ್‌ ಪವಾರ್ ಮತ್ತು ಇತರ ನಾಲ್ವರು ಮೃತಪಟ್ಟಿದ್ದರು. 66 ವರ್ಷದ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌, ಅವರ ವೈಯಕ್ತಿಕ ಭದ್ರತಾ ಅಧಿಕಾರಿ, ಸಹಾಯಕ ಹಾಗೂ ಇಬ್ಬರು ಕಾಕ್‌ಪಿಟ್ ಸಿಬ್ಬಂದಿ - ಪೈಲಟ್-ಇನ್-ಕಮಾಂಡ್ ಸುಮಿತ್ ಕಪೂರ್ ಮತ್ತು ಮೊದಲ ಅಧಿಕಾರಿ ಶಾಂಭವಿ ಪಾಠಕ್ ಇದ್ದ ವಿಎಸ್ಆರ್ ವೆಂಚರ್ಸ್ ಒಡೆತನದ ವಿಮಾನ ಜನವರಿ 28ರಂದು ತನ್ನ ಎರಡನೇ ಲ್ಯಾಂಡಿಂಗ್ ಪ್ರಯತ್ನದಲ್ಲಿ ಅಪಘಾತಕ್ಕೀಡಾಗಿತ್ತು.

ಮೇ 13ರಂದು ಬಾರಾಮತಿಯಲ್ಲಿ ಖಾಸಗಿ ಕಂಪನಿಯ ಮತ್ತೊಂದು ತರಬೇತಿ ವಿಮಾನ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿರಲಿಲ್ಲ. ಬಾರಾಮತಿ ವಾಯುನೆಲೆಯ ಪಕ್ಕದಲ್ಲಿರುವ ಗೋಜುಬಾವಿ ಗ್ರಾಮದ ಬಳಿ ಅಪಘಾತ ಸಂಭವಿಸಿದ ನಂತರ ವಿಮಾನದಲ್ಲಿದ್ದ ತರಬೇತಿ ಪೈಲಟ್ ಸುರಕ್ಷಿತವಾಗಿ ಪಾರಾಗಿದ್ದರು.