ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pravasi Prapancha : ಪ್ರವಾಸೋದ್ಯಮಕ್ಕೆ ಪೂರಕವಾಗಲಿರುವ ʼಪ್ರವಾಸಿ ಪ್ರಪಂಚʼ: ವಿಶ್ವೇಶ್ವರ ಭಟ್‌

Pravasi Prapancha: ಪರಿಸರ ಮಾಲಿನ್ಯದ ತೊಂದರೆಯಿಲ್ಲದೆ, ಹೆಚ್ಚಿನ ಬಂಡವಾಳವಿಲ್ಲದೆ ಬೆಳೆಯಬಹುದಾದ ವಲಯವೆಂದರೆ ಪ್ರವಾಸೋದ್ಯಮ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶವಿದ್ದು, ಅದನ್ನು ನಾವು ಇನ್ನೂ ಚೆನ್ನಾಗಿ ಬಳಸಿಕೊಳ್ಳಬೇಕಿದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ನುಡಿದರು.

ಪ್ರವಾಸೋದ್ಯಮಕ್ಕೆ ಪೂರಕವಾಗಲಿರುವ ʼಪ್ರವಾಸಿ ಪ್ರಪಂಚʼ: ವಿಶ್ವೇಶ್ವರ ಭಟ್‌

ʼಪ್ರವಾಸಿ ಪ್ರಪಂಚʼ ವಾರಪತ್ರಿಕೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಎಂ.ಶ್ರೀನಿವಾಸ್, ಎಚ್‌.ಕೆ ಪಾಟೀಲ್‌, ಸಿಎಂ ಸಿದ್ದರಾಮಯ್ಯ, ವಿಶ್ವೇಶ್ವರ ಭಟ್‌, ಡಾಲಿ ಧನಂಜಯ, ಅನಿಲ್ ಚಿಕ್ಕಮಾದು.

ಹರೀಶ್‌ ಕೇರ ಹರೀಶ್‌ ಕೇರ Jun 4, 2025 5:03 PM

ಬೆಂಗಳೂರು: ಕೋವಿಡ್‌ ಬಂದು ಹೋದಾಗ ಎಲ್ಲಾ ಕ್ಷೇತ್ರಗಳೂ ಬಡವಾಗಿದ್ದರೂ ಎರಡು ಕ್ಷೇತ್ರಗಳು ಮಾತ್ರ ಅಭೂತಪೂರ್ವ ಬೆಳವಣಿಗೆ ಕಂಡಿವೆ. ಪ್ರವಾಸೋದ್ಯಮ (Tourism) ಹಾಗೂ ಆತಿಥ್ಯ ಕ್ಷೇತ್ರಗಳು ತೀವ್ರ ಬೆಳವಣಿಗೆ ಕಂಡಿವೆ. ಆದರೆ ಅದಕ್ಕೆ ತಕ್ಕಂತೆ ಪೂರಕವಾದ ಪತ್ರಿಕೋದ್ಯಮ ಬೆಳೆದಿಲ್ಲ. ಈ ಕಾರಣಕ್ಕಾಗಿಯೇ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ʼಪ್ರವಾಸಿ ಪ್ರಪಂಚʼ ಪತ್ರಿಕೆಯನ್ನು (Pravasi Prapancha) ಹೊರತರಲಾಗುತ್ತಿದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ (Vishweshwara Bhat) ಹೇಳಿದರು.

ಅವರು ಇಂದು (ಜೂನ್‌ 4) ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ, ಪ್ರವಾಸ, ಪ್ರವಾಸೋದ್ಯಮ ಮತ್ತು ಅತಿಥಿ ಕ್ಷೇತ್ರಕ್ಕೆ ಮೀಸಲಾದ ಕನ್ನಡದ ಪ್ರಪ್ರಥಮ ಏಕೈಕ ವಿನೂತನ ವಾರಪತ್ರಿಕೆ ʼಪ್ರವಾಸಿ ಪ್ರಪಂಚʼದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಸಿಂಗಾಪುರ, ಮಾರಿಷಸ್‌, ಫಿಜಿ ಮೊದಲಾದ ಅನೇಕ ಚಿಕ್ಕಪುಟ್ಟ ದೇಶಗಳು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಅಭಿವೃದ್ಧಿ ಹೊಂದಿವೆ. ಅವುಗಳ ಜಿಡಿಪಿಯ 40%ದಷ್ಟು ಪ್ರವಾಸೋದ್ಯಮದಿಂದಲೇ ಬರುತ್ತಿದೆ. ಪರಿಸರ ಮಾಲಿನ್ಯದ ತೊಂದರೆಯಿಲ್ಲದೆ, ಹೆಚ್ಚಿನ ಬಂಡವಾಳವಿಲ್ಲದೆ ಬೆಳೆಯಬಹುದಾದ ವಲಯವೆಂದರೆ ಪ್ರವಾಸೋದ್ಯಮ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶವಿದ್ದು, ಅದನ್ನು ನಾವು ಇನ್ನೂ ಚೆನ್ನಾಗಿ ಬಳಸಿಕೊಳ್ಳಬೇಕಿದೆ ಎಂದು ವಿಶ್ವೇಶ್ವರ ಭಟ್‌ ನುಡಿದರು.

ಹೊಸ ಪತ್ರಿಕೆಯು ನಾಡು, ದೇಶ, ಅಂತಾರಾಷ್ಟ್ರೀಯ ಪ್ರವಾಸಿ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಪ್ರತಿ 15 ನಿಮಿಷಕ್ಕೊಮ್ಮೆ ಅಪ್‌ಡೇಟ್ಸ್‌ ನೀಡಲಿದೆ. ಪ್ರವಾಸ, ಪ್ರವಾಸೋದ್ಯಮ ಹಾಗೂ ಆತಿಥ್ಯ ಮೂರೂ ವಲಯಗಳ ಸಮಗ್ರ ಸಚಿತ್ರ ಮಾಹಿತಿ ನೀಡಲಿದೆ. ಪ್ರತಿವಾರ 20 ಪುಟಗಳ ವರ್ಣಮಯ ಪತ್ರಿಕೆ ಇದಾಗಿದ್ದು, ಸಂತೋಷ- ನೆಮ್ಮದಿಗಾಗಿ ಇದನ್ನು ಓದಬಹುದು. ಪ್ರವಾಸ ಮಾಡುವವರ ಜೊತೆಗೆ ಪ್ರವಾಸ ಮಾಡದೇ ಇರುವವರೂ ಓದಿ ಮನಸ್ಸಿಗೆ ಆನಂದ ಪಡೆಯಬಹುದು. ಮೊದಲ ವಾರದಿಂದಲೇ ಇದನ್ನು ಲಾಭಕರವಾಗಿ ರೂಪಿಸುವ ಉದ್ದೇಶದಿಂದ 15 ರೂ. ಬೆಲೆ ಇಡಲಾಗಿದೆ ಎಂದರು.

ಇಂದಿನ ಪತ್ರಿಕೋದ್ಯಮಕ್ಕೆ ನಾಲ್ಕು ʼಸಿʼಗಳು ಅನಿವಾರ್ಯವಾಗಿವೆ. ಅವು‌ ಕ್ರಿಕೆಟ್, ಸಿನೆಮಾ, ಕ್ರೈಂ ಹಾಗೂ ಕಾನ್‌ಸ್ಟಿಟ್ಯೂಶನ್‌ ಅರ್ಥಾತ್‌ ಸಂವಿಧಾನ ಅಥವಾ ಪ್ರಜಾಪ್ರಭುತ್ವದ ಮೂರು ಅಂಗಗಳು. ಈ ಮೂರರ ಅನಿವಾರ್ಯ ಹಂಗಿನ ಅಗತ್ಯವಿಲ್ಲದೆ ಪ್ರವಾಸಿ ಪ್ರಪಂಚ ಪತ್ರಿಕೆಯನ್ನು ರೂಪಿಸಲಾಗುತ್ತಿದೆ. ಇದನ್ನು ಮಾಡುವಲ್ಲಿ ನನಗಿರುವ ಅರ್ಹತೆಯೆಂದರೆ ನಾನು ನಿತ್ಯ ಪ್ರವಾಸಿಗ. ನಾನು 350 ಪ್ರವಾಸಗಳನ್ನು ಮಾಡಿದ್ದು, 99 ದೇಶಗಳನ್ನು ಸುತ್ತಾಡಿದ್ದೇನೆ. ʼವಿಶ್ವವಾಣಿʼಯ 6 ಆವೃತ್ತಿಗಳು ರಾಜ್ಯದೆಲ್ಲೆಡೆ ಪ್ರಕಟವಾಗುತ್ತಿವೆ. ನಾಡಿನ ಇತರ ಪತ್ರಿಕೆಗಳು ಉದ್ಯಮ ಸಂಸ್ಥೆಗಳಿಂದ ಪ್ರಕಟವಾಗುತ್ತಿದ್ದರೆ, ವಿಶ್ವವಾಣಿ,ಲೋಕಧ್ವನಿ ಹಾಗೂ ಪ್ರವಾಸಿ ಪ್ರಪಂಚಗಳು ಕಾರ್ಯನಿರತ ಪತ್ರಕರ್ತನೇ ನಡೆಸುತ್ತಿರುವ ಪತ್ರಿಕೆಗಳಾಗಿವೆ ಎಂದು ವಿವರಿಸಿದರು.

ವಿಶ್ವೇಶ್ವರ ಭಟ್ಟರಿಂದ ಕ್ರಾಂತಿ: ಡಾಲಿ ಧನಂಜಯ

ವಿಶ್ವೇಶ್ವರ ಭಟ್‌ ಅವರು ತಾವು ಕೈಹಾಕಿದ ಯಾವುದೇ ಕ್ಷೇತ್ರದಲ್ಲಿ ಕ್ರಾಂತಿ ಎಸಗಿದ್ದಾರೆ. ನಾವು ಸಣ್ಣವರಾಗಿದ್ದಾಗಿನಕ್ಕಿಂತ ಈಗ ತಂತ್ರಜ್ಞಾನ ತುಂಬಾ ಬೆಳೆದಿದ್ದು, ಪ್ರವಾಸೋದ್ಯಮವೂ ಅತ್ಯಾಧುನಿಕ ಸ್ವರೂಪ ಪಡೆದಿದೆ. ಅವರ ʼಪ್ರವಾಸಿ ಪ್ರಪಂಚʼ ಪತ್ರಿಕೆ ಪ್ರವಾಸೋದ್ಯಮದಲ್ಲಿ ಇನ್ನೊಂದು ಕ್ರಾಂತಿಯನ್ನು ಮೂಡಿಸಲಿ ಎಂದು ಮುಖ್ಯ ಅತಿಥಿ, ಚಿತ್ರನಟ ಡಾಲಿ ಧನಂಜಯ ನುಡಿದರು.

ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ʼಪ್ರವಾಸಿ ಪ್ರಪಂಚʼ ವಾರಪತ್ರಿಕೆಯನ್ನು ಲೋಕಾರ್ಪಣೆ ಮಾಡಿದರು. ವೆಬ್‌ಸೈಟ್ ಅನ್ನು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಅವರು ಲೋಕಾರ್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ನಟ ಡಾಲಿ ಧನಂಜಯ ಹಾಗೂ ಜಂಗಲ್ ಲಾಡ್ಜ್ಸ್ ಮತ್ತು ರೆಸಾರ್ಟ್ಸ್‌ ಅಧ್ಯಕ್ಷ ಅನಿಲ್ ಚಿಕ್ಕಮಾದು ಪ್ರವಾಸಿ ಪ್ರಪಂಚದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಿಗೆ ಚಾಲನೆ ನೀಡಿದರು.

ಇದನ್ನೂ ಓದಿ: Pravasi Prapancha : ವಾರವಿಡೀ ಓದಬಹುದಾದ ಸಮೃದ್ಧ ಪ್ರವಾಸಿ ಸಂಚಿಕೆ ಓದುಗರ ಕೈಗೆ: ಪ್ರವಾಸಿ ಪ್ರಪಂಚ ಇಂದು ಲೋಕಾರ್ಪಣೆ