ಯುಪಿ ಟಿ20 ಲೀಗ್ ಟೂರ್ನಿಯಿಂದ ಆರ್ಸಿಬಿ ವೇಗಿ ಯಶ್ ದಯಾಳ್ ಅಮಾನತು!
ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಯಶ್ ದಯಾಳ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ನಡೆಯುವ ಯುಪಿ ಟಿ20 ಲೀಗ್ನಿಂದ ಗೋರಖ್ಪುರ್ ಆಟಗಾರನನ್ನು ಅಮಾನತುಗೊಳಿಸಿದೆ.

ಯುಪಿ ಟಿ20 ಲೀಗ್ನಿಂದ ಯಶ್ ದಯಾಳ್ ಅಮಾನತು.

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವೇಗದ ಬೌಲರ್ ಯಶ್ ದಯಾಳ್ಗೆ (Yash Dayal) ಮತ್ತೊಂದು ಸಂಕಷ್ಟ ಎದುರಾಗಿದೆ. ಗಾಜಿಯಾಬಾದ್ ಹಾಗೂ ಜೈಪುರದಲ್ಲಿ ಅತ್ಯಾಚಾರ ಆರೋಪ ಎದುರಿಸುತ್ತಿರುವ ಕಾರಣ ವೇಗದ ಬೌಲರ್ ಅನ್ನು ಯುಪಿ ಟಿ20 ಲೀಗ್ (UP T20 League) ಟೂರ್ನಿಯಿಂದ ಅಮಾನತುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಖಚಿತ ಪಡಿಸಿದೆ. ಯುಪಿ ಟಿ20 ಲೀಗ್ ಟೂರ್ನಿಯು ಆಗಸ್ಟ್ 17 ರಂದು ಆರಂಭವಾಗಲಿದೆ. ಗೋರಖ್ಪುರ್ ಲಯನ್ಸ್ ತಂಡ ಆಗಸ್ಟ್ 18 ರಂದು ಕಾಶಿ ರುದ್ರಾಸ್ ವಿರುದ್ಧ ತನ್ನ ಮೊದಲನೇ ಪಂದ್ಯವನ್ನುಆಡಲಿದೆ.
ಗಾಜಿಯಾಬಾದ್ ಪ್ರಕರಣದಲ್ಲಿ ದಯಾಳ್ ಮದುವೆಯ ನೆಪದಲ್ಲಿ ಲೈಂಗಿಕ ಶೋಷಣೆಯ ಆರೋಪ ಎದುರಿಸುತ್ತಿದ್ದಾರೆ ಮತ್ತು ಅಲಹಾಬಾದ್ ಹೈಕೋರ್ಟ್ನಿಂದ ಬಂಧನದಿಂದ ರಕ್ಷಣೆ ಪಡೆದಿದ್ದಾರೆ. ಆದಾಗ್ಯೂ, ಅಪ್ರಾಪ್ತ ವಯಸ್ಕ ಒಳಗೊಂಡ ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ ಜೈಪುರ ಹೈಕೋರ್ಟ್ ಬಂಧನದಿಂದ ವಿನಾಯಿತಿ ನೀಡಲು ನಿರಾಕರಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 22 ಕ್ಕೆ ನಿಗದಿಪಡಿಸಿದೆ ಮತ್ತು ಕ್ರಿಕೆಟಿಗ ಬಂಧನದ ಆತಂಕದಲ್ಲಿದ್ದಾರೆ.
ಲೈಂಗಿಕ ದೌರ್ಜನ್ಯ: ಕ್ರಿಕೆಟಿಗ ಯಶ್ ದಯಾಳ್ ಬಂಧನಕ್ಕೆ ಹೈಕೋರ್ಟ್ ತಡೆ
ಯಶ್ ದಯಾಳ್ ಅವರು 7 ಲಕ್ಷ ರೂ. ಗಳಿಗೆ ಗೋರಖ್ಪುರ ಲಯನ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು ಹಾಗೂ 2025ರ ಯುಪಿ ಟಿ20 ಲೀಗ್ ಟೂರ್ನಿಯಲ್ಲಿ ಈ ತಂಡದ ಪರ ಆಡಲು ಸಜ್ಜಾಗುತ್ತಿದ್ದರು. ಆದರೆ, ಅವರನ್ನು ಯುಪಿ ಕ್ರಿಕೆಟ್ ಮಂಡಳಿ ಬ್ಯಾನ್ ಮಾಡಿದೆ. ಇದರಿಂದ ಆರ್ಸಿಬಿ ವೇಗಿಗೆ ಭಾರಿ ಹಿನ್ನಡೆಯಾಗಿದೆ. ಕಳೆದ ಎರಡು ವರ್ಷಗಳಿಂದ ಯಶ್ ದಯಾಳ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ ಹಾಗೂ ಪ್ರಸಕ್ತ ಸಾಲಿನಲ್ಲಿ ಆರ್ಸಿಬಿ ಚಾಂಪಿಯನ್ ಆಗಲು ಯಶ್ ದಯಾಳ್ ಕೂಡ ಮಹತ್ವದ ಕೊಡುಗೆಯನ್ನು ನೀಡಿದ್ದರು. 18ನೇಆವೃತ್ತಿಯಲ್ಲಿ ಅವರು 13 ವಿಕೆಟ್ಗಳನ್ನು ಕಬಳಿಸಿದ್ದರು.
ಆದಾಗ್ಯೂ, ಸತತ ಲೈಂಗಿಕ ದೌರ್ಜನ್ಯ ಪ್ರಕರಣಗಳು ಬಂದ ನಂತರ ಅವರ ವೃತ್ತಿಜೀವನ ಈಗ ಅಪಾಯದಲ್ಲಿದೆ. ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ಎರಡನೇ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಅಪ್ರಾಪ್ತ ವಯಸ್ಕಳೂ ಸೇರಿದ್ದಾಳೆ. ಕ್ರಿಕೆಟಿಗ ಎರಡು ವರ್ಷಗಳ ಅವಧಿಯಲ್ಲಿ ತನ್ನ ಮೇಲೆ ಪದೇ-ಪದೆ ಅತ್ಯಾಚಾರ ಎಸಗಿದ್ದಾನೆ ಮತ್ತು ಭಾವನಾತ್ಮಕವಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ ಮತ್ತು ಕ್ರಿಕೆಟ್ ವೃತ್ತಿಜೀವನದ ಭರವಸೆ ನೀಡಿ ಆಮಿಷ ಒಡ್ಡುತ್ತಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಆರ್ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಎಫ್ಐಆರ್ ದಾಖಲು! ಕಾರಣವೇನು ಗೊತ್ತೆ?
ಜೈಪುರದಲ್ಲಿ ನಡೆದಿದ್ದ ಐಪಿಎಲ್ ಪಂದ್ಯದ ವೇಳೆ 17 ವರ್ಷದವಳಿದ್ದಾಗ ಸಂತ್ರಸ್ತೆ, ಯಶ್ ದಯಾಳ್ ಅವರ ಮೊದಲ ಸಂಪರ್ಕಕ್ಕೆ ಬಂದಿದ್ದರು. ದಯಾಳ್ ಅವರು ವೃತ್ತಿ ಜೀವನಕ್ಕೆ ಸಲಹೆ ನೀಡುವ ನೆಪದಲ್ಲಿ ಸೀತಾಪುರದ ಹೋಟೆಲ್ಗೆ ಅವರನ್ನು ಆಹ್ವಾನಿಸಿದ್ದರು, ಅಲ್ಲಿ ಮೊದಲ ಲೈಂಗಿಕ ದೌರ್ಜನ್ಯ ನಡೆದಿತ್ತು.
ತಾನು ಅಪ್ರಾಪ್ತ ವಯಸ್ಕಳಾಗಿದ್ದಾಗಿನಿಂದ ಈ ರೀತಿಯ ದೌರ್ಜನ್ಯಗಳು ಎರಡು ವರ್ಷಗಳ ಕಾಲ ಮುಂದುವರಿದಿದ್ದು, ಇದರಿಂದಾಗಿ ಪೊಲೀಸರು ಅಪ್ರಾಪ್ತ ವಯಸ್ಕರನ್ನು ಒಳಗೊಂಡ ಲೈಂಗಿಕ ಅಪರಾಧಗಳ ವಿರುದ್ಧ ಕಠಿಣ ಕಾನೂನು ಆಗಿರುವ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೋ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.