RCB vs CSK: ʻಚೆನ್ನೈನಲ್ಲಿ ಗೆಲ್ಲುವುದು ಸುಲಭವಲ್ಲʼ- ಆರ್ಸಿಬಿಗೆ ವಾರ್ನಿಂಗ್ ಕೊಟ್ಟ ಶೇನ್ ವ್ಯಾಟ್ಸನ್!
shane Watson on RCB vs CSK: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮಾರ್ಚ್ 28 ರಂದು ಶುಕ್ರವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಮಾಜಿ ನಾಯಕ ಶೇನ್ ವ್ಯಾಟ್ಸನ್, ಆರ್ಸಿಬಿಗೆ ಎಚ್ಚರಿಕೆ ನೀಡಿದ್ದಾರೆ.

ಆರ್ಸಿಬಿಗೆ ಎಚ್ಚರಿಕೆ ನೀಡಿದ ಶೇನ್ ವ್ಯಾಟ್ಸನ್.

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಾರ್ಚ್ 28 ರಂದು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯದ (RCB vs CSK) ನಿಮಿತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಸ್ಟ್ರೇಲಿಯಾ ಮಾಜಿ ನಾಯಕ ಶೇನ್ ವ್ಯಾಟ್ಸ್ಮನ್ (Shane Watson) ಎಚ್ಚರಿಕೆ ನೀಡಿದ್ದಾರೆ. ಸಿಎಸ್ಕೆ ತಂಡಕ್ಕೆ ಎಂಎ ಚಿದಂಬರಂ ಕ್ರೀಡಾಂಗಣ ಭದ್ರಕೋಟೆಯಾಗಿದೆ. ಹಾಗಾಗಿ ಇಲ್ಲಿ ಬೆಂಗಳೂರು ತಂಡ ಗೆಲ್ಲುವುದು ಅಷ್ಟೊಂದು ಸುಲಭವಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆರ್ಸಿಬಿ ಹಾಗೂ ಸಿಎಸ್ಕೆ ಎರಡೂ ತಂಡಗಳು ತಮ್ಮ-ತಮ್ಮ ಆರಂಭಿಕ ಪಂದ್ಯಗಳನ್ನು ಗೆದ್ದುಕೊಂಡಿವೆ. ಇದೀಗ ಎರಡೂ ತಂಡಗಳು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿವೆ.
ಕಳೆದ 17 ವರ್ಷಗಳಿಂದ ಚೆನ್ನೈನಲ್ಲಿ ತವರು ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಮ್ಮೆಯೂ ಗೆದ್ದಿಲ್ಲ. 2008ರ ಉದ್ಘಾಟನಾ ಆವೃತ್ತಿಯ ಟೂರ್ನಿಯಲ್ಲಿ ಒಂದೇ ಒಂದು ಬಾರಿ ಆರ್ಸಿಬಿ ಚೆನ್ನೈನಲ್ಲಿ ಗೆದ್ದಿತ್ತು. ಈ ಹಿನ್ನೆಲೆಯಲ್ಲಿ ರಜತ್ ಪಾಟಿದಾರ್ ನಾಯಕತ್ವದ ಆರ್ಸಿಬಿಗೆ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯವನ್ನು ಗೆಲ್ಲುವುದು ಅಷ್ಟೊಂದು ಸುಲಭವಲ್ಲ. ಆರ್ಸಿಬಿ ಹಾಗೂ ಸಿಎಸ್ಕೆ ನಡುವಣ ಪಂದ್ಯದ ನಿಮಿತ್ತ ಮಾತನಾಡಿದ ಆಸೀಸ್ ಮಾಜಿ ಆಲ್ರೌಂಡರ್ ಶೇನ್ ವ್ಯಾಟ್ಸ್ಮನ್ ತಮ್ಮ ಭವಿಷ್ಯವನ್ನು ಎಲ್ಲರ ಮುಂದಿಟ್ಟಿದ್ದಾರೆ.
"ಚೆಪಾಕ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಸವಾಲು ಎದುರಾಗಲಿದೆ. ಅದರಲ್ಲಿಯೂ ವಿಶೇಷವಾಗಿ ಸಿಎಸ್ಕೆ ತಂಡದಲ್ಲಿ ಗುಣಮಟ್ಟದ ಬೌಲಿಂಗ್ ಲೈನ್ ಅಪ್ ಇದೆ. ಚೆನ್ನೈ ತಂಡದ ಸಾಮರ್ಥ್ಯಕ್ಕೆ ಕೌಂಟರ್ ನೀಡಬೇಕೆಂದರೆ, ಆರ್ಸಿಬಿ ಅತ್ಯುತ್ತಮ ಸಂಯೋಜನೆಯೊಂದಿಗೆ ಕಣಕ್ಕೆ ಇಳಿಯಬೇಕು ಹಾಗೂ ಅಲ್ಲಿನ ಕಂಡೀಷನ್ಸ್ಗೆ ಬೇಗ ಹೊಂದಿಕೊಳ್ಳಬೇಕಾಗುತ್ತದೆ. ಸಿಎಸ್ಕೆಗೆ ಚೆನ್ನೈ ಭದ್ರಕೋಟೆಯಾಗಿದೆ. ಹಾಗಾಗಿ ಆರ್ಸಿಬಿ ಇಲ್ಲಿ ತಪ್ಪು ಮಾಡಬಾರದು," ಎಂದು ಜಿಯೊ ಹಾಟ್ಸ್ಟಾರ್ಗೆ ಶೇನ್ ವ್ಯಾಟ್ಸನ್ ತಿಳಿಸಿದ್ದಾರೆ.
ಸಿಎಸ್ಕೆ ಸ್ಪಿನ್ನರ್ಗಳ ಎದುರು ಕಠಿಣ ಸವಾಲು
"ಚೆನ್ನೈನ ಕಂಡೀಷನ್ಸ್ಗೆ ತಕ್ಕಂತೆ ಸಿಎಸ್ಕೆ ಒಟ್ಟಾರೆ ತಂಡವನ್ನು ಕಟ್ಟಲಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಅತ್ಯುತ್ತಮ ಸ್ಪಿನ್ ಮ್ಯಾಜಿಕ್ ಮಾಡಿದ್ದ ಆರ್ ಅಶ್ವಿನ್, ನೂರ್ ಅಹ್ಮದ್ ಹಾಗೂ ರವೀಂದ್ರ ಜಡೇಜಾ ಅವರನ್ನು ನೀವು ಒಮ್ಮೆ ನೋಡಬಹುದು. ಎಂಎ ಚಿದಂಬರಂ ಕಂಡೀಷನ್ಸ್ಗೆ ಅವರು ಸೂಕ್ತವಾಗಿದ್ದಾರೆ. ಮೊದಲನೇ ಪಂದ್ಯದಲ್ಲಿ ನೂರ್ ಅಹ್ಮದ್ ಅವರ ಬೌಲಿಂಗ್ ಪ್ರದರ್ಶನದಿಂದ ಸಿಎಸ್ಕೆ ತಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಇವರ ಜೊತೆಗೆ ಇನ್ನುಳಿದವರು ಕೂಡ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ," ಎಂದು ಸಿಎಸ್ಕೆ ಮಾಜಿ ಆಲ್ರೌಂಡರ್ ಹೇಳಿದ್ದಾರೆ.
CSK vs RCB head-to-head: ಚೆನ್ನೈ ವಿರುದ್ಧ ಆರ್ಸಿಬಿ ದಾಖಲೆ ಹೇಗಿದೆ?
ಐಪಿಎಲ್ ಇತಿಹಾಸದಲ್ಲಿಯೇ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 14 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 5 ಪಂದ್ಯಗಳಲ್ಲಿ ಮಾತ್ರ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನೂರ್ ಅಹ್ಮದ್, ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು. ಸಿಎಸ್ಕೆ ತಂಡದ ಪರ ತನ್ನ ಮೊದಲನೇ ಪಂದ್ಯದಲ್ಲಿಯೇ ನೂರ್ ಅಹ್ಮದ್ ಅವರು ಕೇವಲ 18 ರನ್ಗಳನ್ನು ನೀಡಿ 4 ವಿಕೆಟ್ಗಳನ್ನು ಕಬಳಿಸಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಆರ್ಸಿಬಿಗೆ ಕಠಿಣ ಸವಾಲು ಎದುರಾಗಲಿದೆ.
CSK vs RCB: ಆರ್ಸಿಬಿ-ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ ಹೀಗಿದೆ
ಸಿಎಸ್ಕೆ ಪಂದ್ಯಕ್ಕೆ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ XI: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಶ್ ಹೇಝಲ್ವುಡ್, ಸುಯೇಶ್ ಶರ್ಮಾ, ಯಶ್ ದಯಾಳ್