ಎಚ್.ನರಸಿಂಹಯ್ಯರ ದೂರದೃಷ್ಟಿಯ ಫಲವೇ ಜ್ಞಾನಭಾರತಿ ನಿರ್ಮಾಣ : ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್
ಸರ್ಕಾರವೂ 500 ಕೋಟಿಗಳನ್ನು ವೆಚ್ಚ ಮಾಡಲು ನಿರ್ಧರಿಸಿದೆ. ಒಟ್ಟು 2500 ಕೋಟಿ ರೂಪಾಯಿ ಅನುದಾನದಲ್ಲಿ ರಾಜ್ಯದಲ್ಲಿ ಹೊಸ ಪಬ್ಲಿಕ್ ಶಾಲೆಗಳನ್ನು ಆರಂಭಿಸುವುದು ಹಾಗೂ ಒಟ್ಟಾರೆ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ತಂದು ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಬದ್ಧವಾಗಿದೆ
ಚಿಕ್ಕಬಳ್ಳಾಪುರ: ಸೆಂಟ್ರಲ್ ಕಾಲೇಜಿನಲ್ಲಿದ್ದ ಬೆಂಗಳೂರು ವಿಶ್ವವಿದ್ಯಾನಿಲಯವನ್ನು 1200 ಎಕರೆಯ ಜ್ಞಾನಭಾರತಿ ಕ್ಯಾಂಪಸ್ಗೆ ಸ್ಥಳಾಂತರಿಸಿ ಪಾಶ್ಚಾತ್ಯ ಮಾದರಿಯಲ್ಲಿ ಅತ್ಯುನ್ನತವಾಗಿ ನಿರ್ಮಿಸಲು ಕಾರಣಕರ್ತರಾದವರು ಶಿಕ್ಷಣ ತಜ್ಞ ಡಾ.ಎಚ್ ನರಸಿಂಹಯ್ಯ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ ಸಿ ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಭಾನುವಾರ ಜಿಲ್ಲಾಡಳಿತ ಮತ್ತು ಹೊಸೂರು ಸರ್ಕಾರಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗ ದಲ್ಲಿ ಆಯೋಜಿಸಿದ್ದ ಡಾ.ಹೆಚ್.ಎನ್ ಅವರ ಜನ್ಮ ಶತಾಬ್ದಿ ಹಾಗೂ ಅವರು ಓದಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ಹೆಚ್.ನರಸಿಂಹಯ್ಯ ಪ್ರಾಧಿಕಾರ
ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಗಳಿಗೆ ಸಾಕಾರ ಮೂರ್ತಿಯಂತಿದ್ದ ಪದ್ಮಭೂಷಣ ಡಾ.ಹೆಚ್. ನರಸಿಂಹಯ್ಯ ಅವರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ವಿದೇಶದಲ್ಲಿ ವಿಜ್ಞಾನ ಶಿಕ್ಷಣ ಪಡೆದು ಬಂದಿದ್ದ ಡಾ.ಹೆಚ್.ಎನ್ ಅವರು ಸರಳ ಸಜ್ಜನಿಕೆಯ ಪ್ರತಿರೂಪ. ಅವರಿಗೆ ಶಿಕ್ಷಣದ ಬಗ್ಗೆ ಇದ್ದ ಅಪಾರ ಕಾಳಜಿ ಮತ್ತು ದೂರದೃಷ್ಟಿಯ ಫಲವೇ ಬೆಂಗ ಳೂರು ವಿಶ್ವವಿದ್ಯಾಲಯದ 1200 ಎಕರೆ ಜ್ಞಾನಭಾರತಿ ಆವರಣ. ಡಾ.ಹೆಚ್.ಎನ್.ಅವರ ಹುಟ್ಟೂ ರು ಹೊಸೂರು ಗ್ರಾಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಆರಂಭಿಸುವ ಜೊತೆಗೆ ಡಾ.ಹೆಚ್. ಎನ್. ಹೆಸರಿನ ಕಲಾಭವನ, ರಾಷ್ಟ್ರೀಯ ವಿಜ್ಞಾನ ಪಾರ್ಕ್, ಅಮರಧಾಮ ಮತ್ತು ಅವರು ಓದಿದ ಶಾಲೆಗಳನ್ನು ಒಟ್ಟಿಗೆ ಸೇರಿಸಿ ಡಾ.ಹೆಚ್.ನರಸಿಂಹಯ್ಯ ಅವರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ವನ್ನು ಸ್ಥಾಪಿಸಿ ಅದರ ಮೂಲಕ ಈ ಎಲ್ಲಾ ಸಂಸ್ಥೆಗಳನ್ನು ವ್ತವಸ್ಥಿತವಾಗಿ ನಿರ್ವಹಿಸುವ ಬಗ್ಗೆ ಮನವಿ ಬಂದಿದೆ. ಈಗಾಗಲೇ ಮುಖ್ಯಮಂತ್ರಿಗಳು ಪ್ರವಾಸೋದ್ಯಮ ಸಚಿವರೂ ಆದ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರಿಗೆ ಈ ಕುರಿತು ಪರಿಶೀಲಿಸುವಂತೆ ಸೂಚನೆ ನೀಡಿದ್ದಾರೆ. ಪ್ರಾಧಿಕಾರ ಸ್ಥಾಪನೆಯ ರೂಪುರೇಷೆಗಳ ಕರಡು ತಯಾರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಪಬ್ಲಿಕ್ ಶಾಲೆ ಅಭಿವೃದ್ದಿ
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳ ಬಗ್ಗೆ ಜನತೆಗೆ ಹೆಚ್ಚು ಒಲವಿದೆ. ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ಪದ್ದತಿಯಲ್ಲಿ ಒಂದು ಆವರಣದಲ್ಲಿ ಎಲ್ ಕೆಜಿಯಿಂದ ಪದವಿ ಪೂರ್ವ ಹಂತದ ವರೆಗೂ ಶಿಕ್ಷಣ ನೀಡುವ ಈ ಶಾಲೆಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನಿಂದ ೨ ಸಾವಿರ ಕೋಟಿ ರೂಪಾಯಿ ಸಾಲ ಪಡೆಯಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಸರ್ಕಾರವೂ 500 ಕೋಟಿಗಳನ್ನು ವೆಚ್ಚ ಮಾಡಲು ನಿರ್ಧರಿಸಿದೆ. ಒಟ್ಟು 2500 ಕೋಟಿ ರೂಪಾಯಿ ಅನುದಾನದಲ್ಲಿ ರಾಜ್ಯದಲ್ಲಿ ಹೊಸ ಪಬ್ಲಿಕ್ ಶಾಲೆ ಗಳನ್ನು ಆರಂಭಿಸುವುದು ಹಾಗೂ ಒಟ್ಟಾರೆ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ತಂದು ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಬದ್ಧವಾಗಿದೆ. ಶೀಘ್ರದಲ್ಲೇ ಹೊಸ ಪಬ್ಲಿಕ್ ಶಾಲೆಗಳ ಆರಂಭದ ಬಗ್ಗೆ ಸರ್ಕಾರ ಸಿಹಿ ಸುದ್ದಿ ನೀಡಲಿದೆ. ವೈಚಾರಿಕ ಮನೋಭಾವನೆಗೆ ಹೆಸರಾ ಗಿದ್ದ ಎಚ್ ಎನ್ ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ನಾವೆಲ್ಲರೂ ಸರಳ ಜೀವನ ಸಾಗಿಸಿ ಅವರ ತತ್ವದರ್ಶಗಳನ್ನು ಪಾಲಿಸಬೇಕು ಹಾಗೂ ಮುಂದಿನ ಪೀಳಿಗೆಗೂ ಸಹ ತಲುಪಿಸ ಬೇಕು ಎಂದರು.
ಸಂಸದ ಡಾ.ಕೆ.ಸುಧಾಕರ್ ಅವರು ಮಾತನಾಡಿ ವಿಜ್ಞಾನ ಮತ್ತು ವೈಚಾರಿಕತೆಯನ್ನು ಬಲವಾಗಿ ನಂಬಿದ್ದ ಹೆಚ್.ಎನ್ ಅವರು ಮೌಢ್ಯ ಆಚರಣೆಯನ್ನು ಬಲವಾಗಿ ವಿರೋಧಿಸುತ್ತಿದ್ದರು. ಶಾಲಾ ಕಾಲೇಜುಗಳೇ ನಿಜವಾದ ದೇವಸ್ಥಾನ,ಚರ್ಚು,ಮಸೀದಿಗಳಲ್ಲ ಎಂದು ಪ್ರತಿಪಾದಿಸುತ್ತಿದ್ದ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿರುವ ಮೇರು ವ್ಯಕ್ತಿ. ವಿಧಾನ ಪರಿಷತ್ ಸದಸ್ಯರಾಗಿ, ಉಪಕುಲಪತಿಗಳಾಗಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದರು ಸಹ ಅವರು ಗ್ರಾಮೀಣ ಭಾಗದಲ್ಲಿ ಶಾಲಾ-ಕಾಲೇಜುಗಳನ್ನು ಸ್ಥಾಪಿಸಿ ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹಿಸಿದರು. ಅವರು ಗಳಿಸಿದ ಜೀವಿತದ ಹಣವನ್ನೆಲ್ಲ ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಹಾಗೂ ಸಾಮಾಜಿಕ ಕಳಕಳಿಯುಳ್ಳ ಕೆಲಸಗಳನ್ನು ಮಾಡಲು ವಿನಿಯೋಗ ಮಾಡಿದರು. ತಮ್ಮ ಜೀವಿತದ ಬಹುಕಾಲದ ಅವಧಿಯನ್ನು ವಿದ್ಯಾರ್ಥಿನಿಲಯಗಳಲ್ಲಿಯೇ ಸವೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡು ತ್ತಿದ್ದರು.
ಸರಳ ಜೀವನಕ್ಕೆ ಹೆಸರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಎಚ್ ಎನ್ ರವರು ರಾಜ್ಯಕ್ಕೆ ಮತ್ತು ದೇಶಕ್ಕೆ ಅಪಾರ ಕೊಡುಗೆ ನೀಡಿರುವ ಧ್ರುವತಾರೆಗಳು ಎಂದರೆ ತಪ್ಪಾಗಲಾರದು ಎಂದು ಬಣ್ಣಿಸಿ ದರು.
ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡ ಅವರು ಮಾತನಾಡಿ "ಪ್ರಶ್ನೆ ಮಾಡದೆ ಏನನ್ನು ನಂಬಬೇಡ. ಮೌಢ್ಯ ಜಾತಿ ಪದ್ಧತಿಗಳನ್ನು ನಂಬದೇ ವೈಚಾರಿಕ ಜೀವನ ನಡೆಸಬೇಕು ಎಂದು ಎಲ್ಲರಿಗೂ ತಿಳಿಸಿಕೊಟ್ಟ ಶ್ರೇಷ್ಠ ಸಮಾಜ ಸುಧಾರಕ ಎಚ್ ನರಸಿಂಹಯ್ಯ.ಅAತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲು ಸರ್ಕಾರದ ಮಟ್ಟದಲ್ಲಿ ಒತ್ತಡ ತರಲಾಗು ವುದು ಎಂದು ತಿಳಿಸಿದರು.
ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಅವರು ಎಚ್ ನರಸಿಂಹಯ್ಯ ಅವರ ಜೀವನ ಸಾಧನೆಯ ಯಶೋಗಾಥೆಯ ಕುರಿತು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಪ್ರಕಾಶ್ ಜಿ ಟಿ ನಿಟ್ಟಾಲಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಮಾಜಿ ಸಚಿವ ಎನ್.ಹೆಚ್. ಶಿವಶಂಕರರೆಡ್ಡಿ, ಮಾಜಿ ಶಾಸಕಿ ಜ್ಯೋತಿ ರೆಡ್ಡಿ, ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ನಾಗರಾಜ್, ಅಪರ ಜಿಲ್ಲಾಧಿಕಾರಿ ಡಾಕ್ಟರ್ ಏನ್ ಭಾಸ್ಕರ್ ತಹಶೀ ಲ್ದಾರ್ ಮಹೇಶ್ ಪತ್ರಿ, ನ್ಯಾಷನಲ್ ಎಜುಕೇಶನ್ ಸೊಸೈಟಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ, ಹೊಸೂರಿನ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜುನಾಥ್, ಸಂಘದ ಸದಸ್ಯರು,ಪದಾಧಿಕಾರಿಗಳು, ನ್ಯಾಷನಲ್ ಕಾಲೇಜಿನ ಹಳೆ ವಿದ್ಯಾರ್ಥಿಗಳು,ಹಾಲಿ ವಿದ್ಯಾರ್ಥಿ ಗಳು, ಬೋಧಕ, ಬೋಧಕೇತರ ಸಿಬ್ಬಂದಿ, ಎಚ್ ಎನ್ ಅಭಿಮಾನಿಗಳು, ಹಾಗೂ ಸಾರ್ವಜನಿಕರು ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಹೊಸೂರು ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿ ಗಳು ಹಾಗೂ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಎಚ್.ನರಸಿಂಹಯ್ಯ ಅವರ ಭಾವಚಿತ್ರ ಗಳೊಂದಿಗೆ ಹೊಸೂರು ಗ್ರಾಮದಲ್ಲಿ ಬೃಹತ್ ಮೆರವಣಿಗೆಯನ್ನು ನಡೆಸಿದರು.