ರಾಮ್ ಚರಣ್ ನಟನೆಯ ʻಪೆದ್ದಿʼ ಸಿನಿಮಾದ ಮೇಲಿನ ನಿರೀಕ್ಷೆ ಡಬಲ್ ಆಗುವುದಕ್ಕೆ ಮತ್ತೊಂದು ಕಾರಣ, ನಟ ಶಿವರಾಜ್ಕುಮಾರ್. ಹೌದು, ಕರುನಾಡ ಚಕ್ರವರ್ತಿ ಶಿವಣ್ಣ ಅವರು ಪೆದ್ದಿ ಸಿನಿಮಾದಲ್ಲಿ ಒಂದು ಮುಖ್ಯವಾದ ಪಾತ್ರವನ್ನು ನಿಭಾಯಿಸಿದ್ದಾರೆ. ಇದು ಅವರ ಮೊದಲ ತೆಲುಗು ಅನ್ನೋದು ವಿಶೇಷ. ಅಂದಹಾಗೆ, ಪೆದ್ದಿ ಸಿನಿಮಾದಿಂದ ಆರಂಭದಲ್ಲೇ ಹೊರಬರುವ ನಿರ್ಧಾರ ಮಾಡಿದ್ದರಂತೆ ಶಿವರಾಜ್ಕುಮಾರ್!
ನನಗೆ ಚಿತ್ರತಂಡ ಕಾದಿತ್ತು
ಹೌದು, ಬುಚ್ಚಿ ಬಾಬು ಸನಾ ನಿರ್ದೇಶನದ 'ಪೆದ್ದಿ' ಚಿತ್ರಕ್ಕೆ ಸಹಿ ಮಾಡಿದ ನಂತರ ತಮಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು, ಚಿಕಿತ್ಸೆಗಾಗಿ ಅಮೆರಿಕಗೆ ತೆರಳಬೇಕಿದ್ದರಿಂದ ತಾವು ಈ ಚಿತ್ರದಿಂದ ಬಹುತೇಕ ಹೊರನಡೆಯಲು ನಿರ್ಧರಿಸಿದ್ದಾಗಿ ಶಿವರಾಜ್ಕುಮಾರ್ ಬಹಿರಂಗಪಡಿಸಿದ್ದಾರೆ. ಜೂನ್ 4 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಪ್ರಚಾರಕ್ಕಾಗಿ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಬೇರೆ ನಟನನ್ನು ಬದಲಾಯಿಸುವ ಬದಲು, ಇಡೀ ಚಿತ್ರತಂಡ ತಾವು ಚಿಕಿತ್ಸೆ ಮುಗಿಸಿ ಬರುವವರೆಗೆ ಕಾಯುವ ನಿರ್ಧಾರ ಮಾಡಿತು" ಎಂದು ತಿಳಿಸಿದ್ದಾರೆ.
ಕಥೆ ಕೇಳಿ ಇಷ್ಟಪಟ್ಟಿದ್ದ ಶಿವರಾಜ್ಕುಮಾರ್
2024 ರಲ್ಲಿ ಶಿವರಾಜ್ಕುಮಾರ್ಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆದರೆ, ಅದಕ್ಕೂ ಮೊದಲೇ ಪೆದ್ದಿ ಚಿತ್ರವನ್ನು ಶಿವಣ್ಣ ಒಪ್ಪಿಕೊಂಡಿದ್ದರು. ಆದರೆ ಆನಂತರ ಎದುರಾದ ಆರೋಗ್ಯದ ಏರುಪೇರು ಇಡೀ ಪರಿಸ್ಥಿತಿಯನ್ನೇ ಬದಲಾಯಿಸಿತ್ತು. "ಪೆದ್ದಿ ತಂಡಕ್ಕೆ ನನ್ನ ಜೊತೆಯೇ ಈ ಸಿನಿಮಾ ಮಾಡಬೇಕೆಂಬ ಹಂಬಲವಿತ್ತು. ಬುಚ್ಚಿ ಬಾಬು ಕಥೆ ಹೇಳಿದಾಗ ನನಗೆ ಸಬ್ಜೆಕ್ಟ್ ತುಂಬಾ ಇಷ್ಟವಾಯಿತು. ಅಂದೇ ರಾಮ್ ಚರಣ್ ಜೊತೆಯೂ ನಾನು ಮಾತನಾಡಿದ್ದೆ. ಆದರೆ ಆನಂತರ, ದುರದೃಷ್ಟವಶಾತ್ ನನಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು ಮತ್ತು ನಾನು ಚಿಕಿತ್ಸೆಗಾಗಿ ಅಮೆರಿಕಗೆ ಹೋಗಬೇಕಾಗಿ ಬಂತು" ಎಂದು ಶಿವಣ್ಣ ಹೇಳಿದ್ದಾರೆ.
ಸಿನಿಮಾದಿಂದ ಹೊರನಡೆಯಲು ನಿರ್ಧರಿಸಿದ್ದ ಶಿವಣ್ಣ
"ನಾನು ಚಿತ್ರತಂಡದವರ ಬಳಿ, ಈ ಸಿನಿಮಾವನ್ನು ಕ್ಯಾನ್ಸಲ್ ಮಾಡೋಣವೇ? ನನ್ನ ಪಾತ್ರಕ್ಕೆ ಬೇರೆ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದ್ದೆ. ಆದರೆ ನಿರ್ದೇಶಕರು 'ಇಲ್ಲ ಸರ್, ನಮಗೆ ನೀವೇ ಬೇಕು' ಎಂದು ಹೇಳಿ ನನ್ನ ಸಲಹೆನ್ನು ನಿರಾಕರಿಸಿದರು. ಅವರು ತುಂಬಾ ಉದಾರವಾಗಿ ನಡೆದುಕೊಂಡರು. ನನಗಾಗಿ ಸುದೀರ್ಘ ಕಾಲ ಕಾದರು. ಅವರಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು, ಇದೊಂದು ಅದ್ಭುತ ಜರ್ನಿ" ಎಂದು ಶಿವರಾಜ್ಕುಮಾರ್ ಭಾವುಕರಾಗಿ ಹೇಳಿಕೊಂಡಿದ್ದಾರೆ.
ಕ್ಯಾನ್ಸರ್ನಿಂದ ಗುಣಮುಖರಾಗಿರುವ ಶಿವಣ್ಣ
2024 ರ ಡಿಸೆಂಬರ್ನಲ್ಲಿ ಶಿವರಾಜ್ಕುಮಾರ್ ಅವರು ಅಮೆರಿಕದ ಮಿಯಾಮಿ ಆಸ್ಪತ್ರೆಗೆ ದಾಖಲಾಗಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದುಕೊಂಡಿದ್ದರು. ಅಲ್ಲಿ ಅವರ ಕ್ಯಾನ್ಸರ್ ಪೀಡಿತ ಮೂತ್ರಕೋಶವನ್ನು (Bladder) ತೆಗೆದುಹಾಕಿ, ಅವರ ಕರುಳನ್ನು ಬಳಸಿ ಕೃತಕ ಮೂತ್ರಕೋಶವನ್ನು ಅಲ್ಲಿ ಮರುಸೃಷ್ಟಿಸಲಾಗಿತ್ತು. ಈ ಬಗ್ಗೆ ಮಾತನಾಡಿದ್ದ ಶಿವಣ್ಣ, "ಕೀಮೋಥೆರಪಿಯಿಂದಾಗಿ ಕೂದಲು ಉದುರುತ್ತದೆ ಎಂದು ನನಗೆ ಸ್ವಲ್ಪ ಚಿಂತೆಯಾಗಿತ್ತು. ವೈದ್ಯರು ಶೂಟಿಂಗ್ಗೆ ಅನುಮತಿ ನೀಡಿದ್ದರೂ ಹೆಚ್ಚು ಶ್ರಮ ಪಡದಂತೆ ಸೂಚಿಸಿದ್ದರು. ನಾನು ಕೀಮೋ ಮುಗಿಸಿಕೊಂಡು ನೇರವಾಗಿ ಶೂಟಿಂಗ್ ಸ್ಪಾಟ್ಗೆ ಹೋಗುತ್ತಿದ್ದೆ. ಅದು ನನ್ನನ್ನು ತುಂಬಾ ಸುಸ್ತಾಗಿಸುತ್ತಿತ್ತು" ಎಂದು ಹೇಳಿಕೊಂಡಿದ್ದರು.