ಅಭಿಮಾನಿಗಳಿಂದ 'ಮ್ಯಾನ್ ಆಫ್ ಮಾಸಸ್' ಎಂದು ಕರೆಸಿಕೊಂಡಿರುವ ನಟ ಎನ್ಟಿಆರ್ ಸದ್ಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಜೊತೆಗಿನ ಹೊಸ ಸಿನಿಮಾಕ್ಕಾಗಿ ಸಿಕ್ಕಾಪಟ್ಟೆ ಎಫರ್ಟ್ ಹಾಕುತ್ತಿದ್ದಾರೆ. ಈ ಚಿತ್ರಕ್ಕೆ 'ಡ್ರ್ಯಾಗನ್' ಎಂಬ ವರ್ಕಿಂಗ್ ಟೈಟಲ್ ಇಡಲಾಗಿದೆಯಾದರೂ, ಅದಿನ್ನೂ ಖಚಿತವಾಗಿಲ್ಲ. ಸದ್ಯ ಈ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಬಗ್ಗೆ ಒಂದಷ್ಟು ಬಿಗ್ ಅಪ್ಡೇಟ್ ಹೊರಬಿದ್ದಿವೆ. ಅದೇನು? ಮುಂದೆ ಓದಿ.
ಖಳನ ಪಾತ್ರಕ್ಕೆ ಶಾಹಿದ್ಗೆ ಆಫರ್
ಪ್ರಶಾಂತ್ ನೀಲ್ ಸಿನಿಮಾಗಳಲ್ಲಿ ಖಳನಾಯಕನ ಪಾತ್ರ ಎಷ್ಟು ಪವರ್ಫುಲ್ ಆಗಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅಸಲಿಗೆ, ಎನ್ಟಿಆರ್ ಎದುರು ಅಬ್ಬರಿಸಲು ಮಲಯಾಳಂ ಸ್ಟಾರ್ ನಟ ಟೊವಿನೋ ಥಾಮಸ್ ಅವರಿಗೆ ಆಫರ್ ಮಾಡಲಾಗಿತ್ತು. ಆದರೆ, ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಟೊವಿನೋ ಅವರು ಆಫರ್ ಅನ್ನು ಕೈಚೆಲ್ಲಿದರು. ಜೊತೆಗೆ ಅದಕ್ಕೆ ತಮ್ಮದೇ ಆದ ಕೆಲವು ಕಾರಣಗಳನ್ನು ಟೊವಿನೋ ನೀಡಿದರು.
Rukmini Vasanth: ಜೂ. ಎನ್ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿ; ನಿರ್ಮಾಪಕನಿಂದ ಘೋಷಣೆ
ಸದ್ಯ ಆ ಪಾತ್ರವನ್ನು ಮಾಡುವಂತೆ ಬಾಲಿವುಡ್ ಹೀರೋ ಶಾಹಿದ್ ಕಪೂರ್ ಅವರಿಗೆ ʻಎನ್ಟಿಆರ್ನೀಲ್ʼ ಟೀಮ್ ಆಫರ್ ಮಾಡಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಎನ್ಟಿಆರ್ ಅವರಂತಹ ಮಾಸ್ ಹೀರೋ ಎದುರು ಶಾಹಿದ್ ಕಪೂರ್ ಜೊತೆಯಾದರೆ, ಅಭಿಮಾನಿಗಳ ಪಾಲಿಗೆ ಅದು ಹಬ್ಬವೇ ಸರಿ!
ಎನ್ಟಿಆರ್ಗಾಗಿ ಟಾಲಿವುಡ್ಗೆ ಮತ್ತೆ ಬರುತ್ತಾರಾ ಆಲಿಯಾ?
ಅತ್ತ ಶಾಹಿದ್ ಕಪೂರ್ ಕುರಿತ ವೈರಲ್ ಆಗುತ್ತಿದ್ದಂತೆಯೇ, ಆಲಿಯಾ ಭಟ್ ಅವರು ಈ ಸಿನಿಮಾದ ಭಾಗವಾಗಲಿದ್ದಾರೆ ಎಂಬ ಮತ್ತೊಂದು ಸುದ್ದಿ ಕೂಡ ಸದ್ದು ಮಾಡುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ಈ ಸಿನಿಮಾದಲ್ಲಿ ಎನ್ಟಿಆರ್ಗೆ ನಾಯಕಿಯಾಗಿ ಕನ್ನಡದ ರುಕ್ಮಿಣ ವಸಂತ್ ನಟಿಸುತ್ತಿರುವುದು ಗೊತ್ತೇ ಇದೆ. ಈ ಮಧ್ಯೆ ಆಲಿಯಾ ಭಟ್ಗೆ ಏನು ಪಾತ್ರ ಎಂಬ ಪ್ರಶ್ನೆ ಮೂಡುವುದು ಸಹಜ. ಸಿಕ್ಕಿರುವ ಮಾಹಿತಿ ಪ್ರಕಾರ, ಕಥೆಗೆ ತಿರುವು ನೀಡುವ ಅತ್ಯಂತ ಪವರ್ಫುಲ್ ಪಾತ್ರಕ್ಕಾಗಿ ಆಲಿಯಾ ಅವರನ್ನು ಚಿತ್ರತಂಡ ಸಂಪರ್ಕಿಸಿದೆ ಎನ್ನಲಾಗಿದೆ. ಶೀಘ್ರದಲ್ಲೇ ಆ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆಯಂತೆ.
ಈಗಾಗಲೇ ಈ ಸಿನಿಮಾಗೆ ಬಾಲಿವುಡ್ನ ಅನಿಲ್ ಕಪೂರ್ ಅವರು ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ಇದೀಗ ಶಾಹಿದ್ ಕಪೂರ್ ಮತ್ತು ಆಲಿಯಾ ಭಟ್ ಅವರ ಆಗಮನವಾದರೆ, ಈ ಚಿತ್ರಕ್ಕೆ ಉತ್ತರ ಭಾರತದಲ್ಲಿ ದೊಡ್ಡ ಹೈಪ್ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ.
ಮೈತ್ರಿ ಮೂವೀ ಮೇಕರ್ಸ್ ಮತ್ತು ಎನ್ಟಿಆರ್ ಆರ್ಟ್ಸ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಮೇ 20ರಂದು ಎನ್ಟಿಆರ್ ಅವರ ಹುಟ್ಟುಹಬ್ಬವಿದ್ದು, ಅಂದು ಚಿತ್ರದ ಅಧಿಕೃತ ಶೀರ್ಷಿಕೆ ಘೋಷಣೆ ಆಗುವ ಸಾಧ್ಯತೆ ಇದೆ. ರವಿ ಬಸ್ರೂರು ಅವರು ಈ ಸಿನಿಮಾಕ್ಕೆ ಸಂಗೀತ ನೀಡುತ್ತಿದ್ದು, ಭುವನ್ ಗೌಡ ಛಾಯಾಗ್ರಹಣ ಮಾಡುತ್ತಿದ್ದಾರೆ.