5 ಭಾಷೆಗಳಲ್ಲಿ ಬರ್ತಿದೆ ʻಸೀತಾ ಪಯಣʼ ಸಿನಿಮಾ; ರಿಲೀಸ್ ಡೇಟ್ ಘೋಷಣೆ ಮಾಡಿದ ಅರ್ಜುನ್ ಸರ್ಜಾ
'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಮೂಡಿಬಂದಿರುವ ಸೀತಾ ಪಯಣ ಚಿತ್ರವು ಫೆಬ್ರವರಿ 14ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಐಶ್ವರ್ಯ ಅರ್ಜುನ್ ಮತ್ತು ನಿರಂಜನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಕಾಶ್ ರೈ, ಸತ್ಯರಾಜ್ ಅವರಂತಹ ದಿಗ್ಗಜರ ಜೊತೆಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ ಆಕರ್ಷಣೆ.
-
ನಟ, ನಿರ್ದೇಶಕ ಹಾಗೂ ನಿರ್ಮಾಪಕ ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಅವರ ನಿರ್ದೇಶನದ, "ಸೀತಾ ಪಯಣ" ಚಿತ್ರದ ರಿಲೀಸ್ ಡೇಟ್ ಘೋಷಣೆ ಆಗಿದೆ. ಶ್ರೀ ರಾಮ್ ಫಿಲಂಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಹಾಗೂ ನಿರಂಜನ್ ಸುಧೀಂದ್ರ - ಐಶ್ವರ್ಯ ಅರ್ಜುನ್ ನಟಿಸಿರುವ ಈ ಸೀತಾ ಪಯಣ ಸಿನಿಮಾವು ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಫೆಬ್ರವರಿ 14 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.
ಅರ್ಜುನ್ ಸರ್ಜಾ ಏನಂದ್ರು?
"ಸೀತಾ ಪಯಣ, ಕನ್ನಡದಲ್ಲಿ ನಾನು ನಿರ್ದೇಶಿಸಿರುವ ಎರಡನೇ ಸಿನಿಮಾ. ಈವರೆಗೂ ಸುಮಾರು ಹದಿನೈದು ಚಿತ್ರಗಳನ್ನು ನಿರ್ದೇಶನ ಮಾಡಿದ್ದೇನೆ. "ಸೀತಾ ಪಯಣ"ದ ಕಥೆಯನ್ನು 13 ವರ್ಷಗಳ ಹಿಂದೆಯೇ ಸಿದ್ದಮಾಡಿಕೊಂಡಿದ್ದೆ. ಯಾವಾಗ ಇದನ್ನು ಚಿತ್ರ ಮಾಡುತ್ತೇನೋ ಎಂದು ಕಾಯುತ್ತಿದ್ದೆ. ಈಗ ಕಾಲ ಕೂಡಿಬಂದಿದೆ. ನನ್ನ ಮಗಳು ಐಶ್ವರ್ಯ ನಾಯಕಿಯಾಗಿ, ನಿರಂಜನ್ ನಾಯಕನಾಗಿ ನಟಿಸಿರುವ ಚಿತ್ರವಿದು. ಪ್ರಕಾಶ್ ರೈ, ಸತ್ಯರಾಜ್, ಕೋವೈ ಸರಳ ಅವರಂತಹ ಅನುಭವಿ ಕಲಾವಿದರ ತಾರಾಬಳಗವಿರುವ ಈ ಚಿತ್ರದಲ್ಲಿ ನಾನು ಕೂಡ ಅಭಿನಯಿಸಿದ್ದೇನೆ" ಎನ್ನುತ್ತಾರೆ ಅರ್ಜುನ್ ಸರ್ಜಾ.
ಅಹೋಬಲ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವಕ್ಕೆ ಖ್ಯಾತ ನಟ ಅರ್ಜುನ್ ಸರ್ಜಾ, ಧ್ರುವ ಸರ್ಜಾ ಚಾಲನೆ
"ನಮ್ಮ ಧ್ರುವ ಸರ್ಜಾ ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಅಭಿಮಾನಿಗಳಿಗೆ ಈ ಪಾತ್ರ ಮೆಚ್ಚುಗೆಯಾಗುತ್ತದೆ. ಅನೂಪ್ ರುಬೆನ್ಸ್ ಸಂಗೀತ ಸಂಯೋಜನೆ, ಬಾಲಮುರುಗನ್ ಛಾಯಾಗ್ರಹಣ ಹಾಗೂ ಆಯೂಬ್ ಅವರ ಸಂಕಲನ ಈ ಚಿತ್ರಕ್ಕಿದೆ. ಈ ಸಿನಿಮಾ ಬರೀ ವ್ಯಕ್ತಿಯ ಪಯಣವಲ್ಲ. ಮನಸ್ಸಿನ ಪಯಣ, ನಾವು ತಿಳಿದುಕೊಳ್ಳಬೇಕಿರುವ ಮೌಲ್ಯಗಳ ಪಯಣ ಹಾಗೂ ಭಾವನೆಗಳ ಜೊತೆಗಿನ ಸುಂದರ ಪಯಣ. ಒಟ್ಟಿನಲ್ಲಿ ಈ ಚಿತ್ರ ನೋಡಿದವರು ಚಿತ್ರಮಂದಿರದಿಂದ ಹೋಗುವಾಗ ಒಂದು ನಗುವಿನ ಜೊತೆ ಹೋಗುವುದು ಖಂಡಿತ. ಫೆಬ್ರವರಿ 14 ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಸೀತಾ ಪಯಣ ಬಿಡುಗಡೆಯಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ ಅರ್ಜುನ್ ಸರ್ಜಾ.
ಕನ್ನಡಕ್ಕೆ ಮರಳಿದ ಐಶ್ವರ್ಯಾ ಅರ್ಜುನ್
"ಬಹಳ ದಿನಗಳ ನಂತರ ಸೀತಾ ಪಯಣ ಚಿತ್ರದಲ್ಲಿ ನಟಿಸಿದ್ದೇನೆ. ನನ್ನ ಮೊದಲ ಚಿತ್ರ ಪ್ರೇಮ ಬರಹಕ್ಕೆ ಸಿಕ್ಕ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ. ಇನ್ನೂ ಅಪ್ಪ ಒಂದೊಳ್ಳೆ ಚಿತ್ರ ನಿರ್ದೇಶನ ಮಾಡಿದ್ದಾರೆ. ಎಲ್ಲರೂ ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು. ಪ್ರಕಾಶ್ ರೈ, ಸತ್ಯರಾಜ್ ಹಾಗೂ ಅಪ್ಪ ಸೇರಿದಂತೆ ಹಿರಿಯ ಕಲಾವಿದರ ಜೊತೆಗೆ ಅಭಿನಯಿಸಿದ್ದು ಬಹಳ ಖುಷಿಯಾಗಿದೆ. ನಿರಂಜನ್ ಅವರು ಕೂಡ ಒಳ್ಳೆಯ ನಟ. ಈಗಾಗಲೇ ಹಾಡುಗಳು ಎಲ್ಲರ ಮೆಚ್ಚುಗೆ ಗಳಿಸಿವೆ. ಇನ್ನು ಎರಡು ಹಾಡುಗಳು ಸದ್ಯದಲ್ಲೇ ರಿಲೀಸ್ ಆಗಲಿವೆ" ಎನ್ನುತ್ತಾರೆ ಐಶ್ವರ್ಯ ಅರ್ಜುನ್.
Arjun Sarja: ಶೂಟಿಂಗ್ನ ಮೊದಲ ದಿನವೇ ಅರ್ಜುನ್ ಸರ್ಜಾ ಕಪಾಳಕ್ಕೆ ಬಾರಿಸಿದ ರಾಜೇಂದ್ರ ಸಿಂಗ್ ಬಾಬು: ಕಾರಣವೇನು?
"ಸೀತಾ ಪಯಣ" ದಲ್ಲಿ ನಟಿಸಿದ್ದು ಬಹಳ ಸಂತೋಷವಾಗಿದೆ ಎನ್ನುವ ನಟ ನಿರಂಜನ್ ಸುಧೀಂದ್ರ, "ನಮ್ಮ ಕುಟುಂಬದವರ ಜೊತೆಗೆ ಇದ್ದ ಹಾಗೆ ಇತ್ತು. ಬೇರೆ ತಂಡ ಎನ್ನಿಸಲಿಲ್ಲ. ನನ್ನ ಪಾತ್ರ ಕೂಡ ಚೆನ್ನಾಗಿದೆ" ಎಂದರು. ಈ ಚಿತ್ರಕ್ಕೆ ಅಂಜನಾ ಅರ್ಜುನ್ ಹಾಗೂ ಸೂರಜ್ ಸರ್ಜಾ ಕೂಡ ಕೆಲಸ ಮಾಡಿದ್ದಾರೆ.