ವಿಧಾನಸೌಧದ ಮುಂಭಾಗದಲ್ಲಿ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (17th Bengaluru International Film Festival) ಉದ್ಘಾಟನೆ ಆಗಿದೆ. ಇಂದು (ಜನವರಿ 29) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಚಿತ್ರೋತ್ಸವ ಉದ್ಘಾಟನೆ ಮಾಡಿದ್ದಾರೆ. ಖ್ಯಾತ ನಟಿ ರುಕ್ಮಿಣಿ ವಸಂತ್ ಕೂಡ ಈ ವೇಳೆ ಉಪಸ್ಥಿತರಿದ್ದರು.
ಈ ವೇಳೆ ನಟಿ ಮಾತನಾಡಿ, ಎಲ್ಲರಿಗೂ ನಮಸ್ಕಾರ, ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ನನ್ನಂತಹ ಯುವನಟಿಯನ್ನು ಆಹ್ವಾನಿಸಿದ್ದು ದೊಡ್ಡ ಗೌರವ. ನಾನು ವಿನಯಪೂರ್ವಕವಾಗಿ ಒಪ್ಪಿಕೊಂಡು ಬಂದಿದ್ದೇನೆ. ಚಿಕ್ಕ ವಯಸ್ಸಿನಿಂದ ಹಲವಾರು ಕಲಾ ಪ್ರಕಾರಗಳನ್ನು ನೋಡಿಕೊಂಡು ಬಂದ ನನಗೆ , ಬೆಂಗಳೂರು ಎಲ್ಲ ಕಲೆಗಳಿಗೆ ನೆಲೆ ಎನ್ನಲು ಹೆಮ್ಮೆ ಆಗುತ್ತದೆ.
ಸಿನಿಮಾ ಈ ಎಲ್ಲ ಕಲೆಗಳನ್ನು ಬಳಸಿಕೊಳ್ಳಲು ಮಾಧ್ಯಮ. ಇಲ್ಲಿ ಎಲ್ಲ ಸಿನಿರಸಿಕರು ಬರ್ತಾರೆ. ಎಲ್ಲರನ್ನೂ ಭೇಟಿ ಮಾಡ್ತಾರೆ. ಕಲೆಯನ್ನು ಎಲ್ಲರೂ ಕಲಿಯುತ್ತಾರೆ. ಇದರ ಹಿಂದೆ ಎಲ್ಲರ ಪರಿಶ್ರಮ ಇರುತ್ತದೆ. ಈ ವರ್ಷವೂ ಸಿನಿಮೋತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸುತ್ತೇನೆ ಎಂದರು.
‘ಸ್ತ್ರೀ ಎಂದರೇ ಅಷ್ಟೇ ಸಾಕೆ’ ಎಂಬ ಥೀಮ್
‘ಸ್ತ್ರೀ ಎಂದರೇ ಅಷ್ಟೇ ಸಾಕೆ’ ಎಂಬ ಥೀಮ್ನಲ್ಲಿ ಈ ಬಾರಿಯ ಸಿನಿಮೋತ್ಸವ ನಡೆಯಲಿದೆ. ನಟ ಪ್ರಕಾಶ್ ರಾಜ್, ನಟಿ ರುಕ್ಮಿಣಿ ವಸಂತ್ ಸೇರಿದಂತೆ ಹಲವರು ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ವಾರ್ತಾ ಇಲಾಖೆ, ಚಲನಚಿತ್ರ ಅಕಾಡೆಮಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಸಹಯೋಗದೊಂದಿಗೆ ಈ ಸಿನಿಮೋತ್ಸವ ನಡೆಯುತ್ತಿದೆ. ಇಂದಿನಿಂದ ಫೆಬ್ರವರಿ 6ರವರೆಗೂ ನಡೆಯಲಿದೆ. ಬೆಂಗಳೂರಿನ ರಾಜಾಜಿನಗರದ ಲುಲು ಮಾಲ್ನ ಸಿನಿಪೊಲಿಸ್ ಮಲ್ಟಿಪ್ಲೆಕ್ಸ್, ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿ ಮತ್ತು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಿನಿಮಾಗಳ ಪ್ರದರ್ಶನ ಆಗಲಿದೆ.
ಇದನ್ನೂ ಓದಿ: ಡಾಲಿ ಪಿಕ್ಚರ್ಸ್ನ 6ನೇ ಸಿನಿಮಾ ಘೋಷಿಸಿದ ನಟ ಧನಂಜಯ; ʻಹೆಗ್ಗಣ ಮುದ್ದುʼ ಸಿನಿಮಾಗೆ ಅರುಣ್ ಸಾಗರ್ ಪುತ್ರಿ ನಾಯಕಿ
ಸಿನಿಮಾಗಳು ಮನರಂಜನೆಗೆ ಸೀಮಿತವಾಗದೆ ಸಮಾಜದ ಅಂಕುಡೊಂಕುಗಳನ್ನು ತಿದ್ದಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.ಸಮಾಜದಲ್ಲಿ ಅಸಮಾನತೆ ಇದೆ. ಅಸಮಾನತೆಗೆ ತುತ್ತಾಗಿರುವ ಮಹಿಳೆಯರು, ಹಿಂದುಳಿದವರು, ರೈತ, ದಲಿತ ಸಮುದಾಯಗಳಿವೆ. ಈ ಸಮುದಾಯಗಳ ಬೆಳವಣಿಗೆ ಮತ್ತು ಬದಲಾವಣೆಗೆ ಆತ್ಮವಿಶ್ವಾಸ ತುಂಬುವ ರೀತಿಯಲ್ಲಿ ಶ್ರಮಿಸಿದಾಗ ಸಿನಿಮಾ ಮಾಧ್ಯಮದ ಆಶಯ ಮತ್ತು ಉದ್ದೇಶ ಈಡೇರಿದಂತಾಗುತ್ತದೆ. ಡಾ.ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿ ಈ ಸಾಮಾಜಿಕ ಜವಾಬ್ದಾರಿಯನ್ನು ಕಾಣಲು ಸಾಧ್ಯವಿತ್ತು ಎಂದು ಸ್ಮರಿಸಿದರು.
ಯಾರೆಲ್ಲ ಭಾಗಿ?
ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಬಹುಭಾಷಾ ನಟ ಪ್ರಕಾಶ್ ರಾಜ್, ಖ್ಯಾತ ನಟಿ ರುಕ್ಮಿಣಿ ವಸಂತ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಚಲನಚಿತ್ರ ಅಕಾಡೆಮಿ ಸದಸ್ಯರಾದ ಚಿದಾನಂದ ಪಟೇಲ್ ಸೇರಿ ಹಲವರು ಉಪಸ್ಥಿತರಿದ್ದರು.