ʻಮಾಸ್ ಮಹಾರಾಜʼ ರವಿತೇಜ ಸದ್ಯ ಟಾಲಿವುಡ್ನಲ್ಲಿ ಸಾಲು ಸಾಲು ಸೋಲಗಳನ್ನು ಕಂಡಿದ್ದಾರೆ. ಅವಸರವಾಗಿ ಅವರಿಗೆ ಒಂದು ಗೆಲುವು ಬೇಕಿದೆ. ಅದಕ್ಕಾಗಿ ಈ ಬಾರಿ ಅವರು ನಿರ್ದೇಶಕ ಶಿವ ನಿರ್ವಾಣ ಜೊತೆ ಕೈಜೋಡಿಸಿದ್ದಾರೆ. ಹೌದು, ಇವರಿಬ್ಬರು ಈಗ ಒಟ್ಟಿಗೆ ʻಇರುಮುಡಿʼ ಎಂಬ ವಿಶಿಷ್ಟ ಕಥಾಹಂದರದ ಜೊತೆಗೆ ಕೌಟುಂಬಿಕ ಭಾವನೆಗಳುಳ್ಳ ಸಿನಿಮಾಗೆ ಕೈಹಾಕಿದ್ದಾರೆ.
ಈ ಬಾರಿ ರವಿತೇಜ ಅವರನ್ನು ಸಂಪೂರ್ಣ ಹೊಸ ಅವತಾರದಲ್ಲಿ ಪ್ರೆಸೆಂಟ್ ಮಾಡಲು ಶಿವ ನಿರ್ವಾಣ ಸಜ್ಜಾಗಿದ್ದಾರೆ. ಈ ಆಕ್ಷನ್ ಡ್ರಾಮಾ ಸಿನಿಮಾದ ‘ದಿ ಹಾರ್ಟ್ ಆಫ್ ಇರುಮುಡಿ’ (The Heart of Irumudi) ಗ್ಲಿಂಪ್ಸ್ ಅನ್ನು ಚಿತ್ರತಂಡ ಬುಧವಾರ (ಜೂನ್ 3) ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆಧ್ಯಾತ್ಮಿಕತೆ ಮತ್ತು ಕೌಟುಂಬಿಕ ಬಾಂಧವ್ಯದ ಸಮ್ಮಿಲನವಾಗಿ ಮೂಡಿಬಂದಿರುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸಿನಿಮಾದಲ್ಲೇ ರವಿ ತೇಜ ನಟನೆಯ ಹೈಲೈಟ್ ಆಗೋದು ಪಕ್ಕಾ
ರವಿತೇಜ ಅವರನ್ನು ಇದುವರೆಗೆ ಪಕ್ಕಾ ಕಮರ್ಷಿಯಲ್ ಮತ್ತು ಮಾಸ್ ಆಕ್ಷನ್ ಪಾತ್ರಗಳಲ್ಲೇ ಹೆಚ್ಚಾಗಿ ನೋಡಿದ್ದೇವೆ. ಆದರೆ 'ಇರುಮುಡಿ' ಚಿತ್ರದಲ್ಲಿ ಅವರು ಒಬ್ಬ ಜವಾಬ್ದಾರಿಯುತ ತಂದೆಯಾಗಿ, ಹಾಗೆಯೇ ಅಯ್ಯಪ್ಪ ಸ್ವಾಮಿಯ ಪರಮ ಭಕ್ತನಾಗಿ ಕಾಣಿಸಿಕೊಂಡಿದ್ದಾರೆ. ಈಗ ಬಿಡುಗಡೆಯಾಗಿರುವ ಗ್ಲಿಂಪ್ಸ್ ವಿಡಿಯೋದಲ್ಲಿ ತಂದೆ-ಮಗಳ ನಡುವಿನ ಬಾಂಧವ್ಯವನ್ನು ನಿರ್ದೇಶಕರು ಹೃದಯಸ್ಪರ್ಶಿಯಾಗಿ ತೋರಿಸಿದ್ದಾರೆ. ರವಿತೇಜ ಅವರ ನಟನೆ ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಲಿದೆ ಎಂಬುದು ಗ್ಲಿಂಪ್ಸ್ ನೋಡಿದರೆ ಗೊತ್ತಾಗುತ್ತದೆ.
ಗೆಲುವು ತಂದುಕೊಡಲಿದೆಯಾ ʻಇರುಮುಡಿʼ?
ಸತತ ಸೋಲುಗಳಿಂದ ಕಂಗೆಟ್ಟಿರುವ ನಟ ರವಿತೇಜ ಅವರಿಗೆ ಈ ಸಿನಿಮಾದ ಗೆಲುವು ಅತ್ಯಂತ ನಿರ್ಣಾಯಕವಾಗಿದೆ. ಬಾಕ್ಸ್ ಆಫೀಸ್ನಲ್ಲಿ ಒಂದು ಯಶಸ್ಸಿಗಾಗಿ ಕಾಯುತ್ತಿರುವ ಮಾಸ್ ಮಹಾರಾಜ, ಈ ವಿಭಿನ್ನ ಕಥೆಯ ಮೂಲಕ ಮತ್ತೆ ಸಕ್ಸಸ್ ಹಳಿಗೆ ಮರಳಲು ಭರ್ಜರಿ ತಯಾರಿ ನಡೆಸಿದ್ದಾರೆ. ರವಿತೇಜ ಅವರ ಎನರ್ಜಿ ಹಾಗೂ ಶಿವ ನಿರ್ವಾಣ ಎಮೋಷನ್ಸ್ ಒಂದಾದರೆ ಇರುಮುಡಿ ಮೂಲಕ ಚಿತ್ರಮಂದಿರಗಳಲ್ಲಿ ಮ್ಯಾಜಿಕ್ ಮರುಸೃಷ್ಟಿಯಾಗುವುದು ಖಚಿತ ಎಂಬುದು ಸಿನಿ ವಿಶ್ಲೇಷಕರ ಮಾತು.
ʻಇರುಮುಡಿʼ ಚಿತ್ರದಲ್ಲಿ ರವಿತೇಜ ಅವರಿಗೆ ಜೋಡಿಯಾಗಿ ಪ್ರಿಯಾ ಭವಾನಿ ಶಂಕರ್ ನಟಿಸುತ್ತಿದ್ದಾರೆ. 'ಮೈತ್ರಿ ಮೂವಿ ಮೇಕರ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಈ ಸಿನಿಮಾವನ್ನು ಬೃಹತ್ ಬಜೆಟ್ನಲ್ಲಿ ನಿರ್ಮಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಆಗಸ್ಟ್ನಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳಿವೆ.