ಕರಾವಳಿಯ ಫೈರ್ ಬ್ರ್ಯಾಂಡ್ ಎಂದೇ ಕರುನಾಡಿನೆಲ್ಲೆಡೆ ಹೆಸರುವಾಸಿಯಾದ ಚೈತ್ರಾ ಕುಂದಾಪುರ (Chaithra Kundapura) ಬಿಗ್ ಬಾಸ್ ಸೀಸನ್ 11ರ ಮೂಲಕ ಸಾಕಷ್ಟು ಜನಪ್ರಿಯರಾದರು. ಇದೀಗ ಇವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ಮನೆಗೆ ಹೋದಾಗಲೇ ಮದುವೆ ಬಗ್ಗೆ ಮೌನ ಮುರಿದಿದ್ದರು. ನನಗೆ ಈಗಾಗಲೇ ಹುಡುಗ ಫಿಕ್ಸ್ ಆಗಿದ್ದಾನೆ. ಬಿಗ್ ಬಾಸ್ನಿಂದ ಹೋದ ತಕ್ಷಣ ಮದುವೆ ಎಂದು ಬಹಿರಂಗವಾಗಿಯೇ ಹೇಳಿದ್ದರು. ಆದರೆ, ಬಿಗ್ ಬಾಸ್ ಮುಗಿದು ಕೆಲ ತಿಂಗಳಾದರು ಚೈತ್ರಾ ಮದುವೆ ಬಗ್ಗೆ ಯಾವುದೇ ಅಪ್ಡೇಟ್ ಇರಲಿಲ್ಲ.
ಆದರೆ, ಇತ್ತೀಚೆಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ಹಿಡಿದು ಓಡಾಡುತ್ತಿದ್ದ ಚೈತ್ರಾ ಅವರ ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ಮದುವೆಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿದೆ. ಚೈತ್ರಾ ಕುಂದಾಪುರ ಅವರದ್ದು ಇಂದು ಅಂದರೆ ಮೇ 9ಕ್ಕೆ ಮದುವೆ ನಡೆಯಲಿದೆ. ಇದರ ಮಧ್ಯೆ ಚೈತ್ರಾ ಕುಂದಾಪುರ ಅವರ ಮೆಹಂದಿ ಕಾರ್ಯಕ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೊನ್ನೆಯಷ್ಟೆ ಕಲರ್ಸ್ ಕನ್ನಡ ವಾಹಿನಿಯ ಮಜಾ ಟಾಕೀಸ್ ಶೋಗೆ ಚೈತ್ರಾ ಕುಂದಾಪುರ ಬಂದಿದ್ದರು. ಚೈತ್ರಾ ಅವರಿಗೆ ಮದುವೆ ಫಿಕ್ಸ್ ಅಗಿದೆ ಎನ್ನುತ್ತಲೇ ಸೃಜನ್ ಲೋಕೇಶ್ ಮಾತು ಶುರು ಮಾಡಿದ್ದರು. ನಮ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂದು ಚೈತ್ರಾ ಹೇಳಿದ್ದರು. ಇವರದ್ದು 12 ವರ್ಷದ ಲವ್ ಸ್ಟೋರಿ. ಕಾಲೇಜಿನಲ್ಲಿ ಲವ್ ಶುರುವಾಗಿದ್ದು ಎಂಬ ವಿಚಾರವನ್ನು ರಿವೀಲ್ ಮಾಡಿದ್ದರು.
‘‘ನನ್ನ ಮದುವೆ ಯಾವಾಗಲೋ ನಡೆಯಬೇಕಿತ್ತು. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಮದುವೆ ಯಾವಾಗ ಎಂದು ನಮ್ಮ ಮನೆಯವರು ನಿರ್ಧಾರ ಮಾಡುತ್ತಾರೆ. ಈ ವಿಚಾರದಲ್ಲಿ ಮನೆಯವರ ನಡುವೆ ಮಾತುಕಥೆಗಳು ಇನ್ನೂ ನಡೆಯುತ್ತಿದೆ. ನಾವೆಲ್ಲರೂ ಒಂದೊಳ್ಳೆ ಮುಹೂರ್ತಕ್ಕೆ ಕಾಯುತ್ತಿದ್ದೇವೆ. ನಮ್ಮ ಸಂಪ್ರದಾಯಗಳಲ್ಲಿ ಏನೆಲ್ಲಾ ನಡೆಯಬೇಕೋ ಮೊದಲು ಅದೆಲ್ಲವೂ ನಡೆಯಲಿ ಆ ನಂತರ ಮದುವೆ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ’’ ಎಂದು ಚೈತ್ರಾ ಕುಂದಾಪುರ ಮಜಾ ಟಾಕೀಸ್ನಲ್ಲಿ ಹೇಳಿಕೊಂಡಿದ್ದರು.
ಸದ್ಯ ಚೈತ್ರಾ ಕುಂದಾಪುರ ಅವರ ಭಾವಿ ಪತಿಯನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಇವರನ್ನ ಮದುವೆಯಾಗಲಿರುವ ಹುಡುಗನ ಹೆಸರು ಶ್ರೀಕಾಂತ್ ಕಶ್ಯಪ್. ಶ್ರೀಕಾಂತ್ ಮೂಲತಃ ಉಡುಪಿಯ ಹಿರಿಯಡ್ಕದವರು. ಇಂದು ಮೇ.9 ಶುಕ್ರವಾರದಂದು ಚೈತ್ರಾ ಕುಂದಾಪುರ ಅವರ ವಿವಾಹವು ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ.