ಬಿಗ್ ಬಾಸ್ಗೆ (Bigg Boss) ಹೋದು ಬಂದ ಬಳಿಕ ಅದೆಷ್ಟೊ ಕಲಾವಿದರ ಬದುಕು ಬದಲಾಗಿದೆ. ಹಿಂದೆ ಮೂಲೆಗುಂಪಾಗಿದ್ದ ಕೆಲ ಕಲಾವಿದರು ಈ ರಿಯಾಲಿಟಿ ಶೋಗೆ ಹೋಗಿ ಬಂದ ಬಳಿಕ ಅವರ ಬದಕು ಬಂಗಾರವಾಗಿದೆ. ಈ ಸಾಲಿನಲ್ಲಿ ಇಂದು ನಮಗೆ ಮುಂಚೂಣಿಯಲ್ಲಿ ಕಾಣುತ್ತಿರುವ ವ್ಯಕ್ತಿ ಎಂದರೆ ಅದು ಉಗ್ರಂ ಮಂಜು. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ಮಂಜು, ತಮ್ಮದೇ ಮ್ಯಾಜರಿಸಂ ಮೂಲಕ ಕರ್ನಾಟಕ ಜನತೆಗೆ ಇಷ್ಟವಾದವರು. ಆರಂಭದಲ್ಲಿ ಅಬ್ಬರಿಸುತ್ತಿದ್ದ ಮಂಜು ಬಳಿಕ ಗೌತಮಿ ಜಾಧವ್ ಜೊತೆ ಸೇರಿ ಸಂಪೂರ್ಣ ಬದಲಾದರು. ಕತ್ತಲೆಯಿಂದ ಬೆಳಕಿನೆಡೆಗೆ ಬಂದರು.
ಬಿಗ್ ಬಾಸ್ ಬರುವುದಕ್ಕೂ ಮುನ್ನ ಲೈಫ್ ಅನ್ನು ಅಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಬೇಕಾಬಿಟ್ಟಿ ಹಣ ಖರ್ಚು, ಕುಡಿತದ ಚಟಕ್ಕೆ ಒಳಗಾಗಿದ್ದರು. ಇದನ್ನು ಸ್ವತಃ ಅವರೇ ದೊಡ್ಮನೆಯೊಳಗೆ ಹೇಳಿದ್ದರು. ಆದರೀಗ ಮಂಜು ಸಂಪೂರ್ಣವಾಗಿ ಬದಲಾಗಿದ್ದಾರೆ. ಬಿಗ್ ಬಾಸ್ನಿಂದ ಹೊರಬಂದ ಬಳಿಕ ಮಂಜು ಹೊಸ ಜೀವನ ಶುರುಮಾಡಿದ್ದಾರೆ. ಕುಡಿತದ ಚಟದಿಂದ ಎಲ್ಲ ಹೊರಬಂದಿದ್ದಾರೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ.
ಮೊನ್ನೆಯಷ್ಟೆ ಬಿಬಿಕೆ 11ನ ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಕಿಶನ್ ಅವರು ತನ್ನ ಹೆಂಡತಿಯ ಹುಟ್ಟುಹಬ್ಬವನ್ನು ಭರ್ಜರಿ ಆಗಿ ಆಚರಿಸಿದ್ದರು. ರಜತ್ ಅವರು ಪತ್ನಿ ಅಕ್ಷಿತಾ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಿದ್ದರು. ಈ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಭಾಗಿಯಾಗಿ ಅಕ್ಷಿತಾಗೆ ಶುಭಕೋರಿದ್ದಾರೆ. ಬರ್ತ್ಡೇ ಪಾರ್ಟಿಗೆ ಭವ್ಯಾ ಗೌಡ, ವಿನಯ್ ಗೌಡ, ಮೋಕ್ಷಿತಾ ಪೈ, ಧನರಾಜ್ ಆಚಾರ್, ಶಿಶಿರ್ ಶಾಸ್ತ್ರಿ, ಉಗ್ರಂ ಮಂಜು, ನಿವೇದಿತಾ ಗೌಡ ಹಾಜರಾಗಿ ಅಕ್ಷಿತಾಗೆ ವಿಶಸ್ ತಿಳಿಸಿದರು.
ಇದೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಉಗ್ರಂ ಮಂಜು ಪ್ರಮುಖ ಹೈಲೇಟ್ ಆಗಿದ್ದರು. ಮಂಜು ಅವರು ಊಟ ಮಾಡುವ ಸಮಯದಲ್ಲಿ ತಾವು ಮದ್ಯಪಾನ ಬಿಟ್ಟಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಮೋಕ್ಷಿತಾ ಪೈ ಜೊತೆ ಊಟ ಮಾಡುತ್ತಾ ಮಾತನಾಡಿದ ಉಗ್ರಂ ಮಂಜು, ನಾನ್ ವೆಜ್ ತಿನ್ನುವುದನ್ನು ಹಾಗೂ ಡ್ರಿಂಕ್ಸ್ ಮಾಡುವುದನ್ನು ಬಿಟ್ಟಿದ್ದೇನೆ. 48 ದಿನ ತಾಯತ ಕಟ್ಟಿಸಿ ಕೊಂಡಿದ್ದೇನೆ. ಅದಕ್ಕೆ ನನ್ನ ತಂಗಿ ಹೇಳುತ್ತಿದ್ದರು ಮುಖ ಬ್ರೈಟ್ ಆಗಿದೆ, ಗ್ಲಾಮರ್ ಬಂದಿದೆ ಅಂತಾ ಎಂದು ಹೇಳಿದ್ದಾರೆ.
ಮಂಜು ಅವರಿಗೆ ಸದ್ಯ ಸಿನಿಮಾದಲ್ಲಿ ಆಫರ್ಗಳು ಹುಡುಕಿ ಬರುತ್ತಿವೆ. ಅವರು ಸುದೀಪ್ ಅಳಿಯನ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುದೀಪ್ ಅಳಿಯ ಸಂಚಿತ್ ಸಂಜೀವ್ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ಜಿಮ್ಮಿ ಕೆಲಸಗಳು ವಿಳಂಬ ಆಗಿದೆ. ಹೀಗಾಗಿ, ಮ್ಯಾಂಗೋ ಪಚ್ಚ ಅವರ ಮೊದಲ ಸಿನಿಮಾ ಆಗಲಿದೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಆರಂಭ ಆಗಿದೆ. ಉಗ್ರಂ ಮಂಜು ಅವರು ಈ ಸಿನಿಮಾ ಸೆಟ್ನಲ್ಲಿ ಸೇರಿಕೊಂಡಿದ್ದಾರೆ.