ಸಾಲ್ಟ್ & ಪೆಪ್ಪರ್ ಲುಕ್ನಲ್ಲಿ ಸರ್ಪ್ರೈಸ್ ನೀಡಿದ ಶಿವಣ್ಣ; ಸದ್ದಿಲ್ಲದೇ ಅನೌನ್ಸ್ ಆಯ್ತು ʻಬೇಲ್ʼ ಸಿನಿಮಾದ ರಿಲೀಸ್ ಡೇಟ್!
ʻಕರುನಾಡ ಚಕ್ರವರ್ತಿʼ ಡಾ. ಶಿವರಾಜ್ಕುಮಾರ್ ಸಾಲ್ಟ್ ಅಂಡ್ ಪೆಪ್ಪರ್ ಲುಕ್ನಲ್ಲಿ ಕಾಣಿಸಿಕೊಂಡಿರುವ 'ಬೇಲ್' ಸಿನಿಮಾದ ಬಿಡುಗಡೆ ದಿನಾಂಕ ಸದ್ದಿಲ್ಲದೆ ಅನೌನ್ಸ್ ಆಗಿದೆ. ಪವನ್ ಒಡೆಯರ್ ನಿರ್ದೇಶನದ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಕಾಣಲಿದೆ.
-
ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಸದಾ ಹೊಸ ಬಗೆಯ ಪ್ರಯೋಗಗಳಿಗೆ ಕೈಹಾಕುವುದರಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ. ಇದೀಗ ಸ್ಯಾಂಡಲ್ವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ (KVN Productions) ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ 'ಬೇಲ್' (Bail) ಸಿನಿಮಾದದಲ್ಲಿ ಶಿವಣ್ಣ ನಟಿಸಿದ್ದು, ಇದರ ಫಸ್ಟ್ ಲುಕ್ ಮತ್ತು ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿದೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ಬೇಲ್ ರಿಲೀಸ್
ಯಶಸ್ವಿ ಚಿತ್ರಗಳ ನಿರ್ದೇಶಕ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾದಲ್ಲಿ ಶಿವಣ್ಣ ಹಿಂದೆಂದೂ ಕಾಣಿಸಿಕೊಳ್ಳದ ವಿಶಿಷ್ಟ ಅವತಾರದಲ್ಲಿ ದರ್ಶನ ನೀಡಿದ್ದಾರೆ. ಈ ಸಾಲ್ಟ್ & ಪೆಪ್ಪರ್ ಲುಕ್ ನೋಡಿ ಫ್ಯಾನ್ಸ್ ಥ್ರೊಲ್ ಆಗಿದ್ದಾರೆ. ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಸದ್ದಿಲ್ಲದೆ ಚಿತ್ರದ ಫಸ್ಟ್ ಲುಕ್ ಜೊತೆಗೆ ಬಿಡುಗಡೆಯ ದಿನಾಂಕವನ್ನೂ ಘೋಷಣೆ ಮಾಡಿ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದೆ. ಎಲ್ಲಾ ಅಂದುಕೊಂಡಂತೆ ನಡೆದಲ್ಲಿ, ಈ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾ ಸಿನಿಮಾ ಮುಂಬರುವ ವರಮಹಾಲಕ್ಷ್ಮಿ ಹಬ್ಬದ ವಿಶೇಷ ಸಂದರ್ಭದಲ್ಲಿ ವಿಶ್ವದಾದ್ಯಂತ ಪ್ರೇಕ್ಷಕರ ಮುಂದೆ ಬರಲಿದೆ.
ಮಾಸ್ ಮತ್ತು ಕ್ಲಾಸ್ನಲ್ಲಿ ಲುಕ್ನಲ್ಲಿ ಶಿವಣ್ಣ
ʻಬೇಲ್ʼ ಚಿತ್ರದಲ್ಲಿ ಶಿವಣ್ಣ 'ವಿಜಿ' ಎಂಬ ವಿಭಿನ್ನ ಶೇಡ್ ಇರುವ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಬಿಡುಗಡೆಯಾಗಿರುವ ಝಲಕ್ನಲ್ಲಿ ಶಿವಣ್ಣ ಕಂಪ್ಲೀಟ್ ಸಾಲ್ಟ್ ಅಂಡ್ ಪೆಪ್ಪರ್ (Salt and Pepper) ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಅವರ ಖದರ್ ಪ್ರೇಕ್ಷಕರಿಗೆ ಹೊಸ ಕಿಕ್ ನೀಡುತ್ತಿದೆ. ಕೈಯಲ್ಲೊಂದು ಕೊಡೆ ಹಿಡಿದು, ಸಾಕುನಾಯಿಯ ಜೊತೆ ಮಳೆಯ ನಡುವೆ ಶಿವಣ್ಣ ನಡೆದು ಬರುವ ಸ್ಟೈಲಿಶ್ ಎಂಟ್ರಿ ಮಾಸ್ ಮತ್ತು ಕ್ಲಾಸ್ ಎರಡೂ ವರ್ಗದ ಪ್ರೇಕ್ಷಕರನ್ನು ಸೆಳೆಯುವಂತಿದೆ.
ಗ್ಲಿಂಪ್ಸ್ನಲ್ಲಿದೆ ಖಡಕ್ ಸಂಭಾಷಣೆ
ವಿಶೇಷವಾಗಿ, ಈ ಗ್ಲಿಂಪ್ಸ್ನಲ್ಲಿ ಬರುವ ಡೈಲಾಗ್ ಜುಗಲ್ಬಂದಿ ಸಿನಿಮಾ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ರಾತ್ರಿಯ ಭಾರಿ ಮಳೆಯಲ್ಲಿ ಬೆಂಗಳೂರಿನ ಸುಂದರ ಚಿತ್ರಣದೊಂದಿಗೆ ವಿಡಿಯೋ ಆರಂಭವಾಗುತ್ತದೆ. ನಿಧಾನವಾಗಿ ತನ್ನ ಸಾಕುನಾಯಿಗೆ ಬಿಸ್ಕೆಟ್ ತಿನ್ನಿಸುತ್ತಿರುವ ವಿಜಿಯ ಪರಿಚಯವಾಗುತ್ತದೆ. ಅಷ್ಟರಲ್ಲಿ ಬರುವ ಫೋನ್ ಕರೆಯೊಂದರಲ್ಲಿ, ಹಿರಿಯ ನಟ ಸಾಯಿ ಕುಮಾರ್ ಅವರ ಗಂಭೀರ ಧ್ವನಿ ಕೇಳಿಸುತ್ತದೆ. "ನೀನು ಹಚ್ಚಿರುವ ಬೆಂಕಿ ಬರೀ ಊರನ್ನು ಅಲ್ಲ, ದೇಶವನ್ನು ಸುಡುತ್ತಿದೆ... ಇಷ್ಟೆಲ್ಲಾ ಮಾಡಿ ಹೇಗೆ ಇಷ್ಟು ಸೈಲೆಂಟ್ ಆಗಿದ್ದೀಯಾ?" ಎಂದು ಪ್ರಶ್ನಿಸಿದಾಗ, ಶಿವಣ್ಣ ತಮ್ಮದೇ ವಿಶಿಷ್ಟ ಶೈಲಿಯಲ್ಲಿ "ಕೆಲವು ಸ್ವಭಾವಕ್ಕೆ ಧೈರ್ಯದ ಅಭಾವ ಯಾವಾಗ್ಲೂ ಆಗಲ್ಲ" ಎಂದು ಖಡಕ್ ಆಗಿ ಉತ್ತರ ನೀಡುವ ಸಂಭಾಷಣೆ ರೋಮಾಂಚನ ಉಂಟುಮಾಡುತ್ತದೆ.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ
ನಿರ್ದೇಶಕ ಪವನ್ ಒಡೆಯರ್ ಈ ಚಿತ್ರವನ್ನು ನೈಜ ಘಟನೆಗಳನ್ನು ಆಧರಿಸಿ, ಅತ್ಯಂತ ರೋಚಕವಾಗಿ ಕಟ್ಟಿಕೊಡುತ್ತಿದ್ದಾರೆ ಎನ್ನಲಾಗಿದೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತವಿದ್ದು, ವೈದಿ ಅವರ ಛಾಯಾಗ್ರಹಣ, ಗುಣ ಅವರ ಪ್ರೊಡಕ್ಷನ್ ಡಿಸೈನ್ ಹಾಗೂ ಶಶಾಂಕ್ ನಾರಾಯಣ್ ಅವರ ಸಂಕಲನವಿದೆ. ಕೆವಿಎನ್ ಸಂಸ್ಥೆಯ ವೆಂಕಟ್ ನಾರಾಯಣ್ ಅವರು ಅದ್ಧೂರಿ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.