ʻಚಿನ್ನಾರಿಮುತ್ತʼ ವಿಜಯ್ ರಾಘವೇಂದ್ರ ಅವರು ವೆಬ್ ಸರಣಿ ಲೋಕಕ್ಕೆ ಕಾಲಿಟ್ಟಿದ್ದಾರೆ. ಹೌದು, ʻರಾಕ್ಷಸʼ ಎಂಬ ವೆಬ್ ಸರಣಿಯಲ್ಲಿ ವಿಜಯ್ ರಾಘವೇಂದ್ರ ನಟಿಸಿದ್ದು, ಇದೊಂದು ಕ್ರೈಮ್ ಥ್ರಿಲ್ಲರ್ ಕಥೆಯಾಗಿದೆ. ಇದೇ ಫೆಬ್ರವರಿ 20ರಿಂದ ಜೀ5ನಲ್ಲಿ ಪ್ರಸಾರಗೊಳ್ಳಲಿರುವ ಈ ವೆಬ್ ಸರಣಿಯಲ್ಲಿ ಮಲಪ್ರಭಾ ನದಿಯ ದಂಡೆಯ ಸುತ್ತ ನಡೆಯುವ ಆಶ್ಚರ್ಯಕರ ಘಟನೆಗಳನ್ನು 7 ಸಂಚಿಕೆಗಳಲ್ಲಿ ಹೇಳಲಾಗುತ್ತಿದೆ.
ರಾಕ್ಷಸ ಕಥೆ ಏನು?
ಈ ಟ್ರೈಲರ್ ಸಬ್ ಇನ್ಸ್ಪೆಕ್ಟರ್ ಹನುಮಪ್ಪ ಎಂಬ ಪಾತ್ರವನ್ನು ಪರಿಚಯಿಸುತ್ತದೆ. ಸವದತ್ತಿಯ ಎಲ್ಲಮ್ಮನ ಗುಡಿಯ ಬಳಿ ಮೊಸಳೆ ದಾಳಿಗೆ ಒಳಗಾಗುವ ಸರಣಿ ಪ್ರಕರಣಗಳ ಬಗ್ಗೆ ತನಿಖೆ ನಡೆಸಲು ಹನುಮಪ್ಪ ಬರುತ್ತಾನೆ. ಈ ಗೋಜಲಾದ ಪ್ರಕರಣಗಳ ಚಕ್ರವ್ಯೂಹವನ್ನು ಭೇದಿಸಲು ಬರುವ ಹನುಮಪ್ಪನಿಗೆ ಆಗುವ ತಳಮಳ, ಎದುರಾಗುವ ಸಮಸ್ಯೆಗಳು, ಇದು ಕೇವಲ ಒಂದು ಆಕಸ್ಮಿಕ ಅವಘಡವೇ ಅಥವಾ ಬೇರೆ ಯಾವುದಾದರೂ ಮರ್ಮ ಅಡಗಿದೆಯೇ? ಇವೆಲ್ಲವನ್ನೂ ಕಾದು ನೋಡಬೇಕಿದೆ.
ಹೊಸ ಕೇಸ್ನೊಂದಿಗೆ ಅಖಾಡಕ್ಕಿಳಿದ ವಿಜಯ್ ರಾಘವೇಂದ್ರ; ಈ ಬಾರಿ ಯಾರೆಲ್ಲಾ ಸಾಥ್ ಕೊಟ್ರು ನೋಡಿ
ತರುಣ್ ಸುಧೀರ್ ನಿರ್ಮಾಣದ ವೆಬ್ ಸರಣಿ
ಸುಹಾನ್ ಪ್ರಸಾದ್ ಮತ್ತು ಅಪೂರ್ವ ಅವರ ಬರವಣಿಗೆಯಲ್ಲಿ ಮೂಡಿ ಬರುತ್ತಿರುವ ಈ ವೆಬ್ ಸರಣಿಯಲ್ಲಿ ವಿಜಯ್ ರಾಘವೇಂದ್ರ, ಮಯೂರಿ ಕ್ಯಾತರಿ, ಅವಿನಾಶ್, ಮಾಳವಿಕಾ, ಅಪ್ಪಣ್ಣ, ಅಭಿಜಿತ್ ಮುಂತಾದವರು ನಟಿಸಿದ್ದಾರೆ. ಸುಹಾನ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ. ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರ ತರುಣ್ ಸುಧೀರ್ ಕ್ರಿಯೇಟಿವ್ಸ್ ಲಾಂಛನದಲ್ಲಿ ಈ ವೆಬ್ ಸರಣಿಯು ನಿರ್ಮಾಣಗೊಂಡಿದೆ. ಇದು ತರುಣ್ ಸುಧೀರ್ ಅವರ ಮೊದಲ ವೆಬ್ ಸರಣಿಯಾಗಿರುತ್ತದೆ.
ವಿಜಯ್ ರಾಘವೇಂದ್ರ ಹೇಳಿದ್ದೇನು?
"ರಾಕ್ಷಸ ಒಂದು ವಿಶೇಷವಾದ ಕಥೆಯಾಗಿದೆ. ಅಷ್ಟು ಸುಲಭವಾಗಿ ಇದು ತನ್ನ ಸಸ್ಪೆನ್ಸ್ ಅಂಶಗಳನ್ನು ಬಿಟ್ಟುಕೊಡುವುದಿಲ್ಲ. ನನಗೆ ಈ ಕಥೆಯ ಬಗ್ಗೆ ಇಷ್ಟವಾದ ಅಂಶಗಳೆಂದರೆ, ಇದರಲ್ಲಿರುವ ಮೌನ, ಆಡದ ಮಾತುಗಳು, ಗೋಜಲಾದ ರಹಸ್ಯಗಳು. ಇವೆಲ್ಲವೂ ಹೇಗೆ ಹನುಮಪ್ಪನ ಮೇಲೆ ಆಳವಾದ ಪ್ರಭಾವ ಬೀರುತ್ತದೆ ಎಂಬುದು ಗಮನಾರ್ಹವಾಗಿದೆ. ಈಗಾಗಲೇ ಈ ರೋಚಕ ಕಥೆಯ ಟ್ರೇಲರ್ ಬಿಡುಗಡೆ ಆಗಿದೆ" ಎಂದು ವಿಜಯ್ ರಾಘವೇಂದ್ರ ಹೇಳಿದರು.
"ವಿಭಿನ್ನ ಕಥೆಗಳನ್ನು ನಿರ್ಮಾಣ ಮಾಡಬೇಕೆಂಬುದು ನನ್ನ ಆಸೆ. ಅದೇ ನಿಟ್ಟಿನಲ್ಲಿ 'ರಾಕ್ಷಸ' ನನ್ನ ಗಮನಕ್ಕೆ ಬಂತು. ಈ ಕಥೆಯು ಉತ್ತರ ಕರ್ನಾಟಕದ ಛಾಯೆಯನ್ನು ಹೊಂದಿರುತ್ತದೆ. ಇದು ಎಲ್ಲರ ಗಮನ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಮಲಪ್ರಭಾ ನದಿಯ ರಹಸ್ಯವನ್ನು ರೋಚಕವಾಗಿ ಕಥೆ ಬಿಡಿಸಲಿದೆ" ಎನ್ನುತ್ತಾರೆ ತರುಣ್ ಸುಧೀರ್.