Toxic Movie: ʼಟಾಕ್ಸಿಕ್ʼ ಹೊಸ ದಾಖಲೆಗಳನ್ನು ಸೃಷ್ಟಿಸಲಿ: ಯಶ್ಗೆ ಶುಭ ಹಾರೈಸಿದ ಕರವೇ ಅಧ್ಯಕ್ಷ ನಾರಾಯಣಗೌಡ
ಯಶ್ ವಿಷಯದಲ್ಲಿ ನನಗೆ ತುಂಬ ಇಷ್ಟವಾಗುವುದು ಅವರ ಕನಸುಗಾರಿಕೆ ಮತ್ತು ಸಾಹಸ ಮನೋಭಾವ. ಕನಸು ಕಟ್ಟುವುದು ಅವರಿಗೆ ಗೊತ್ತಿದೆ, ಅದನ್ನು ನನಸು ಮಾಡಿಕೊಳ್ಳುವ ದಾರಿಯನ್ನು ಹುಡುಕಿಕೊಳ್ಳುವ ಮನೋಸ್ಥೈರ್ಯ, ಸಂಕಲ್ಪವೂ ಅವರಿಗೆ ಇದೆ. ಅವರ ಚಿತ್ರ ಟಾಕ್ಸಿಕ್ ಹೊಸ ದಾಖಲೆಗಳನ್ನು ಸೃಷ್ಟಿಸಲಿ ಎಂದು ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಎಂದು ತಿಳಿಸಿದ್ದಾರೆ.
-
ಬೆಂಗಳೂರು: ಸ್ಯಾಂಡಲ್ವುಡ್ ನಟ ಯಶ್ (Actor Yash) ಅಭಿನಯದ ʼಟಾಕ್ಸಿಕ್ʼ (Toxic Movie) ಚಿತ್ರ ಇಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಈ ಚಿತ್ರದ ಬಗ್ಗೆ ಚಿತ್ರರಂಗ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದೀಗ ಸಿನಿಮಾ ಯಶಸ್ವಿಯಾಗಲೆಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ (TA Narayana gowda) ಅವರು ಶುಭ ಹಾರೈಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಕರವೇ ಅಧ್ಯಕ್ಷರು, ಯಶ್ ನಿರ್ಮಾಣ, ನಟನೆಯ ಟಾಕ್ಸಿಕ್ ಚಿತ್ರ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಚಿತ್ರದ ಕುರಿತು ಒಳ್ಳೆಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಚಿತ್ರ ಹೊಸ ದಾಖಲೆಗಳನ್ನು ಸೃಷ್ಟಿಸಲಿ ಎಂದು ನಾನು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
ಯಶ್ ನಾವೆಲ್ಲ ನೋಡನೋಡುತ್ತಿದ್ದಂತೆ ಎತ್ತರಕ್ಕೆ ಬೆಳೆದ ನಟ. ತಾವು ಬೆಳೆಯುವ ಜೊತೆಗೆ ಕನ್ನಡ ಚಿತ್ರರಂಗವನ್ನೂ ಅವರು ಬೆಳೆಸಿದ್ದಾರೆ. ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಒಬ್ಬ ಸಾಮಾನ್ಯ ಹಿನ್ನೆಲೆಯ ಮೈಸೂರಿನ ಪಡುವಾರಹಳ್ಳಿಯ ಹುಡುಗ ಇಷ್ಟು ಎತ್ತರಕ್ಕೆ ಏರಬಹುದು ಎಂದು ಬಹುಶಃ ಯಾರೂ ಊಹಿಸಿರಲಿಲ್ಲವೇನೋ? ಬಹುಶಃ ಯಶ್ ಅವರೊಬ್ಬರ ಹೊರತಾಗಿ.
ಯಶ್ ವಿಷಯದಲ್ಲಿ ನನಗೆ ತುಂಬ ಇಷ್ಟವಾಗುವುದು ಅವರ ಕನಸುಗಾರಿಕೆ ಮತ್ತು ಸಾಹಸ ಮನೋಭಾವ. ನಮ್ಮ ಸುತ್ತಮುತ್ತ ಆಗಾಗ ನಾವು ನೋಡುವ ಜನರನ್ನು ಗಮನಿಸಿ. ನಮ್ಮಿಂದ ಎಲ್ಲಾಗುತ್ತೆ? ಇದೆಲ್ಲ ನಾವು ಮಾಡಕ್ಕೆ ಆಗುತ್ತಾ? ಅದೆಲ್ಲಾ ಸಾಧ್ಯನಾ? ಎಂಬಂಥ ನೈರಾಶ್ಯದ ಮಾತುಗಳನ್ನೇ ನಾವು ಕೇಳುತ್ತೇವೆ. ಯಶ್ ಈ ರೀತಿಯ ನಿರಾಶಾವಾದಿಯಲ್ಲ, ಕನಸು ಕಟ್ಟುವುದು ಅವರಿಗೆ ಗೊತ್ತಿದೆ, ಅದನ್ನು ನನಸು ಮಾಡಿಕೊಳ್ಳುವ ದಾರಿಯನ್ನು ಹುಡುಕಿಕೊಳ್ಳುವ ಮನೋಸ್ಥೈರ್ಯ, ಸಂಕಲ್ಪವೂ ಅವರಿಗೆ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಶ್ ಅಭಿನಯದ ಮೊಗ್ಗಿನ ಮನಸು ಸಿನಿಮಾ ಬಿಡುಗಡೆ ಸಂದರ್ಭ ಎನಿಸುತ್ತದೆ. ಅವರೊಮ್ಮೆ ನಮ್ಮ ಗಾಂಧಿನಗರದ ಕಚೇರಿಗೆ ಬಂದಿದ್ದರು. ಅವರ ಸಿನಿಮಾಗೆ ಪ್ರಮುಖ ಥಿಯೇಟರ್ ಸಿಗದೇ ಇರುವ ಬಗ್ಗೆ ಹೇಳಿದರು. ಥಿಯೇಟರ್ ಮಾಲೀಕರ ಜೊತೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಡಲು ವಿನಂತಿಸಿದ್ದರು. ನಾನು ಥಿಯೇಟರ್ ಮಾಲೀಕರ ಜೊತೆ ಮತಾಡಿ ಸಮಸ್ಯೆ ಬಗೆಹರಿಸಿದ್ದೆ. ಈಗ ಕಾಲ ನೋಡಿ ಹೇಗೆ ಬದಲಾಗಿದೆ. ಒಂದು ಥಿಯೇಟರ್ಗಾಗಿ ಕಾತರಿಸುತ್ತಿದ್ದ ಯಶ್ ಅವರ ಟಾಕ್ಸಿಕ್ ಸಿನಿಮಾ ಒಟ್ಟು 12,000 ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿದೆ! ಅದೂ ಕೂಡ ಜಗತ್ತಿನಾದ್ಯಂತ.
ಯಶ್ ನಮ್ಮ ಹಲವಾರು ಕಾರ್ಯಕ್ರಮಗಳಿಗೆ ಬಂದಿದ್ದಾರೆ. ಅಪ್ಪಟ ಕನ್ನಡಾಭಿಮಾನಿ. ಅವರು ಹೊರರಾಜ್ಯಗಳಿಗೆ ಹೋದಾಗ, ಬೇರೆ ಬೇರೆ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ತಮ್ಮ ಕನ್ನಡತನವನ್ನು ಎಂದೂ ಬಿಟ್ಟುಕೊಟ್ಟವರಲ್ಲ. ಅವರು ತಮ್ಮ ಬೇರುಗಳನ್ನು ಮರೆತಿಲ್ಲ.
ಅವರ ಕೆಜಿಎಫ್ ಸಿನಿಮಾ ಬಿಡುಗಡೆಗೂ ಮುನ್ನ ಅವರು ಅಷ್ಟು ದೊಡ್ಡ ಸಿನಿಮಾ ಮಾಡಿದ್ದಾರೆ ಎಂಬುದನ್ನು ಯಾರೂ ನಂಬಲು ಸಾಧ್ಯವಿರಲಿಲ್ಲ. ಆ ಸಿನಿಮಾ ಬಿಡುಗಡೆಗೂ ಒಂದು ಸಣ್ಣ ಅಡ್ಡಿ ಉಂಟಾಗಿತ್ತು. ನಿರ್ಮಾಪಕರೊಬ್ಬರು ತಡೆಯಾಜ್ಞೆ ತಂದಿದ್ದರು. ಕನ್ನಡದ ಸಿನಿಮಾ ಒಂದು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುವಾಗ ಅಡ್ಡಿ ಮಾಡುವುದು ಸರಿಯಲ್ಲ ಎಂದು ನಾನು ಆ ನಿರ್ಮಾಪಕರೊಂದಿಗೆ ಮಾತನಾಡಿ, ಅರ್ಜಿ ಹಿಂದಕ್ಕೆ ಪಡೆಯುವಂತೆ ಮಾಡಿದ್ದೆ. ಕೆಜಿಎಫ್ ಬಿಡುಗಡೆಯಾಯಿತು. ಯಶ್ ಎಂಬ ಮಹಾಸಾಹಸಿ ಇಡೀ ದೇಶಕ್ಕೆ ಪರಿಚಯವಾದರು. ಅದಾದ ನಂತರ ಕೆಜಿಎಫ್-2, ಟಾಕ್ಸಿಕ್ ಮುಂದೆ ಬರಲಿರುವ ರಾಮಾಯಣ ಎಲ್ಲವೂ ಯಶ್ ಅವರ ಮಹತ್ವಾಕಾಂಕ್ಷೆಯ ಯೋಜನೆಗಳೇ.
ʻನಿನ್ನ ಬಹುನಿರೀಕ್ಷಿತ ಟಾಕ್ಸಿಕ್...ʼ; ಮಗ ಯಶ್ ನಟಿಸಿರುವ ಸಿನಿಮಾಗೆ ತಾಯಿ ಪುಷ್ಪಾ ವಿಶ್ ಮಾಡಿದ್ದು ಹೀಗೆ!
ಕನಸು ಕಾಣುವುದು ಸುಲಭ. ಆದರೆ ಆ ಕನಸುಗಳ ಹಿಂದೆ ಬಿದ್ದು ತಾನು ಅಂದುಕೊಂಡಿದ್ದನ್ನು ಮಾಡುವುದು ಕಷ್ಟ. ಅದು ಎಲ್ಲರಿಗೂ ಸಾಧ್ಯವಿಲ್ಲ. ನಿರಾಶಾವಾದ, ಅಲ್ಪತೃಪ್ತಿ ಇದ್ದರೆ ಇದೆಲ್ಲ ಸಾಧ್ಯವಾಗುವುದಿಲ್ಲ. ಯಶ್ ಇದೆಲ್ಲವನ್ನು ಮೆಟ್ಟಿ ನಿಂತು ಬೆಳೆದಿದ್ದಾರೆ, ಇನ್ನೂ ಬೆಳೆಯುತ್ತಿದ್ದಾರೆ. ಅವರಿಗೆ ಮತ್ತೊಮ್ಮೆ ಶುಭಾಶಯಗಳು ಎಂದು ತಿಳಿಸಿದ್ದಾರೆ.