ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Matte Modalinda Album: ಯೋಗರಾಜ್ ಭಟ್ ನಿರ್ದೇಶನದ ʼಮತ್ತೆ ಮೊದಲಿಂದʼ ಆಲ್ಬಂನ ʼಮೋಹದ ಬಣ್ಣ ನೀಲಿʼ ಸಾಂಗ್‌ ರಿಲೀಸ್‌

ಯೋಗರಾಜ್ ಭಟ್ ನಿರ್ದೇಶನದ ಹಾಗೂ ಕರಾವಳಿ ಮೂಲದ ನೂತನ ಪ್ರತಿಭೆ ಸಂಜನ್ ಕಜೆ ನಾಯಕನಾಗಿ, ನಿಧಿ ಸುಬ್ಬಯ್ಯ, ಅಮೀತಾ ಎಸ್. ಕುಲಾಲ್, ದೇವಿಕಾ ಶಿಂಧೆ ಹಾಗೂ ಅಂಜಲಿ ಗೌಡ ನಾಯಕಿಯರಾಗಿ ಕಾಣಿಸಿಕೊಂಡಿರುವ ʼಮತ್ತೆ ಮೊದಲಿಂದʼ ಆಲ್ಬಂನ ಮೊದಲ ಹಾಡು ʼಮೋಹದ ಬಣ್ಣ ನೀಲಿʼ ಬಿಡುಗಡೆಯಾಗಿದೆ.

ʼಮತ್ತೆ ಮೊದಲಿಂದʼ ಆಲ್ಬಂನ ʼಮೋಹದ ಬಣ್ಣ ನೀಲಿʼ ಸಾಂಗ್‌ ರಿಲೀಸ್‌

Profile Siddalinga Swamy Jun 19, 2025 10:22 PM

ಬೆಂಗಳೂರು: ಖ್ಯಾತ ನಿರ್ದೇಶಕ ಯೋಗರಾಜ್ ಭಟ್, ಶ್ರೀನಿಧಿ ಹಾಗೂ ಪ್ರಸನ್ನ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ ಹಾಗೂ ಕರಾವಳಿ ಮೂಲದ ನೂತನ ಪ್ರತಿಭೆ ಸಂಜನ್ ಕಜೆ ನಾಯಕನಾಗಿ, ನಿಧಿ ಸುಬ್ಬಯ್ಯ, ಅಮೀತಾ ಎಸ್. ಕುಲಾಲ್, ದೇವಿಕಾ ಶಿಂಧೆ ಹಾಗೂ ಅಂಜಲಿ ಗೌಡ ನಾಯಕಿಯರಾಗಿ ನಟಿಸಿರುವ ಆಲ್ಬಂ ʼಮತ್ತೆ ಮೊದಲಿಂದʼ (Matte Modalinda Album). ಈ ಆಲ್ಬಂನಲ್ಲಿ 4 ಹಾಡುಗಳಿವೆ. ನಾಡಿನ ಜನಪ್ರಿಯ ಗಾಯಕ-ಗಾಯಕಿಯರು ಈ ಹಾಡುಗಳನ್ನು ಹಾಡಿದ್ದಾರೆ. 4 ಬಣ್ಣಗಳ ಅಚ್ಚ ಕನ್ನಡ ಹಾಡುಗಳ ʼಮತ್ತೆ ಮೊದಲಿಂದʼ ಆಲ್ಬಂನ ಮೊದಲ ಹಾಡು ʼಮೋಹದ ಬಣ್ಣ ನೀಲಿʼ ಇತ್ತೀಚೆಗೆ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಬರೆದಿರುವ ಈ ಹಾಡಿಗೆ ಗಾಯಕ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ಅನಿರುದ್ಧ್ ಶಾಸ್ತ್ರಿ ಸಂಗೀತ ನೀಡಿದ್ದಾರೆ.



ಶೀರ್ಷಿಕೆಯನ್ನು ಪರಿಚಯಿಸಿದ ಯೋಗರಾಜ್‌ ಭಟ್‌ ಅವರು ಮಾತನಾಡಿ, ʼʼಈ ಆಲ್ಬಂನಲ್ಲಿ ನಾಲ್ಕು ಗೀತೆಗಳಿದ್ದು, ನಾಲ್ಕು ಸಂಗೀತ ನಿರ್ದೇಶಕರು, ನಾಲ್ಕು ಗಾಯಕರು, ನಾಲ್ಕು ನಾಯಕಿಯರು ಇರುವುದು ವಿಶೇಷ. ಜತೆಗೆ ನವ ಪ್ರತಿಭೆ ಸಂಜನ್‌ ಕಜೆ ಹೆಸರಿನ ಅಪ್ಪಟ ಕನ್ನಡದ ಕರಾವಳಿ ಮೂಲದ ಯುವ ಪ್ರತಿಭೆಯನ್ನು ಪರಿಚಯಿಸುತ್ತಿದ್ದೇನೆ ಎಂದರು.

ನಾಲ್ಕೂ ಗೀತೆಗಳಿಗೆ ಭಟ್ರ ಸಾಹಿತ್ಯ ಮತ್ತು ನಿರ್ದೇಶನ ಇದ್ದು, ಸಂಗೀತ ನಿರ್ದೇಶಕರಾಗಿ ಮನೋಮೂರ್ತಿ,ವಿ. ಹರಿಕೃಷ್ಣ, ಚೇತನ್‌-ಡ್ಯಾವಿ, ಅನಿರುದ್ಧ ಶಾಸ್ತ್ರಿ ಇದ್ದಾರೆ. ವಿಜಯ ಪ್ರಕಾಶ್‌, ಚೇತನ್‌ ಸೋಸ್ಕ, ವಾಸುಕಿ ವೈಭವ್‌, ಅದಿತಿ ಖಂಡೇಗಲ ಧ್ವನಿ ನೀಡಿದ್ದಾರೆ. ನಾಲ್ಕು ಗೀತೆಗಳ ವಿಡಿಯೊದಲ್ಲಿ ಸಂಜನ್‌ ಕಜೆ ಜತೆ ನಿಧಿ ಸುಬ್ಬಯ್ಯ, ಅಮೀತಾ ಎಸ್‌. ಕುಲಾಲ್‌, ದೇವಿಕಾ ಶಿಂಧೆ, ಅಂಜಲಿ ಗೌಡ ನಾಯಕಿಯರಾಗಿ ಜತೆಯಾಗಿದ್ದಾರೆ. ಪ್ರಸ್ತುತ ಮೊದಲ ಹಾಡಾಗಿ ʼಮೋಹದ ಬಣ್ಣ ನೀಲಿʼ ಬಿಡುಗಡೆಯಾಗಿದೆ.

ಖ್ಯಾತ ಲೇಖಕರು, ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್‌ ಆರೇನಹಳ್ಳಿ ಮೊದಲ ಗೀತೆಯಾದ ʼನಿನ್ನ ಕಣ್ಣು ನೀಲಿʼ (ಮೋಹದ ಬಣ್ಣ ನೀಲಿ) ಹಾಡನ್ನು ಪಂಚರಂಗಿ ಆಡಿಯೋ ಯುಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಮಾಡಿದರು. ಸುಗಮ ಸಂಗೀತ, ಭಾವಗೀತೆಗಳು ವಿರಳವಾಗಿರುವ ಈ ಸಂದರ್ಭದಲ್ಲಿ ಇದೊಂದು ಶ್ಲಾಘನೀಯ ಪ್ರಯತ್ನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಬಾಲ್ಯದ ದಿನಗಳಲ್ಲಿ ಮೈಸೂರು ಅನಂತಸ್ವಾಮಿ ಅವರ ಗೀತೆಗಳನ್ನು ಮೈಸೂರಿನಲ್ಲಿ ಕೇಳುತ್ತಿದ್ದದ್ದನ್ನು ನೆನಪು ಮಾಡಿಕೊಳ್ಳುತ್ತಾ ಭಾವಗೀತೆಗಳು ಕನ್ನಡ ನೆಲದ ಸೊಗಡು, ಇದನ್ನು ಉಳಿಸಿ ಬೆಳಸುವುದು ಸಾಹಿತಿಗಳ ಕರ್ತವ್ಯ. ಬಹಳ ವರ್ಷಗಳ ನಂತರ ಅದೇ ರೀತಿಯ ಗೀತೆಯನ್ನು ಕೇಳಿ ತುಂಬಾ ಸಂತೋಷವಾಯಿತು ಎಂದರು.

ಗಾಯಕ ವಿಜಯ ಪ್ರಕಾಶ್‌ ಮಾತನಾಡಿ, ಈ ಗೀತೆಯನ್ನು ಹಾಡಲು ಚಿತ್ರಗೀತೆಗಳಿಗಿಂತ ಹೆಚ್ಚು ಮುತುವರ್ಜಿ ವಹಿಸಿದ್ದಾಗಿ ಧನ್ಯವಾದ ತಿಳಿಸಿದರು. ರೇಕಾರ್ಡಿಂಗ್‌ಗೆ ಬಂದರೂ ಹಾಡದೆ ಗೀತೆಯನ್ನು ಗಂಟೆಗಟ್ಟಲೆ ಕೇಳಿ ಮರುದಿನ ಬಂದು ಹಾಡಿದ್ದಾಗಿ ಹೇಳಿದರು. ಅದಕ್ಕೆ ಕಾರಣ ಈ ಗೀತೆಯಲ್ಲಿನ ವಿಶೇಷತೆ ಮತ್ತು ಸಾಹಿತ್ಯ ಸಾಲುಗಳಲ್ಲಿರುವ ಸೂಕ್ಷ್ಮತೆ. ಭಾವಗೀತೆಗಳ ಬಗ್ಗೆ ತಮಗಿರುವ ಅಪಾರ ಗೌರವ, ಪ್ರೀತಿ, ಭಟ್ಟರ ಜತೆಗಿನ ಸ್ನೇಹ ಎಲ್ಲವೂ ಸೇರಿ ಗೀತೆಯನ್ನು ಎದೆ ತುಂಬಿ ಮನಸಾರೆ ಹಾಡಿದ್ದಾಗಿ ಹೇಳಿದರು.

ಸಂಗೀತ ನಿರ್ದೇಶಕ ಅನಿರುದ್ಧ ಶಾಸ್ತ್ರಿ ಮಾತನಾಡಿ, ಯೋಗರಾಜ್‌ ಭಟ್ಟರ ಜತೆಗಿನ ಸಾಂಗತ್ಯದಲ್ಲಿ ಇದು ನನ್ನ ಚೊಚ್ಚಲ ಸಂಗೀತ ಸಂಯೋಜನೆ. ಇದು ನನಗೆ ತುಂಬಾ ಖುಷಿಕೊಟ್ಟಿದೆ. ಹಿರಿಯ ಮತ್ತು ಖ್ಯಾತ ಸಂಗೀತ ನಿರ್ದೇಶಕರ ಸಂಗೀತ ಸಂಯೋಜನೆ ಈ ಆಲ್ಬಂನಲ್ಲಿದ್ದು, ನನಗೆ ಸವಾಲಿನ ವಿಷಯವಾಗಿತ್ತು. ಅದನ್ನು ಸಮರ್ಪಕವಾಗಿ ನಿಭಾಯಸಲು ಯೋಗರಾಜ್‌ ಭಟ್‌ ಅವರ ಸಹಕಾರ ಕಾರಣ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Monsoon jewel Fashion 2025: ಮಾನ್ಸೂನ್ ಫ್ಯಾಷನ್ ಜ್ಯುವೆಲರಿಯಲ್ಲಿ ಮಿನಿ ಛತ್ರಿಗಳ ಹಂಗಾಮ!

ಇನ್ನು ನಟ ಸಂಜನ್‌ ಕಜೆ ಮಾತನಾಡಿ, ಇಷ್ಟು ದೊಡ್ಡ ವೇದಿಕೆಯನ್ನು ಕೊಟ್ಟಿದ್ದಕ್ಕೆ ಯೋಗರಾಜ್‌ ಭಟ್‌ ಅವರಿಗೆ ಧನ್ಯವಾದ ಅರ್ಪಿಸಿದರು. ಮುಂದೆ ಸಿನಿಮಾ ಕ್ಷೇತ್ರದಲ್ಲಿ ಯೋಗರಾಜ್‌ ಭಟ್ಟರ ಮಾರ್ಗದರ್ಶನದೊಂದಿಗೆ ಪ್ರಾಮಾಣಿಕವಾಗಿ ಉತ್ತಮ ನಟನಾಗಿ ಸಿನಿ ಪ್ರಿಯರ ಮುಂದೆ ಬರುತ್ತೇನೆ ಎಂದರು.