ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tragic Drowning: ಬೆಂಗಳೂರಿನ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಕಣ್ಣೂರಿನಲ್ಲಿ ಸಮುದ್ರಪಾಲು

ಕೇರಳದ ಕಣ್ಣೂರಿನ ಪಯ್ಯಂಬಲಂ ಬೀಚ್‌ನಲ್ಲಿ ಸ್ನಾನ ಮಾಡುತ್ತಿದ್ದ ಬೆಂಗಳೂರು ವೈದ್ಯಕೀಯ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟ ಘಟನೆ ನವೆಂಬರ್‌ 2ರಂದು ನಡೆದಿದೆ. ಮೃತರನ್ನು ಅಫ್ನಾನ್‌, ರಹಾನುದ್ದೀನ್‌ ಮತ್ತು ಅಫ್ರಾಸ್‌ ಎಂದು ಗುರುತಿಸಲಾಗಿದೆ. ಪ್ರವಾಸ ತೆರಳಿದ್ದ 8 ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದಾಗ ಬಲವಾದ ಅಲೆ ಬಂದು ಮೂವರು ಮುಳು ಹೋಗಿ ಅಸುನೀಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ಬೆಂಗಳೂರಿನ ಮೂವರು ವಿದ್ಯಾರ್ಥಿಗಳು ಕಣ್ಣೂರಿನಲ್ಲಿ ಸಮುದ್ರಪಾಲು

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Nov 2, 2025 5:34 PM

ತಿರುವನಂತಪುರಂ, ನ. 2: ಕೇರಳದ ಕಣ್ಣೂರಿನ ಪಯ್ಯಂಬಲಂ ಬೀಚ್‌ನಲ್ಲಿ (Payyambalam beach) ಸ್ನಾನ ಮಾಡುತ್ತಿದ್ದ ಬೆಂಗಳೂರು ವೈದ್ಯಕೀಯ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟ ಘಟನೆ ನವೆಂಬರ್‌ 2ರಂದು ನಡೆದಿದೆ (Tragic Drowning). ಮೃತರನ್ನು ಅಫ್ನಾನ್‌, ರಹಾನುದ್ದೀನ್‌ ಮತ್ತು ಅಫ್ರಾಸ್‌ (Afnan, Rahanuddeen, Afras) ಎಂದು ಗುರುತಿಸಲಾಗಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಈ ದುರಂತ ನಡೆದಿದೆ. ಈಜಲು 8 ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದಾಗ ಬಲವಾದ ಅಲೆ ಬಂದು ಮೂವರು ಮುಳು ಹೋಗಿ ಅಸುನೀಗಿದರು. ಉಳಿದವರನ್ನು ರಕ್ಷಿಸಲಾಗಿದೆ.

ʼʼಪ್ರವಾಸ ಬಂದಿದ್ದ ಬೆಂಗಳೂರು ಮೆಡಿಕಲ್‌ ಕಾಲೇಜಿನ 8 ವಿದ್ಯಾರ್ಥಿಗಳು ಈಜಲು ಸಮುದ್ರಕ್ಕೆ ಇಳಿದರು. ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಜೋರಾದ ಅಲೆ ಬೀಸಿದ ಪರಿಣಾಮ ಈ ಪೈಕಿ ಮೂವರು ಮುಳುಗಿದರು. ಕೂಡಲೇ ಸ್ಥಳೀಯರ ಸಹಾಯದಿಂದ ಅವರನ್ನು ಮೇಲಕ್ಕೆಳೆದು ಆಸ್ಪತ್ರಗೆ ದಾಖಲಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರುʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Boys Drown in sea: ಬೈಂದೂರಿನಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೂವರು ವಿದ್ಯಾರ್ಥಿಗಳು ಸಮುದ್ರಪಾಲು

ತಾವು ತಂಗಿದ್ದ ರೆಸಾರ್ಟ್‌ನ ಬಳಿ ಇರುವ ಬೀಚ್‌ಗೆ ವಿದ್ಯಾರ್ಥಿಗಳು ತೆರಳಿದ ವೇಳೆ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಅಫ್ರಾಸ್‌ ಸಮುದ್ರಕ್ಕೆ ಇಳಿದಿದ್ದ. ಆತ ಮುಳುಗುತ್ತಿರುವುದನ್ನು ನೋಡಿದ ಉಳಿದಿಬ್ಬರು ಅಫ್ನಾನ್‌, ರಹಾನುದ್ದೀನ್‌ ರಕ್ಷಣೆಗಾಗಿ ಮುಂದಾದರು. ಆದರೆ ಅವರು ಕೂಡ ನೀರಿನಲ್ಲಿ ಕೊಚ್ಚಿ ಹೋದರು. ಕೂಡಲೇ ದಡದಲ್ಲಿದ್ದ ಅವರ ಸ್ನೇಹಿತರು ಸ್ಥಳೀಯರು ಮತ್ತು ಮೀನುಗಾರರಿಗೆ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.

ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ನಡೆಸಿದ ಕಾರ್ಯಾಚರಣೆಯ ಬಳಿಕ ಮೂವರ ಮೃತದೇಹ ಪತ್ತೆಯಾಯ್ತು. ಮೃತರು ಚಿತ್ರದುರ್ಗ ಮೂಲದವರೆಂದು ತಿಳಿದು ಬಂದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ವಿದ್ಯಾರ್ಥಿಗಳು ರಜೆಯ ಹಿನ್ನೆಲೆಯಲ್ಲಿ ಪ್ರವಾಸ ಬಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ತಾಯಿ, ಮಗ ಕೃಷಿ ಹೊಂಡಕ್ಕೆ ಬಿದ್ದು ಸಾವು

ಕೋಲಾರ: ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದು ತಾಯಿ, ಮಗು ಸಾವನ್ನಪ್ಪಿರುವ ಧಾರುಣ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ಹೊಗರಿಗೊಲ್ಲಹಳ್ಳಿಯಲ್ಲಿ ಜಾನುವಾರುಗಳಿಗೆ ಮೇವು ತರಲು ಹೋಗಿದ್ದ ವೇಳೆ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ತಾಯಿ ಮಾಲಾ (30) ಹಾಗೂ ಮಗು ಚಕ್ರವರ್ತಿ (6) ಸಾವನ್ನಪ್ಪಿದ್ದಾರೆ.

ಮಾಲಾ ಅವರ ಮಗ ಚಕ್ರವರ್ತಿ ಆಟವಾಡುತ್ತ ಕೃಷಿ ಹೊಂಡಕ್ಕೆ ಬಿದ್ದು ಬಿಟ್ಟಿದ್ದ. ಮಗ ಕೃಷಿ ಹೊಂಡಕ್ಕೆ ಬಿದ್ದ ಬಳಿಕ ಆತನನ್ನು ಕಾಪಾಡಲು ಮಾಲಾ ತೆರಳಿ ಅವರೂ ಸಾವನ್ನಪ್ಪಿದ್ದು, ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಘಟನೆಯಲ್ಲಿ, ಕರ್ನಾಟಕ ರಾಜ್ಯೋತ್ಸವದಂದು, ಪ್ರವಾಸಕ್ಕೆಂದು ಬಂದಿದ್ದ ಮಕ್ಕಳು ಕಾವೇರಿ ನದಿಯಲ್ಲಿ ಕೊಚ್ಚಿಹೋಗಿರುವ ಭೀಕರ ಘಟನೆ ಮಂಡ್ಯದಲ್ಲಿ ಸಂಭವಿಸಿದೆ. ಕಾವೇರಿ ನದಿಯಲ್ಲಿ ಒಟ್ಟು ನಾಲ್ವರು ಮಕ್ಕಳು ಕೊಚ್ಚಿ ಹೋಗಿದ್ದು, ಒಬ್ಬ ಬಾಲಕಿ ಮೃತಪಟ್ಟಿದ್ದಾಳೆ. ಐಶಾ ಮೃತ ಬಾಲಕಿ.