ಕೇರಳದಲ್ಲಿ ಇತಿಹಾಸ ಬರೆದ ಬಿಜೆಪಿ; ತಿರುವನಂತರಪುರಂ ಮೇಯರ್ ಆಗಿ ವಿ.ವಿ. ರಾಜೇಶ್ ಆಯ್ಕೆ
ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹೊಸದೊಂದು ಇತಿಹಾಸ ಬರೆದಿದೆ. ಕೇರಳದ ರಾಜಧಾನಿ ತಿರುವನಂತಪುರಂ ಅನ್ನು ಗೆದ್ದು, ಎಡಪಕ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿದೆ. ಮೊದಲ ಬಾರಿಗೆ, ಬಿಜೆಪಿ ನೇತೃತ್ವದ ಎನ್ಡಿಎ ತಿರುವನಂತಪುರಂ ಪುರಸಭೆಯಲ್ಲಿ ಗೆಲುವು ಸಾಧಿಸಿದೆ. ಅಲ್ಲಿ ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ ಆಡಳಿತ ನಡೆಸುತ್ತಿತ್ತು. ಇದೀಗ ಆ ಇತಿಹಾಸವನ್ನು ಮುರಿದಿರುವ ಬಿಜೆಪಿ ತಿರುವನಂತಪುರಂನಲ್ಲಿ ಗಟ್ಟಿಯಾಗಿ ನೆಲೆಯೂರಿದೆ.
ವಿ.ವಿ. ರಾಜೇಶ್ (ಸಂಗ್ರಹ ಚಿತ್ರ) -
ತಿರುವನಂತಪುರಂ, ಡಿ. 26: ಕೇರಳ ರಾಜಧಾನಿ ತಿರುವನಂತಪುರಂ (Thiruvananthapuram) ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ (Municipal Corporation Elections) ಅಚ್ಚರಿಯ ರೀತಿಯಲ್ಲಿ ದೊಡ್ಡ ಗೆಲುವು ಸಾಧಿಸುವ ಮೂಲಕ ಬಿಜೆಪಿ ಇತಿಹಾಸ ನಿರ್ಮಿಸಿದೆ. 101 ಮತಗಳ ಪೈಕಿ 50 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ವಿ.ವಿ.ರಾಜೇಶ್ ಗೆಲುವು ಸಾಧಿಸಿದ್ದು, ತಿರುವನಂತಪುರ ನಗರ ಪಾಲಿಕೆಯಲ್ಲಿ ನಾಲ್ಕು ದಶಕಗಳ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್ಡಿಎಫ್) ಆಳ್ವಿಕೆಗೆ ಅಂತ್ಯ ಹಾಡಿದ್ದಾರೆ.
ವಿ.ವಿ. ರಾಜೇಶ್ ಶುಕ್ರವಾರ ಮಧ್ಯಾಹ್ನ ತಿರುವನಂತಪುರಂನ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಪ್ರಮಾಣ ವಚನ ಸಮಾರಂಭ ವೀಕ್ಷಿಸಲು ಪಕ್ಷದ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಅವರು, “ನಾವು ಎಲ್ಲರ ಜತೆಗೂಡಿ ಮುಂದೆ ಸಾಗುತ್ತೇವೆ. ಎಲ್ಲ 101 ವಾರ್ಡ್ಗಳಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ತಿರುವನಂತಪುರಂ ಮಾದರಿ ನಗರವನ್ನಾಗಿ ರೂಪಿಸುತ್ತೇವೆ” ಎಂದು ಹೇಳಿದರು.
Kerala: BJP State Secretary and Kodunganoor ward councillor VV Rajesh has been elected as the Mayor of Thiruvananthapuram Corporation
— ANI (@ANI) December 26, 2025
He says, "We will move forward together, taking everyone along. Development programs will be implemented in all 101 wards, ensuring equal… https://t.co/dVHsf1sgam pic.twitter.com/gocuj3JKYn
ಬಿಜೆಪಿ ಇದುವರೆಗೆ ಕೇರಳದಲ್ಲಿ ಅಧಿಕಾರಕ್ಕೆ ಬಂದಿಲ್ಲ. ರಾಜ್ಯದಲ್ಲಿ ಬಿಜೆಪಿಯು ಕೇವಲ ಒಂದು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಗೆದ್ದಿದೆ. ಇದೀಗ 45 ವರ್ಷದ ರಾಜೇಶ್ 100 ಮತಗಳಲ್ಲಿ ಬಹುಮತಕ್ಕೆ ಅಗತ್ಯವಿರುವ 51 ಮತಗಳನ್ನು ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಸಿಪಿಐ(ಎಂ) ಅಭ್ಯರ್ಥಿ ಆರ್.ಪಿ. ಶಿವಾಜಿ 29 ಮತಗಳನ್ನು ಪಡೆದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಕೆ.ಎಸ್. ಶಬರಿನಾಥನ್ಗೆ 19 ಮತಗಳು ಲಭಿಸಿವೆ. ಸ್ವತಂತ್ರವಾಗಿ ಆಯ್ಕೆಯಾಗಿದ್ದ ಒಬ್ಬ ಅಭ್ಯರ್ಥಿ ಮತದಾನದಿಂದ ದೂರ ಉಳಿದರು. ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿ ಪಿ. ರಾಧಾಕೃಷ್ಣನ್ ಅವರ ಬೆಂಬಲದಿಂದ ರಾಜೇಶ್ ಅವರ ಗೆಲುವು ಸಾಧ್ಯವಾಯಿತು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್, "ಸಿಪಿಐ(ಎಂ) ತಿರುವನಂತಪುರಂ ಸಂಪೂರ್ಣವಾಗಿ ಹಿಂದುಳಿಯುವಂತೆ ಮಾಡಿದೆ. ದುರದೃಷ್ಟವಶಾತ್, ಈ ಮಹಾನಗರ ಪಾಲಿಕೆ ಭ್ರಷ್ಟಾಚಾರದ ಗೂಡಾಗಿ ಪರಿಣಮಿಸಿದೆ. ಪ್ರಚಾರದ ವೇಳೆ ನಾವು ಬಹಿರಂಗಪಡಿಸಿದಂತೆ, ಈ ಪಾಲಿಕೆಯ ಹಣವನ್ನು ದುರಪಯೋಗಪಡಿಸಿಕೊಂಡಿದೆ. ಒಳಚರಂಡಿ, ನೀರು ಸರಬರಾಜು ಮತ್ತು ಘನ ತ್ಯಾಜ್ಯ ನಿರ್ವಹಣೆ ಎಂಬ ಮೂಲಭೂತ ಸಮಸ್ಯೆಗಳನ್ನೂ ಕಳೆದ 45 ವರ್ಷಗಳಿಂದ ನಿರ್ಲಕ್ಷಿಸಲಾಗಿದೆ” ಎಂದು ಹೇಳಿದರು.
“ಜನರು ನಮಗೆ ಸೇವೆ ಸಲ್ಲಿಸುವ ಅವಕಾಶ ನೀಡಿದ ದಿನದಿಂದಲೇ ನಾವು ತಿರುವನಂತಪುರಂನ ಅಭಿವೃದ್ಧಿ ಕಾರ್ಯ ಆರಂಭಿಸುತ್ತೇವೆ ಎಂದು ಹೇಳಿದ್ದೇವೆ. ನಮ್ಮ ಮೇಯರ್ ರಾಜೇಶ್ ಹೇಳಿದಂತೆ, ತಿರುವನಂತಪುರಂ ಅನ್ನು ದೇಶದ ಟಾಪ್ ಮೂರು ನಗರಗಳಲ್ಲಿ ಒಂದಾಗಿಸುವುದೇ ನಮ್ಮ ಗುರಿ. ಅದಕ್ಕಾಗಿ ಇಂದೇ ಪ್ರಯತ್ನ ಆರಂಭವಾಗುತ್ತದೆ” ಎಂದು ಅವರು ಹೇಳಿದರು.
ಒಟ್ಟಾರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಆಡಳಿತಾರೂಢ ಎಡಪಕ್ಷಕ್ಕೆ(ಎಲ್ಡಿಎಫ್) ಹಿನ್ನಡೆಯಾಗಿ ಪರಿಣಮಿಸಿವೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಆರು ಪುರಸಭೆಗಳ ಪೈಕಿ ನಾಲ್ಕರ ನಿಯಂತ್ರಣವನ್ನು ಪಡೆದುಕೊಂಡಿದೆ.
ಈ ಕುರಿತು ಎಕ್ಸ್ (ಹಳೆಯ ಟ್ವಿಟರ್)ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಇದನ್ನು “ಐತಿಹಾಸಿಕ ತಿರುವು” ಎಂದು ವರ್ಣಿಸಿ, ಬಿಜೆಪಿ ಕಾರ್ಯಕರ್ತರ ಪರಿಶ್ರಮದ ಫಲವೇ ಈ ಫಲಿತಾಂಶ ಎಂದು ಹೇಳಿದ್ದಾರೆ.