ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾವೇರಿ ವಿವಾದದ ನಡುವೆ ತಮಿಳುನಾಡಿನಲ್ಲಿ ಇಂದು ಸಿಎಂ ಡಿಕೆ ಶಿವಕುಮಾರ್‌- ವಿಜಯ್‌ ಭೇಟಿ

ತಮಿಳುನಾಡಿನ ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆಯಲಿರುವ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ಇಬ್ಬರೂ ನಾಯಕರು ಚೆನ್ನೈನಲ್ಲೇ ಭೇಟಿಯಾಗುವ ಸಾಧ್ಯತೆ ಕುತೂಹಲ ಮೂಡಿಸಿದೆ.

ಕಾವೇರಿ ವಿವಾದದ ನಡುವೆ ಇಂದು ಸಿಎಂ ಡಿಕೆ ಶಿವಕುಮಾರ್‌- ವಿಜಯ್‌ ಭೇಟಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Aug 20, 2026 8:48 AM

ಚೆನ್ನೈ: ತಮಿಳುನಾಡಿನ ಚೆನ್ನೈ ಸಮೀಪದ ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆಯಲಿರುವ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D. K Shivakumar) ಭಾಗವಹಿಸಲಿದ್ದಾರೆ. ಕಾವೇರಿ ನೀರು ಹಂಚಿಕೆ ವಿಚಾರ ಕರ್ನಾಟಕ ಮತ್ತು ತಮಿಳುನಾಡಿನ (CM Vijay) ನಡುವೆ ಮತ್ತೆ ಚರ್ಚೆಯಲ್ಲಿರುವಾಗಲೇ, ತಮಿಳುನಾಡು ಸಿಎಂ ವಿಜಯ್ ಹಾಗೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ಚೆನ್ನೈನಲ್ಲಿ ಭೇಟಿಯಾಗುವ ಸಾಧ್ಯತೆ ಇದೆ.

ದಕ್ಷಿಣ ವಲಯ ಮಂಡಳಿ ಸಭೆ ಕುರಿತು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್‌, ಪ್ರಧಾನಿ ಅವರು ದೇಶವನ್ನು ಆರ್ಥಿಕ ಶಕ್ತಿಕೇಂದ್ರವನ್ನಾಗಿ ರೂಪಿಸಲು ಬಯಸುವುದಾದರೆ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಒಗ್ಗಟ್ಟಿನಿಂದ ನಿಲ್ಲುವುದರಿಂದ ಮಾತ್ರ ಅದು ಸಾಧ್ಯ. ನಮ್ಮಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯ ಅಸಾಧಾರಣವಾಗಿದೆ ಎಂದು ಅವರು ಹೇಳಿದ್ದಾರೆ. ವಿಧಾನಸಭೆಯಲ್ಲಿ ಕಾವೇರಿ ವಿಚಾರ ಪ್ರಸ್ತಾಪಿಸಿದ ಶಿವಕುಮಾರ್, ಬೆಂಗಳೂರಿಗೆ ನೀರು ಪೂರೈಸುವುದು ಸವಾಲಿನ ಕೆಲಸವಾಗಿದ್ದು, ತಮ್ಮ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು? ಮೋದಿ, ವಾಜಪೇಯಿ ಮಾತುಗಳನ್ನು ಉಲ್ಲೇಖಿಸಿದ ಸಿಎಂ

ಕಾವೇರಿ ವಿಚಾರದಲ್ಲಿ ಪ್ರತಿಪಕ್ಷಗಳು ನೀಡಿದ ಬೆಂಬಲಕ್ಕೆ ಅವರು ಧನ್ಯವಾದ ಸಲ್ಲಿಸಿದರು. ನಾನು ಈ ಹಿಂದೆ ಹೇಳಿದಂತೆ, ಪ್ರಯತ್ನ ವಿಫಲವಾದರೂ ಪ್ರಾರ್ಥನೆ ಎಂದಿಗೂ ವಿಫಲವಾಗುವುದಿಲ್ಲ. ನಾವೆಲ್ಲರೂ ಪ್ರಕೃತಿಯಲ್ಲಿ ಒಟ್ಟಾಗಿ ಪ್ರಾರ್ಥಿಸೋಣ ಎಂದು ಅವರು ಹೇಳಿದ್ದಾರೆ.

ಕಾವೇರಿ ವಿವಾದ

ಕಾವೇರಿ ವಿಚಾರವಾಗಿ ಚರ್ಚಿಸಲು ವಿಜಯ್ ಈ ಹಿಂದೆ ಕರ್ನಾಟಕಕ್ಕೆ ಭೇಟಿ ನೀಡುವ ಯೋಜನೆ ಹೊಂದಿದ್ದರು ಎನ್ನಲಾಗಿದೆ. ಆದರೆ ಈ ಭೇಟಿಗೆ ಕರ್ನಾಟಕದ ಕೆಲವು ರಾಜಕೀಯ ನಾಯಕರಿಂದ ವಿರೋಧ ವ್ಯಕ್ತವಾಗಿತ್ತು. ಬಳಿಕ ಡಿಕೆ ಶಿವಕುಮಾರ್ ಕೂಡ ವಿಜಯ್ ಕರ್ನಾಟಕಕ್ಕೆ ಭೇಟಿ ನೀಡದಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈಗ ಇಬ್ಬರೂ ನಾಯಕರು ಚೆನ್ನೈನಲ್ಲೇ ಭೇಟಿಯಾಗುವ ಸಾಧ್ಯತೆ ಕುತೂಹಲ ಮೂಡಿಸಿದೆ. ಭೇಟಿ ನಡೆದರೆ, ಕಾವೇರಿ ವಿಚಾರದಲ್ಲಿ ಎರಡೂ ರಾಜ್ಯಗಳ ನಿಲುವುಗಳ ಬಗ್ಗೆ ನೇರ ಮಾತುಕತೆಗೆ ಅವಕಾಶ ಸಿಗಬಹುದು.