ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಿಜೆಪಿಯನ್ನೇ ಹಿಂದಿಕ್ಕಿದ ‘ಕಾಕ್ರೋಚ್’ ಪಕ್ಷ! ಸ್ಥಾಪಕನ ಹೆತ್ತವರಿಗೆ ಈಗ ನಿದ್ದೆಯಿಲ್ಲದ ರಾತ್ರಿಗಳು!

ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ‘ಕಾಕ್ರೋಚ್ ಜನತಾ ಪಕ್ಷ’ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ವ್ಯಂಗ್ಯ ಮತ್ತು ರಾಜಕೀಯ ಟೀಕೆಯ ಮೂಲಕ ಯುವಕರ ಸಮಸ್ಯೆಗಳನ್ನು ಎತ್ತಿಹಿಡಿಯುತ್ತಿರುವ ಈ ಪಕ್ಷದ ಸ್ಥಾಪಕ ಅಭಿಜೀತ್ ದಿಪ್ಕೆ ಕುಟುಂಬದಲ್ಲಿ ಆತಂಕ ಹೆಚ್ಚಾಗಿದೆ. ಮಗ ಬಂಧನಕ್ಕೊಳಗಾಗಬಹುದು ಎಂಬ ಭೀತಿಯಿಂದ ಪೋಷಕರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್ ಗಳಿಸಿರುವ ಈ ಪಕ್ಷ, ನಿರುದ್ಯೋಗ, ಪರೀಕ್ಷಾ ಪೇಪರ್ ಸೋರಿಕೆ ಹಾಗೂ ಯುವಕರ ಸಂಕಷ್ಟಗಳ ವಿರುದ್ಧ ವಿಭಿನ್ನ ಶೈಲಿಯಲ್ಲಿ ಧ್ವನಿ ಎತ್ತುತ್ತಿದೆ.

'ಕಾಕ್ರೋಚ್ ಜನತಾ ಪಕ್ಷ’ ಸ್ಥಾಪಕನ ಪೋಷಕರಿಗೆ ಬಂಧನದ ಭೀತಿ!

ಕಾಕ್ರೋಚ್ ಜನತಾ ಪಕ್ಷದ ಸ್ಥಾಪಕ ಅಭಿಜೀತ್ ದಿಪ್ಕೆ -

Profile
Sushmitha Jain May 22, 2026 10:05 PM

ನವದೆಹಲಿ, ಮೇ 22: ಸಾಮಾಜಿಕ ಮಾಧ್ಯಮದಲ್ಲಿ ವ್ಯಂಗ್ಯಭರಿತ ಕಾಕ್ರೋಚ್ ಜನತಾ ಪಕ್ಷ (Cockroach Janta Party) ದಿಢೀರ್ ಜನಪ್ರಿಯತೆ ಗಳಿಸಿದ್ದು, ಇದರ ಸ್ಥಾಪಕ ಅಭಿಜೀತ್ ದಿಪ್ಕೆ (Abhijeet Dipke) ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಆತ ಬಂಧನಕ್ಕೊಳಗಾಗಬಹುದು ಅಥವಾ ತೊಂದರೆಗೆ ಸಿಲುಕಬಹುದು ಎಂಬ ತೀವ್ರ ಭೀತಿ ಅವರನ್ನು ಸಂಪೂರ್ಣವಾಗಿ ನಿದ್ದೆಗೆಡಿಸಿದೆ.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ವಾಸಿಸುವ ಅಭಿಜೀತ್ ಪೋಷಕರಾದ ಭಗವಾನ್ ಮತ್ತು ಅನಿತಾ ದಿಪ್ಕೆ, ತಮ್ಮ ಮಗ ರಾಜಕೀಯಕ್ಕೆ ಬರುವುದು ನಮಗೆ ಇಷ್ಟವಿಲ್ಲ ಎನ್ನುತ್ತಾರೆ. ಪ್ರಸ್ತುತ ದೇಶದ ರಾಜಕೀಯ ವಾತಾವರಣ ನೋಡಿ ನಮಗೆ ಭಯವಾಗುವುದು ಸಹಜ ಎಂದು ಅವರು ಪಿಟಿಐ ಸಂಸ್ಥೆಗೆ ತಿಳಿಸಿದ್ದಾರೆ. ಭಾರತಕ್ಕೆ ಮರಳಿದ ಬಳಿಕ ತಮಗೆ ಬಂಧನದ ಭೀತಿ ಇರುವುದಾಗಿ ಸ್ವತಃ ಅಭಿಜೀತ್ ಸಂದರ್ಶನವೊಂದರಲ್ಲಿ ಹೇಳಿದ್ದನ್ನು ತಂದೆ ನೆನಪಿಸಿಕೊಂಡಿದ್ದಾರೆ. ತಾಯಿ ಅನಿತಾ ಮಾತನಾಡಿ, ಮಗ ಕಷ್ಟಪಟ್ಟು ನೆಮ್ಮದಿಯ ನೌಕರಿ ಹಿಡಿದು ಸುಖವಾಗಿರಲಿ, ನಾನು ಆತನ ರಾಜಕೀಯ ನಿರ್ಧಾರಕ್ಕೆ ಎಂದಿಗೂ ಬೆಂಬಲ ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಅಭಿಜಿತ್ ಎಂಜಿನಿಯರಿಂಗ್ ಕಷ್ಟವೆನಿಸಿ ಬಿಟ್ಟ ನಂತರ, ಸಮೂಹ ಮಾಧ್ಯಮ ಮತ್ತು ಜರ್ನಲಿಸಂ ಉನ್ನತ ಅಧ್ಯಯನ ಮಾಡಲು ವಿದೇಶಕ್ಕೆ ತೆರಳಿದ್ದರು. ನೆರೆಹೊರೆಯವರು ಹಾಗೂ ಮೊಮ್ಮಕ್ಕಳು ಹೇಳುವವರೆಗೂ ಪೋಷಕರಿಗೆ ಈ ಸಾಮಾಜಿಕ ಮಾಧ್ಯಮ ಪಕ್ಷದ ಸ್ಥಾಪನೆಯ ಬಗ್ಗೆ ತಿಳಿದಿರಲಿಲ್ಲ. ಈ ಹಿಂದೆ ಆತ ಆಮ್ ಆದ್ಮಿ ಪಕ್ಷದಲ್ಲಿ (ಎಎಪಿ) ಕೆಲಸ ಮಾಡುವಾಗಲೂ ತಾಯಿ ರಾಜಕೀಯದಿಂದ ದೂರವಿರಲು ಸೂಚಿಸಿದ್ದರು. ಈಗ ಸಿಜೆಪಿ ದೊಡ್ಡ ಮಟ್ಟದ ಪ್ರಚಾರ ಪಡೆದು ಆತ ಪ್ರಸಿದ್ಧನಾಗಿರುವುದರಿಂದ, ಪೊಲೀಸರು ಬಂಧಿಸಬಹುದೇ ಎಂಬ ಆತಂಕದಲ್ಲಿ ತಂದೆ ಭಗವಾನ್ ಎರಡು ದಿನಗಳಿಂದ ನಿದ್ದೆಯಿಲ್ಲದೆ ಒದ್ದಾಡುತ್ತಿದ್ದಾರೆ.

ದೇಶದ ಗಡಿ ದಾಟಿದ ಜಿರಳೆ; ಪಾಕಿಸ್ತಾನಕ್ಕೂ ತಲುಪಿದ ಭಾರತದ ಕಾಕ್ರೋಚ್‌ ಚಳುವಳಿ

ಸಿಜೆಪಿಯ ಸಾಮಾಜಿಕ ಮಾಧ್ಯಮದ ಬೆಳವಣಿಗೆ

ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಶಿಷ್ಟ ಪಕ್ಷವು 19 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದುವ ಮೂಲಕ ದೇಶದ ದೊಡ್ಡ ಪಕ್ಷವಾದ ಬಿಜೆಪಿಯನ್ನೇ ಮೀರಿಸಿದೆ. ಇದರ ಮೂಲ ಎಕ್ಸ್ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ಕಾನೂನು ಕಾರಣಗಳಿಗಾಗಿ ಸ್ಥಗಿತಗೊಳಿಸಲಾಗಿದ್ದರೂ, ಕೆಲವೇ ಗಂಟೆಗಳಲ್ಲಿ ‘ಕಾಕ್ರಾಚ್ ಈಸ್ ಬ್ಯಾಕ್’ ಎಂಬ ಹೊಸ ಪರ್ಯಾಯ ಖಾತೆ ತೆರೆದು ಸಾವಿರಾರು ಫಾಲೋವರ್ಸ್ ಗಳಿಸಿದೆ.

ಪಕ್ಷದ ಸ್ಥಾಪನೆಗೆ ಕಾರಣ ಏನು?

ನಿರುದ್ಯೋಗಿ ಯುವಕರನ್ನು ಉಲ್ಲೇಖಿಸಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ 'ಪರಾವಲಂಬಿಗಳು' ಮತ್ತು 'ಜಿರಳೆಗಳು' (ಕಾಕ್ರೋಚ್) ಎಂದು ಕರೆದಿದ್ದರ ವಿರುದ್ಧವಾಗಿ ಪ್ರತಿಭಟಿಸಲು ಅಭಿಜಿತ್ ಈ ಪಕ್ಷ ಸ್ಥಾಪಿಸಿದರು. ಈ ಪಕ್ಷವು ಯುವಕರ ಸಮಸ್ಯೆಗಳು, ಉದ್ಯೋಗ ಸೃಷ್ಟಿ, ನಿರುದ್ಯೋಗ ಮತ್ತು ಪರೀಕ್ಷಾ ಪೇಪರ್ ಸೋರಿಕೆಯಂತಹ ಗಂಭೀರ ವಿಷಯಗಳ ಬಗ್ಗೆ ವ್ಯಂಗ್ಯಚಿತ್ರ, ಪ್ರಣಾಳಿಕೆ ಹಾಗೂ ಆ್ಯನಿಮೇಷನ್ ಮೂಲಕ ನಿರಂತರವಾಗಿ ಧ್ವನಿ ಎತ್ತುತ್ತಿದೆ.