ಬ್ರಿಕ್ಸ್ ಶೃಂಗಸಭೆ ಭದ್ರತಾ ಕರ್ತವ್ಯದ ವೇಳೆಯಲ್ಲೇ ಬಂದೂಕು ಹಿಡಿದು ರೀಲ್ಸ್; ದೆಹಲಿ ಪೊಲೀಸ್ ಪೇದೆ ಅಮಾನತು
BRICS Summit 2026: ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬಿಕ್ಸ್ನ 18ನೇ ಶೃಂಗಸಭೆಯ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ದೆಹಲಿ ಪೊಲೀಸ್ ಪೇದೆ ದೀಪಕ್ ಬಂಗಾರ್ ಲಘು ಯಂತ್ರ ಬಂದೂಕು ಮತ್ತು ಪಿಸ್ತೂಲ್ ಪ್ರದರ್ಶಿಸಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಂಚಿಕೊಂಡ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದಾರೆ. ವಿಯೊಗಳು ವೈರಲ್ ಆದ ಬಳಿಕ ಘಟನೆ ಪೊಲೀಸರ ಗಮನಕ್ಕೆ ಬಂದಿದ್ದು, ಈ ಕುರಿತು ಇಲಾಖಾ ವಿಚಾರಣೆ ನಡೆಯುತ್ತಿದೆ.
ಅಮಾನತುಗೊಂಡ ಪೇದೆಯನ್ನು ದೀಪಕ್ ಬಂಗಾರ್ -
ನವದೆಹಲಿ, ಸೆ. 16: ಇತ್ತೀಚೆಗೆ ನಡೆದ ಬ್ರಿಕ್ಸ್ನ 18ನೇ ಶೃಂಗಸಭೆಯ (BRICS Summit 2026) ವೇಳೆ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ದೆಹಲಿ ಪೊಲೀಸ್ ಪೇದೆಯೊಬ್ಬರು ಬಂದೂಕುಗಳನ್ನು ಪ್ರದರ್ಶಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳನ್ನು ಹಂಚಿಕೊಂಡ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದಾರೆ. ಅಮಾನತುಗೊಂಡ ಪೇದೆಯನ್ನು ದೀಪಕ್ ಬಂಗಾರ್ ಎಂದು ಗುರುತಿಸಲಾಗಿದೆ. ಅವರು ವಾಯವ್ಯ ದೆಹಲಿಯ ವಿದೇಶಿಗರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವಿದೇಶಿ ಪ್ರತಿನಿಧಿಗಳು ತಂಗಿದ್ದ ಎರಡು ಪಂಚತಾರಾ ಹೋಟೆಲ್ಗಳ ಪೈಕಿ ಒಂದರಲ್ಲಿ ಶೃಂಗಸಭೆಯ ಭದ್ರತಾ ವ್ಯವಸ್ಥೆಯ ಭಾಗವಾಗಿ ಅವರನ್ನು ಚಾವಣಿಯ ದೂರದ ಗುರಿ ನಿಗಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಬಂಗಾರ್ ತಮ್ಮ ಕರ್ತವ್ಯದ ವೇಳೆ ಸಾಮಾಜಿಕ ಜಾಲತಾಣಕ್ಕಾಗಿ ರೀಲ್ಸ್ ಚಿತ್ರೀಕರಿಸಿರುವ ಆರೋಪ ಎದುರಿಸುತ್ತಿದ್ದಾರೆ. ಒಂದು ವಿಡಿಯೊದಲ್ಲಿ ಕಪ್ಪು ಬಣ್ಣದ ಅಂಗಿ ಧರಿಸಿದ್ದ ಅವರು ಕೈಯಲ್ಲಿ ಬಂದೂಕು ಹಿಡಿದು ಗುರಿ ಇಡುವಂತೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಕ್ಯಾಮೆರಾ ಅವರ ಸುತ್ತಲೂ ಚಲಿಸುವಾಗ ರಾತ್ರಿ ನಗರದ ದೃಶ್ಯವೂ ಕಾಣಿಸಿಕೊಂಡಿದೆ.
ಬಂದೂಕು ಪ್ರದರ್ಶಿಸಿ ರೀಲ್ಸ್ ಮಾಡಿದ ಪೊಲೀಸ್ ಪೇದೆ:
Gross breach of VVIP security protocol! 🚨 A security personnel deployed for the high-profile BRICS Summit 2026—wearing official accreditation—is casually shooting Instagram reels while brandishing a service weapon near Bharat Mandapam! With heads of state and global delegations present, this reckless chase for social media clout is a massive security hazard. Immediate suspension, inquiry, and confiscation of credentials required! CC: @HMOIndia @AmitShah @PIBHomeAffairs
— Gaurav (@k_gauravs) September 13, 2026
ಮತ್ತೊಂದು ವಿಡಿಯೊದಲ್ಲಿ ಅವರು ತಮ್ಮ ಜೇಬಿನಲ್ಲಿದ್ದ ಪಿಸ್ತೂಲ್ ಪ್ರದರ್ಶಿಸಿದ್ದರು. ಈ ವೇಳೆ ಅವರ ಕುತ್ತಿಗೆಯಲ್ಲಿ ಶೃಂಗಸಭೆಯ ಗುರುತಿನ ಚೀಟಿ ಕೂಡ ಕಾಣಿಸಿಕೊಂಡಿದೆ.
ಶೌರ್ಯ ಪ್ರಶಸ್ತಿ ಪುರಸ್ಕೃತ ಯೋಧರಿಗೆ ಜೀವಮಾನದ ಉಚಿತ ರೈಲು ಪ್ರಯಾಣ; ಎಂದಿನಿಂದ ಪ್ರಾರಂಭ?
ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡಿದ ಬಳಿಕ ದೆಹಲಿ ಪೊಲೀಸರ ಗಮನಕ್ಕೆ ಬಂದಿವೆ. ಕರ್ತವ್ಯದ ವೇಳೆ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಬಂಗಾರ್ ಅವರನ್ನು ಅಮಾನತುಗೊಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆ ಆರಂಭಿಸಲಾಗಿದ್ದು, ವಿಡಿಯೊಗಳನ್ನು ಯಾವ ಸಂದರ್ಭದಲ್ಲಿ ಚಿತ್ರೀಕರಿಸಲಾಯಿತು ಮತ್ತು ಕರ್ತವ್ಯದ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
32 ನಿಯೋಗಗಳು ಭಾಗಿ
ಭಾರತದ ಅಧ್ಯಕ್ಷತೆಯಲ್ಲಿ ನಡೆದ ಎರಡು ದಿನಗಳ 18ನೇ ಶೃಂಗಸಭೆ ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ ನಡೆದಿತ್ತು. ಸಭೆಯಲ್ಲಿ ಸದಸ್ಯ ರಾಷ್ಟ್ರಗಳು, ಪಾಲುದಾರ ರಾಷ್ಟ್ರಗಳು, ಪ್ರಾದೇಶಿಕ ಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಒಳಗೊಂಡಂತೆ ಒಟ್ಟು 32 ನಿಯೋಗಗಳು ಭಾಗವಹಿಸಿದ್ದವು.
ಶೃಂಗಸಭೆಯಲ್ಲಿ ಹಲವು ದೇಶಗಳ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ವಿದೇಶಿ ಪ್ರತಿನಿಧಿಗಳು ತಂಗಿದ್ದ ಹೋಟೆಲ್ಗಳು ಸೇರಿ ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಮತ್ತು ವಿಶೇಷ ಭದ್ರತಾ ವ್ಯವಸ್ಥೆಗಳನ್ನು ನಿಯೋಜಿಸಲಾಗಿತ್ತು.