Devendra Fadnavis: "ತಂದೆಯಿದ್ದಾಗ ಉತ್ತರಾಧಿಕಾರಿ ಹುಡುಕುವುದಿಲ್ಲ"; ಮೋದಿ ನಿವೃತ್ತಿ ಕುರಿತು ಮಾತನಾಡಿದ್ದ ರಾವತ್ಗೆ ತಿರುಗೇಟು ಕೊಟ್ಟ ಫಡ್ನವೀಸ್
ಸೆಪ್ಟೆಂಬರ್ 17 ರಂದು 75 ವರ್ಷ ತುಂಬಲಿರುವ ಪ್ರಧಾನಿಯವರು ಆಡಳಿತ ಪಕ್ಷದ ಅಘೋಷಿತ ನಿಯಮಕ್ಕೆ ಅನುಗುಣವಾಗಿ ಈ ವರ್ಷ ರಾಜೀನಾಮೆ ನೀಡುತ್ತಾರೆ ಎಂಬ ಶಿವಸೇನಾ ನಾಯಕ ಸಂಜಯ್ ರಾವತ್ ಅವರ ಹೇಳಿಕೆಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ತಿರುಗೇಟು ನೀಡಿದ್ದಾರೆ.


ಮುಂಬೈ: ಸೆಪ್ಟೆಂಬರ್ 17 ರಂದು 75 ವರ್ಷ ತುಂಬಲಿರುವ ಪ್ರಧಾನಿಯವರು ಆಡಳಿತ ಪಕ್ಷದ ಅಘೋಷಿತ ನಿಯಮಕ್ಕೆ ಅನುಗುಣವಾಗಿ ಈ ವರ್ಷ ರಾಜೀನಾಮೆ ನೀಡುತ್ತಾರೆ ಎಂಬ ಶಿವಸೇನಾ ನಾಯಕ ಸಂಜಯ್ ರಾವತ್ ಅವರ ಹೇಳಿಕೆಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ (Devendra Fadnavis) ತಿರುಗೇಟು ನೀಡಿದ್ದು, ಮೋದಿ (Narendra Modi) ಅವರ ಉತ್ತರಾಧಿಕಾರಿ ಹುಡುಕುವ ಅವಶ್ಯಕತೆ ಇಲ್ಲ. ಅವರು ನಮ್ಮ ನಾಯಕ ಮತ್ತು ಅವರೇ ಪ್ರಧಾನಿಯಾಗಿ ಮುಂದುವರಿಯುತ್ತಾರೆ ಎಂದು ಹೇಳಿದ್ದಾರೆ. ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, "2029 ರಲ್ಲಿ ನಾವು ಮೋದಿಯನ್ನು ಮತ್ತೆ ಪ್ರಧಾನಿಯಾಗಿ ನೋಡುತ್ತೇವೆ" ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಭಾನುವಾರ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಪ್ರಧಾನ ಕಚೇರಿಗೆ ಹೋಗಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ನಿವೃತ್ತರಾಗುತ್ತಿರುವ ಸಂದೇಶವನ್ನು ತಲುಪಿಸಿದ್ದಾರೆ ಎಂಬ ಶಿವಸೇನಾ ಯುಬಿಟಿ ನಾಯಕ ಸಂಜಯ್ ರಾವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ. ನಾಯಕ ಸಕ್ರಿಯವಾಗಿರುವಾಗ ಉತ್ತರಾಧಿಕಾರದ ಬಗ್ಗೆ ಚರ್ಚಿಸುವುದು ಭಾರತೀಯ ಸಂಸ್ಕೃತಿಯಲ್ಲಿ ಅನುಚಿತವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ನಮ್ಮ ಸಂಸ್ಕೃತಿಯಲ್ಲಿ, ತಂದೆ ಜೀವಂತವಾಗಿರುವಾಗ, ಉತ್ತರಾಧಿಕಾರದ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಅದು ಮೊಘಲ್ ಸಂಸ್ಕೃತಿ. ಅದರ ಬಗ್ಗೆ ಚರ್ಚಿಸಲು ಈಗ ಸಮಯ ಬಂದಿಲ್ಲ ಎಂದು ಫಡ್ನವೀಸ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Narendra Modi: ಪ್ರಧಾನಿಯಾದ ಬಳಿಕ ಮೊದಲ ಬಾರಿ RSS ಕಚೇರಿಗೆ ಮೋದಿ ಭೇಟಿ; ಹೆಡ್ಗೆವಾರ್ಗೆ ಪುಷ್ಪ ನಮನ ಸಲ್ಲಿಕೆ
ಸಂಜಯ್ ರಾವತ್ ಹೇಳಿದ್ದೇನು?
ಸೋಮವಾರ, ಆರ್ಎಸ್ಎಸ್ ದೇಶದ ರಾಜಕೀಯ ನಾಯಕತ್ವದಲ್ಲಿ ಬದಲಾವಣೆಯನ್ನು ಬಯಸುತ್ತದೆ ಎಂದು ರಾವತ್ ಹೇಳಿದ್ದರು. ಅವರು (ಮೋದಿ) ಸೆಪ್ಟೆಂಬರ್ನಲ್ಲಿ ತಮ್ಮ ನಿವೃತ್ತಿ ಅರ್ಜಿಯನ್ನು ಬರೆಯಲು ಆರ್ಎಸ್ಎಸ್ ಪ್ರಧಾನ ಕಚೇರಿಗೆ ಹೋಗಿರಬಹುದು" ಎಂದು ರಾವತ್ ಹೇಳಿದ್ದರು. ಆಡಳಿತ ಪಕ್ಷದ ಕೆಲವು ನಾಯಕರು 75 ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಿರುವುದನ್ನು ಉಲ್ಲೇಖಿಸಿದ್ದರು. ಈ ವರ್ಷದ ಸೆಪ್ಟೆಂಬರ್ನಲ್ಲಿ ಪ್ರಧಾನಿ ಮೋದಿ 75 ವರ್ಷ ತುಂಬಲಿದ್ದಾರೆ. ಪ್ರಧಾನಿಯಾದ ನಂತರ ನಾಗ್ಪುರದಲ್ಲಿರುವ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಮೊದಲ ಬಾರಿಗೆ ಭೇಟಿ ಮೋದಿ ನೀಡಿದ್ದರು. ಅವರು ಆರ್ಎಸ್ಎಸ್ ಸಂಸ್ಥಾಪಕರ ಪುಥ್ಥಳಿಗೆ ಪುಷ್ಪ ನಮನ ಸಲ್ಲಿಸಿದ್ದರು. ಅವರು ಸಂಘವನ್ನು ಭಾರತದ ಅಮರ ಸಂಸ್ಕೃತಿಯ ಆಲದ ಮರ ಎಂದು ಬಣ್ಣಿಸಿದರು. ಈ ಹಿಂದೆ ಅಟಲ್ ಬಿಹಾರಿ ವಾಯಪೇಯಿ ಅವರು ಪ್ರಧಾನಿಯಾಗಿದ್ದಾಗ ಸಂಘದ ಕಚೇರಿಗೆ ಭೇಟಿ ನೀಡಿದ್ದರು.