ಭೋಪಾಲ್, ಜ. 15: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮಧ್ಯ ಪ್ರದೇಶದಲ್ಲಿ (Madhya Pradesh) 2 ವಿಭಿನ್ನ ಹಾಗೂ ಅಪರೂಪದ ಕಥೆಗಳಿಗೆ ಸಾಕ್ಷಿಯಾಗಿದೆ. ಒಂದು 22 ವರ್ಷಗಳ ಬಳಿಕ ನಡೆದ ಭಾವನಾತ್ಮಕ ಮಿಲನದ ಕಥೆಯಾದರೆ (Mother–son reunion), ಮತ್ತೊಂದು ಅಪರಾಧ ಹಿನ್ನೆಲೆಯುಳ್ಳ ಅಂತಾರಾಜ್ಯ ಅಪರಾಧಿಯ ಬಂಧನವೂ ನಡೆದಿದೆ.
ಹೌದು, ಮತದಾರರ ದಾಖಲೆಗಳನ್ನು ಪರಿಶೀಲಿಸುವ ಮತ್ತು ನವೀಕರಿಸುವ ಗುರಿಯನ್ನು ಹೊಂದಿರುವ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಡ್ರೈವ್, ಡೇಟಾವನ್ನು ಸರಿಪಡಿಸಿದ್ದಲ್ಲದೆ ತಾಯಿ-ಮಗನ ಪುನರ್ಮಿಲನಕ್ಕೆ ಸಾಕ್ಷಿಯಾಗಿದೆ. SIR ಮಂಡ್ಸೌರ್ ಜಿಲ್ಲೆಯಲ್ಲಿ ಕಾಣೆಯಾದ ಮಗನನ್ನು ಅವನ ತಾಯಿಯೊಂದಿಗೆ ಮತ್ತೆ ಒಂದುಗೂಡಿಸಿತು. ಮತ್ತೊಂದು ಪ್ರಕರಣದಲ್ಲಿ ಇಂದೋರ್ನಲ್ಲಿ 100ಕ್ಕೂ ಹೆಚ್ಚು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕ್ರಿಮಿನಲ್ ಆರೋಪಿಯನ್ನು ಸೆರೆಹಿಡಿಯಲು ಕಾರಣವಾಯಿತು.
ಎಸ್ಐಆರ್ ಬಳಿಕ ಉತ್ತರಪ್ರದೇಶದ ಕರಡು ಪಟ್ಟಿಯಲ್ಲಿ 2.89 ಕೋಟಿ ಮತದಾರರ ಹೆಸರಿಲ್ಲ
45 ವರ್ಷದ ವಿನೋದ್ ಗಯಾರಿ ಎಂಬಾತ ಪಶ್ಚಿಮ ಮಧ್ಯ ಪ್ರದೇಶದ ಮಂದ್ಸೌರ್ ಜಿಲ್ಲೆಯವರು. 2003ರಲ್ಲಿ ಖಿಲ್ಚಿಪುರ ಗ್ರಾಮದಲ್ಲಿ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ನಂತರ ಮನೆಯಿಂದ ಹೊರಬಂದಿದ್ದರು. 22 ವರ್ಷಗಳ ಕಾಲ ಕಾಣೆಯಾಗಿದ್ದ ಗಯಾರಿ ಇದೀಗ ತನ್ನ ತಾಯಿಯನ್ನು ಮತ್ತೆ ಸೇರಿಕೊಂಡಿದ್ದಾರೆ.
ವಿನೋದ್ ಅವರನ್ನು ಹುಡುಕಲು ಪದೇ ಪದೆ ಮಾಡಿದ ಪ್ರಯತ್ನಗಳು ವಿಫಲವಾದ ನಂತರ ಅವರ ಕುಟುಂಬವು ಅವರು ಮೃತಪಟ್ಟಿದ್ದಾರೆ ಎಂದು ಭಾವಿಸಿತ್ತು. ಬಳಿಕ ಅವರ ತಂದೆ ನಿಧನರಾದರು. ಆದರೆ ಅವರ ವಯಸ್ಸಾದ ತಾಯಿ ಮತ್ತು ಮಾನಸಿಕವಾಗಿ ಅಸ್ವಸ್ಥ ಹಿರಿಯ ಸಹೋದರ ಮಾತ್ರ ಮನೆಯಲ್ಲಿದ್ದರು.
ಇತ್ತ ವಿನೋದ್ ರಾಜಸ್ಥಾನದ ನಾಗೌರ್ ಜಿಲ್ಲೆಯ ಶಾಲೆಯಲ್ಲಿ ಪಿಯೋನ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿನೋದ್, ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಅಲ್ಲಿ ವಾಸಿಸುತ್ತಿದ್ದಾರೆ. ಎಸ್ಐಆರ್ ಪ್ರಕ್ರಿಯೆಯ ಅಡಿಯಲ್ಲಿ ತನ್ನ ಮತದಾರರ ಗುರುತನ್ನು ನವೀಕರಿಸಲು ಮತ್ತು 2003ರ ತನ್ನ ಸ್ಥಳೀಯ ಹಳ್ಳಿಯ ಮತದಾರರ ಪಟ್ಟಿಯಿಂದ ತನ್ನ ಪೋಷಕರ ವಿವರಗಳನ್ನು ಪಡೆಯಲು ಪ್ರಯತ್ನಿಸಿದಾಗ ಈ ವಿಚಾರ ತಿಳಿದುಬಂತು.
ಖಿಲ್ಚಿಪುರ ಗ್ರಾಮ ಪಂಚಾಯತ್ಗೆ ಎಪಿಕ್ ಮಾಹಿತಿಗಾಗಿ ವಿನೋದ್ನ ವಿನಂತಿಯನ್ನು ಸ್ವೀಕರಿಸಿದಾಗ, ಅದರ ಸದಸ್ಯರು ಅವರ ತಾಯಿಗೆ ಮಾಹಿತಿ ನೀಡಿದರು. ಅವರು ತಕ್ಷಣ ಮಂದ್ಸೌರ್ನ ನಯಿ ಅಬಾದಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ಎರಡು ದಶಕಗಳಿಗೂ ಹೆಚ್ಚು ಕಾಲ ಕಾಣೆಯಾಗಿದ್ದ ತನ್ನ ಮಗ ಇನ್ನೂ ಜೀವಂತವಾಗಿರಬಹುದು ಎಂದು ಹೇಳಿದರು.
ಪೊಲೀಸರು ಗ್ರಾಮ ಪಂಚಾಯತ್ ಮೂಲಕ ವಿವರಗಳನ್ನು ಪರಿಶೀಲಿಸಿ, ರಾಜಸ್ಥಾನದ ನಾಗೌರ್ನಲ್ಲಿ ವಿನೋದ್ನನ್ನು ಪತ್ತೆಹಚ್ಚಿದರು. ಅಲ್ಲಿಗೆ ಪೊಲೀಸ್ ತಂಡವನ್ನು ಕಳುಹಿಸಿ, ವಿನೋದ್ನನ್ನು ತನ್ನ ಸ್ವಗ್ರಾಮಕ್ಕೆ ಕರೆದುಕೊಂಡು ಬರಲಾಯಿತು. ಇದು 22 ವರ್ಷಗಳ ನಂತರ ತಾಯಿ ಮತ್ತು ಮಗನ ನಡುವೆ ಭಾವನಾತ್ಮಕ ಪುನರ್ಮಿಲನಕ್ಕೆ ಕಾರಣವಾಯಿತು.
ವಿನೋದ್ ತನ್ನ ಗ್ರಾಮಕ್ಕೆ ಹಿಂತಿರುಗಿ ತನ್ನ ಕುಟುಂಬವನ್ನು ಮತ್ತೆ ಭೇಟಿಯಾಗಲು ಸಂತೋಷವನ್ನು ವ್ಯಕ್ತಪಡಿಸಿದರು. ʼʼವಿನೋದ್ ಮೃತಪಟ್ಟಿದ್ದಾರೆ ಎಂದೇ ಅಂದುಕೊಂಡಿದ್ದೆವು. ಮತದಾರರ ಪರಿಶೀಲನಾ ಕಾರ್ಯವು ಅವರನ್ನು ಮರಳಿ ಊರಿಗೆ ಕರೆತರುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲʼʼ ಎಂದು ಸಂಬಂಧಿಕರೊಬ್ಬರು ಹೇಳಿದ್ದಾರೆ. ವಿನೋದ್ ಕೂಡ ತನ್ನ ಕುಟುಂಬವನ್ನು ನೋಡಿ ಆನಂದಭಾಷ್ಪ ಸುರಿಸಿದರು.
ಕುಖ್ಯಾತ ಅಂತಾರಾಜ್ಯ ಅಪರಾಧಿಯ ಬಂಧನ
ಇನ್ನೊಂದು ಘಟನೆಯಲ್ಲಿ ಕುಖ್ಯಾತ ಅಂತಾರಾಜ್ಯ ಅಪರಾಧಿಯ ಬಂಧನಕ್ಕೆ ಎಸ್ಐಆರ್ ಕಾರಣವಾಯಿತು. ಮಧ್ಯ ಪ್ರದೇಶ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಕಳವು, ದರೋಡೆ, ಕೊಲೆ ಮತ್ತು ಕೊಲೆಯತ್ನ ಸೇರಿದಂತೆ ಸುಮಾರು 100 ಪ್ರಕರಣಗಳಲ್ಲಿ ಆರೋಪಿಯಾಗಿರುವ 54 ವರ್ಷದ ತಲ್ವಾರ್ ಸಿಂಗ್ ಎಂದೂ ಕರೆಯಲ್ಪಡುವ ಅಬ್ದುಲ್ ರಶೀದ್, ಹಲವು ವರ್ಷಗಳ ನಂತರ ತನ್ನ SIR ಎಣಿಕೆ ಫಾರ್ಮ್ ಅನ್ನು ಭರ್ತಿ ಮಾಡಲು ಇಂದೋರ್ಗೆ ಮರಳಿದ್ದ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಡಿಸೆಂಬರ್ 3ರಂದು ಗೀತಾ ನಗರ ಪ್ರದೇಶದಲ್ಲಿ ಕಳವು ಮಾಡಿ, ಬೀಗ ಹಾಕಿದ ಫ್ಲಾಟ್ಗೆ ನುಗ್ಗಿ ಹಲವು ಲಕ್ಷ ರುಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕದ್ದು ಸಿಕ್ಕಿ ಬಿದ್ದಾನೆ.
ಉತ್ತರಪ್ರದೇಶದಲ್ಲಿ 2.8 ಕೋಟಿ, ಅಸ್ಸಾಂನಲ್ಲಿ 10.56 ಲಕ್ಷ ಹೆಸರು ಮತದಾರರ ಪಟ್ಟಿಯಿಂದ ಅಳಿಸಿದ ಎಸ್ಐಆರ್
ಇಂದೋರ್ನ ಪಲಾಸಿಯಾ ಪೊಲೀಸರು ಆತನನ್ನು ಪತ್ತೆಹಚ್ಚಿ ಕೆಲವೇ ದಿನಗಳಲ್ಲಿ ಬಂಧಿಸಿದರು. ವಿಚಾರಣೆಯ ಸಮಯದಲ್ಲಿ, ರಶೀದ್ನ ವ್ಯಾಪಕ ಅಪರಾಧ ಇತಿಹಾಸ ಬೆಳಕಿಗೆ ಬಂದಿತು. ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನ ಶಿರಚ್ಛೇದ ಮಾಡಿ ಕತ್ತರಿಸಿದ ತಲೆಯೊಂದಿಗೆ ಪೊಲೀಸ್ ಠಾಣೆಯಲ್ಲಿ ಶರಣಾದ ಪ್ರಕರಣವೂ ಇದರಲ್ಲಿ ಸೇರಿತ್ತು. ಇದರಿಂದಾಗಿ ಅವನಿಗೆ ತಲ್ವಾರ್ ಸಿಂಗ್ ಎಂಬ ಹೆಸರು ಬಂದಿತ್ತು.
ಆಭರಣ, ನಗದು ಮತ್ತು ದ್ವಿಚಕ್ರ ವಾಹನ ಸೇರಿದಂತೆ 7.5 ಲಕ್ಷ ರುಪಾಯಿಗೂ ಹೆಚ್ಚು ಮೌಲ್ಯದ ಕದ್ದ ಆಸ್ತಿಯನ್ನು ಪೊಲೀಸರು ಆತನ ಬಳಿಯಿಂದ ವಶಪಡಿಸಿಕೊಂಡರು. ರಶೀದ್ ಎಸ್ಐಆರ್ ಪ್ರಕ್ರಿಯೆಗಾಗಿ ಇಂದೋರ್ಗೆ ಹಿಂತಿರುಗದಿದ್ದರೆ ಆತನನ್ನು ಬಂಧಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯ ಪ್ರದೇಶದಲ್ಲಿ ನಡೆಸಲಾದ ಮತದಾರರ ಪಟ್ಟಿಯ ಬೃಹತ್ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಈ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಅಧಿಕೃತ ಮಾಹಿತಿಯ ಪ್ರಕಾರ SIR ಅಡಿಯಲ್ಲಿ ಇದುವರೆಗೆ ರಾಜ್ಯದ ಮತದಾರರ ಪಟ್ಟಿಯಿಂದ 42.74 ಲಕ್ಷ ಹೆಸರನ್ನು ತೆಗೆದುಹಾಕಲಾಗಿದೆ. 8.40 ಲಕ್ಷ ಹೆಸರುಗಳನ್ನು ಇನ್ನೂ ಮ್ಯಾಪಿಂಗ್ ಮಾಡಬೇಕಾಗಿದೆ. ತೆಗೆದುಹಾಕಲಾದ ಹೆಸರಲ್ಲಿ 19.19 ಲಕ್ಷ ಪುರುಷರು ಮತ್ತು 23.64 ಲಕ್ಷ ಮಹಿಳೆಯರು ಸೇರಿದ್ದಾರೆ. ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 5.74 ಕೋಟಿಯಿಂದ 5.31 ಕೋಟಿಗೆ ಇಳಿದಿದೆ. ಅಂದರೆ ನಡೆಯುತ್ತಿರುವ ಪ್ರಕ್ರಿಯೆಯಲ್ಲಿ ಸರಿಸುಮಾರು ಪ್ರತಿ 13ನೇ ಮತದಾರರನಹೆಸರು ಡಿಲೀಟ್ ಮಾಡಲಾಗಿದೆ.