ತಿರುಪತಿ, ಮಾ. 10: ಶ್ರೀವಾರಿ ಲಡ್ಡು ಪ್ರಸಾದ ತಯಾರಿಸಲು ಹಸುವಿನ ತುಪ್ಪದ (Ghee) ಕೊರತೆ ಇಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನ (Tirumala Tirupati Devasthanam) ತಿಳಿಸಿದೆ. ಆ ಮೂಲಕ ತಿರುಮಲದಲ್ಲಿ ಲಡ್ಡು ತಯಾರಿಕೆ ಸ್ಥಗಿತಗೊಂಡಿದೆ ಎಂಬ ವದಂತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ತಿರುಪತಿಗೆ ತೆರಳುತ್ತಿದ್ದ ತುಪ್ಪದ ಟ್ಯಾಂಕರ್ ಅಪಘಾತಕ್ಕೀಡಾದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ವದಂತಿ ಹರಡಿತ್ತು.
ಟ್ಯಾಂಕರ್ ಅಪಘಾತಕ್ಕೀಡಾಗಿರುವುದರಿಂದ ತಿರುಪತಿ ಲಡ್ಡು ಪ್ರಸಾದ ತಯಾರಿಕೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳುವ ಪೋಸ್ಟ್ಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಈ ಪೋಸ್ಟ್ ವೈರಲ್ ಆದ ಬಳಿಕ ಟಿಟಿಡಿ ಸ್ಪಷ್ಟನೆ ನೀಡಿದೆ.
ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ದೇವಸ್ಥಾನ ಮಂಡಳಿಯು ಪ್ರಕಟಣೆ ಹೊರಡಿಸಿದೆ. ಲಡ್ಡು ತಯಾರಿಕೆ ಮತ್ತು ವಿತರಣೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಲು ಸಾಕಷ್ಟು ಹಸುವಿನ ತುಪ್ಪದ ದಾಸ್ತಾನು ಇದೆ ಎಂದು ಹೇಳಿದೆ.
ತಿರುಪತಿ ಲಡ್ಡು ತಯಾರಿಕೆಯಲ್ಲಿ ಶೌಚಾಲಯ ಸ್ವಚ್ಛಗೊಳಿಸುವ ರಾಸಾಯನಿಕ ಬಳಕೆ!
ಶ್ರೀವಾರಿ ಲಡ್ಡು ಪ್ರಸಾದವನ್ನು ತಯಾರಿಸಲು ಅಗತ್ಯವಿರುವ ತುಪ್ಪವನ್ನು ಮೂರು ಹಂತದ ಖರೀದಿ ವ್ಯವಸ್ಥೆಯ ಮೂಲಕ ಪಡೆಯಲಾಗುತ್ತದೆ. ಈ ವ್ಯವಸ್ಥೆಯಡಿ ತುಪ್ಪವನ್ನು ಮೂರು ವಿಭಿನ್ನ ಕಂಪನಿಗಳಿಂದ ಪೂರೈಕೆ ಮಾಡಲಾಗುತ್ತದೆ.
ಒಂದು ಕಡೆಯಿಂದ ಅನಿರೀಕ್ಷಿತ ವ್ಯತ್ಯಯ ಉಂಟಾದರೂ ಪೂರೈಕೆ ಸರಪಳಿ ಸ್ಥಿರವಾಗಿರಲು ಈ ವ್ಯವಸ್ಥೆ ಸಹಾಯ ಮಾಡುತ್ತದೆ. ಒಂದೇ ಕಂಪನಿಯ ಮೇಲೆ ಅವಲಂಬಿಸದೆ, ತುಪ್ಪವನ್ನು ಮೂರು ವಿಭಿನ್ನ ಕಂಪನಿಗಳಿಂದ ಖರೀದಿಸಲಾಗುತ್ತದೆ. ಇದರಿಂದ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲದೆ ನಿರಂತರವಾಗಿ ಮುಂದುವರಿಯುತ್ತದೆ ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಪಲ್ಟಿಯಾದ ಟ್ಯಾಂಕರ್ನಿಂದ ತುಪ್ಪ ಸಂಗ್ರಹಿಸಲು ಮುಂದಾದ ಸಾರ್ವಜನಿಕರು:
ತಿರುಮಲಕ್ಕೆ ತುಪ್ಪ ಸಾಗಿಸುತ್ತಿದ್ದ ಇಂದಾಪುರ ಡೈರಿಗೆ ಸೇರಿದ ಟ್ಯಾಂಕರ್ ಇತ್ತೀಚೆಗೆ ಕಡಪ ಜಿಲ್ಲೆಯ ಕೊಂಡಾಪುರ ಬಳಿ ಅಪಘಾತಕ್ಕೀಡಾಗಿದೆ ಎಂದು ಟಿಟಿಡಿ ದೃಢಪಡಿಸಿದೆ. ಆದರೆ ಈ ಘಟನೆಯು ತುಪ್ಪದ ಲಭ್ಯತೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಯಾಕೆಂದರೆ ಇತರ ಎರಡು ಸಂಸ್ಥೆಗಳಿಂದ ಸರಬರಾಜು ನಿಗದಿಯಂತೆ ಮುಂದುವರಿಯುತ್ತಿದೆ ಎಂದು ದೇವಾಲಯ ಪ್ರಾಧಿಕಾರ ವಿವರಿಸಿದೆ.
ಟಿಟಿಡಿ ಪ್ರಕಾರ, ಪ್ರಸ್ತುತ ಭಕ್ತರಿಗೆ ವಿತರಿಸಲು ಸುಮಾರು ಏಳು ಲಕ್ಷ ಶ್ರೀವಾರಿ ಲಡ್ಡು ಪ್ರಸಾದಗಳು ಲಭ್ಯ. ಇದು ಸಿದ್ಧತೆ ಮತ್ತು ಪೂರೈಕೆ ಎರಡರ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದನ್ನು ಸೂಚಿಸುತ್ತದೆ.
ಕಳಪೆ ತುಪ್ಪ ಬಳಸಿ 68 ಲಕ್ಷ ಕೆಜಿ ತಿರುಪತಿ ಲಡ್ಡು ತಯಾರಿ
ಬೇಸಗೆಯಲ್ಲಿ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿರುವುದರಿಂದ, ಯಾವುದೇ ಅಡೆತಡೆಯಿಲ್ಲದೆ ಲಡ್ಡು ಉತ್ಪಾದನೆಯನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ಮುಂಗಡ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ದೇವಾಲಯ ಮಂಡಳಿ ತಿಳಿಸಿದೆ.
ಪೋಟು ಎಂದು ಕರೆಯಲ್ಪಡುವ ಲಡ್ಡು ತಯಾರಿಕೆಯ ಘಟಕದಲ್ಲಿ ಯಂತ್ರೋಪಕರಣಗಳು ಮತ್ತು ಕನ್ವೇಯರ್ ಬೆಲ್ಟ್ಗಳ ನಿಯಮಿತ ಕಾರ್ಯಾಚರಣೆಯನ್ನು ಖಚಿತಪಡಿಸಲು ಆಗಾಗ ಪರಿಶೀಲಿಸಲಾಗುತ್ತಿದೆ.
ದೇವಾಲಯದಲ್ಲಿ ತುಪ್ಪ ಖಾಲಿಯಾಗಿದೆ ಅಥವಾ ಶ್ರೀವಾರಿ ಸೇವೆ ಮತ್ತು ಲಡ್ಡು ತಯಾರಿಕೆಯಲ್ಲಿ ಅಡ್ಡಿಯಾಗಿದೆ ಎಂಬ ಹೇಳಿಕೆಗಳು ದಾರಿತಪ್ಪಿಸುವಂತಿದ್ದು, ಭಕ್ತರ ಭಾವನೆಗಳಿಗೆ ನೋವುಂಟು ಮಾಡಬಹುದು ಎಂದು ಟಿಟಿಡಿ ಹೇಳಿದೆ. ಶ್ರೀವಾರಿ ಲಡ್ಡು ಪ್ರಸಾದದ ತಯಾರಿಕೆ ಮತ್ತು ವಿತರಣೆ ಸರಾಗವಾಗಿ ಮುಂದುವರಿಯುತ್ತದೆ ಎಂದು ಪುನರುಚ್ಚರಿಸಿದೆ.