ನವದೆಹಲಿ: ಇಂಡಿಗೋ ಕಾರ್ಯಾಚರಣೆಯಲ್ಲಿ (IndiGo Flight Crisis) ದೊಡ್ಡ ಪ್ರಮಾಣದ ಅಡಚಣೆಗಳಿಂದ ಪ್ರಯಾಣಿಕರಿಗೆ ವ್ಯಾಪಕ ತೊಂದರೆ ಉಂಟಾದ ನಂತರ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಬುಧವಾರ ದೇಶಾದ್ಯಂತ 11 ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ನಡೆಸುವಂತೆ ಆದೇಶಿಸಿದೆ.
ನಿಯಂತ್ರಣ ಪ್ರಾಧಿಕಾರವು, ತನ್ನ ಅಧಿಕಾರಿಗಳಿಗೆ ಎರಡರಿಂದ ಮೂರು ದಿನಗಳಲ್ಲಿ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿ, ತಪಾಸಣೆ ಪೂರ್ಣಗೊಂಡ 24 ಗಂಟೆಗಳ ಒಳಗೆ ಡಿಜಿಸಿಎಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ವಿಮಾನ ನಿಲ್ದಾಣಗಳಲ್ಲಿ ನಾಗ್ಪುರ, ಜೈಪುರ, ಭೋಪಾಲ್, ಸೂರತ್, ತಿರುಪತಿ, ವಿಜಯವಾಡ, ಶಿರಡಿ, ಕೊಚ್ಚಿ, ಲಖನೌ, ಅಮೃತಸರ ಮತ್ತು ಡೆಹ್ರಾಡೂನ್ ಸೇರಿವೆ.
ಇಂಡಿಗೋ ಬಿಕ್ಕಟ್ಟಿನ ನಡುವೆ ಫ್ಲೈಟ್ ಒಳಗೆ ಪಾರಿವಾಳ ನುಗ್ಗಿ ಅವಾಂತರ
ಆದೇಶದ ಪ್ರಕಾರ, ಈ ಅಡಚಣೆಯ ಸಮಯದಲ್ಲಿ ಸುರಕ್ಷತಾ ಸಿದ್ಧತೆ, ಕಾರ್ಯಾಚರಣೆಯ ಸಿದ್ಧತೆ, ಪ್ರಯಾಣಿಕರ ಸೌಲಭ್ಯದ ಗುಣಮಟ್ಟ ಮತ್ತು ವಿಮಾನಯಾನ ಸಂಸ್ಥೆಯ ಸ್ಪಂದಿಸುವಿಕೆಯನ್ನು ನಿರ್ಣಯಿಸಲಾಗುತ್ತದೆ. ವಿಮಾನ ವಿಳಂಬ ಮತ್ತು ರದ್ದತಿ, ಟರ್ಮಿನಲ್ ಪ್ರದೇಶಗಳಲ್ಲಿನ ದಟ್ಟಣೆ, ಚೆಕ್-ಇನ್ ಕೌಂಟರ್ಗಳು, ಭದ್ರತಾ ಕೇಂದ್ರಗಳು ಮತ್ತು ಬೋರ್ಡಿಂಗ್ ಗೇಟ್ಗಳಲ್ಲಿ ಸರತಿ ಸಾಲುಗಳ ನಿರ್ವಹಣೆ ಹಾಗೂ ಇಂಡಿಗೋ ಮತ್ತು ವಿಮಾನ ನಿಲ್ದಾಣದಿಂದ ನಿಯೋಜಿಸಲಾದ ಕಾರ್ಯಾಚರಣಾ ಮಾನವಶಕ್ತಿಯ ಸಮರ್ಪಕತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಡಿಜಿಸಿಎ ತನ್ನ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ವಿಮಾನಯಾನ ಸಹಾಯ ಕೇಂದ್ರಗಳು ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತಿವೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸುವಂತೆ ಹೇಳಲಾಗಿದೆ. ವಿಳಂಬ ಮತ್ತು ರದ್ದತಿಗಳ ಬಗ್ಗೆ ಪ್ರಯಾಣಿಕರಿಗೆ ತಿಳಿಸಲಾಗುವ ಮಾಹಿತಿಯ ಗುಣಮಟ್ಟ ಮತ್ತು ಸಮಯಪಾಲನೆ, ಕುಡಿಯುವ ನೀರಿನಂತಹ ಅಗತ್ಯ ಸೌಲಭ್ಯಗಳ ಲಭ್ಯತೆ ಕುರಿತು ಕೂಡ ಗಮನ ಹರಿಸಲು ಆದೇಶಿಸಿದೆ.
ಕಾರ್ಯಾಚರಣೆಯ ಪರಿಶೀಲನೆಗಳ ಜತೆಗೆ, ಹಿರಿಯ ನಾಗರಿಕರು, ಮಕ್ಕಳು, ಗರ್ಭಿಣಿಯರು ಮತ್ತು ಕಡಿಮೆ ಚಲನಶೀಲತೆ ಹೊಂದಿರುವ ಪ್ರಯಾಣಿಕರಿಗೆ ಒದಗಿಸಲಾದ ಸಹಾಯವನ್ನು ಮೌಲ್ಯಮಾಪನ ಮಾಡಲು ನಿಯಂತ್ರಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ವಿಮಾನ ನಿಲ್ದಾಣಗಳಲ್ಲಿ ಆಸನ ವ್ಯವಸ್ಥೆ, ಹಿರಿಯ ವಿಮಾನಸೇನಾ ನಿರ್ವಹಣಾ ಸಿಬ್ಬಂದಿಯ ಹಾಜರಿ, ಶೌಚಾಲಯಗಳ ಮತ್ತು ಇತರ ಟರ್ಮಿನಲ್ ಸೌಲಭ್ಯಗಳ ಸ್ವಚ್ಛತೆ ಹಾಗೂ ಶುದ್ಧತೆ, ಮತ್ತು ಹೌಸ್ಕೀಪಿಂಗ್ ಸಿಬ್ಬಂದಿ ನಿಯೋಜನೆ ಮುಂತಾದ ಅಂಶಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ.
ಇಂಡಿಗೋ ನಡೆಸುತ್ತಿರುವ ಸಹಾಯ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ, ವಿಮಾನಯಾನ ಮತ್ತು ವಿಮಾನ ನಿಲ್ದಾಣ ನಿರ್ವಾಹಕರು ಕಾರ್ಯಾಚರಣಾ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದ್ದಾರೆಯೇ ಮತ್ತು ಕುಂದುಕೊರತೆ ನಿರ್ವಹಣಾ ಕಾರ್ಯವಿಧಾನಗಳು ಉದ್ದೇಶಿಸಿದಂತೆ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಲು ಡಿಜಿಸಿಎ ಅಧಿಕಾರಿಗಗಳಿಗೆ ಹೇಳಿದೆ.
ಆದೇಶದ ಪ್ರಕಾರ, ವಿಮಾನ ವಿಳಂಬ ಮತ್ತು ರದ್ದುಪಡಿಸುವ ಬಗ್ಗೆ ಪ್ರಯಾಣಿಕರಿಗೆ SMS, WhatsApp ಮತ್ತು ಇಮೇಲ್ ಮೂಲಕ ನೀಡಲಾಗುವ ನೋಟಿಫಿಕೇಶನ್ಗಳ ಸಮಯಪಾಲನೆಯೂ ಪರಿಶೀಲನೆಯಲ್ಲಿ ಮುಖ್ಯವಾದ ಅಂಶ ಎನಿಸಿಕೊಂಡಿದೆ.
ಸಂಪೂರ್ಣ ಮೌಲ್ಯಮಾಪನವನ್ನು ಖಚಿತಪಡಿಸಿಕೊಳ್ಳಲು ವಿಮಾನ ನಿಲ್ದಾಣ ನಿರ್ದೇಶಕರು, ವಿಮಾನ ನಿಲ್ದಾಣದ ಮುಖ್ಯಸ್ಥರು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಮತ್ತು ವಿಮಾನ ನಿಲ್ದಾಣ ನಿರ್ವಾಹಕರೊಂದಿಗೆ ಸಮನ್ವಯ ಸಾಧಿಸುವಂತೆ ಎಲ್ಲ ಅಧಿಕಾರಿಗಳಿಗೆ ಆದೇಶಿಲಾಗಿದೆ.